Advertisement

ದ.ಕ ದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ,ಡ್ರಗ್ಸ್‌ ವಿರುದ್ಧ ಕಠಿನ ಕ್ರಮ: ಗುಂಡೂರಾವ್‌

10:21 PM Sep 08, 2023 | Team Udayavani |

ಬೆಂಗಳೂರು: ದಕ್ಷಿಣ ಕನ್ನಡ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುವುದರ ಜತೆಗೆ ಅಲ್ಲಿನ ಡ್ರಗ್ಸ್‌ ದಂಧೆ, ಕೋಮುಸಾಮರಸ್ಯ ಕದಡುವವರ ವಿರುದ್ಧ ಕಠಿನ ಕ್ರಮ, ಬೆಂಗಳೂರು – ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿ ಸುರಂಗ ಮಾರ್ಗ ಚಿಂತನೆ, ಕಡಲ್ಕೊರತೆಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Advertisement

ಬೆಂಗಳೂರು “ಉದಯವಾಣಿ’ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶಗಳಿವೆ. ಈ ಬಾರಿಯ ಬಜೆಟ್‌ನಲ್ಲಿ ಸರ್ಫಿಂಗ್‌ ವ್ಯವಸ್ಥೆ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದೇವೆ. ಕೇರಳ, ಗೋವಾದಲ್ಲಿ ಪ್ರವಾಸೋದ್ಯಮ ಬೆಳೆದ ಮಾದರಿಯಲ್ಲೇ ಕರಾವಳಿ ಕರ್ನಾಟಕದಲ್ಲೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಸದ್ಯದಲ್ಲೇ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ಸುಂದರ ಬೀಚ್‌ಗಳು, ಧಾರ್ಮಿಕ ಸ್ಥಳಗಳಿವೆ. ಧಾರ್ಮಿಕ ಪ್ರವಾಸೋದ್ಯಮದಿಂದ ಆರ್ಥಿಕ ವ್ಯವಸ್ಥೆಗೆ ಅಷ್ಟೊಂದು ಅನುಕೂಲ ಆಗುವುದಿಲ್ಲ. ಪ್ರವಾಸಿಗರು ಅಲ್ಲೇ ಉಳಿದುಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಿದರೆ ಆರ್ಥಿಕತೆಗೆ ಸಹಾಯವಾಗಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಈ ಮಾದರಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ವಿವರಿಸಿದರು.

ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ರೆಸಾರ್ಟ್‌, ಆಯುರ್ವೆದ, ಪ್ರಕೃತಿ ಚಿಕಿತ್ಸೆಯಂತಹ ಹೊಸ ವ್ಯವಸ್ಥೆ ಸೃಷ್ಟಿಸಿ ಜನರನ್ನು ಆಕರ್ಷಿಸುವಂತೆ ಮಾಡಬೇಕಾಗಿದೆ. ಕರಾವಳಿಯಲ್ಲಿ ಸಾಕಷ್ಟು ದ್ವೀಪ, ಬೀಚ್‌, ಹಿನ್ನೀರುಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿದರೆ ಜನ ಬರುತ್ತಾರೆ. 15 ವರ್ಷಗಳ ಹಿಂದೆ ಪ್ರವಾಸಕ್ಕಾಗಿ ಮಂಗಳೂರಿಗೆ ಸಾಕಷ್ಟು ಮಂದಿ ಹೋಗುತ್ತಿದ್ದರು. ಇತ್ತೀಚೆಗೆ ಇದರ ಪ್ರಮಾಣ ಕಡಿಮೆಯಾಗಿದೆ. ಸದ್ಯ ದಕ್ಷಿಣ ಕನ್ನಡದಲ್ಲಿ ಮನರಂಜನೆ, ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಗುತ್ತಿಲ್ಲ. ಇದರಿಂದ ಅಲ್ಲಿನ ಯುವಕರು ನಿರುದ್ಯೋಗಿಗಳಾಗಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಅಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರವಾಸೋದ್ಯಮ ಬೆಳೆಯದಿರಲು ಸ್ಥಳೀಯ ಗಲಾಟೆ, ಸಂಘರ್ಷಗಳು ಒಂದು ರೀತಿಯಲ್ಲಿ ಕಾರಣವಾಗಿರಬಹುದು ಎಂದರು.

ಡ್ರಗ್ಸ್‌ ದಂಧೆ ವಿರುದ್ಧ ಕಠಿನ ಕ್ರಮ
ನಾನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾದ ಬಳಿಕ ಸ್ಪೀಕರ್‌ ಯು.ಟಿ.ಖಾದರ್‌ ಜತೆ ಅಲ್ಲಿನ ಪೊಲೀಸ್‌ ಆಯುಕ್ತರು, ಎಸ್‌ಪಿ, ಇನ್‌ಸ್ಪೆಕ್ಟರ್‌ಗಳನ್ನು ಕರೆದು ಸಭೆ ನಡೆಸಿ ಮಾದಕ ವಸ್ತು ದಂಧೆ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಸೂಕ್ತ ಯೋಜನೆ ರೂಪಿಸುವಂತೆ ಸಲಹೆ ನೀಡಿದ್ದೇವೆ. ಮುಂದಿನ ಎರಡು-ಮೂರು ತಿಂಗಳಿನಲ್ಲಿ ಜನರಿಗೆ ಗೊತ್ತಾಗುವ ರೀತಿ
ಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ಕೊಟ್ಟಿದ್ದೆವು. ಅದರಂತೆ ಪೊಲೀಸ್‌ ಕಮೀಷನರ್‌ ಹಾಗೂ ಎಸ್‌ಪಿ ಸಮರ್ಪಕವಾಗಿ ಡ್ರಗ್ಸ್‌ ದಂಧೆ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ನೈತಿಕ ಪೊಲೀಸ್‌ಗಿರಿ, ಕೋಮುದ್ವೇಷ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ಧರ್ಮ, ಪ್ರಭಾವಿಗಳ ಹಿಂಬಾಲಕರನ್ನು ಲೆಕ್ಕಿಸದೆ ಕ್ರಮ ಕೈಗೊಂಡು ಬಿಸಿ ಮುಟ್ಟಿಸಬೇಕು. ಇದಾದ ಬಳಿಕ ದಕ್ಷಿಣ ಕನ್ನಡದಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದೆ ಎಂದರು.

Advertisement

ಪೊಲೀಸ್‌ ಆಯುಕ್ತರ ವರ್ಗಾವಣೆ ಉದ್ದೇಶಪೂರ್ವಕ ಅಲ್ಲ
ಉದ್ದೇಶಪೂರ್ವಕವಾಗಿ ನಾವು ಮಂಗಳೂರು ಪೊಲೀಸ್‌ ಆಯುಕ್ತರನ್ನು ವರ್ಗಾಯಿಸಲಿಲ್ಲ. ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಅವರಿಗೆ ಅಪರಾಧ ಚಟುವಟಿಕೆ ವಿರುದ್ಧ ಕ್ರಮ ಕೈಗೊಳ್ಳಲು ಪ್ರೋತ್ಸಾಹ ನೀಡುತ್ತೇವೆ ಎಂದರು.

ಕಾನೂನು ಸುವ್ಯವಸ್ಥೆ
ದಕ್ಷಿಣ ಕನ್ನಡದಲ್ಲಿ ಸುರಕ್ಷೆ ಬಗ್ಗೆ ಜನರಲ್ಲಿ ಸ್ವಲ್ಪ ಆತಂಕವಿದೆ. ಅಲ್ಲಿನ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಮಕ್ಕಳನ್ನು ಸೇರಿಸಬಹುದೇ ಎಂದು ಹಲವರು ಕೇಳುತ್ತಿದ್ದಾರೆ. ಅಲ್ಲಿ ಸದ್ಯ ಕಾನೂನು ಸುವ್ಯವಸ್ಥೆಗಳು ಉತ್ತಮವಾಗಿದ್ದು, ಆತಂಕಪಡಬೇಕಾಗಿಲ್ಲ ಎಂದು ಸಲಹೆ ಕೊಟ್ಟಿದ್ದೇನೆ ಎಂದರು.

ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ
ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸುಲಭವಿಲ್ಲ. ಸಮುದ್ರವನ್ನು ತಡೆಹಿಡಿಯುವುದು ಕಷ್ಟ. ನಾವು ಒಂದು ಕಡೆ ಇದಕ್ಕೆ ವ್ಯವಸ್ಥೆ ಕಲ್ಪಿಸಲು ಹೋದರೂ ಪರಿಣಾಮ ಬೇರೆಯಾಗುತ್ತದೆ. ತಜ್ಞರನ್ನು ಕರೆಸಿ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಇದರ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳೂ ಸೂಚಿಸಿದ್ದಾರೆ. ಬಟ್ಟಪ್ಪಾಡಿಯ ಬಳಿಯೂ ತಡೆಗೋಡೆ ಕಟ್ಟಿದ ಮೇಲೆ ಕಡಲ್ಕೊರೆತ ಹೆಚ್ಚಾಗಿದೆ ಎಂದರು.

ಮೀನುಗಾರಿಗೆ ನೀಡಿದ ಆಶ್ವಾಸನೆ ಈಡೇರಿಕೆ
ಮೀನುಗಾರರಿಗೆ ಬಜೆಟ್‌ನಲ್ಲಿ ಕೊಟ್ಟಿರುವ ಆಶ್ವಾಸನೆಯನ್ನು ಈಡೇರಿಸಿದ್ದೇವೆ. ಸಬ್ಸಿಡಿ ಹೆಚ್ಚಿಸುವುದು, ಸಾಲ ಸೌಲಭ್ಯ, ದೊಡ್ಡ ಬೋಟ್‌ಗೆ ಹೆಚ್ಚಿನ ಡೀಸೆಲ್‌ ಕೊಡುವುದು ಸಹಿತ ಹಲವು ಅನುಕೂಲ ಮಾಡಿಕೊಡಲಾಗಿದೆ.

ಸುರಂಗ ಮಾರ್ಗ ನಿರ್ಮಾಣಕ್ಕೆ ಪ್ರಸ್ತಾವನೆ
ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಅಲ್ಲಿ ಸುರಂಗ ಮಾರ್ಗ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಲೋಕೋಪಯೋಗಿ ಸಚಿವರ ಜತೆಗೆ ಈ ಬಗ್ಗೆ ಚರ್ಚಿಸಿದ್ದೇನೆ. ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆಗೆ ಸಭೆ ನಡೆಸುವುದಾಗಿ ಹೇಳಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ಸಾಧಕ ಬಾಧಕ ನೋಡಿಕೊಂಡು ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

ಸಂವಾದದ ಪ್ರಮುಖ ಅಂಶಗಳು
ಡಿಸೆಂಬರ್‌ ವೇಳೆಗೆ ರಾಜ್ಯದ ಸರಕಾರಿ ಆಸ್ಪತ್ರೆಗಳಿಗೆ ಅಗತ್ಯ ಔಷಧ ಪೂರೈಸುವ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ.
ಸರಕಾರಿ ವೈದ್ಯರು ಹೊರಗಡೆ ಚೀಟಿ ಬರೆದುಕೊಡುವ ಪರಿಪಾಠಕ್ಕೆ ಕಡಿವಾಣ ಹಾಕಲಾಗುವುದು.
 ಸ್ವಾಸ್ಥ್ಯದ ಬಗ್ಗೆ ಜಾಗೃತಿ, ಆರೋಗ್ಯ ಸಮಸ್ಯೆಗಳಿಗೆ ಮುಂಜಾಗ್ರತಾ ಕ್ರಮ ಮುಂತಾದವುಗಳಿಗಾಗಿ “ಗೃಹ ಆರೋಗ್ಯ’ ಕಾರ್ಯಕ್ರಮ ಜಾರಿಗೆ ತರಲಾಗುವುದು.
 ಡಯಾಲಿಸಿಸ್‌ ಸೆಂಟರ್‌ಗಳ ನಿರ್ವಹಣೆಗೆ ಮರು ಟೆಂಡರ್‌ ಕರೆಯುವ ಬಗ್ಗೆ ಸೋಮವಾರ ತೀರ್ಮಾನ.
ಆಯುಷ್ಮಾನ್‌ ಭಾರತ್‌ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ 2016ರ ಚಿಕಿತ್ಸಾ ದರದ ಪ್ಯಾಕೇಜ್‌ನ್ನು ಪರಿಷ್ಕರಣೆಯಾಗಲಿದೆ.
 ಶುಚಿ ಯೋಜನೆಯಡಿ ಸ್ಯಾನಿಟರಿ ನ್ಯಾಪಕಿನ್‌ ವಿತರಣೆ ಸಂಬಂಧ 2 ವಾರದಲ್ಲಿ ಟೆಂಡರ್‌ ಕರೆಯಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next