Advertisement

ಸಾವಯವ ಕೃಷಿ ಪದ್ಧತಿಯೊಂದಿಗೆ ಆತ್ಮನಿರ್ಭರ ಭಾರತ: ಪ್ರೊ|ಯಡಪಡಿತ್ತಾಯ

12:47 AM Feb 16, 2023 | Team Udayavani |

ಮಂಗಳೂರು: ಸ್ವಾವಲಂಬಿ ಕೃಷಿ ವಿಧಾನವನ್ನು ಅನುಸರಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರ ಆಗಲು ಪ್ರತಿಯೊಬ್ಬರ ಭಾಗವಹಿಸುವಿಕೆಯೂ ಅಗತ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಹೇಳಿದರು.

Advertisement

ಉದಯವಾಣಿ ದಿನಪತ್ರಿಕೆ, ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು ವಿಶ್ವವಿದ್ಯಾನಿಲಯ ವತಿಯಿಂದ ಕೊಣಾಜೆ ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ “ಸಾವಯವ ಕೃಷಿ ಸ್ವಾವಲಂಬನೆಯ ಖುಷಿ’ ಸರಣಿಯ “ನಮ್ಮ ಕೈತೋಟ – ನಮ್ಮ ಆಹಾರ’ 14ನೇ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾವಿಂದು ಕಷ್ಟಪಟ್ಟು ದುಡಿದ ಹಣದಿಂದ ವಿಷಕಾರಿ ಆಹಾರ ಸೇವಿಸುತ್ತಿದ್ದೇವೆ. ಯುವ ಜನತೆಯಲ್ಲಿ ಸಾವಯವ ಆಹಾರದ ಕುರಿತು ಅರಿವು ಮೂಡಬೇಕಿದೆ. ಸಾವಯವ ಕೃಷಿಯ ಬಗ್ಗೆ ಆಸಕ್ತಿ ಇರುವವರಿಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಹಿಂದೆ ಉದಯವಾಣಿ ಆಯೋಜಿಸಿದ ಸಾವಯವ ತರಬೇತಿ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಉದಯವಾಣಿಯ ಪರಿಕಲ್ಪನೆ ಇದೀಗ ನಮ್ಮ ಕ್ಯಾಂಪಸ್‌ನಲ್ಲಿ ಸಾಕಾರಗೊಳ್ಳುತ್ತಿದೆ. ಈ ರೀತಿಯ ಅರಿವು ಕಾರ್ಯಕ್ರಮ ವಿದ್ಯಾರ್ಥಿಗಳಿಗೆ, ಸಾರ್ವ ಜನಿಕರಿಗೆ ಸಾವಯವ ಕೃಷಿಯ ಬಗ್ಗೆ ಅರಿವು, ಸ್ಫೂರ್ತಿ ನೀಡುವಂತಾಗಲಿ ಎಂದು ಹಾರೈಸಿದರು.

ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣ ನೀಡಿದರೆ ಸಾಲದು, ವಿದ್ಯಾರ್ಥಿಗಳನ್ನು ಪ್ರಜ್ಞಾವಂತರನ್ನಾಗಿ ರೂಪಿಸಬೇಕು. ನಮ್ಮ ಶಿಕ್ಷಣ ಕ್ರಮದಲ್ಲಿ ಶಿಕ್ಷಣ, ಆರೋಗ್ಯ, ಆಹಾರಕ್ಕೆ ನ್ಯಾಯ ಒದಗಿಸಿದಾಗ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಉದಯವಾಣಿ ಸಹಯೋಗದಲ್ಲಿ ಸಾವಯವ ಕಾರ್ಯಕ್ರಮ ಅಭಿಯಾನವಾಗಿ ರೂಪುಗೊಂಡಿದೆ. ನಗರ ಪ್ರದೇಶದ ಮಂದಿಗೆ, ಯುವಜನತೆಗೆ ಕೃಷಿಯ ಬಗ್ಗೆ ಪ್ರೇರಣೆ ನೀಡಲಾಗುತ್ತಿದೆ. ಸಮಾ ರಂಭದಲ್ಲಿ ಭಾಗವಹಿಸುವುದರ ಜತೆಗೆ ತಮ್ಮ ಮನೆಯಂಗಳದಲ್ಲಿ ಸಾವಯವ ಕೃಷಿ ಬೆಳೆಸುವ ಮೂಲಕ ವಿಷಮುಕ್ತ ಆಹಾರ ತಿನ್ನುವಂತಾಗ ಬೇಕು ಎಂದು ತಿಳಿಸಿದರು.

ಇನ್ನಷ್ಟು ಮಾಹಿತಿ ಅಗತ್ಯ
ಸಾವಯವ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ ದಿಕ್ಸೂಚಿ ಮಾತನಾಡಿ, ಸಾವಯವ ಕೃಷಿಯಿಂದ ವಿಷಮುಕ್ತ ಆಹಾರದ ಬಗ್ಗೆ ಯುವ ಜನತೆ ಯೋಚಿಸುವ ಸಮಯ ಬಂದಿದೆ.

ಹಲವು ಕಡೆಗಳಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜಿಸುವಲ್ಲಿ ಉದಯವಾಣಿ ಪತ್ರಿಕೆ ನಮ್ಮ ಬೆನ್ನೆಲುಬಾಗಿ ನಿಂತು ಶಕ್ತಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಅಡುಗೆ ಮನೆಯ ಆಹಾರ ವಿಷಮಯ ಆಗು ತ್ತಿದ್ದು ಇದರಿಂದ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ. ನಗರದಲ್ಲಿಯೂ ಅನೇಕ ಮಂದಿಗೆ ಕೃಷಿಯ ಬಗ್ಗೆ ಉತ್ಸಾಹ ಇದೆ. ಆದರೆ ಮತ್ತಷ್ಟು ಮಾಹಿತಿ ಬೇಕಾಗಿದೆ. ಆ ನಿಟ್ಟಿನಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗ ಅನೇಕ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದರು.

Advertisement

ಮಂಗಳೂರು ಸಾವಯವ ಗ್ರಾಹಕ ಬಳಗದ ಅಧ್ಯಕ್ಷ ಜಿ.ಆರ್‌. ಪ್ರಸಾದ್‌ ಆಶಯ ಭಾಷಣ ಮಾಡಿ, ನಾವು ಈಗಲೇ ಸಾವಯವ ಕೃಷಿಯ ಬಗ್ಗೆ ಯೋಚಿಸದಿದ್ದರೆ ಭವಿಷ್ಯದಲ್ಲಿ ನಮ್ಮ ಭೂಮಿ ಮರುಭೂಮಿಯಾಗಿ ಬದಲಾಗಬಹುದು. ನಮ್ಮ ಮುಂದಿನ ಪೀಳಿಗೆಯ ಆರೋಗ್ಯಕ್ಕಾಗಿ ಸಾವಯವ ಪದ್ಧತಿಯನ್ನು ಅನುಸರಿಸಬೇಕಿದೆ ಎಂದು ಹೇಳಿದರು.

ಉದಯವಾಣಿ ಸಂಪಾದಕ ಅರವಿಂದ ನಾವಡ ಪ್ರಸ್ತಾವನೆಗೈದರು. ಕಾರ್ಯಕ್ರಮಕ್ಕೂ ಮುನ್ನ ಕಾವೇರಿ ಅತಿಥಿಗೃಹದ ಆವರಣದಲ್ಲಿ ಅತಿಥಿ ಗಳು ಹಣ್ಣಿನ ಗಿಡ ನೆಟ್ಟರು. ಸಾವಯವ ತರಕಾರಿ, ಕೈತೋಟ ಬೆಳೆಸುವುದು ಹೇಗೆ, ಆಲಂಕಾರಿಕ ಗಿಡ ಪಾಲನೆ ಮುಂತಾದ ವಿಷಯಗಳ ಬಗ್ಗೆ ಸ್ನೇಹಾ ಭಟ್‌ ಮತ್ತು ಹರಿಕೃಷ್ಣ ಕಾಮತ್‌ ಪುತ್ತೂರು ಮಾಹಿತಿ ನೀಡಿದರು.
ಉತ್ತಮ ತಳಿಯ ತರಕಾರಿ ಬೀಜ, ವಿವಿಧ ಗೊಬ್ಬರಗಳು, ತೋಟಗಾರಿಕ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಕಾರ್ಯಕ್ರಮ ಸಹ ಸಂಯೋಜಕ ಡಾ| ಶರತ್‌ಚಂದ್ರ ಉಪಸ್ಥಿತರಿದ್ದರು. ಜೀವ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ| ಚಂದ್ರಾ ಎಂ. ಸ್ವಾಗತಿಸಿ, ಜೀವವಿಜ್ಞಾನ ಪ್ರಾಧ್ಯಾಪಕ ಪ್ರೊ| ಪ್ರಶಾಂತ ನಾಯ್ಕ ವಂದಿಸಿದರು. ಡಾ| ಲವೀನ, ಸೌರವ್‌ ನಿರೂಪಿಸಿದರು.

ಜಾಗೃತಿ ಮೂಡಿಸುವುದು ಉದಯವಾಣಿ ಆದ್ಯತೆ
ಮುಖ್ಯ ಅತಿಥಿಯಾಗಿದ್ದ ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ವಿನೋದ್‌ ಕುಮಾರ್‌ ಮಾತನಾಡಿ, ಉದಯವಾಣಿಯು ಜವಾಬ್ದಾರಿಯುತ ಮಾಧ್ಯಮ ವಾಗಿ ಜನರಿಗೆ ಸುದ್ದಿ, ಲೇಖನ, ಮಾಹಿತಿ ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ, ಕಟ್ಟಕಡೆಯ ಜನರಿಗೂ ಮಹತ್ವದ ವಿಚಾರದ ಬಗ್ಗೆ ಜಾಗೃತಿ ಮೂಡಿಸುವತ್ತ ಕಾರ್ಯತತ್ಪರವಾಗಿದೆ. ಸಾವಯವ ಬಳಗದವರೊಂದಿಗೆ ಸೇರಿಕೊಂಡು ಈ ಜಂಟಿ ಪ್ರಯತ್ನ ಮಾಡಿದ್ದೇವೆ. ಒಂದು ಸಣ್ಣ ಪ್ರಾರಂಭವೆನಿಸಿದರೂ ದೊಡ್ಡ ಪರಿಣಾಮ ಉಂಟು ಮಾಡುವ ಆಶಯ ನಮ್ಮದು ಎಂದರು.

ಇಂದು ನಾವು ಉಸಿರಾಡುವ ಗಾಳಿ, ಸೇವಿಸುವ ನೀರು, ತಿನ್ನುವ ತರಕಾರಿ, ಆಹಾರ ಹಾನಿಕಾರಕ ರಾಸಾಯನಿಕ, ರಸಗೊಬ್ಬರ, ಕೀಟನಾಶಕಗಳಿಂದ ಮಲಿನಗೊಂಡಿದೆ. ಇದ ರಿಂದ ಪರಿಸರವೂ ಹಾಳಾಗುತ್ತಿದೆ. ಅನೇಕ ಅಧ್ಯಯನಗಳ ಪ್ರಕಾರ ಹಲವು ಕಾಯಿಲೆಗಳಿಗೆ ನಮ್ಮ ಆಹಾರವೂ ಒಂದು ಕಾರಣವಾಗಿದೆ. ಇಂದು ಹೆಚ್ಚು ನಾಗರಿಕರು ಜಾಗೃತರಾಗುತ್ತಿದ್ದು, ಆರೋಗ್ಯಕರ ಜೀವನ ಶೈಲಿಗಾಗಿ ಸಾವಯವ ಆಹಾರದತ್ತ ಆಕರ್ಷಿತರಾಗುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next