Advertisement

ಗೆದ್ದೇ ಗೆಲ್ಲುವೆವು: ರೋಹಿತ್‌ ವಿಶ್ವಾಸ

02:08 AM Aug 16, 2019 | Sriram |

ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಈ ಸಲವೂ ಪ್ರಚಂಡ ಪ್ರದರ್ಶನ ನೀಡುತ್ತಿದ್ದು, ಪ್ರೊ ಕಬಡ್ಡಿ ಪಟ್ಟ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದೆ. ಇದೇ ಖುಷಿಯಲ್ಲಿ ತಂಡದ ನಾಯಕ ರೋಹಿತ್‌ ಕುಮಾರ್‌ “ಉದಯವಾಣಿ’ ಜತೆಗೆ ಮಾತನಾಡಿದ್ದಾರೆ. ಒಟ್ಟಾರೆ ಸವಾಲುಗಳು, ತಂಡದ ಪ್ರದರ್ಶನ, ಒತ್ತಡ, ಕೋಚಿಂಗ್‌, ಶಕ್ತಿ ಸಾಮರ್ಥ್ಯದ ಬಗ್ಗೆ ರೋಹಿತ್‌ ಪೂರ್ಣ ಮನಸ್ಸಿನಿಂದ ಸಂದರ್ಶನ ನೀಡಿದ್ದಾರೆ.ಹಾಲಿ ಚಾಂಪಿಯನ್‌ ಬೆಂಗಳೂರು ತಂಡಕ್ಕೆ ಈ ಸಲವೂ ಕಪ್‌ ಗೆಲ್ಲುವ ವಿಶ್ವಾಸ ಇದೆಯೇ?

Advertisement

ಖಂಡಿತಾ ಇದೆ… ನಮ್ಮ ತಂಡ ತಾರಾ ಆಟಗಾರರನ್ನು ಒಳಗೊಂಡಿದೆ. ಸಂಘಟಿತ ಪ್ರದರ್ಶನ ನಮ್ಮ ಯಶಸ್ಸಿನ ಗುಟ್ಟು. ಈ ಸಲವೂ ಶ್ರೇಷ್ಠ ಆಟ ಸಂಘಟಿಸುವುದರೊಂದಿಗೆ ಕಪ್‌ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನನಗಿದೆ.

ಉಳಿದಿರುವ ಪಂದ್ಯಗಳಲ್ಲಿ ಯಾವ ರೀತಿಯ ಪ್ರದರ್ಶನ ನಿರೀಕ್ಷಿಸುತ್ತೀರಿ?
ನಾವು ಹಾಲಿ ಚಾಂಪಿಯನ್ಸ್‌. ಖ್ಯಾತಿಗೆ ತಕ್ಕಂತೆ ಆಡುತ್ತೇವೆ. ಯಾವುದೇ ಪಂದ್ಯವನ್ನೂ ಲಘುವಾಗಿ ಪರಿಗಣಿಸ ಬಾರದು ಎಂದು ಸಹ ಆಟಗಾರರಿಗೆ ಸೂಚಿಸಿ ದ್ದೇನೆ. ಪ್ರತೀ ಪಂದ್ಯವೂ ಮಾಡು- ಮಡಿ ಪಂದ್ಯ ಎಂದು ಅಂದು ಕೊಂಡರೆ ನಮಗೆ ಯಾವುದೂ ಕಷ್ಟವಾಗಲಾರದು.

ತಾರಾ ಆಟಗಾರ ಪವನ್‌ ಸೆಹ್ರಾವತ್‌ ಪ್ರದರ್ಶನ ಬಗ್ಗೆ ಏನನ್ನಿಸುತ್ತಿದೆ?
ನಮ್ಮ ತಂಡದ ಬಲವೇ ಪವನ್‌ ಸೆಹ್ರಾವತ್‌. ಪ್ರತಿಭಾವಂತ ಕಬಡ್ಡಿಪಟು. ಅವರೊಬ್ಬ ಶ್ರೇಷ್ಠ ರೈಡರ್‌ ಎನ್ನುವುದು ಎಲ್ಲರಿಗೂ ಗೊತ್ತು. ಈಗ ರಕ್ಷಣಾ ಆಟಗಾರನಾಗಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಲ್‌ರೌಂಡರ್‌ ಆಗಿಯೂ ಯಶಸ್ಸು ಸಾಧಿಸಿದ್ದಾರೆ.

ಬೆಂಗಳೂರು ಬುಲ್ಸ್‌ಗೆ ಕೋಚಿಂಗ್‌ ಯಾವ ರೀತಿಯಲ್ಲಿ ನೆರವಾಗಿದೆ?
ಕೋಚ್‌ ರಣಧೀರ್‌ ಸಿಂಗ್‌ ತಂಡಕ್ಕೆ ಸೂಕ್ತ ಸಂದರ್ಭದಲ್ಲಿ ನೆರವಾಗಿದ್ದಾರೆ. ಸಂಕಷ್ಟದಲ್ಲಿ ತಂಡವನ್ನು ಪಾರು ಮಾಡಿದ್ದಾರೆ. ಪ್ರತಿಯೊಬ್ಬ ಆಟಗಾರನಿಗೂ ತಾಳ್ಮೆಯಿಂದ ಕಬಡ್ಡಿ ಕೌಶಲವನ್ನು ಹೇಳಿಕೊಡುತ್ತಾರೆ. ಇದರಿಂದ ಎದುರಾಳಿ ತಂಡದ ಬಲ ಹಾಗೂ ದೌರ್ಬಲ್ಯವನ್ನು ಅರಿತು ಯೋಜನೆ ರೂಪಿಸುಕೊಳ್ಳಲು ಸಹಾಯವಾಗುತ್ತಿದೆ.

Advertisement

ಪ್ರೊ ಕಬಡ್ಡಿಯಲ್ಲಿ ನೀವು 600 ಅಂಕವನ್ನು ಪಡೆದಿದ್ದೀರಿ. ನಿಮ್ಮ ಈ ಸಾಧನೆ ಬಗ್ಗೆ ಹೇಳಿ?
ಇದೊಂದು ಅವಿಸ್ಮರಣೀಯ ಸಾಧನೆ. ಆದರೆ ಈ ಸಾಧನೆಯನ್ನು ಇನ್ನೂ ಮೊದಲೇ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನಗೆ ಅನಿಸುತ್ತಿದೆ. ಏನೇ ಆದರೂ ಮುಂದೆ ಇದೇ ಪ್ರದರ್ಶನವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ.

ಬೆಂಗಳೂರು ಚರಣದ ಬಗ್ಗೆ ತಿಳಿಸಿ?
ತವರಿನ ಅಂಗಳದಲ್ಲಿ ಎರಡು ವರ್ಷದ ಬಳಿಕ ಆಡುತ್ತಿದ್ದೇವೆ. ಇದು ನಮ್ಮ ತಂಡಕ್ಕೆ ಖುಷಿಯ ಸಂಗತಿ. ತವರು ನೆಲದ ಅಭಿಮಾನಿಗಳ ಬೆಂಬಲದಲ್ಲಿ ಆಡುವುದೇ ಒಂದು ದೊಡ್ಡ ಆನಂದ. ಬೆಂಗಳೂರಲ್ಲಿ 3-4 ಪಂದ್ಯ ಗೆಲ್ಲುವುದು ನಮ್ಮ ಗುರಿ. ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು.

ರೈಡರ್‌ಗಳನ್ನು ಹೊರತುಪಡಿಸಿದಂತೆ ತಂಡದ ರಕ್ಷಣಾ ವಿಭಾಗದಲ್ಲಿರುವ ನಿಮ್ಮ ನಂಬಿಕೆಯ ಆಟಗಾರ ಯಾರು?
ಯುವ ಆಟಗಾರ ಅಮನ್‌ ನಂಬಿಕೆಯ ರಕ್ಷಣಾ ಆಟಗಾರ. ಅವರಲ್ಲಿ ಅತ್ಯುತ್ತಮ ಟ್ಯಾಕಲ್‌ ಮಾಡುವ ಗುಣವಿದೆ. ಅವರು ಆಡಿರುವ ಹಿಂದಿನ ಪಂದ್ಯಗಳಲ್ಲಿ ಎಲ್ಲವನ್ನು ಸಾಬೀತುಪಡಿಸಿದ್ದಾರೆ.

ಯಾವ ತಂಡ ಬೆಂಗಳೂರಿಗೆ ಹೆಚ್ಚು ಅಪಾಯಕಾರಿ?
ಎಲ್ಲ ತಂಡಗಳು ಕೂಡ ಬಲಿಷ್ಠವಾಗಿವೆೆ. ಅವರು ದುರ್ಬಲ ಇವರು ಬಲಿಷ್ಠ ಎನ್ನುವ ಯಾವುದೇ ಯೋಚನೆಗಳಿಲ್ಲ. ಸಮಯ ಎಲ್ಲವನ್ನೂ ನಿರ್ಧರಿಸುತ್ತದೆ. ಪ್ರತಿ ತಂಡವೂ ಬಲಿಷ್ಠ ಎಂದೇ ಅಂದುಕೊಂಡು ನಾವು ಆಡಬೇಕಿದೆ. ದುರ್ಬಲ ಎಂದು ಆಡಿದರೆ ನಾವು ಪಂದ್ಯ ಕಳೆದುಕೊಳ್ಳಬೇಕಾಗಿ ಬರಬಹುದು. ಹೀಗಾಗಿ ಈ ವಿಚಾರದಲ್ಲಿ ನಾವು ಹೆಚ್ಚು ಎಚ್ಚರಿಕೆಯಿಂದ ಇದ್ದೇವೆ.

ನೆಚ್ಚಿನ ಯುವ ಆಟಗಾರ?
ಯುಪಿ ಯೋಧಾ ತಂಡದ ಲೆಫ್ಟ್ ಕಾರ್ನರ್‌ ಸುಮಿತ್‌ ನನ್ನ ನೆಚ್ಚಿನ ಯುವ ಆಟಗಾರ. ನನ್ನ ಪ್ರಕಾರವಾಗಿ ಅವರು ಉಳಿದೆಲ್ಲ ಆಟಗಾರರಿಗಿಂತ ಹೆಚ್ಚು ಲೆಕ್ಕಾಚಾರವಾಗಿ ಆಡುತ್ತಾರೆ. ಇದೇ ಪ್ರದರ್ಶನವನ್ನು ಅವರು ಕಾಯ್ದುಕೊಂಡು ಮುಂದುವರಿದರೆ ಮುಂದೊಂದು ದಿನ ಕಬಡ್ಡಿಯಲ್ಲಿ ಖ್ಯಾತನಾಮ ಆಟಗಾರನಾಗಿ ಗುರುತಿಸಿಕೊಳ್ಳುವ ಎಲ್ಲ ಅರ್ಹತೆಗಳೂ ಅವರಲ್ಲಿದೆ.

ರೋಹಿತ್‌ ಸಾಧನೆ
ರೋಹಿತ್‌ ಕುಮಾರ್‌ ವೃತ್ತಿಪರ ಕಬಡ್ಡಿ ತಾರೆ. 2016ರಲ್ಲಿ ಏಶ್ಯನ್‌ ಕಬಡ್ಡಿ ಚಾಂಪಿಯನ್‌ ಆಗಿದ್ದ ಭಾರತ ತಂಡದಲ್ಲಿ ಇವರೂ ಕೂಡ ಸದಸ್ಯರಾಗಿದ್ದರು. 2018ರಲ್ಲಿ ದುಬಾೖ ಮಾಸ್ಟರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಪ್ರೊ ಕಬಡ್ಡಿ ಇವರಿಗೆ ಭಾರೀ ಜನಪ್ರಿಯತೆಯನ್ನೂ ತಂದುಕೊಟ್ಟಿತ್ತು. 3ನೇ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್‌ ತಂಡವನ್ನು ಸೇರಿಕೊಂಡ ರೋಹಿತ್‌ ಕುಮಾರ್‌ ಓರ್ವ ಸಮರ್ಥ ರೈಡರ್‌ ಆಗಿ ಗುರುತಿಸಿಕೊಂಡರು. ಆಡಿದ ಮೊದಲ ಪಂದ್ಯದಲ್ಲೇ ಶ್ರೇಷ್ಠ ರೈಡರ್‌ ಪ್ರಶಸ್ತಿಗೆ ಪಾತ್ರರಾದರು. ಆನಂತರ ಇವರನ್ನು ಬೆಂಗಳೂರು ಬುಲ್ಸ್‌ ತಂಡ 81 ಲಕ್ಷ ರೂ.ಗೆ ಖರೀದಿಸಿತು. ಅಲ್ಲಿಂದ ಇಲ್ಲಿ ತನಕ ಬುಲ್ಸ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next