Advertisement

ಪಾರಂಪರಿಕ ತಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ

03:17 PM Mar 03, 2018 | |

ವಿಜಯಪುರ: ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಅನುಕೂಲವಾಗುವಂತೆ ವಿಜಯಪುರ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ ಸ್ಥಾಪನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದ್ದಾಗಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ತಿಳಿಸಿದರು.

Advertisement

ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಸೂರಿನ ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ಸಿದ್ಧಪಡಿಸಲಾಗುತ್ತಿರುವ ವಿಜಯಪುರ, ಬೀದರ, ಕಲಬುರಗಿ ನಗರಗಳನ್ನು ಒಳಗೊಂಡಿರುವ ದಖನ್‌ ಸುಲ್ತಾನರ ಸ್ಮಾರಕಗಳನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಯೋಜಿಸಿದೆ.

ಇದಕ್ಕಾಗಿ ಪ್ರಸ್ತಾವನೆ ಸಲ್ಲಿಕೆಗೆ ಇಂಡಿಯನ್‌ ಹೆರಿಟೇಜ್‌ ಸಿಟಿಸ್‌ ನೆಟ್‌ವರ್ಕ್‌ (ಐಎಚ್‌ಸಿಎನ್‌ ಎಫ್‌) ಬೆಂಗಳೂರು ಸಂಸ್ಥೆಯಿಂದ ಪ್ರಸ್ತುತ ಪಡಿಸಿದ ಪಾವರ್‌ ಪಾಯಿಂಟ್‌ ಮಾಹಿತಿ ಪರಿಶೀಲಿಸಿ ಅವರು ಮಾತನಾಡಿದರು.

2017-18ನೇ ಸಾಲಿನ ಆಯ-ವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರ ಸೇರಿದಂತೆ ರಾಜ್ಯದ 20 ಪ್ರವಾಸಿ ತಾಣಗಳನ್ನು ವಿಶ್ವದರ್ಜೆ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲು ಘೋಷಿಸಿದ್ದಾರೆ. ಐಎಚ್‌ ಸಿಎನ್‌ಎಫ್‌ ಸಂಸ್ಥೆ ಸಿದ್ಧಪಡಿಸಿರುವ ಕರಡು ಮಾಸ್ಟರ್‌ ಪ್ಲಾನ್‌ ಹಾಗೂ ದಖನ್‌ ಸುಲ್ತಾನ್‌ ರ ಸ್ಮಾರಕಗಳನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಪ್ರಸ್ತಾವನೆ ಪರಿಶೀಲಿಸಿದ ಅವರು, ಇಂಡಿಯನ್‌ ಹೆರಿಟೇಜ್‌ ಸಿಟಿಸ್‌ ನೆಟ್‌ವರ್ಕ್‌ ಫೌಂಡೇಶನ್‌ ವತಿಯಿಂದ ಪ್ರಸ್ತುತ ಪಡಿಸಿರುವ ವಿಶ್ವ ಪರಂಪರೆ ತಾಣಗಳ ಪ್ರಸ್ತಾವನೆಯನ್ನು ಇಂದಿಲ್ಲಿ ಸ್ವೀಕರಿಸಿ ಕೆಲವು ಸಣ್ಣಪುಟ್ಟ ಮಾರ್ಪಾಡಿಗೆ ಸೂಚಿಸಿದರು.

ವಿಜಯಪುರದ ವಿಶ್ವ ಪಾರಂಪರಿಕ ತಾಣಗಳ ನಿರ್ವಹಣಾ ಐದು ವರ್ಷಗಳ ಯೋಜನೆಗಾಗಿ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆ ವ್ಯಾಪ್ತಿಯ ಅನುದಾನ ಮೀಸಲಿಡುವ ಕುರಿತಂತೆಯೂ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

Advertisement

ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಸಹಭಾಗಿತ್ವದೊಂದಿಗೆ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಪಾರಂಪರಿಕ ಐತಿಹಾಸಿಕ ಸ್ಮಾರಕ ಸಂಪನ್ಮೂಲಗಳ ಸಂರಕ್ಷಣೆ, ಮೇಲ್ವಿಚಾರಣೆ, ಮಾರ್ಗದರ್ಶನ ಹಾಗೂ ಸಮನ್ವಯತೆಗೆ ಅನುಕೂಲವಾಗುವಂತೆ ಪಾರಂಪರಿಕ ಕೋಶ ಸಹ ವಿವಿಧ ನುರಿತ ಸಿಬ್ಬಂದಿಗಳ ನಿಯೋಜನೆಯೊಂದಿಗೆ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.

ಆದಿಲ್‌ಶಾಹಿ ಕಾಲದ ವಿವಿಧ ಐತಿಹಾಸಿಕ ಸ್ಮಾರಕ ಹೊಂದಿರುವ ವಿಜಯಪುರ ವಿಶ್ವದರ್ಜೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ. ಈಗ ಐಎಚ್‌ಸಿಎನ್‌ಎಫ್‌ ಸಂಸ್ಥೆ ಸಿದ್ಧಪಡಿಸಿರುವ ಕರಡು ಮಾಸ್ಟರ್‌ ಪ್ಲಾನ್‌ನ ಪ್ರಥಮ ಹಂತದಲ್ಲಿ ನಗರದ ಅರಕಿಲ್ಲಾ ಸಂಕೀರ್ಣಗಳನ್ನು ಮಾರ್ಗಸೂಚಿ ಫಲಕಗಳು, ದೃಶ್ಯ ತಾಂತ್ರಿಕತೆ ಮತ್ತು ಮಾಹಿತಿ ಕೇಂದ್ರಗಳ ಮೂಲಕ ಅಂತರ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಾಗಬೇಕು. ಬೇಗಂ ತಲಾಬದಿಂದ ಅರಕಿಲ್ಲಾ ವರೆಗಿನ ಐತಿಹಾಸಿಕ ನೀರಿನ ಗಂಜ್‌, ಭೂಗತ ಜಲಮಾರ್ಗ ಸುಧಾರಣೆ, ಕರೇಜ್‌ ವ್ಯವಸ್ಥೆ ದುರಸ್ತಿ ಮತ್ತು ಪುನರ್‌ ನವೀಕರಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಕೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಸೂಚಿಸಿದರು. 

ಕುಮಟಗಿ ಬೇಸಿಗೆ ಅರಮನೆ ಪ್ರದೇಶ, ನಗರದ ಐತಿಹಾಸಿಕ ಕೋಟೆಗೋಡೆ ಸಂರಕ್ಷಣೆ, ಕೋಟೆಗೋಡೆ ವ್ಯಾಪ್ತಿಯ ಕಂದಕಗಳ ರಕ್ಷಣೆ, ಹಸರೀಕರಣ ಮತ್ತು ಪುರಾತತ್ವ ಪಾರ್ಕ್‌ನ್ನಾಗಿ ಶಹಾಪುರ ಅಭಿವೃದ್ಧಿ ಮತ್ತು ಪುನಶ್ಚೇತನಕ್ಕೂ ಪ್ರಥಮ ಹಂತದಲ್ಲಿ ಆದ್ಯತೆ ನೀಡಬೇಕು ಎಂದರು.

ಇಂಡಿಯನ್‌ ಹೆರಿಟೇಜ್‌ ಸಿಟಿಸ್‌ ನೆಟ್‌ವರ್ಕ್‌ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಆರ್‌. ಎಸ್‌. ರಾಯ್ಕರ್‌ ಅವರು ಜಯಪುರವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ನಾಮನಿರ್ದೇಶನ ಮಾಡಲು ರೂಪಿಸಲಾದ ಪ್ರಸ್ತಾವನೆ ಮತ್ತು ಸಿದ್ಧತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಮಕೃಷ್ಣ ಸಿದ್ದನಕೊಳ್ಳ, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರೆಹಮಾನ್‌ ಉಜಿರೆ, ವಿಜಯಪುರ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ, ಪ್ರಾಚ್ಯವಸ್ತು ಸಂಗ್ರಹಾಲಯದ ಸಹಾಯಕ ಪುರಾತತ್ವ ಅಧಿಧೀಕ್ಷಕ ಡಾ| ಎ.ವಿ. ನಾಗನೂರ, ಧಾರವಾಡ ವಲಯದ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ಪುರಾತತ್ವ ಉಪ ಅಧೀಕ್ಷಕ ಶಿವಕುಮಾರ ಭಗತ್‌, ಗೋಲಗುಂಬಜ್‌ ಪುರಾತತ್ವ ಸರ್ವೇಕ್ಷಣಾ ಅಧಿಕಾರಿ ಮೌನೇಶ ಕುರುವತ್ತಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಹೇಶ ಕ್ಯಾತನ್‌, ಭಾರತೀಯ ಪಾರಂಪರಿಕ ನಗರಗಳ ಒಕ್ಕೂಟದ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ ರಾಯ್ಕರ್‌, ಉಪನ್ಯಾಸಕ ಆನಂದ ಕುಲಕರ್ಣಿ, ಜಲತಜ್ಞ ಪೀಟರ್‌ ಅಲೆಕ್ಸಾಂಡರ್‌, ಡಾ| ಎಚ್‌.ಜಿ. ದಡ್ಡಿ, ಅಮೀನ್‌ ಹುಲ್ಲೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next