Advertisement

ಲಾಭದ ಬದನೆ

08:11 PM Mar 24, 2019 | Sriram |

ಬರ, ನೀರಿಲ್ಲ ಅಂತೆಲ್ಲ ನೆಪವೊಡ್ಡಿ ನಾವಲಗಿ ರೈತ ಮಲ್ಲಿಕಾರ್ಜುನ ಸುಮ್ಮನೆ ಕೂರಲಿಲ್ಲ. ಬದಲಿಗೆ ಬದನೆ ನೆಟ್ಟು ಕೈ ತುಂಬ ಸಂಪಾದನೆ ಮಾಡಿದರು. ವರ್ಷದಲ್ಲಿ 6 ತಿಂಗಳ ಕಾಲ ಬದನೆ ಕೈ ಹಿಡಿದರೆ, ಉಳಿದ ಸಮಯದಲ್ಲಿ ಇತರೆ ತರಕಾರಿ ಬೆಳೆಗಳು ಮಲ್ಲಿಯವರ ಬದುಕನ್ನು ಹಸನು ಮಾಡುತ್ತಿದೆ.

Advertisement

ಬನಹಟ್ಟಿಯ ನಾವಲಗಿ ಗ್ರಾಮದ ಮಲ್ಲಿಕಾರ್ಜುನ ಹನುಮಂತ ಜನವಾಡರನ್ನು ನೋಡಿದರೆ ಖುಷಿಯಾಗುತ್ತದೆ. ಕಾರಣ ಇಷ್ಟೇ, ಅವರಿಗಿರುವ ಕೃಷಿ ಪ್ರೀತಿ. ಕಲ್ಲುಗುಡ್ಡುಗಳನ್ನು ಸಮತಟ್ಟು ಮಾಡಿ, ಕೃಷಿ ಜಮೀನಿಗೆ ಬೇಕಾದಂತೆ ಹದ ಮಾಡಿಕೊಂಡು ಇಲ್ಲೇ ಏನಾದರೂ ಬೆಳೆಯಬಹುದಲ್ಲಾ? ಅಂತ ಯೋಚಿಸಿದಾಗ ಅವರಿಗೆ ಹೊಳೆದದ್ದು ಬದನೆಕಾಯಿ ಬೇಸಾಯ.

ಮಲ್ಲಿಕಾರ್ಜುನ ಓದಿದ್ದು ಎಸ್‌.ಎಸ್‌.ಎಲ್‌.ಸಿ. ಆದರೆ ಸಾಧನೆ ಮಾತ್ರ ಮುಗಿಲೆತ್ತರದ್ದು. ಕೃಷಿಗೆ ಇಳಿದಾಗ ಅವರಿಗೆ ಸಾಂಗ್ಲಿಯ ಚಂದ್ರಶೇಖರ ಗಾಯಕವಾಡರ ನೆರವು ಸಿಕ್ಕಿತು. ಕೇವಲ 1.15 ಗುಂಟೆ ಜಾಗದಲ್ಲಿ ಗ್ಯಾಲನ್‌ ತಳಿಯ ಬದನೆಕಾಯಿಗಳನ್ನು ಬೆಳೆದು ಆರು ತಿಂಗಳಲ್ಲಿ ಹೂಡಿದ ಹಣಕ್ಕಿಂತ ಎರಡು- ಮೂರು ಪಟ್ಟು ಲಾಭ ಮಾಡಿದಾಗ ಸುತ್ತಮುತ್ತಲ ರೈತರು ನಿಬ್ಬೆರಗಾಗಿ ಇವರ ಜಮೀನಿನ ಕಡೆಗೆ ಮುಖ ಮಾಡಲು ಶುರು ಮಾಡಿದರು. ಆರಂಭದಲ್ಲಿ ಬದನೆಕಾಯಿ ಕೆ.ಜಿ.ಗೆ 30ರೂ.ನಿಂದ 35ರೂ. ಬೆಲೆ ಇತ್ತು. ಈಗ ರೂ.20 ರಿಂದ 25ರೂ ಬೆಲೆ ದೊರಕುತ್ತಿದೆ. ಒಂದು ಪಕ್ಷ ಬೆಲೆ ಕುಸಿದರೂ ಯಾವುದೇ ರೀತಿಯ ಹಾನಿ ಆಗುವುದಿಲ್ಲ ಎನ್ನುತ್ತಾರೆ ಮಲ್ಲಿಕಾರ್ಜುನ. ಮೊದಲ ಬೆಳೆಯ ಖರ್ಚು ಅಂದಾಜು ಮೂರು ಲಕ್ಷ ಆಗಿದೆ. ಆದರೆ, ಆರು ತಿಂಗಳಲ್ಲಿ ಎಲ್ಲ ರೀತಿಯ ಖರ್ಚನ್ನು ತೆಗೆದು 4ರಿಂದ 5 ಲಕ್ಷ ಲಾಭ ಮಾಡಿದ್ದಾರೆ ಮಲ್ಲಿಕಾರ್ಜುನ.

ಬೆಳೆದದ್ದು ಹೇಗೆ?
ಮೊದಲು ಜಮೀನಿಗೆ ತಿಪ್ಪೆಗೊಬ್ಬರ, ಸರಕಾರಿ ಗೊಬ್ಬರ, ಬೇವಿನ ಹಿಂಡಿ 1.5 ಕ್ವಿಂಟಾಲ್‌, ಡಿಎಪಿ 1 ಬ್ಯಾಗ್‌, ಒಪಿ 1 ಬ್ಯಾಗ್‌, ಜಿಂಕ್‌ 10 ಕೆಜಿ, ಪ್ಯಾರಾಸ್‌ 10 ಕೆಜಿ, ಬೋರಾನ್‌ 2.5ಕೆಜಿ ಎಲ್ಲವನ್ನೂ ಹಾಕಿ ಬೆಡ್‌ ಮಾಡಿಕೊಂಡರು. ಮೂರು ಅಡಿ ಹೆಜ್ಜೆ ಅಂತರದಲ್ಲಿ ಒಂದು ಸಸಿಯಂತೆ 40,000 ಸಸಿಗಳನ್ನು ನಾಟಿ ಮಾಡಿದ್ದಾರೆ. ಹನಿ ನೀರಾವರಿ ಮೂಲಕ ನೀರು ಪೂರೈಸಲಾಗಿದ್ದು, ಇದಕ್ಕೆ ಬರುವ ರೋಗಗಳಿಗೆ ತಕ್ಕಂತೆ ಕೆಲವು ಸಿಂಪರಣೆ ಮಾಡಲಾಗಿದೆ. ಹುಳಗಳಿಂದ ರಕ್ಷಿಸಲು ಸೋಲಾರ್‌ ಲ್ಯಾಂಪ್‌ಗ್ಳನ್ನು ಅಳವಡಿಸಿದ್ದಾರೆ. ಬದನೆಕಾಯಿ, 6 ತಿಂಗಳ ಬೆಳೆಯಾಗಿದ್ದು, ನಾಟಿ ಮಾಡಿದ 60 ದಿನಗಳಲ್ಲಿ ಫ‌ಸಲು ಬಿಡಲಾರಂಭಿಸುತ್ತದೆ. ನಂತರದ ಎರಡೂವರೆ ತಿಂಗಳುಗಳ ಕಾಲ ಸತತವಾಗಿ ಬದನೆಕಾಯಿಗಳು ಬಿಡುತ್ತವೆ. ಒಂದು ಗಿಡ ಅಂದಾಜು 15 ರಿಂದ 17 ಕೆ.ಜಿಯವರೆಗೆ ಬದನೆ ನೀಡುತ್ತದೆ ಎನ್ನುತ್ತಾರೆ ಮಲ್ಲಿಕಾರ್ಜುನ.

ಮಲ್ಲಿಕಾರ್ಜುನ ತಾವು ಬೆಳೆದ ಬದನೆಯನ್ನು ಗೋವಾ, ಮುಂಬಯಿ ಮತ್ತು ಬೆಳಗಾವಿಯ ಮಾರುಕಟ್ಟೆಗಳಿಗೆ ಕಳುಹಿಸುತ್ತಾರೆ. ಯಾವುದೇ ಏಜೆಂಟರುಗಳ ಮೊರೆ ಹೋಗದೆ ತಮ್ಮದೇ ವಾಹನಗಳ ಮೂಲಕ ನೇರವಾಗಿ ಮಾರುಕಟ್ಟೆಗೆ ಹಾಕುವುದರಿಂದ ಖರ್ಚು ಕಡಿಮೆ.

Advertisement

ಆರು ತಿಂಗಳ ನಂತರ ಬದನೆ ಗಿಡಗಳನ್ನು ತೆಗೆದು ಅದೇ ಸ್ಥಳದಲ್ಲಿ ಸೌತೆ ಮತ್ತು ಹಿರೇಕಾಯಿಯನ್ನು ನಾಟಿ ಮಾಡುತ್ತಾರೆ. ಇದರಿಂದ ಆರಂಭದ ಹೂಡಿಕೆ ಮತ್ತಷ್ಟು ಕಡಿಮೆಯಾಗುತ್ತದೆ. ಜನವಾಡರ ತೋಟದಲ್ಲಿ 25ಕ್ಕಿಂತ ಹೆಚ್ಚು ಮಹಿಳಾ ಕೂಲಿ ಕಾರ್ಮಿಕರು ವರ್ಷ ಪೂರ್ತಿ ಕೆಲಸ ಮಾಡುತ್ತಾರೆ.

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next