Advertisement

ಮಂಗಳೂರು: ಜನ ಹೆದ್ದೆರೆಯಂತೆ ಬಂದರು !

01:13 AM Sep 03, 2022 | Team Udayavani |

ಮಂಗಳೂರು: ಕರಾವಳಿಯ ಆರ್ಥಿಕ ಹೆಬ್ಟಾಗಿಲು ಕಡಲನಗರಿ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೆ ಜನ ಸಾಗರವೇ ಸಾಕ್ಷಿಯಾಯಿತು. ಲಕ್ಷಾಂತರ ಅಭಿಮಾನಿಗಳಿಂದ “ಮೋದಿ-ಮೋದಿ’ ಎಂಬ ಘೋಷಣೆಗಳು ಸಭಾಂಗಣದ ಒಳಗೂ -ಹೊರಗೂ ಪ್ರತಿಧ್ವನಿಸಿ “ಮೋದಿ ಹವಾ’ ಸೃಷ್ಟಿಸಿತು.

Advertisement

ದಕ್ಷಿಣ ಕನ್ನಡ ಜಿಲ್ಲೆಗೆ ಇದು ಐದನೇ ಬಾರಿಯ ಭೇಟಿಯಾದರೂ ಸರಕಾರಿ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪ್ರಧಾನಿಯಾಗಿ ನರೇಂದ್ರ ಮೋದಿ ಭಾಗವಹಿಸುತ್ತಿರುವುದು ಇದೇ ಮೊದಲು. ಹಾಗಾಗಿ ಪ್ರಧಾನಿ ಎಂಬ ಅಂಶವೂ ಲಕ್ಷಾಂತರ ಸಂಖ್ಯೆಯಲ್ಲಿ ಜನರನ್ನು ಸೆಳೆದು ತಂದಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರಚೌಕಿ-ಕೂಳೂರಿನ ಇಕ್ಕೆಲ ಗಳಲ್ಲಿ ಹರಿದು ಬಂದ ಜನಸಮೂಹ, ಪ್ರಧಾನಿ ನರೇಂದ್ರ ಮೋದಿ ಮೋಡಿಗೆ ಜೈಕಾರದ ಶುಭಾಶಯ ಸಲ್ಲಿಸಿದರು. ಬೆಳಗ್ಗೆ 9ರಿಂದ ಸಂಜೆ 6ರ ವರೆಗೂ ಮೈದಾನ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಎಲ್ಲಿ ಕಂಡರೂ ಜನಜಾತ್ರೆ.

ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರ ವರೆಗೆ ಹಾಗೂ ಸಂಜೆ 3ರ ಬಳಿಕ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯು ಅಕ್ಷರಶಃ ಜನ ಹೆದ್ದೆರೆ ಯಾಗಿ ಪರಿವರ್ತನೆಯಾಗಿತ್ತು. ಕೇಸರಿ ಶಾಲು, ಧ್ವಜ ದೊಂದಿಗೆ ಮೋದಿಗೆ ಜೈಕಾರದೊಂದಿಗೆ ಸಾಗಿದ ಲಕ್ಷಾಂತರ ಮಂದಿಯಿಂದಾಗಿ ನಗರದ ಸಂಚಾರ ವ್ಯವಸ್ಥೆಯೂ ಬಹುತೇಕ ಸ್ತಬ್ಧವಾಯಿತು.

ಕಪ್ಪು ಅಂಗಿ ತೊಟ್ಟವರಿಗೆ ತಡೆ
ನಿಯಮದ ಪ್ರಕಾರ ಯಾರೂ ಕಪ್ಪು ಅಂಗಿ, ಟೀ ಶರ್ಟ್‌ ಧರಿಸಿ ಬರುವಂತಿರಲಿಲ್ಲ. ಆದರೂ ಕಪ್ಪು ಅಂಗಿ, ಟೀ ಶರ್ಟ್‌ ಹಾಕಿಕೊಂಡು ಬಂದ ಹಲವರ ಕಪ್ಪು ಅಂಗಿಯನ್ನು ತೆಗೆಸಲಾಯಿತು. ಬಳಿಕ ಮೈದಾನದ ಬಳಿಯೇ ಬಿಳಿ ಅಂಗಿ ಮಾರಾಟ ಮಾಡುತ್ತಿದ್ದವರಲ್ಲಿ ಖರೀದಿಸಿ ಹಾಕಿಕೊಂಡು ಸಭಿಕರು ಮೈದಾನ ಪ್ರವೇಶಿಸಿದರು. ಕೇಸರಿ ಟೊಪ್ಪಿ, ಕೇಸರಿ ಶಾಲಿನ ಮಾರಾಟ ಭರ್ಜರಿಯಾಗಿತ್ತು.

ನವಮಂಗಳೂರು ಬಂದರಿನಿಂದ ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ ಅಳವಡಿಸಿ ಅರ್‌ಎಎಫ್‌ ದಳ, ಪೊಲೀಸರನ್ನು ನಿಯೋಜಿಸಲಾಗಿತ್ತು. ಮೂರು ಸಾವಿರ ಪೊಲೀಸ್‌ ಸಿಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ರಸ್ತೆ ಪೂರ್ತಿ ಅಕ್ಷರಶಃ ಭದ್ರಕೋಟೆಯಂತೆ ತೋರುತ್ತಿತ್ತು.

Advertisement

ಹರ್‌ಘರ್‌ ಮೋದಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಧಾನಿಯನ್ನು ಕಾಣುವ ತವಕ. ಅದರಲ್ಲಿಯೂ ಯುವಜನರಲ್ಲಂತೂ ಕಂಡು ಕೇಳರಿಯದ ಉತ್ಸಾಹ ವ್ಯಕ್ತವಾಗಿದ್ದು ವಿಶೇಷವಾಗಿತ್ತು. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು ಸರಕಾರಿ ಕಾರ್ಯಕ್ರಮವಾಗಿದ್ದರೂ ಬಿಜೆಪಿ ಕಾರ್ಯಕರ್ತರ ಸಂಖ್ಯೆ ಬೃಹತ್‌ ಪ್ರಮಾಣದಲ್ಲಿತ್ತು. ಸಮಾವೇಶ ಸ್ಥಳಕ್ಕೆ ಬರುವಾಗ ಹಾಗೂ ಕಾರ್ಯಕ್ರಮ ಮುಗಿದ ಮೇಲೆ ವಾಪಸು ತೆರಳವಾಗಲೂ ಒಂದೇ ಘೋಷಣೆ ಕೇಳಿಬಂದದ್ದು. ಅದು “ಹರ್‌ಘರ್‌ ಮೋದಿ, ಹರ್‌ ಘರ್‌ ಮೋದಿ’. ಕಂಡು ಬಂದದ್ದು-“ಬಹುತೇಕರ ಕೈಯಲ್ಲಿ ಬಿಜೆಪಿ ಧ್ವಜ’. ರಾರಾಜಿಸಿದ್ದು ಕೇಸರಿ ಬಣ್ಣ, ಕೇಸರಿ ಕಲರವ.

ಬಸ್‌ ರ್‍ಯಾಲಿ!
ದ.ಕ., ಉಡುಪಿ, ಕಾಸರಗೋಡು ಸಹಿತ ವಿವಿಧ ಜಿಲ್ಲೆಗಳಿಂದ ಫಲಾನುಭವಿಗಳನ್ನು ಹಾಗೂ ಬಿಜೆಪಿ ಕಾರ್ಯ ಕರ್ತರನ್ನು ಕರೆತರಲು ಸರಕಾರಿ/ಖಾಸಗಿ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಬಸ್‌ಗಳು ಕೊಟ್ಟಾರ ಚೌಕಿ- ಕೂಳೂರು ಫ್ಲೈ ಓವರ್ ಭಾಗದಲ್ಲಿ ಸರದಿ ಸಾಲಿನಲ್ಲಿ ನಿಂತು ಮೋದಿ ಸಮಾವೇಶಕ್ಕೆ “ಬಸ್‌ ರ್‍ಯಾಲಿ’ ಬಂದಂತೆ ಕಂಗೊಳಿಸಿತು!

ಮೋದಿ ಕಾಣಲಿಕ್ಕೆ ಪಾದಯಾತ್ರೆ
ಪ್ರಧಾನಿಗೆ ಹೆಚ್ಚಿನ ಭದ್ರತೆ ಇರುವುದರಿಂದ ಬೆಳ್ಳಂಬೆಳಗ್ಗೆ ಕೂಳೂರಿಗೆ ಸಂಪರ್ಕಿಸುವ ರಸ್ತೆಯನ್ನು ಸುಪ ರ್ದಿಗೆ ತೆಗೆದುಕೊಂಡ ಪೊಲೀಸರು, ಸಮಾವೇಶದ ಸ್ಥಳಕ್ಕಿಂತ ನಾಲ್ಕೈದು ಕಿ.ಮೀ. ದೂರದಲ್ಲೇ ವಾಹನಗಳನ್ನು ನಿಲ್ಲಿಸಿದರು. ಇದರಿಂದ ಬಿಜೆಪಿ ಕಾರ್ಯಕರ್ತರು, ಜನತೆ ನಡೆದುಕೊಂಡೇ ಗೋಲ್ಡ್‌ ಫಿಂಚ್‌ ಸಿಟಿ ತಲುಪಿ ಮೋದಿ ಅವರನ್ನು ಕಂಡು ಸಂಭ್ರಮಪಟ್ಟರು.

ಧ್ವಜಗಳದ್ದೇ ಪಾರುಪತ್ಯ
ರಸ್ತೆಯುದ್ದಕ್ಕೂ ಹರಿದುಬರುತ್ತಿದ್ದ ಜನ ಸಾಗರದ ಮಧ್ಯೆ ಧ್ವಜಗಳದ್ದೇ ಪಾರುಪತ್ಯ. ಡೋಲು, ಬ್ಯಾಂಡ್‌ಗಳೊಂದಿಗೆ ಬಂದ ಕೆಲವು ಕಾರ್ಯಕರ್ತರು ನೃತ್ಯ ಮಾಡುತ್ತಾ ಸಭಾಂಗಣ ತಲುಪಿದ್ದು ವಿಶೇಷವಾಗಿತ್ತು. ಬೃಹತ್‌ ರಾಷ್ಟ್ರ ಧ್ವಜ, ಬಿಜೆಪಿ ಧ್ವಜ, ಕೇಸರಿ ಶಾಲು, ಶಿವಾಜಿ ಧ್ವಜಗಳು ರಸ್ತೆಯುದ್ದಕ್ಕೂ ರಾರಾಜಿಸಿದವು. ಯಾವುದೇ ನೂಕುನುಗ್ಗಲಿಗೆ ಕಾರಣವಾಗದೆ ಸಭಾಂಗಣದಲ್ಲಿ ಸೇರಿ ಲಕ್ಷಾಂತರ ಮಂದಿ ಮೋದಿಯವರ ಮೇಲಿರುವ ಅಭಿಮಾನವನ್ನು ತೋರ್ಪಡಿಸಿದರು.

ಅಬ್ಬಕ್ಕ ಸ್ಮರಣೆ
ಆಜಾದೀ ಕಾ ಅಮೃತ ಮಹೋತ್ಸವ ಆಚರಣೆಯಲ್ಲಿ ಕರ್ನಾಟಕವೂ ಉತ್ತಮವಾಗಿ ಸ್ಪಂದಿಸಿದ್ದಕ್ಕೆ ಅಭಿನಂದಿಸಿದ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಅಬ್ಬಕ್ಕ ಮತ್ತು ರಾಣಿ ಚೆನ್ನಭೆ„ರಾದೇವಿ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಮಸಾಲಾ ಟೀ, ಗೋಡಂಬಿ
ಈ ಬಾರಿ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಸಮಾವೇಶಕ್ಕೆಂದು ಮಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಸುಮಾರು 4 ಗಂಟೆ ಕಾಲ ಮಂಗಳೂರಿನಲ್ಲಿ ಇದ್ದರೂ ಸೇವಿಸಿದ್ದು ಮಸಾಲಾ ಟೀ ಹಾಗೂ ಗೋಡಂಬಿ ಮಾತ್ರ. ಕೊಚ್ಚಿಯಿಂದ ಬರುವಾಗ ವಿಮಾನದಲ್ಲೇ ಅವರು ಮಧ್ಯಾಹ್ನದೂಟ ಮುಗಿಸಿದ್ದರು. ಸಂಜೆ ಅವರಿಗಾಗಿ ಸಮೋಸಾ, ಹುರಿದ ಬಾದಾಮ್‌ ಮತ್ತು ಗೋಡಂಬಿ, ಸ್ಯಾಂಡ್‌ವಿಚ್‌, ವೇಫರ್ಸ್‌ ಮತ್ತು ಇಡ್ಲಿ, ಸಾಂಬಾರ್‌, ಡೋಕ್ಲಾ, ಎಳನೀರು, ಚಾ, ಕಾಫಿ, ಕುಕ್ಕೀಸ್‌ ಸಿದ್ಧಪಡಿಸಲಾಗಿತ್ತು, ಅವುಗಳನ್ನು ಪ್ರಧಾನಿಯವರು ವಿಮಾನ ನಿಲ್ದಾಣಕ್ಕೆ ತೆರಳುವ ಹೆಲಿಕಾಪ್ಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಅವರು ರಸ್ತೆ ಮಾರ್ಗದಲ್ಲಿ ತೆರಳಿದ್ದ ಕಾರಣ ಆಹಾರ ಹೆಲಿಕಾಪ್ಟರ್‌ನಲ್ಲೇ ಬಾಕಿಯಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next