Advertisement

ಪ್ರಜಾಪ್ರಭುತ್ವದ ಚೌಕಟ್ಟಿನೊಳಗಿರಲಿ ಪ್ರತಿಭಟನೆ: ಪದ್ಮಾವತಿ ವಿವಾದ

07:31 AM Nov 21, 2017 | |

ನಮ್ಮ ದೇಶದಲ್ಲಿ ಸಿನೆಮಾವೊಂದು ವಿವಾದಕ್ಕೊಳಗಾಗುತ್ತಿರುವುದು ಇದು ಮೊದಲೇನಲ್ಲ ಹಾಗೂ ಇದೇ ಕೊನೆಯದ್ದೂ ಆಗಿರುವುದಿಲ್ಲ. ಆದರೆ ಸಂಜಯ್‌ ಲೀಲಾ ಭನ್ಸಾಲಿಯ ಐತಿಹಾಸಿಕ ಕಥಾನಕ ಆಧರಿಸಿದ “ಪದ್ಮಾವತಿ’ ಚಿತ್ರಕ್ಕೆ ಸಂಬಂಧಿಸಿ ವಿವಾದ ಪಡೆದುಕೊಂಡಿರುವ ಆಯಾಮಗಳನ್ನು ನೋಡುವಾಗ ಮುಂದಿನ ದಿನಗಳಲ್ಲಿ ಪ್ರಚಾರಕ್ಕಾಗಿಯೇ ವಿವಾದಗಳನ್ನು ಸೃಷ್ಟಿಸುವ ಪರಂಪರೆ ಪ್ರಾರಂಭವಾಗಬಹುದು ಎಂದೆನಿಸುತ್ತದೆ. ಸಾಮಾನ್ಯವಾಗಿ ಚಿತ್ರವೊಂದಕ್ಕೆ ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿ ಪ್ರಚಾರ ನೀಡಲಾಗುತ್ತದೆ. ಆದರೆ ಪದ್ಮಾವತಿ ಚಿತ್ರಕ್ಕೆ ನಯಾಪೈಸೆ ಖರ್ಚು ಮಾಡದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಕ್ಕಿದೆ. ಈಗ ರಾಜಕೀಯ ನಾಯಕರೇ ಆಖಾಡಕ್ಕಿಳಿದಿರುವುದರಿಂದ ವಿವಾದ ಪೂರ್ಣ ಸ್ವರೂಪದಲ್ಲಿ ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ. ರಜಪೂತ ರಾಣಿ ಪದ್ಮಾವತಿಯ ಚಾರಿತ್ರ್ಯಕ್ಕೆ ಕಳಂಕವಾಗುವ ಅಂಶ ಇದೆ ಎನ್ನುವುದು ಚಿತ್ರದ ಕುರಿತಾಗಿರುವ ಮುಖ್ಯ ಆಕ್ಷೇಪ. ಚಿತ್ತೂರಿನ ರಾಣಿ ಪದ್ಮಾವತಿ, ಅಲ್ಲಾವುದ್ದೀನ್‌ ಖೀಲ್ಜಿಯ ವಶವಾಗುವುದರಿಂದ ತಪ್ಪಿಸಲು ಬೆಂಕಿಗೆ ಹಾರಿ ಪ್ರಾಣ ತ್ಯಾಗ ಮಾಡಿಕೊಂಡಿದ್ದಾಳೆ ಎನ್ನುತ್ತದೆ ಇತಿಹಾಸ. ರಜಪೂತ ಸಮುದಾಯದ ಪಾಲಿಗೆ ಪದ್ಮಾವತಿ ಸಾಕ್ಷಾತ್‌ ದೇವತೆಗೆ ಸಮಾನ. ಆದರೆ ಭನ್ಸಾಲಿ ಚಿತ್ರದಲ್ಲಿ ಖೀಲ್ಜಿ ಮತ್ತು ಪದ್ಮಾವತಿ ಡ್ನೂಯೆಟ್‌ ಹಾಡುವ ದೃಶ್ಯವನ್ನು ಸೇರಿಸಿಕೊಂಡಿದ್ದಾರೆ. ಇದು ಖೀಲ್ಜಿ ರಾಣಿಯ ಮೋಹದಲ್ಲಿ ಕುರುಡಾಗಿ ಕಾಣುವ ಕನಸಿನ ದೃಶ್ಯ ಎನ್ನುವುದು ಭನ್ಸಾಲಿ ಕೊಟ್ಟಿರುವ ಸಮರ್ಥನೆ. ಆದರೆ ಒಂದು ಸಮುದಾಯ ದೇವತೆಯ ಸಮಾನವಾಗಿ ಕಾಣುವ ರಾಣಿಯನ್ನು ನಿರ್ದೇಶಕ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳಿಕೊಂಡು ಕೀಳಾಗಿ ತೋರಿಸುವುದು ಎಷ್ಟು ಸರಿ? ಇನ್ನೊಬ್ಬರ ಭಾವನೆಯನ್ನು ನೋಯಿಸಿಯೇ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕೆ? 

Advertisement

ಕರ್ಣಿ ಸೇನಾ ಎನ್ನುವ ರಜಪೂತ ಸಂಘಟನೆಯೊಂದು ಪದ್ಮಾವತಿ ಚಿತ್ರದ ಬಿಡುಗಡೆಯನ್ನು ತಡೆಯಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಚಿತ್ರ ಬಿಡುಗಡೆಯಾಗಲಿರುವ ಡಿ. 1ರಂದು ಭಾರತ ಬಂದ್‌ಗೆ ಕೂಡ ಈ ಸಂಘಟನೆ ಕರೆ ನೀಡಿದೆ. ಬಹುಶಃ ಸಿನೆಮಾ ವಿವಾದವೊಂದು ಭಾರತ ಬಂದ್‌ಗೆ ಕಾರಣವಾದದ್ದು ಇದೇ ಮೊದಲಿರಬೇಕು. ಒಂದು ದೊಡ್ಡ ಸಮುದಾಯದ ಭಾವನೆಗಳನ್ನು ನೋಯಿಸುವ ಅಂಶಗಳಿರುವ ಚಿತ್ರವನ್ನು ವಿರೋಧಿಸುವ ಹಕ್ಕು ಕರ್ಣಿ ಸೇನೆ ಅಥವಾ ಇನ್ಯಾವುದೇ ಸಂಘಟನೆಗಿದೆ. ಆದರೆ ಪ್ರತಿಭಟಿಸುವ ಆವೇಶದಲ್ಲಿ ನಾಯಕಿಯ ಮೂಗು ಕತ್ತರಿಸಲು, ನಿರ್ದೇಶಕರ ರುಂಡ ಕತ್ತರಿಸಲು ಬಹುಮಾನ ಘೋಷಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತವಾಗುವ ನಡೆಯಲ್ಲ. ಪ್ರತಿಭಟನೆ ಎಂದಿಗೂ ಪ್ರಜಾಪ್ರಭುತ್ವದ ಚೌಕಟ್ಟಿನೊಳಗಿರಬೇಕು. ಆದರೆ ಕರ್ಣಿ ಸೇನೆಯಂತಹ ಹತ್ತಾರು ಸೇನೆಗಳು ಹಿಂಸೆಯನ್ನೇ ಪ್ರತಿಭಟನೆಯ ಪ್ರಬಲ ಅಸ್ತ್ರವಾಗಿ ಬಳಸುತ್ತಿರುವುದು ಕಳವಳಕಾರಿ ವಿಚಾರ. ರಾಜಕೀಯವಾಗಿಯೂ ಈ ವಿವಾದ ಬಹಳ ಮಹತ್ವ ಪಡೆದುಕೊಂಡಿದೆ. ಮಧ್ಯಪ್ರದೇಶ ಸರಕಾರವೇ ಚಿತ್ರವನ್ನು ನಿಷೇಧಿಸಿದರೆ, ಉತ್ತರ ಪ್ರದೇಶದಲ್ಲಿ ಚಿತ್ರ ಬಿಡುಗಡೆಯಾಗಲು ಅವಕಾಶ ಕೊಡುವುದಿಲ್ಲ ಎಂದು ಅಲ್ಲಿನ ಉಪಮುಖ್ಯಮಂತ್ರಿ ಹೇಳಿದ್ದಾರೆ. ರಾಜಸ್ಥಾನ ಸರಕಾರ ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳನ್ನು ಕಿತ್ತು ಹಾಕಬೇಕೆಂದು ಕೇಂದ್ರಕ್ಕೆ ಪತ್ರ ಬರೆದಿದೆ. ಇವೆಲ್ಲ ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಾದರೆ ಕಾಂಗ್ರೆಸ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಕೂಡ ರಜಪೂತರ ಭಾವನೆಗಳನ್ನು ನೋಯಿಸುವ ಚಿತ್ರ ಬಿಡುಗಡೆಯಾಗುವುದು ಬೇಡ ಎಂದಿದ್ದಾರೆ. ಇನ್ನೂ ಕೆಲವು ಕಾಂಗ್ರೆಸ್‌ ನಾಯಕರು ಪದ್ಮಾವತಿಯ ವಿರುದ್ಧ ಮಾತನಾಡಿದ್ದಾರೆ. ಈ ಒಂದು ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಹಮತ ಏರ್ಪಟ್ಟಿರುವುದು ಆಶ್ಚರ್ಯವುಂಟು ಮಾಡುತ್ತದೆ. ಬಹುಶಃ ಸದ್ಯದಲ್ಲೇ ನಡೆಯಲಿರುವ ಗುಜರಾತ್‌ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯುವ ಇನ್ನುಳಿದ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬಹುಸಂಖ್ಯಾಕರ ವಿರೋಧ ಕಟ್ಟಿಕೊಳ್ಳುವುದನ್ನು ತಡೆಯಲು ರಕ್ಷಣಾತ್ಮಕ ಆಟ ಆಡುತ್ತಿರುವಂತೆ ಕಾಣಿಸುತ್ತದೆ. 

ಇನ್ನು ನಿರ್ದೇಶಕ ಭನ್ಸಾಲಿಯ ನಡೆಯೂ ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಜನವರಿಯಲ್ಲಿ ಶೂಟಿಂಗ್‌ ಸಮಯದಲ್ಲೇ ಕರ್ಣಿ ಸೇನೆ ಚಿತ್ರದ ಸೆಟ್‌ಗೆ ನುಗ್ಗಿ ದಾಂಧಲೆ ಎಸಗಿದ ಬಳಿಕ ಭನ್ಸಾಲಿ ಮತ್ತು ಸೇನೆಯ ನಡುವೆ ಒಪ್ಪಂದವೊಂದು ಏರ್ಪಟ್ಟಿತ್ತು. ಚಿತ್ರದಲ್ಲಿ ಯಾವುದೇ ಆಕ್ಷೇಪಾರ್ಹ ದೃಶ್ಯಗಳನ್ನು ಸೇರಿಸುವುದಿಲ್ಲ ಎಂದು ಭನ್ಸಾಲಿ ಆಗ ಬಹಿರಂಗವಾಗಿಯೇ ಹೇಳಿದ್ದರು. ಆದರೆ ಈಗ ತನ್ನ ಮಾತಿಗೆ ತಪ್ಪಿ ನಡೆದಿದ್ದಾರೆ. ಅಲ್ಲದೆ ಸೆನ್ಸಾರ್‌ ಆಗುವ ಮೊದಲೇ ಕೆಲವು ಆಯ್ದ ಮಾಧ್ಯಮದವರಿಗೆ ಮಾತ್ರ ಚಿತ್ರದ ಪ್ರದರ್ಶನ ಏರ್ಪಡಿಸಿ ಚಿತ್ರದ ಪರವಾಗಿ ವಿಮರ್ಶೆಯನ್ನೂ ಬರೆಯಿಸಿಕೊಂಡಿದ್ದಾರೆ. ಇದು ಸೆನ್ಸಾರ್‌ ಮಂಡಳಿಗಳ ನಿಯಮಗಳ ಸಾರಾಸಗಟು ಉಲ್ಲಂಘನೆಯಾಗಿರುವುದರಿಂದ ಈ ಕುರಿತು ಅವರು ಸ್ಪಷ್ಟೀಕರಣ ನೀಡುವ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next