Advertisement

ನಿಮ್ಮ ಕಿವಿಗಳನ್ನು ಸದ್ದಿನಿಂದ ರಕ್ಷಿಸಿ

07:24 PM May 18, 2019 | Sriram |

ಮಾಲಿನ್ಯ ಅನ್ನುವ ಪದವು ಗಾಳಿ, ನೀರು, ಮಣ್ಣಿಗೆ ಸಂಬಂಧಿಸಿ ಆಗಾಗ ಬಳಕೆಯಾಗುತ್ತದೆ. ಆದರೆ ಹೆಚ್ಚುತ್ತಿರುವ ಮಾಲಿನ್ಯ ವಿಧಗಳನ್ನು ಮುಖ್ಯವಾದ ಇನ್ನೊಂದು ಶಬ್ದ ಮಾಲಿನ್ಯ. ನಾವು ನಮ್ಮ ಪ್ರತಿದಿನದ ಬದುಕಿನಲ್ಲಿ ಶಬ್ದಗಳ ಆಧಿಕ್ಯವನ್ನು ಆಗಾಗ ಎದುರಿಸುತ್ತೇವೆ. ಈ ಶಬ್ದಗಳ ಹೆಚ್ಚಳವು ನಿಗದಿತ ಗರಿಷ್ಠ ಮಟ್ಟವನ್ನು ಮೀರಿ ಮನುಷ್ಯರು ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಕುತ್ತು ತರುವ ಮಟ್ಟವನ್ನು ಮುಟ್ಟಿದಾಗ ಅದು ಮಾಲಿನ್ಯ ಎಂದು ಕರೆಯಿಸಿಕೊಳ್ಳುತ್ತದೆ. ಸದ್ದುಗದ್ದಲವು ಮನುಷ್ಯನ ಕಲ್ಯಾಣ – ಕ್ಷೇಮಕ್ಕೆ ಕುತ್ತು ತರಬಲ್ಲ ಪ್ರಮುಖ ಅಪಾಯಗಳಲ್ಲಿ ಒಂದು ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ.

Advertisement

ಆಲಿಸುವಿಕೆ ಮತ್ತು ಆರೋಗ್ಯದ ಮೇಲೆ ಸದ್ದಿನ ಪರಿಣಾಮ
ಆಲಿಸುವುದು ಮನುಷ್ಯನ ಐದು ಇಂದ್ರಿಯ ಜ್ಞಾನಗಳಲ್ಲಿ ಒಂದಾಗಿದ್ದು, ನಮಗೆ ಶಬ್ದಗಳನ್ನು ಗ್ರಹಿಸಲು ಸಹಾಯ ಮಾಡುತ್ತದೆ. ನಮ್ಮ ಕಿವಿಗಳು ಶಬ್ದಗಳನ್ನು ಗ್ರಹಿಸಿಕೊಂಡು ಅರ್ಥ ಮಾಡಿಕೊಳ್ಳುವುದಕ್ಕಾಗಿ ಮತ್ತು ಸಂಸ್ಕರಿಸುವುದಕ್ಕಾಗಿ ಮಿದುಳಿಗೆ ಕಳುಹಿಸಿಕೊಡುತ್ತವೆ. ಸದ್ದುಗದ್ದಲದಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟವು ಸದ್ದಿಗೆ ತೆರೆದುಕೊಂಡದ್ದರಿಂದಾದ ಶ್ರವಣ ಶಕ್ತಿ ನಾಶ. ಈ ಸದ್ದಿಗೆ ತೆರೆದುಕೊಳ್ಳುವಿಕೆಯು ದೀರ್ಘ‌ ಕಾಲ ಹೆಚ್ಚು ಶಕ್ತಿಯ ಸದ್ದಿಗೆ ಒಡ್ಡಿಕೊಂಡದ್ದಾಗಿರಬಹುದು ಅಥವಾ ಒಂದೇ ಬಾರಿ ತೀಕ್ಷ್ಣವಾದ ದೊಡ್ಡ ಸದ್ದನ್ನು ಕೇಳಿದ್ದಾಗಿರಬಹುದು. ಇದು ವಿಶೇಷವಾಗಿ ಹಿನ್ನೆಲೆಯ ಸದ್ದು ಇದ್ದಾಗ ಸಂವಹನ ನಡೆಸುವ ಮತ್ತು ಸಂಭಾಷಿಸುವ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಇನ್ನೊಂದು ಲಕ್ಷಣ ಎಂದರೆ ಟಿನ್ನಿಟಸ್‌ ಅಂದರೆ, ಯಾವುದೇ ಬಾಹ್ಯ ಸದ್ದು ಇಲ್ಲದಿದ್ದಾಗಲೂ ಕಿವಿಯಲ್ಲಿ ಯಾವುದೋ ಸದ್ದು ಕೇಳಿಸಿದ ಅನುಭವ ಆಗುವುದು. ಸತತ ಅಧಿಕ ಸದ್ದುಗದ್ದಲಕ್ಕೆ ಒಡ್ಡಿಕೊಂಡರೆ ಹಲವರಿಗೆ ಕಿವಿ ನೋವು ಕೂಡ ಉಂಟಾಗುತ್ತದೆ, ಶಬ್ದ ಮಾಲಿನ್ಯವು ಆರೋಗ್ಯ ಮತ್ತು ಸಾಮಾಜಿಕ ಕ್ಷೇಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಅದು ಕೆಲಸದಲ್ಲಿ ಕಳಪೆ ದಕ್ಷತೆ, ಏಕಾಗ್ರತೆಯ ಕೊರತೆ, ಕಲಿಕೆಯಲ್ಲಿ ತೊಂದರೆ ಮತ್ತು ಮಾನಸಿಕ ತುಮುಲದಂತಹ ಅನೇಕ ಸಮಸ್ಯೆಗಳಿಗೆ ಕಾರಣವಾಗಬಲ್ಲುದು. ಶಬ್ದ ಮಾಲಿನ್ಯವು ಹೃದಯ ಸಂಬಂಧಿ ಸಮಸ್ಯೆಗಳು, ನಿದ್ದೆಯ ತೊಂದರೆ, ಶ್ರವಣ ಶಕ್ತಿ ಕುಸಿತ ಮತ್ತು ಸಂಭಾಷಣೆ – ಸಂವಹನ ಸಮಸ್ಯೆಗಳನ್ನೂ ಸೃಷ್ಟಿಸಬಹುದು. ಹೃದಯ ಸಮಸ್ಯೆಗಳಿಂದ ರಕ್ತದೊತ್ತಡ ಮತ್ತು ಹೃದಯ ಬಡಿತ ದರವು ಹೆಚ್ಚಬಹುದು. ಹೆಚ್ಚು ಸದ್ದುಗದ್ದಲದಿಂದಾಗಿ ನಿದ್ದೆಯ ಸಮಸ್ಯೆಗಳಾಗಿ ಅದು ದಣಿವು, ಭಾವನಾತ್ಮಕ ಏರುಪೇರುಗಳು, ಕಿರಿಕಿರಿ ಮಾತ್ರವಲ್ಲದೆ ಜೀವನ ಗುಣಮಟ್ಟದ ಮೇಲೂ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಬಹುದು. ಮಕ್ಕಳು ಅಧಿಕ ಸದ್ದಿಗೆ ತೆರೆದುಕೊಂಡರೆ ಅವರ ಭಾಷಾ ಕಲಿಕೆಯ ಮೇಲೆ, ಶೈಕ್ಷಣಿಕ ಸಾಧನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಮಾತ್ರವಲ್ಲದೆ ಆತಂಕ, ಉದ್ವೇಗ ಮತ್ತು ಎಲ್ಲರ ಗಮನ ತನ್ನತ್ತಲೇ ಇರಬೇಕೆಂದು ಬಯಸುವ ವರ್ತನೆಗಳಿಗೆ ಕಾರಣವಾಗಬಹುದು.

ಅಂತಾರಾಷ್ಟ್ರೀಯ ಸದ್ದು ಅರಿವು ದಿನಾಚರಣೆ
ಪ್ರತೀ ವರ್ಷ ಎಪ್ರಿಲ್‌ ತಿಂಗಳ ಕೊನೆಯ ಬುಧವಾರವನ್ನು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಸದ್ದು ಅರಿವು ದಿನವನ್ನಾಗಿ ಆಚರಿಸ ಲಾಗುತ್ತದೆ. ಅಮೆರಿಕದಲ್ಲಿ ರುವ ಶ್ರವಣ ಮತ್ತು ಸಂವಹನ ಕೇಂದ್ರವು 1996 ರಿಂದೀಚೆಗೆ ಈ ದಿನ ಆಚರಣೆಯನ್ನು ಆರಂಭಿಸಿದೆ. ತಾವು ವಾಸ್ತವ್ಯ ಮಾಡುವ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಶಬ್ದಾಧಿಕ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರನ್ನು ಪ್ರೋತ್ಸಾಹಿಸುವುದು ಈ ದಿನಾಚರಣೆಯ ಗುರಿ.

ನಿಮ್ಮ ಕಿವಿಗಳು ಮತ್ತು ಶ್ರವಣ ಶಕ್ತಿಯನ್ನು
ರಕ್ಷಿಸಿಕೊಳ್ಳುವುದು ಹೇಗೆ?
ನಿಮ್ಮ ಕಿವಿಗಳು ಮತ್ತು ಶ್ರವಣ ಶಕ್ತಿಗಳ ಬಗ್ಗೆ ಕಾಳಜಿ ಇರಿಸಿಕೊಂಡು ಶಬ್ದ ಮಾಲಿನ್ಯದ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಿಕೊಳ್ಳುವ ಕೆಲವು ಮಾರ್ಗದರ್ಶಿ ಸೂತ್ರಗಳು ಇಲ್ಲಿವೆ.
– ನೀವು ಉಂಟು ಮಾಡುವ ಸದ್ದಿನ ಬಗ್ಗೆ ಗಮನ ನೀಡಿ ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ.
– ನಿಮ್ಮ ಪರಿಸರದ ಬಗ್ಗೆ ಎಚ್ಚರಿಕೆಯಿಂದಿರಿ ಮತ್ತು ಹಾನಿಕಾರಕ ಸದ್ದು ಉಂಟಾಗುವ ಸಂಭಾವ್ಯತೆಯ ಬಗ್ಗೆ ಹುಷಾರಾಗಿರಿ.
– ಭಾರೀ ಸದ್ದು ಉಂಟಾಗುವ ಸನ್ನಿವೇಶ, ಸ್ಥಳಗಳಿಂದ ದೂರ ಇರಿ.
– ನಿಮ್ಮ ಮ್ಯೂಸಿಕ್‌ ಸಿಸ್ಟಂ, ಟಿವಿಗಳ ಸದ್ದನ್ನು ಕಡಿಮೆ ಮಾಡಿ.
– ಭಾರೀ ಸದ್ದನ್ನುಂಟು ಮಾಡುವ ಸಮಾರಂಭಗಳು, ಚಟುವಟಿಕೆಗಳ ಸಂದರ್ಭದಲ್ಲಿ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ.
– ಭಾರೀ ಸದ್ದು ಉಂಟು ಮಾಡುವ ಮೂಲಗಳಿಂದ ದೂರ ಇರಿ (ಉದಾಹರಣೆಗೆ, ಲೌಡ್‌ ಸ್ಪೀಕರ್‌ಗಳು).
– ಭಾರೀ ಸದ್ದಿಗೆ ತೆರೆದುಕೊಳ್ಳುವ ಸಂದರ್ಭದಲ್ಲಿ ಇಯರ್‌ ಪ್ಲಗ್‌ ಉಪಯೋಗಿಸಿ.
– ಸದ್ದಿನಿಂದ ಉಂಟಾಗುವ ಹಾನಿಯ ಬಗ್ಗೆ ಅರಿವು, ಜ್ಞಾನವನ್ನು ಪ್ರಸಾರ ಮಾಡಿ.
– ನಿಮ್ಮ ಶ್ರವಣ ಶಕ್ತಿಯನ್ನು ಆಗಾಗ ಪರೀಕ್ಷಿಸಿಕೊಳ್ಳಿ.

ನೀವು ಯಾವತ್ತಾದರೂ ಭಾರೀ ಸದ್ದುಗದ್ದಲಕ್ಕೆ ಒಡ್ಡಿಕೊಂಡಿದ್ದೀರಾ ಅಥವಾ ಆಗಾಗ ಒಡ್ಡಿಕೊಂಡಿದ್ದೀರಾ? ನೀವು ಅಥವಾ ನಿಮಗೆ ಗೊತ್ತಿರುವ ಯಾರಾದರೂ ಈ ಕೆಳಗಿನ ಚಿಹ್ನೆಗಳನ್ನು ಹೊಂದಿದ್ದರೆ ಆದಷ್ಟು ಬೇಗನೆ ಆಡಿಯಾಲಜಿಸ್ಟ್‌ ಸಂಪರ್ಕಿಸಿ.
– ತಾತ್ಕಾಲಿಕವಾಗಿ ಶ್ರವಣ ಶಕ್ತಿ ಕಡಿಮೆಯಾಗುವುದು (16ರಿಂದ 48 ತಾಸುಗಳ ಕಾಲ.
– ಕೇಳುವ ಸದ್ದಿನಲ್ಲಿ ವ್ಯತ್ಯಯ ಅಥವಾ ಗೊಂದಲಮಯವಾಗಿ ಕೇಳಿಸುವುದು.
– ಮಾತುಕತೆಯನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು.
– ಕಿವಿಯಲ್ಲಿ ಗುಂಯ್‌ಗಾಡುವ ಅನುಭವ.
– ಹಠಾತ್ತಾಗಿ ಶ್ರವಣ ಶಕ್ತಿಯು ಶಾಶ್ವತವಾಗಿ ನಷ್ಟವಾಗುವುದು.

Advertisement

-ಡಾ| ರೋಹಿತ್‌ ರವಿ,
ಸಹಾಯಕ ಪ್ರೊಫೆಸರ್‌ ಆಡಿಯಾಲಜಿ ಮತ್ತು ಎಸ್‌ಎಲ್‌ಪಿ ವಿಭಾಗ ಕೆಎಂಸಿ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next