Advertisement

ಆವಶ್ಯಕತೆ ಆಧಾರಿತ ಆರೋಗ್ಯ ಸೇವೆಗೆ ಆದ್ಯತೆ

02:36 PM Aug 23, 2021 | Team Udayavani |

ದೇಶದ ಭವಿಷ್ಯದತ್ತ ದೃಷ್ಟಿ ಬೀರಿದಾಗ ಆರೋಗ್ಯ ಕ್ಷೇತ್ರದ ಹಿಂದಿನ ಮತ್ತು ವರ್ತಮಾನದ ಅವಲೋಕನ ಮುಖ್ಯವಾಗುತ್ತದೆ. ಸ್ವಾತಂತ್ರ್ಯೋತ್ತರದ ಕಾಲಘಟ್ಟದ 74 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರ ಸಾಗಿಬಂದ ಹಾದಿ ಮತ್ತು ಇದನ್ನು ಅಧಾರವಾಗಿಟ್ಟು ಕೊಂಡು ಶತಮಾನೋತ್ಸವದ ಹೊತ್ತಿ ನಲ್ಲಿ ದೇಶದ ಆವಶ್ಯಕತೆ ಯನ್ನು ವಿಶ್ಲೇಷಿಸುವುದು ಅಗತ್ಯ ಎಂದು ನನಗನಿಸುತ್ತದೆ.

Advertisement

ಸ್ವಾತಂತ್ರ್ಯೋತ್ತರದ ಅವಧಿಯನ್ನು ಅವಲೋಕಿಸಿದರೆ ದೇಶದ ಆರೋಗ್ಯ ಕ್ಷೇತ್ರದಲ್ಲಿ ಅಸಾಧಾರಣ ಸುಧಾರಣೆಗಳಾಗಿವೆ. ವೈದ್ಯಕೀಯ ಜಗತ್ತಿನ ಹೊಸ ಸಂಶೋಧನೆಗಳು, ಅವಿಷ್ಕಾರಗಳು ಇತ್ತೀಚಿನ ವರ್ಷಗಳಲ್ಲಿ ಅತೀ ವೇಗವಾಗಿ ನಮ್ಮಲ್ಲೂ ಅಳವಡಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಸರಕಾರದ ಮಟ್ಟದಲ್ಲಿ ಹೆಚ್ಚಿನ ಅನುದಾನಗಳನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿರಿಸಲಾಗುತ್ತಿದೆ. ಇವೆಲ್ಲವನ್ನು ಗಮನಿಸಿದಾಗ ಮುಂದಿನ 25 ವರ್ಷಗಳಲ್ಲಿ ದೇಶದ ಆರೋಗ್ಯ ಕ್ಷೇತ್ರ ಇನ್ನಷ್ಟು ಔನ್ನತ್ಯಕ್ಕೇರಲಿದೆ ಎಂಬುದು ನನ್ನ ಅನಿಸಿಕೆ.

ನನ್ನ ಪ್ರಕಾರ ದೇಶದ ಆರೋಗ್ಯ ಸ್ಥಿತಿ ಪ್ರಸ್ತುತ ಉತ್ತಮವಾಗಿದೆ. ಆಸ್ಪತ್ರೆಗಳು, ವೈದ್ಯಕೀಯ ಸೌಲಭ್ಯ ಗಳು, ಉತ್ತಮ ಪ್ರಮಾಣದಲ್ಲಿವೆ. ವೈದ್ಯರ ಸಂಖ್ಯೆಯೂ ಇದೆ. ಪ್ರಸ್ತುತ ಬೇಕಾಗಿರುವುದು ಆವಶ್ಯಕತೆ ಆಧಾರಿತ ಆರೋಗ್ಯ ಸೇವೆಗೆ (ನೀಡ್‌ ಬೇಸ್‌ಡ್‌) ಒತ್ತು. ಉಳಿದ ದೇಶಗಳಲ್ಲಿ ಇದೆ ಎಂಬ ಮಾತ್ರಕ್ಕೆ ಫ್ಯಾನ್ಸಿ ಬೇಸ್‌ಡ್‌ ಆಗಿರಬಾರದು. ಅಮೆರಿಕ, ಇಂಗ್ಲೆಂಡ್‌, ಯರೋಪ್‌ ದೇಶಗಳದ್ದು ನಮಗೆ ಪ್ರಯೋಜನವಿಲ್ಲ. ನಮ್ಮ ದೇಶಕ್ಕೆ ಯಾವ ರೀತಿಯ ಆರೋಗ್ಯ ಸೇವೆ ಅಗತ್ಯವಿದೆ ಎಂಬುದನ್ನು ಮನನ ಮಾಡಿಕೊಂಡು ಆ ದಿಕ್ಕಿನಲ್ಲಿ ನಮ್ಮ ಯೋಚನೆ, ಯೋಜನೆ, ವ್ಯವಸ್ಥೆಗಳಿರಬೇಕು.

ಆರೋಗ್ಯ ಕ್ಷೇತ್ರದಲ್ಲಿ ಏನಾಗಬೇಕು ಎಂಬುದಕ್ಕಿಂತಲೂ ಪ್ರಸ್ತುತ ಆಗಿರುವ ವ್ಯವಸ್ಥೆಗಳು ಹೇಗೆ ಅನುಷ್ಠಾನ ಆಗಿವೆ ಮತ್ತು ಈ ನಿಟ್ಟಿನಲ್ಲಿ ಏನೇನು ಆಗಬೇಕಾಗಿದೆ ಎಂಬುದರ ಬಗ್ಗೆ ಪ್ರಥಮತ ಚಿಂತನೆ ನಡೆಸಬೇಕಾಗಿದೆ. ಸ್ವಾತಂತ್ರ್ಯೋತ್ತರ ಕಾಲಘಟ್ಟದ ವಿವಿಧ ಮಜಲುಗಳನ್ನು ಅವಲೋಕಿಸುತ್ತಾ ಬಂದರೆ ಇಂದು ಆರೋಗ್ಯ ಸೇವೆ ದೇಶದ ಮೂಲೆಮೂಲೆ ಗಳಿಗೆ ತಲುಪಿದೆ. ನಮ್ಮ ರಾಜ್ಯವಂತೂ ಇತರ ರಾಜ್ಯಗಳಿಗೆ ಹೋಲಿಸಿದರೆ ಆರೋಗ್ಯ ಸೇವೆಯಲ್ಲಿ ಬಹಳಷ್ಟು ಮುಂದಿದೆ. ವೈದ್ಯರ ಸಂಖ್ಯೆಯೂ ಪ್ರಸ್ತುತ ಹೆಚ್ಚಿನ ಪ್ರಮಾಣದಲ್ಲಿದೆ. ಆಸ್ಪತ್ರೆಗಳಿವೆ, ಸೌಕರ್ಯ ಗಳಿವೆ. ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳು, ಚಿಕಿತ್ಸೆ ಗಳು, ವ್ಯವಸ್ಥೆಗಳು ನಮ್ಮ ದೇಶ ದಲ್ಲೂ ಇವೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಸರಕಾರವೂ ಬಹ ಳಷ್ಟು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ರೂಪಿ ಸಿದೆ. ಕಟ್ಟಕಡೆಯ ಹಳ್ಳಿ ಗಳಿಗೂ ಆರೋಗ್ಯ ಸೇವೆ ವ್ಯಾಪಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮು ದಾಯ ಆಸ್ಪತ್ರೆಗಳು ಇವೆ. ಸಮುದಾಯ ಆರೋಗ್ಯ  ಕಾರ್ಯಕ್ರಮಗಳು ಬೇಕಾ ದಷ್ಟಿವೆ. ಈ ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳು ವಂತೆ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ನೋಡಿ ಕೊಂಡರೆ ಸಾಕು ಎಂಬುದು ನನ್ನ ಅನಿಸಿಕೆ. ಗ್ರಾಮೀಣ ಪ್ರದೇಶದಲ್ಲಿ ಮುಖ್ಯವಾಗಿ ಇಲ್ಲಿ ವೈದ್ಯರ ಸಂಖ್ಯೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸಿದರೆ ಮತ್ತು ವೈದ್ಯಕೀಯ ಚಿಕಿತ್ಸೆಗಳು ಸಮರ್ಪಕವಾಗಿ ಲಭ್ಯ ವಾಗುವಂತೆ ನೋಡಿಕೊಂಡರೆ ಸಾಕು. ಇದನ್ನೇ ದೃಷ್ಟಿ ಯಲ್ಲಿಟ್ಟುಕೊಂಡು ನಾನು ಆರಂಭದಲ್ಲಿ “ನೀಡ್‌ ಬೇಸ್‌ಡ್‌’ ಎಂಬ ಶಬ್ಧವನ್ನು ಉಲ್ಲೇಖೀಸಿರುವುದು.

ಗ್ರಾಮೀಣ ಭಾಗದಲ್ಲೂ ಸೂಪರ್‌ ಸ್ಪೆಷಾಲಿಟಿ ಚಿಕಿತ್ಸೆಗಳಿಗಿಂತ ಮುಖ್ಯವಾಗಿ ಸಮಗ್ರ ವೈದ್ಯಕೀಯ ಸೇವೆಯನ್ನು ಸರ್ವರಿಗೂ ಲಭ್ಯವಾಗಿಸಲು ಆದ್ಯತೆ ನೀಡುವುದು ಅಗತ್ಯ. ಸೂಪರ್‌ ಸ್ಪೆಷಾಲಿಟಿ ಚಿಕಿತ್ಸೆಗಳು, ಕೆಲವು ಕ್ಲಿಷ್ಟಕರ, ಮತ್ತು ಅತ್ಯಾಧುನಿಕ ಚಿಕಿತ್ಸೆಗಳನ್ನು ಗ್ರಾಮೀಣ ಭಾಗದಲ್ಲಿ ಒದಗಿಸಲು ಕಷ್ಟ ಮತ್ತು ಅದು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವೂ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಈ ಸೌಲಭ್ಯಗಳನ್ನು ಅಳ ವಡಿಸುವುದು ವೆಚ್ಚದಾಯಕವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಸ್ತುತ ಲಭ್ಯವಾಗುವ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗಳಲ್ಲಿ ಇನ್ನಷ್ಟು ಸುಧಾರಣೆ ಮಾಡಿ ದರೆ ಒಳಿತು.

Advertisement

“ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ’ ಎಂಬುದನ್ನು ಅರಿವು ಎಲ್ಲಕ್ಕಿಂತಲೂ ಮುಖ್ಯವಾದುದು. ಪ್ರತಿಯೋರ್ವ ಮನುಷ್ಯನಿಗೂ ಆರೋಗ್ಯ ಅತೀ ಮುಖ್ಯ. ನಮ್ಮ ಆರೋಗ್ಯ ಸಂರಕ್ಷಣೆ ನಮ್ಮದೇ ಹೊಣೆ. ವೈದ್ಯರ ಪಾತ್ರ ಕಡಿಮೆ. ಜನರ ಜವಾ ಬ್ದಾರಿಯೇ ಹೆಚ್ಚು. ಆರೋಗ್ಯ ಕಾಳಜಿ ಕೇವಲ ಸರ ಕಾರಕ್ಕೆ ಮಾತ್ರ ಸೇರಿದ್ದಲ್ಲ. ಜನರ ಪಾತ್ರ ಹಿರಿ ದಾದುದು. ವೈದ್ಯರು, ಆರೋಗ್ಯ ಇಲಾಖೆ, ತಜ್ಞರು ಏನು ಹೇಳುತ್ತಾರೆ ಅದನ್ನು ಸರಿಯಾಗಿ ಜೀವನದಲ್ಲಿ ಅನುಷ್ಠಾನಗೊಳಿಸಿದರೆ ಸಾಕು. ಈ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಜನರಲ್ಲಿ ಇರಬೇಕು. ಆರೋಗ್ಯ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜನತೆ ಆಹಾರ ಸೇವನೆಯಲ್ಲಿ ಶಿಸ್ತು, ಮಿತ, ಹಿತ ಮತ್ತು ಅಗತ್ಯಕ್ಕೆ ಅನುಗುಣವಾಗಿ ಸೇವನೆ, ವ್ಯಾಯಾಮ, ವೈಯಕ್ತಿಕ ಸ್ವತ್ಛತೆ ಮುಂತಾದುವುಗಳ ಪಾಲನೆ ಮಾಡಬೇಕು.

ವೈದ್ಯಕೀಯ ವೆಚ್ಚ ಇತ್ತೀಚಿನ ವರ್ಷಗಳಲ್ಲಿ ಬಹು ವೆಚ್ಚದಾಯಕ ಎಂಬ ಅಭಿಪ್ರಾಯಗಳಿವೆ. ಹಾಗೆ ನೋಡಿದರೆ ಪ್ರಸ್ತುತ ಎಲ್ಲ ಕ್ಷೇತ್ರಗಳೂ ವೆಚ್ಚ ದಾಯಕವೇ. ಪ್ರತಿಯೋರ್ವರಿಗೂ ಉತ್ತಮ ಮತ್ತು ಅತ್ಯಾಧುನಿಕ ಆರೋಗ್ಯ ಸೇವೆ ಲಭ್ಯವಾಗಬೇಕು. ಕೆಲವು ಚಿಕಿತ್ಸೆಗಳು ವೆಚ್ಚದಾಯಕವಾಗಿರುತ್ತದೆ. ಆರೋಗ್ಯ ಸೇವೆಯಲ್ಲಿ, ವೈದ್ಯಕೀಯ ಚಿಕಿತ್ಸೆಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಇವುಗಳಿಗೆ ಆರೋಗ್ಯ ವಿಮೆ ಉತ್ತಮ ಪರಿಹಾರ. ಆರೋಗ್ಯ ವಿಮೆಗಳಿಂದ ವೈದ್ಯಕೀಯ ವೆಚ್ಚಗಳನ್ನು ಭರಿಸಬಹು ದಾಗಿದೆ. ಪ್ರತಿಯೋರ್ವರು ಆರೋಗ್ಯ ವಿಮೆಯನ್ನು ಹೊಂದುವಂತಾಗಬೇಕು. ಸರಕಾರ ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು. ವಿಮೆ ಮಾಡಿಸಲು ಸಾಧ್ಯವಿಲ್ಲದ ಆರ್ಥಿಕವಾಗಿ ಅಶಕ್ತರಾಗಿರುವವರ ನೆರವಿಗೆ ಸರಕಾರ ಬರಬೇಕು.

ವೈದ್ಯಕೀಯ ಪದ್ಧತಿಯಲ್ಲಿ ಯಾವುದು ಹೆಚ್ಚು; ಯಾವುದು ಕಡಿಮೆ ಎಂಬುದಿಲ್ಲ. ಅಲೋಪಥಿ ಯಾಗಲಿ, ಆಯರ್ವೇದವಾಗಲಿ, ಯುನಾನಿಯಾಗಲಿ ಎಲ್ಲವೂ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ. ಪ್ರತಿಯೊಂದೂ ಪದ್ಧತಿಯೂ ಆದರದ್ದೇ ಆದ ಪಾತ್ರವನ್ನು ಹೊಂದಿದೆ. ಇವುಗಳ ಮಧ್ಯೆ ಸಮನ್ವಯ ಆಗತ್ಯ. ಯಾವುದನ್ನು ಯಾವುದಕ್ಕೆ ಹೊಂದಿಸಿಕೊಳ್ಳಬೇಕು ಎಂಬ ಅರಿವಿನೊಂದಿಗೆ ಈ ವೈದ್ಯಕೀಯ ಪದ್ಧತಿ ಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ಕ್ಷೇತ್ರ ಇರಲಿ ಕೇವಲ ಯೋಜನೆ, ಕಾರ್ಯಕ್ರಮಗಳನ್ನು ಮಾಡಿ ದರೆ ಸಾಲದು. ಪರಿಣಾಮಕಾರಿ ಅನುಷ್ಠಾನದ ಬದ್ಧತೆ, ಇಚ್ಛಾಶಕ್ತಿಯೂ ಅಗತ್ಯ.

ಡಾ| ಬಿ.ಎಂ.ಹೆಗ್ಡೆ

ವಿಶ್ರಾಂತ ಕುಲಪತಿ, ಮಾಹೆ

Advertisement

Udayavani is now on Telegram. Click here to join our channel and stay updated with the latest news.

Next