Advertisement

ಶೀಘ್ರ 2ನೇ ಹಂತದ ಪ್ಯಾಕೇಜ್‌? ವಿತ್ತ ಸಚಿವೆ, ಗೃಹ ಸಚಿವರ ಜತೆ ಪ್ರಧಾನಿ ಮೋದಿ ಚರ್ಚೆ

02:00 AM May 03, 2020 | Sriram |

ಹೊಸದಿಲ್ಲಿ: ಕೋವಿಡ್-19 ದಿಂದ ಸಂಕಷ್ಟಕ್ಕೀಡಾಗಿರುವ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು, ಕೃಷಿಕರ ಸಹಿತ ಎಲ್ಲ ವರ್ಗಗಳಿಗಾಗಿ ಕೇಂದ್ರ ಸರಕಾರ 2ನೇ ಹಂತದ ಪ್ಯಾಕೇಜ್‌ ಘೋಷಿಸುವ ಸಾಧ್ಯತೆ ಇದೆ.

Advertisement

ಈ ಸಂಬಂಧ ಶನಿವಾರ ಪ್ರಧಾನಿ ಮೋದಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ಜತೆಗೆ ಚರ್ಚೆ ನಡೆಸಿದ್ದಾರೆ. ಜತೆಗೆ ಕೃಷಿ ವಲಯಕ್ಕೆ ಉತ್ತೇಜನ ನೀಡುವ ಸಲುವಾಗಿ ಉನ್ನತ ಮಟ್ಟದ ಅಧಿಕಾರಿಗಳ ಜತೆಗೂ ಸಭೆ ನಡೆಸಿದ್ದಾರೆ.
ದೇಶದ ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದ್ದು, ಇವುಗಳನ್ನು ಉಳಿಸುವ ಸಲುವಾಗಿ ಕೆಲವು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಂಬಂಧ ಸೋಮವಾರ ಅಧಿಕೃತವಾಗಿ ಪ್ರಕಟನೆ ಹೊರಬೀಳುವ ಸಾಧ್ಯತೆ ಇದೆ.

ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ರೈತರಿಗೆ ಸಾಂಸ್ಥಿಕ ಸಾಲ ಮತ್ತು ಕಾನೂನಿನ ಬೆಂಬಲದೊಂದಿಗೆ ವಿವಿಧ ನಿರ್ಬಂಧಗಳಿಂದ ಈ ಕ್ಷೇತ್ರಕ್ಕೆ ವಿನಾಯಿತಿ ನೀಡುವ ಕುರಿತು ಮೋದಿ ಅವರು ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ.

ಆರ್‌ಬಿಐ ಸಭೆ
ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರೂ ವಿವಿಧ ಬ್ಯಾಂಕ್‌ ಮುಖ್ಯಸ್ಥರ ಜತೆ ವೀಡಿಯೋ ಕಾನ್ಫರೆನ್ಸ್‌ ನಡೆಸಿದ್ದಾರೆ. ಸಾಲ ಮರು ಪಾವತಿ ಕಂತುಗಳಿಗೆ 3 ತಿಂಗಳ ವಿರಾಮ, ಲಾಕ್‌ಡೌನ್‌ ಬಳಿಕ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (ಎನ್‌ಬಿ ಎಫ್ ಸಿಗಳು), ಸಣ್ಣ ಸಾಲ ಉದ್ದಿಮೆಗಳು, ಗೃಹ ಸಾಲ ಕಂಪೆನಿಗಳು ಮತ್ತು ಮ್ಯೂಚುವಲ್‌ ಫ‌ಂಡ್‌ಗಳಿಗೆ ನೀಡ ಬಹುದಾದ ಸಾಲದ ಬಗ್ಗೆ ಮಾತುಕತೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next