Advertisement

53 ವರ್ಷಗಳ ನಂತರ ಇತ್ಯರ್ಥವಾದ ಆಸ್ತಿ ವ್ಯಾಜ್ಯ

03:02 PM Mar 13, 2022 | Team Udayavani |

ಮೈಸೂರು: ಸುಮಾರು 53 ವರ್ಷಗಳ ಹಳೆಯ ಸಿವಿಲ್‌ ವ್ಯಾಜ್ಯ. ಒಂದು ಕುಟಂಬದಲ್ಲಿ ಆಸ್ತಿ ಹಂಚಿಕೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ ಖಟ್ಲೆ. ಕೊನೆಗೆ ಇದು ಬಗೆಹರಿಯಲು 53 ವರ್ಷಗಳ ಕಾಲ ಬೇಕಾಯಿತು. ಅದು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾ ನದ ಮೂಲಕ. ಮೈಸೂರಿನ ನ್ಯಾಯಾಲಯದಲ್ಲಿ 1969ರಲ್ಲಿ ಆಸ್ತಿ ವಿವಾದ ಸಂಬಂಧ ಒಂದು ಪ್ರಕರಣ ದಾಖಲಾಯಿತು.

Advertisement

ಕುಟುಂಬವೊಂದರಲ್ಲಿ ಐವರು ಪುತ್ರರು, ನಾಲ್ವರು ಪುತ್ರಿಯರಿದ್ದರು. ಕುಟಂಬದ ಯಜಮಾನ ತಂದೆ ತೀರಿಕೊಂಡ ನಂತರ ಗಂಡು ಮಕ್ಕಳು ಆಸ್ತಿ ಯನ್ನು ಹಂಚಿಕೊಂಡರು. ಆಗ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಪಾಲಿದೆ ಎಂಬ ಕಾನೂನು ಇರಲಿಲ್ಲ. ತಾಯಿ ಹೆಸರಲ್ಲಿ ಒಂದು ಪಾಲು ಆಸ್ತಿಯ ಹಣವಿತ್ತು. ತಾಯಿಯ ಹೆಸರಲ್ಲಿದ್ದ ಈ ಹಣವನ್ನು ತಮಗೆ ನೀಡಬೇಕೆಂದು ಹೆಣ್ಣು ಮಕ್ಕಳು ಕೇಳಿದಾಗ ಸಹೋದರರು ಇದನ್ನು ಒಪ್ಪಲಿಲ್ಲ.

ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತು. ಎರಡು ಪೀಳಿಗೆಯಾದರೂ ದಾವೆ ಇತ್ಯರ್ಥವಾಗಲಿಲ್ಲ. ಗಂಡು ಮಕ್ಕಳಿಂದ ಆಸ್ತಿ ಖರೀದಿಸಿದವರೂ ಪ್ರಕರಣದಲ್ಲಿ ಕಕ್ಷಿ ದಾರರಾದರು. ಒಟ್ಟು ಈ ಪ್ರಕರಣದಲ್ಲಿ 40 ಮಂದಿ ಕಕ್ಷಿದಾರರಿದ್ದರು. ಹತ್ತು ಮಂದಿ ವಕೀಲರಿದ್ದರು.ಇವರೆಲ್ಲರನ್ನೂ ಸೇರಿಸಿ ಲೋಕ ಅದಾಲತ್‌ನಲ್ಲಿ ಶನಿವಾರ ಪ್ರಕರಣ ಇತ್ಯರ್ಥ ಪಡಿಸಲಾಯಿತು. ಪ್ರಕರಣದ ಕಕ್ಷಿದಾರ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಆಕ್ಸಿಜನ್‌ ಯಂತ್ರದ ಮೂಲಕ ಉಸಿರಾಡುತ್ತಿದ್ದರೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವ ಹಿಸಿ ರಾಜಿಗೆ ಒಪ್ಪಿಗೆ ನೀಡಿದರು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿ ಕಾರದ ಅಧ್ಯಕ್ಷರೂ ಆಗಿರುವ ಸುಪ್ರೀಂ ಕೋರ್ಟ್‌ ನ್ಯಾ. ಯು.ಯು.ಲಲಿತ್‌ ಅವರ ಮುಂದೆ ಮಾತನಾಡಿದರು. ನ್ಯಾ. ಲಲಿತ್‌ ಅವರೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ್ದರು. ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಂ.ಎಲ್‌. ರಘುನಾಥ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಈ ಆಸ್ತಿ ವ್ಯಾಜ್ಯವನ್ನು ವಿವರಿಸಿದ ನ್ಯಾಯಾಧೀಶರಾದ ರಘುನಾಥ್‌ ಅವರು, ಈ ಪ್ರಕರಣದಲ್ಲಿ ಸುಮಾರು 1.50 ಕೋಟಿ ರೂಪಾಯಿ ಹಣ ನ್ಯಾಯಾಲಯದಲ್ಲಿ ಡಿಪಾಸಿಟ್‌ ಆಗಿತ್ತು. ತಾಯಿ ಹೆಸರಲ್ಲಿದ್ದ 64 ಲಕ್ಷ ರೂಪಾಯಿ ಹಣವನ್ನು ಹೆಣ್ಣು ಮಕ್ಕಳು ಕೇಳಿದಾಗ ಗಂಡು ಮಕ್ಕಳು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಆಗ ಹೆಣ್ಣು ಮಕ್ಕಳು ನ್ಯಾಯಾಲಯದಲ್ಲಿ ದಾವೆ ಹೂಡಿ ದರು. ಇದೇ ಪ್ರಕರಣದಲ್ಲಿ ಗಂಡು ಮಕ್ಕಳಲ್ಲಿ ಒಬ್ಬರು ತಮ್ಮ ಪಾಲಿಗೆ ಬಂದ ಆಸ್ತಿ ಯನ್ನು ಹೆಂಡತಿ, ಮಕ್ಕಳಿಗೆ ನೀಡದೇ ಸಹೋದರಿ ಹೆಸರಿಗೆ ವಿಲ್‌ ಮಾಡಿ ದ್ದರು. ಇದನ್ನೂ ಕೂಡ ಪ್ರಶ್ನಿಸಿ ಖಟ್ಲೆ ಹೂಡಲಾಗಿತ್ತು. ಲೋಕ ಅದಾಲತ್‌ನಲ್ಲಿ ದೀರ್ಘ‌ ಕಾಲದ ಪ್ರಕರಣವನ್ನು ಈಗ ಇತ್ಯರ್ಥ ಪಡಿಸಲಾಗಿದೆ ಎಂದು ನ್ಯಾಯಾಧೀಶರಾದ ರಘುನಾಥ್‌ ಅವರು ತಿಳಿಸಿದರು. ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ದೇವರಾಜ ಭೂತೆ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಇತರರು ಇದ್ದರು.

55 ಸಾವಿರಕ್ಕೂ ಹೆಚ್ಚು ಪ್ರಕರಣ ಇತ್ಯರ್ಥ : ಮೈಸೂರಿನಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 55 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿವೆ. ವಿವಾಹ ವಿಚ್ಛೇದನದ 32 ಪ್ರಕರಣಗಳು ರಾಜಿಯಾಗಿದ್ದು ಸತಿ-ಪತಿ ಮತ್ತೆ ಒಂದಾಗಿದ್ದಾರೆ. ವಿಚ್ಛೇದನಕ್ಕೆ ಸಂಬಂಧಪಟ್ಟಂತೆ 14 ವರ್ಷದ ಪ್ರಕರಣವೊಂದು ಇತ್ಯರ್ಥಗೊಂಡಿದೆ. ಮತ್ತೂಂದು ಪ್ರಕರಣದಲ್ಲಿ ಪತ್ನಿಗೆ ಜೀವನಾಂಶ ಕೊಡದ ಪತಿ ಆರು ತಿಂಗಳು ಜೈಲು ವಾಸ ಅನುಭವಿಸಿದ್ದರು. ಜೈಲಿನಿಂದ ಹೊರ ಬಂದ ಮೇಲೆ ಪತಿ-ಪತ್ನಿ ಇಬ್ಬರೂ ಲೋಕಅದಾಲತ್‌ ನಲ್ಲಿ ರಾಜಿ ಮಾಡಿಕೊಂಡಿದ್ದು ಹೊಂದಾಣಿಕೆಯಿಂದ ಜೀವನ ಸಾಗಿಸುವುದಾಗಿ ಹೇಳಿದ್ದಾರೆ. ಮೆಗಾ ಲೋಕಅದಾಲತ್‌ ನಲ್ಲಿ ತೀರ್ಮಾನವಾದ ಪ್ರಕರಣಗಳಲ್ಲಿ ಈವರೆಗೆ ಒಟ್ಟು 62,68,45,583 ರೂ.ಗಳನ್ನು ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next