Advertisement

ಜಿದ್ದಾಜಿದ್ದಿ ಕಾದಾಟ: ಬುಲ್ಸ್‌ಗೆ ಸೋಲು

11:07 PM Aug 12, 2019 | Team Udayavani |

ಅಹ್ಮದಾಬಾದ್‌: ಪ್ರೊ ಕಬಡ್ಡಿ ಅಹ್ಮದಾಬಾದ್‌ ಆವೃತ್ತಿಯ ಸೋಮವಾರದ 2ನೇ ಹಣಾಹಣಿ ರೋಚಕವಾಗಿ ನಡೆಯಿತು. ನಿಕಟ ಕಾದಾಟದ ಕಡೆಯ ಹಂತದಲ್ಲಿ ಕೈಚೆಲ್ಲಿದ ಬೆಂಗಳೂರು ಬುಲ್ಸ್‌ 33-35 ಅಂಕಗಳ ಅಂತರದಿಂದ ಯುಪಿ ಯೋಧಾ ವಿರುದ್ಧ ಸೋತು ಹೋಯಿತು. ಇದು ಬೆಂಗಳೂರಿಗೆ ಎದುರಾದ ಸತತ 2ನೇ ಸೋಲು. ಬುಲ್ಸ್‌ ರವಿವಾರ ಹರ್ಯಾಣ ವಿರುದ್ಧ ಎಡವಿತ್ತು.

Advertisement

ಇದುವರೆಗೆ 7 ಪಂದ್ಯವಾಡಿರುವ ಬೆಂಗಳೂರು 3ನೇ ಸೋಲನುಭವಿಸಿದೆ. ಆದರೆ 22 ಅಂಕ ಗಳಿಸಿ ದ್ವಿತೀಯ ಸ್ಥಾನ ಉಳಿಸಿಕೊಂಡಿದೆ. ಇನ್ನೊಂದು ಕಡೆ ಯುಪಿ ಯೋಧಾಗೆ 7 ಪಂದ್ಯಗಳಲ್ಲಿ ಒಲಿದ 2ನೇ ಜಯ ಇದಾಗಿದೆ. ಮೂರರಲ್ಲಿ ಸೋತಿದ್ದರೆ, 2 ಪಂದ್ಯ ಟೈಗೊಂಡಿದೆ.

ರೋಹಿತ್‌ ಕುಮಾರ್‌ ವೈಫ‌ಲ್ಯ
ಬೆಂಗಳೂರು ತಂಡದ ಸೋಲಿಗೆ ಮುಖ್ಯ ಕಾರಣ ನಾಯಕ ರೋಹಿತ್‌ ಕುಮಾರ್‌ ಅವರ ತೀವ್ರ ವೈಫ‌ಲ್ಯ. ಅವರು 13 ಬಾರಿ ದಾಳಿ ನಡೆಸಿದರೂ ಯಶಸ್ಸು ಕಂಡಿದ್ದು ಕೇವಲ 3 ಬಾರಿ. ಗಳಿಸಿದ ಅಂಕ 4. ರವಿವಾರ ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸದ ಪವನ್‌ ಸೆಹ್ರಾವತ್‌, ಸೋಮವಾರ ತಮ್ಮ ಎಂದಿನ ಲಯಕ್ಕೆ ಮರಳಿದರು. ಅವರ ಸರ್ವಾಂಗೀಣ ಪ್ರದರ್ಶನವಿತ್ತರು. 16 ಬಾರಿ ಎದುರಾಳಿ ಅಂಕಣಕ್ಕೆ ನುಗ್ಗಿಹೋದ ಪವನ್‌ 9 ಬಾರಿ ಯಶಸ್ವಿಯಾದರು. ಒಟ್ಟು 12 ಅಂಕ ಗಳಿಸಿದರು. ರಕ್ಷಣೆಯಲ್ಲೂ ಪವನ್‌ ಪರಾಕ್ರಮ ಮೆರೆದು 3 ಅಂಕ ಗಳಿಸಿದರು.

ಯುಪಿ ತಂಡದ ಶ್ರೀಕಾಂತ್‌ ಜಾಧವ್‌ ದಾಳಿಯಲ್ಲಿ ಮಿಂಚಿದರು. ಅವರು ಗಳಿಸಿದ ಅಂಕ 8. ರಕ್ಷಣೆಯಲ್ಲಿ ಸುಮಿತ್‌ ಮಿಂಚಿ 5 ಅಂಕ ಗಳಿಸಿದರು. ಇವರಿಬ್ಬರ ಒಗ್ಗಟ್ಟಿನ ಆಟ ಬೆಂಗಳೂರು ಸೋಲಿಗೆ ಕಾರಣವಾಯಿತು.

ಬೆಂಗಾಲ್‌-ತೆಲುಗು ಪಂದ್ಯ ಟೈ
ಬೆಂಗಾಲ್‌ ವಾರಿಯರ್ಸ್‌-ತೆಲುಗು ಟೈಟಾನ್ಸ್‌ ನಡುವೆ ನಡೆದ ಮೊದಲ ಪಂದ್ಯ ಟೈಗೊಂಡಿದೆ.

Advertisement

ಬೆಂಗಾಲ್‌ ವಾರಿಯರ್ಸ್‌ ಪರ ಮೊಹಮ್ಮದ್‌ ನಬಿ ಭಕ್ಷ್‌ ಸರ್ವಾಂಗೀಣ ಪ್ರದರ್ಶನ ನೀಡಿದರು. ದಾಳಿಯಲ್ಲಿ ಮತ್ತು ರಕ್ಷಣೆಯಲ್ಲಿ ಅವರು ಪ್ರದರ್ಶಿಸಿದ ಅದ್ಭುತ ಆಟದ ನೆರವಿನಿಂದ ಬೆಂಗಾಲ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ನಬಿ ಭಕ್ಷ್‌ ದಾಳಿಯಲ್ಲಿ 8, ರಕ್ಷಣೆಯಲ್ಲಿ 3 ಅಂಕ ಪಡೆದರು. ಇವರಿಗೆ ಮಣಿಂದರ್‌ ಸಿಂಗ್‌ ದಾಳಿಯಲ್ಲಿ ನೆರವು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next