Advertisement

ಸರಕಾರಿ ಮದ್ಯದಂಗಡಿಗೆ ಪರವಾನಿಗೆ ನೀಡಲು ಆಗ್ರಹ

02:55 AM Aug 04, 2017 | Team Udayavani |

ವೇಣೂರು: ಗುಂಡೂರಿ ಗ್ರಾಮದಲ್ಲಿ ಅಂಗಡಿ, ಮನೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂತಹ ಕಳಪೆ ಗುಣಮಟ್ಟದ ಮದ್ಯದಿಂದ ಇದನ್ನು ಕುಡಿದವರ ಆರೋಗ್ಯ ಹದಗೆಟ್ಟಿದೆ. ಈ ರೀತಿಯ ಮಾರಾಟಕ್ಕೆ ಅವಕಾಶ ನೀಡುವುದರ ಬದಲು ಅಧಿಕೃತ ಮದ್ಯದಂಗಡಿಗೆ ಅನುಮತಿ ನೀಡುವುದೇ ಲೇಸು. ಹಾಗಾಗಿ ಗುಂಡೂರಿ ಗ್ರಾಮದ ತುಂಬೆದಲ್ಕೆಯಲ್ಲಿ ಗ್ರಾಮಸ್ಥರ ಬಹುದಿನದ ಬೇಡಿಕೆಯಾದ ಅಧಿಕೃತ ಸರಕಾರಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬೇಕೆಂದು ಕೋರಿ ದ.ಕ. ಜಿಲ್ಲಾಧಿಕಾರಿಗಳಿಗೆ ಗುಂಡೂರಿ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಲಿಖೀತ ಮನವಿ ಸಲ್ಲಿಸಿದ ವಿದ್ಯಮಾನ ಆರಂಬೋಡಿ ಗ್ರಾಮ ಪಂಚಾಯತ್‌ನ ಗ್ರಾಮಸಭೆಯಲ್ಲಿ ನಡೆಯಿತು. ಆರಂಬೋಡಿ ಗ್ರಾ.ಪಂ.ನ 2017-18ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಆ.1ರಂದು ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಎಚ್‌. ಅವರ ಅಧ್ಯಕ್ಷತೆಯಲ್ಲಿ ಗುಂಡೂರಿ ಶ್ರೀ ಸತ್ಯನಾರಾಯಣ ಭಜನ ಮಂದಿರದಲ್ಲಿ ಜರಗಿತು.

Advertisement

ಗುಂಡೂರಿ ಗ್ರಾಮದಲ್ಲಿ ಹಲವು ವರ್ಷಗಳಿಂದಅಕ್ರಮವಾಗಿ ನಡೆಯುತ್ತಿರುವ ಅಕ್ರಮ ಮದ್ಯಮಾರಾಟವನ್ನು ತಡೆಯುವಲ್ಲಿ ಅಬಕಾರಿ ಇಲಾಖೆ ವಿಫ‌ಲವಾಗಿದೆ. ಕಳಪೆ ಗುಣಮಟ್ಟದ ಮದ್ಯದಿಂದ ಆರೋಗ್ಯ ಹದಗೆಡುತ್ತಿದೆ. ಈ ಬಗ್ಗೆ ಬೆಳ್ತಂಗಡಿ ಅಬಕಾರಿ ವೃತ್ತ ನಿರೀಕ್ಷಕರಿಗೆ, ಜಿಲ್ಲಾ ಅಬಕಾರಿ ಇಲಾಖೆಗೆ ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಹತಾಶರಾಗಿರುವ ನಾವು ಅಧಿಕೃತ ಸರಕಾರಿ ಮದ್ಯದಂಗಡಿ ನಿರ್ಮಿಸಲು ಗುಂಡೂರಿ ಗ್ರಾಮದಲ್ಲಿ ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಕೆಲವು ಗ್ರಾಮಸ್ಥರು ಹೇಳಿದರು.

ಪರ – ವಿರೋಧ
ಗುಂಡೂರಿ ಶ್ರೀ ಗುರುಚೈತನ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹೊನ್ನಯ್ಯ ಕಾಟಿಪಳ್ಳ ಅವರ ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿಯವರಿಗೆ ಗ್ರಾ.ಪಂ. ಅಧ್ಯಕ್ಷರ ಮೂಲಕ ಲಿಖೀತ ಮನವಿ ನೀಡಲಾಯಿತು. ಇದಕ್ಕೆ ಗ್ರಾಮಸಭೆಯಲ್ಲಿ ಪರ -ವಿರೋಧ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬರುವ 15 ದಿನಗಳೊಳಗೆ ಅಬಕಾರಿ ಮತ್ತು ಪೊಲೀಸರ ಸಂಪರ್ಕ ಸಭೆಯನ್ನು ಗುಂಡೂರಿಯಲ್ಲಿ ಆಯೋಜಿಸುವುದಾಗಿ ನಿರ್ಣಯ ಕೈಗೊಳ್ಳಲಾಯಿತು.

ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು
ಇತ್ತೀಚೆಗೆ ಕಳವಾದ ಗುಂಡೂರಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ದೇವರ ಬೆಳ್ಳಿಪ್ರತಿಮೆಯ ತನಿಖೆಯನ್ನು ಪೊಲೀಸರು ತೀವ್ರಗತಿಯಲ್ಲಿ ನಡೆಸ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ‘ಘಟನೆ ವೇಳೆ ಕೇವಲ ಇಬ್ಬರು ಪೊಲೀಸರು ತನಿಖೆ ನಡೆಸಿದ್ದಾರೆ. ಪೊಲೀಸ್‌ ಉಪ ನಿರೀಕ್ಷಕರು ಸ್ಥಳಕ್ಕೆ ಬಂದು ಸ್ಥಳ ತನಿಖೆ ಮಾಡಿಲ್ಲ ಎಂದು ಭಜನಾ ಮಂಡಳಿ ಕಾರ್ಯದರ್ಶಿ, ಪಂ. ಸದಸ್ಯ ರಮೇಶ್‌ ಪೂಜಾರಿ ಪಡ್ಡಾಯಿಮಜಲು ದೂರಿದರು. ಈ ಬಗ್ಗೆ ಸೂಕ್ತ ತನಿಖೆಗೆ ದ.ಕ. ಪೊಲೀಸ್‌ ವರಿಷ್ಠಾಧಿಕಾರಿಗೆ ಗ್ರಾ.ಪಂ. ವತಿಯಿಂದ ಲಿಖೀತ ಮನವಿ ನೀಡಲು ಗ್ರಾ.ಪಂ. ನಿರ್ಣಯ ಕೈಗೊಂಡಿತು.

ಅಭಿವೃದ್ಧಿ ಕಾಮಗಾರಿಗಳಿಗೆ ಮನವಿ 
ಆರಂಬೋಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಶವಸಂಸ್ಕಾರ ನಡೆಸಲು ರುದ್ರಭೂಮಿಗೆ ಜಾಗ ಕಾಯ್ದಿರಿಸಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಆರಂಬೋಡಿ ಶಾಖೆ ಸಂಚಾಲಕ ಸುರೇಶ್‌ ಎಚ್‌. ಅವರು ಸಭೆಯಲ್ಲಿ ಲಿಖೀತ ಮನವಿ ನೀಡಿ ಒತ್ತಾಯಿಸಿದರು. ಅಂಗರಕರಿಯ ಪ.ಜಾತಿ ಕಾಲನಿಗೆ ಕಾಂಕ್ರಿಟ್‌ ರಸ್ತೆ, ದಾರಿದೀಪ, ನಿವೇಶನ ವ್ಯವಸ್ಥೆ, ನೀರಪಲ್ಕೆಯಿಂದ ಸೋಲಾರ್‌ ದಾರಿದೀಪದ ವ್ಯವಸ್ಥೆ, ಕೈರೋಡಿ ರಸ್ತೆಗೆ ಕಾಂಕ್ರಿಟ್‌ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತಾಯಿಸಿ ಅವರು ಮನವಿ ಸಲ್ಲಿಸಿದರು.

Advertisement

ಸಂತಾಪ
ಆರಂಬೋಡಿ ಗ್ರಾ.ಪಂ.ನ ತಾತ್ಕಾಲಿಕ ನೀರು ಸರಬರಾಜು ಸಿಬಂದಿ ನಾರಾಯಣ ಹಾಗೂ ವೇಣೂರು ಗ್ರಾ.ಪಂ.ನ ಡಾಟಾ ಎಂಟ್ರಿ ಆಪರೇಟರ್‌ ಪುಷ್ಪಾವತಿ ಅವರ ಅಕಾಲಿಕ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ನಡೆಸಲಾಯಿತು. ಸಭೆಯಲ್ಲಿ ಆರಂಬೋಡಿ ಗ್ರಾ.ಪಂ. ಉಪಾಧ್ಯಕ್ಷೆ ಆಶಾ ಎಸ್‌. ಶೆಟ್ಟಿ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ತಾ.ಪಂ. ಸದಸ್ಯ ಓಬಯ್ಯ ಆರಂಬೋಡಿ, ಗುಂಡೂರಿ ಗ್ರಾಮದ ಸದಸ್ಯರಾದ ಹರೀಶ್‌ ಕುಮಾರ್‌, ರಮೇಶ್‌ ಪಡ್ಡಾಯಿಮಜಲು, ಗೋಪಾಲ ಕುಳಾಯಿ ಭವಿತಾ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್‌ ಶೆಟ್ಟಿ ಸ್ವಾಗತಿಸಿ ಸಭೆಯನ್ನು ನಿರ್ವಹಿಸಿದರು. ಪಂ. ಕಾರ್ಯದರ್ಶಿ ಸೋಮಶೇಖರ ವರದಿ ಮಂಡಿಸಿ ಪಂಚಾಯತ್‌ ಸದಸ್ಯ ಹರೀಶ್‌ ಕುಮಾರ್‌ ಪೊಕ್ಕಿ ವಂದಿಸಿದರು. ಪಂ. ಸಿಬಂದಿ ಸಹಕರಿಸಿದರು. ಸಭೆಯ ನೋಡಲ್‌ ಅಧಿಕಾರಿಯಾಗಿ ವೇಣೂರು ಪಶು ವೈದ್ಯಾಧಿಕಾರಿ ಡಾ| ವಿನಯ್‌ ಕುಮಾರ್‌ ಸಭೆಯನ್ನು ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next