Advertisement

North Indian ರಾಜ್ಯಗಳ ಜನರ ವಲಸೆ ತಡೆಗಟ್ಟಿ: ಕರವೇ

12:17 AM Jul 02, 2024 | Team Udayavani |

ಬೆಂಗಳೂರು/ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 80ರಷ್ಟು ಉದ್ಯೋಗ ಮೀಸಲು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣ ಗೌಡ ಬಣ) ಕಾರ್ಯಕರ್ತರು ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.

Advertisement

ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿದರೆ ರಕ್ತದೋಕುಳಿ ಹರಿಯುತ್ತದೆ ಎಂದು ಎಚ್ಚರಿಕೆ ನೀಡಿದರು. ಜತೆಗೆ ಉತ್ತರ ಭಾರತದ ರಾಜ್ಯಗಳ ಜನರ ವಲಸೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಹಕ್ಕೊತ್ತಾಯದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿ ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲು ಕಾಯ್ದೆ ಜಾರಿ ಆಗುವ ವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

“ನೆನಪಿರಲಿ’ ಖ್ಯಾತಿಯ ನಟ ಪ್ರೇಮ್‌, ನಟಿ ಪೂಜಾ ಗಾಂಧಿ, ರೈತ ಮುಖಂಡ ವೀರಸಂಗಯ್ಯ ಸೇರಿ ಕನ್ನಡಪರ ಸಂಘನೆಗಳ ಮುಖಂಡರು ಭಾಗವಹಿಸಿದ್ದರು. ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಸೇರಿ ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ ಸೇರಿ ಹಲವೆಡೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ನಟರು ಕನ್ನಡಕ್ಕಾಗಿ ಬೀದಿಗೆ ಬನ್ನಿ
ಸೂಪರ್‌ ಸ್ಟಾರ್‌ ಅನ್ನುವುದಕ್ಕಿಂತ ಮೊದಲು ನಾವು ಕನ್ನಡಿಗರು ಎಂಬುದನ್ನು ಮರೆಯಬಾರದು. 5 ಕೋಟಿ, 10 ಕೋಟಿ ರೂ. ತೆಗೆದುಕೊಳ್ಳುವ ನಟರು ಸೂಪರ್‌ ಸ್ಟಾರ್‌ ಆಗಿದ್ದೀರಿ ಎಂದರೆ ಅದಕ್ಕೆ ಕನ್ನಡಿಗರು ಕಾರಣ ಎಂದು ನಾರಾಯಣ ಗೌಡ ಹೇಳಿದರು. ನಿಮಗೆ ನಿಜವಾದ ಕಾಳಜಿ ಇರುವುದಾದರೆ ಕನ್ನಡ ಸಂಬಂಧಿಸಿದ ವಿಚಾರಕ್ಕೆ ಬೀದಿಗೆ ಬನ್ನಿ ಎಂದು ಮನವಿ ಮಾಡಿದರು.

Advertisement

ನಾನು ಸಂಪೂರ್ಣ ಕನ್ನಡಪರ: ಸಿದ್ದು
ಬೆಂಗಳೂರು: ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ನೀಡುವ ಸಂಬಂಧ ಕಾಯ್ದೆಯನ್ನು ರೂಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣ ಗೌಡ ನೇತೃತ್ವದ ನಿಯೋಗ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸಣ್ಣೀರಪ್ಪ, ಮಹಿಳಾ ಘಟಕದ ಗೌರವ ಕಾರ್ಯದರ್ಶಿ ಆಶ್ವಿ‌ನಿ ಗೌಡ ಜತೆಗಿದ್ದರು.

ನಿಯೋಗವು ಖಾಸಗಿ ಮತ್ತು ಕೈಗಾರಿಕೆಗಳಲ್ಲಿ ಕನ್ನಡಿಗರ ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿ ಕೊಟ್ಟಿತು. ಕನ್ನಡಿಗರ ಒಳಿತಿಗಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿತು. ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರ ಉಳಿವಿಗಾಗಿ ಕಾನೂನು ರೂಪಿಸಿ ಈ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವಂತೆ ಮನವಿ ಮಾಡಿತು. ತಾವು ಕೂಡ ಕನ್ನಡ ಕಾವಲು ಸಮಿತಿಯಲ್ಲಿ ಕೆಲಸ ಮಾಡಿದ್ದೀರಿ. ಆ ಹಿನ್ನೆಲೆಯಲ್ಲಿ ನಿಮ್ಮ ಅವಧಿಯಲ್ಲೇ ಈ ಕಾಯ್ದೆ ರೂಪಿತ ಆಗಬೇಕು ಎಂದು ಒತ್ತಾಯಿಸಿತು.

ಕಾನೂನು ತಜ್ಞರ ಜತೆ ಸಮಾಲೋಚನೆ
ನಿಯೋಗದ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾವೆಲ್ಲ ರಾಜ್ಯಗಳಲ್ಲಿ ಈ ರೀತಿಯ ಕಾಯ್ದೆ ಇದೆ. ಹೇಗೆ ಇದನ್ನು ಜಾರಿಗೆ ತರಬೇಕು ಎಂಬ ಕುರಿತು ಅಡ್ವೊಕೇಟ್‌ ಜನರಲ್‌ ಮತ್ತು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿ ಮುಂದುವರಿಯುತ್ತೇನೆ. ನಾನು ಸಂಪೂರ್ಣವಾಗಿ ಕನ್ನಡ ಮತ್ತು ಕನ್ನಡಿಗರ ಪರ ಇದ್ದೇನೆ ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರವೇ ಪ್ರತಿಭಟನೆ ಗಮನದಲ್ಲಿದೆ. ಸರೋಜಿನಿ ಮಹಿಷಿ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಲು ಸಮಿತಿ ರಚಿಸಲಾಗಿದೆ. ಆದಷ್ಟು ಬೇಗ ಪೂರ್ಣಗೊಳಿಸಿ ಅನುಷ್ಠಾನ ಮಾಡಲಾಗುತ್ತದೆ. ನಮಗೆ ಕನ್ನಡಿಗರು ಬೇಕು, ಅದರ ಜತೆಗೆ ಬೇರೆಯವರೂ ಬೇಕು. ಎಲ್ಲರ ಕುರಿತು ವರದಿ ಸಿದ್ಧಪಡಿಸುತ್ತಿದ್ದು, ವರದಿ ಪೂರ್ಣಗೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ಕನ್ನಡಿಗರಿಗೆ ಯಾವ ಯಾವ ಹಂತದಲ್ಲಿ ಉದ್ಯೋಗ ಕೊಡಬೇಕು ಎಂದು ಸಮಿತಿ ನೀಡಿದ್ದ ವರದಿಯನ್ನು ಜಾರಿ ಮಾಡಬೇಕಿತ್ತು. ಆದರೆ ಭಾಷಾ ಅಲ್ಪಸಂಖ್ಯಾಕ ರಾಜಕಾರಣಿಗಳು, ಉದ್ಯಮಿಗಳಿಗೆ ಮಣಿದ ಪರಿಣಾಮ ಜಾರಿಗೆ ಬಂದಿಲ್ಲ. ಸರೋಜಿನಿ ಮಹಿಷಿ ವರದಿ ಜಾರಿಗೆ ಕರವೇ ನಿರಂತರ ಹಕ್ಕೊತ್ತಾಯ ಮಾಡುತ್ತಲೇ ಇದೆ. ಆದರೆ ಪ್ರಯೋಜನವಾಗಿಲ್ಲ.
 -ಟಿ.ಎ. ನಾರಾಯಣ ಗೌಡ, ಕರವೇ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next