Advertisement

ಮಂಗಳೂರು : ಪ್ರಧಾನಿಯ ನಿರೀಕ್ಷೆಯಲ್ಲಿ ಎಂಆರ್‌ಪಿಎಲ್‌, ಎನ್‌ಎಂಪಿಎ ಯೋಜನೆಗಳು

08:44 AM Aug 28, 2022 | Team Udayavani |

ಮಂಗಳೂರು: ರಾಜ್ಯದಲ್ಲೇ ಮೊದಲ ಸಮುದ್ರ ನೀರು ಸಂಸ್ಕರಣ ಸ್ಥಾವರ, ಮಂಗಳೂರು ಬಂದರಿನಲ್ಲಿ 14ನೇ ಜೆಟ್ಟಿಯ ಯಾಂತ್ರೀಕರಣ ಸೇರಿದಂತೆ ಹಲವು ಪ್ರಮುಖ ಯೋಜನೆಗಳ ಲೋಕಾರ್ಪಣೆ ಮತ್ತು ಇತರ ಕೆಲವೊಂದು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಭೇಟಿಯ ವೇಳಾಪಟ್ಟಿಯಲ್ಲಿರಲಿವೆ.
ಇವು ಮುಖ್ಯವಾಗಿ ಎಂಆರ್‌ಪಿಎಲ್‌ ಹಾಗೂ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ವ್ಯಾಪ್ತಿಯ ಯೋಜನೆಗಳು. ಸುಮಾರು 4 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಇದು ಒಳಗೊಂಡಿದೆ.

Advertisement

ರಾಜ್ಯದ ಮೊದಲ ಡಿಸಲೈನೇಶನ್‌ ಪ್ಲಾಂಟ್‌
ಎಂಆರ್‌ಪಿಎಲ್‌ 677 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಈ ಬೃಹತ್‌ ಘಟಕದ ಮೂಲಕ ಎಂಆರ್‌ಪಿಎಲ್‌ಗೆ ಪ್ರತೀ ದಿನ 30 ಎಂಎಲ್‌ಡಿ (ಮಿಲಿಯ ಲೀಟರ್‌ ಪರ್‌ ಡೇ) ನೀರನ್ನು ಪೈಪ್‌ಲೈನ್‌ ಮೂಲಕ ಪೂರೈಸಲಾಗುತ್ತದೆ. ರಿವರ್ಸ್‌ ಓಸ್ಮೋಸಿಸ್‌ ತಂತ್ರಜ್ಞಾನದ 70 ಎಂಎಲ್‌ಡಿ ಸಾಮರ್ಥ್ಯದ ಈ ಘಟಕದಲ್ಲಿ ಸದ್ಯ 30 ಎಂಎಲ್‌ಡಿ ನೀರು ಪೂರೈಸುವ ಯಂತ್ರೋಪಕರಣ ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ ಪೂರ್ಣ ಸಾಮರ್ಥ್ಯಕ್ಕೆ ವಿಸ್ತರಣೆ ಮಾಡಲಾಗುವುದು.

2012, 2017 ಹಾಗೂ 2019ರಲ್ಲಿ ಮಂಗಳೂರಿನಲ್ಲಿ ತೀವ್ರ ನೀರಿನ ಅಭಾವ ಉಂಟಾಗಿತ್ತು. 2019ರಲ್ಲಂತೂ ಎಂಆರ್‌ಪಿಎಲ್‌ 45 ದಿನ ಕಾಲ ಉತ್ಪಾದನೆ ಚಟುವಟಿಕೆ ಸ್ಥಗಿತಗೊಳಿಸಬೇಕಾಗಿ ಬಂದಿದ್ದರಿಂದ ಅಪಾರ ನಷ್ಟ ಉಂಟಾಗಿತ್ತು. ಆಗಲೇ ಸಮುದ್ರದ ನೀರನ್ನು ಸಂಸ್ಕರಿಸಿ ಬಳಸಿಕೊಳ್ಳಲು ಕಂಪೆನಿ ತೀರ್ಮಾನಿಸಿತ್ತು. ಅದೇ ವರ್ಷ ಕಾಮಗಾರಿ ಆರಂಭಿಸಿದ್ದು 2021ರ ಡಿಸೆಂಬರ್‌ಗೆ ಯೋಜನೆಯ ಮೆಕ್ಯಾನಿಕಲ್‌ ಕೆಲಸಗಳು ಪೂರ್ಣಗೊಂಡವು. ಪ್ರಾಯೋಗಿಕವಾಗಿ ನೀರನ್ನು ಸಂಸ್ಕರಿಸುವ ಕೆಲಸ ಜನವರಿಯಲ್ಲೇ ಆರಂಭಗೊಂಡಿದೆ.

ಬಿಎಸ್‌ 6 ಇಂಧನ ಸ್ಥಾವರ
ರಾಷ್ಟ್ರ ಬಿಎಸ್‌6 ಗ್ರೇಡ್‌ನ‌ ಇಂಧನಕ್ಕೆ ಬದಲಾಗಿ ಎರಡು ವರ್ಷ ಕಳೆದಿದೆ, ಇದಕ್ಕಾಗಿ ಎಂಆರ್‌ಪಿಎಲ್‌ ಈ ಗ್ರೇಡ್‌ನ‌ ಇಂಧನ ಉತ್ಪಾದನೆಗೆ ಬೇಕಾದ ಘಟಕಗಳನ್ನು ಸಿದ್ಧಗೊಳಿಸಿದ್ದು, ಇದಕ್ಕೂ ಮೋದಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. 1829 ಕೋ.ರೂ. ಮೊತ್ತದಲ್ಲಿ ಈ ಘಟಕಗಳು ತಲೆಯೆತ್ತಿವೆ ಎಂದು ಮೂಲಗಳು ತಿಳಿಸಿವೆ. ಬಿಎಸ್‌6 ಇಂಧನದ ಪ್ರಮುಖ ಘಟಕವಾದ ಫ್ಲ್ಯೂಯಿಡೈಸ್ಡ್ ಕೆಟಲಿಕ್ಟಿಕ್‌ ಕ್ರಾಕಿಂಗ್‌ ಗೆಸೋಲಿನ್‌ ಟ್ರೀಟ್ಮೆಂಟ್ ಯುನಿಟ್‌(ಎಫ್‌ಜಿಟಿಯು) ಕೆಲವು ತಿಂಗಳ ಹಿಂದೆ ಪೂರ್ಣಗೊಂಡಿದೆ. ಇದು ವಾರ್ಷಿಕ 800 ಕಿಲೋಟನ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಲ್ಫರ್ ಅಂಶ 10 ಪಿಪಿಎಂ(ಪಾರ್ಟ್‌ ಪರ್‌ ಮಿಲಿಯನ್‌)ಗಿಂತ ಕಡಿಮೆ ಇರುವ ಬಿಎಸ್‌ 6 ಇಂಧನವು ಹೆಚ್ಚು ಪರಿಶುದ್ಧ ಹಾಗೂ ಪರಿಸರಸ್ನೇಹಿ ಎನಿಸಿಕೊಂಡಿದೆ. ಅಲ್ಲದೆ ಸಲ್ಫರ್ ರಿಕವರಿ ಯುನಿಟ್‌ ಮತ್ತು ನೈಟ್ರೋಜನ್‌ ಸ್ಥಾವರವನ್ನೂ ಸ್ಥಾಪಿಸಲಾಗಿದೆ.

ಬರ್ತ್‌ ಯಾಂತ್ರೀಕರಣ
281 ಕೋ.ರೂ. ವೆಚ್ಚದಲ್ಲಿ 14ನೇ ಜೆಟ್ಟಿಯನ್ನು ಯಾಂತ್ರೀಕರಣ ಗೊಳಿಸಲಾಗಿದೆ. ಕಂಟೈನರ್‌ ಸರಕು ನಿರ್ವಹಣೆ ಇದರ ಮುಖ್ಯ ಉದ್ದೇಶ. ಇದರಿಂದ 200 ನೇರ ಹಾಗೂ 2 ಸಾವಿರ ಪರೋಕ್ಷ ಉದ್ಯೋಗ ನಿರೀಕ್ಷಿಸಲಾಗಿದೆ. ಬಿಟುಮಿನ್‌ (ಡಾಮರ್‌) ಸಂಗ್ರಹಣಾಗಾರವನ್ನು 100 ಕೋಟಿ ರೂ.ನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಎಸ್‌ಎಸ್‌ಪಿಪಿ ಪೆಟ್ರೋ ಪ್ರಾಡಕ್ಟ್$Õ ಕಂಪೆನಿ ಇದನ್ನು ಕೈಗೊಳ್ಳುತ್ತಿದೆ. ಇದು ದೊಡ್ಡ ಪ್ರಮಾಣದಲ್ಲಿ ಪಿಎಂ ಗತಿಶಕ್ತಿ ಯೋಜನೆಗೆ ಮುಖ್ಯವಾಗಿ ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ ನೆರವಾಗಲಿದೆ. 40 ಸಾವಿರ ಮೆಟ್ರಿಕ್‌ ಟನ್‌ ಬಿಟುಮಿನ್‌ ಸಂಗ್ರಹ ಸಾಮರ್ಥ್ಯ ಇರಲಿದೆ.

Advertisement

ನವಮಂಗಳೂರು ಬಂದರಿನ ವ್ಯಾಪ್ತಿಯಲ್ಲಿ ಸಂತೋಷಿ ಮಾತಾ ಕಂಪೆನಿಯಿಂದ 100 ಕೋಟಿ ರೂ. ವೆಚ್ಚದಲ್ಲಿ ಖಾದ್ಯತೈಲ ಸಂಗ್ರಹಣಾಗಾರ ನಿರ್ಮಿಸಲಾಗುವುದು. ವಾರ್ಷಿಕ 5 ಲಕ್ಷ ಟನ್‌ ಸರಕು ಹರಿದು ಬರುವ ನಿರೀಕ್ಷೆ ಇದೆ.

ಮೋದಿ ಕಾರ್ಯಕ್ರಮಕ್ಕೆ 2 ಸಾವಿರ ಬಸ್‌ಗಳು ಬುಕ್‌
ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಸೆ. 2ರಂದು ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ನಡೆಯಲಿರುವ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಇಲಾಖೆಗಳ ವತಿಯಿಂದ ಫಲಾನುಭವಿಗಳನ್ನು ಕರೆತರಲು 1 ಸಾವಿರ ಬಸ್‌ಗಳನ್ನು ಕಾದಿರಿಸಲಾಗಿದೆ. ಇದಲ್ಲದೆ ಬಿಜೆಪಿ ಕಾರ್ಯಕರ್ತರು ಕೂಡ 1 ಸಾವಿರಕ್ಕೂ ಅಧಿಕ ಬಸ್‌ಗಳನ್ನು ಕಾದಿರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು ಹೊರ ಜಿಲ್ಲೆಗಳಿಂದ ಬಸ್‌ಗಳನ್ನು ತರಿಸಲಾಗುತ್ತಿದೆ.

50,000 ಮಂದಿಗೆ ಪಲಾವ್‌ ವ್ಯವಸ್ಥೆ
ಸಮಾವೇಶಕ್ಕೆ ಆಗಮಿಸುವ ಫಲಾನುಭವಿಗಳಿಗೆ ಮಧ್ಯಾಹ್ನದ ಆಹಾರ ಒದಗಿಸುವ ನಿಟ್ಟಿನಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಕ್ಯಾಟರಿಂಗ್‌ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಲಾಗಿದೆ. 50ರಿಂದ 60 ಸಾವಿರ ಮಂದಿಗೆ ಮಧ್ಯಾಹ್ನ ಪಲಾವ್‌ ಪ್ಯಾಕೇಟು ನೀಡಲು ಸಿದ್ಧತೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next