Advertisement

ಪಿಎಫ್‌ಐ- ಕೆಎಫ್‌ಡಿ ಸಂಘಟನೆ ನಿಷೇಧಿಸಿ

03:10 PM Aug 18, 2017 | Girisha |

ಶಿವಮೊಗ್ಗ: ಸಮಾಜದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗಿರುವ ಪಿಎಫ್‌ಐ ಹಾಗೂ ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ಹಲ್ಲೆ, ಹತ್ಯೆ ಪ್ರಕರಣಗಳಲ್ಲಿ ಪಿಎಫ್‌ಐ ಹಾಗೂ ಕೆಎಫ್‌ಡಿ ಸಂಘಟನೆ ನೇರವಾಗಿ ಭಾಗಿಯಾಗಿರುವುದು ಸಾಬೀತಾಗಿದೆ ಎಂದು ದೂರಿದರು. ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಗಳು ನಿಷೇಧಿತ ಸಿಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು , ಆ ಸಂಘಟನೆಯ ಪದಾಧಿಕಾರಿಗಳೇ ಇಲ್ಲಿಯೂ ಪದಾಧಿಕಾರಿಗಳಾಗಿದ್ದಾರೆ. ಇದು ಕಾನೂನಿಗೆ ಮಾಡಿರುವ ಅಣಕದಂತಿದೆ ಎಂದರು. ಕೇರಳ, ತಮಿಳುನಾಡು, ಗೋವಾ ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ಸಂಘಟನೆಗಳು ಹಲವು ರೀತಿಯ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿವೆ. ವಿಶೇಷವಾಗಿ ಕರ್ನಾಟಕದಲ್ಲಿ ಹಿಂದೂ ಯುವಕರ ಹತ್ಯೆ, ಹಲ್ಲೆ, ಕೋಮು ದಳ್ಳುರಿಗೆ ಕುಮ್ಮಕ್ಕು ನೀಡುವುದು. ರಾಜ್ಯದಲ್ಲಿ ಶಾಂತಿ, ಸೌಹಾರ್ದಕ್ಕೆ ಭಂಗ ತರುವಂತಹ ಕೃತ್ಯಗಳಲ್ಲಿ
ನೇರವಾಗಿ ಭಾಗಿಯಾಗಿವೆ ಎಂದು ಆರೋಪಿಸಿದರು. 

ಚಾಮರಾಜನಗರ ಜಿಲ್ಲೆ ಪಿಎಫ್‌ಐ ಸಂಘಟನೆ ಅಧ್ಯಕ್ಷ ಕಲೀಂಉಲ್ಲಾ, ಭಂಟ್ವಾಳದ ಪಿಎಫ್‌ಐ ಸಂಘಟನೆ ಕಾರ್ಯಕರ್ತ ಅಬ್ದುಲ್‌ ಸಾಫಿ ಅವರು ಶರತ್‌ ಮಡಿವಾಳ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಕೇರಳ ಸರ್ಕಾರ 2012ರಲ್ಲಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಪಿಎಫ್‌ಐ ರಾಷ್ಟ್ರದ ಹಿತಕ್ಕೆ ಹಾನಿಕರ ಎಂದು ತಿಳಿಸಿದೆ ಎಂದರು. ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹೃಷಿಕೇಶ್‌ ಪೈ, ರಾಜ್ಯ ಉಪಾಧ್ಯಕ್ಷ ಭವಾನಿರಾವ್‌ ಮೋರೆ, ತೇಜಸ್ವಿ ಸೂರ್ಯ, ಸಿ.ಎಚ್‌. ಮಾಲತೇಶ್‌, ಈ. ವಿಶ್ವಾಸ್‌, ಚಂದ್ರಶೇಖರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next