Advertisement

ರಾಷ್ಟ್ರಪತಿ ಆಯ್ಕೆಯ ಲೆಕ್ಕಾಚಾರದ ಒಳ ಹೊರಗು

02:18 PM Jun 10, 2022 | Team Udayavani |

ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಧಿಕಾರದ ಅವಧಿ ಜುಲೈ 24ಕ್ಕೆ ಮುಕ್ತಾಯವಾಗಲಿದೆ. ಭಾರತದ ಚುನಾವಣ ಆಯೋಗ  ದೇಶದ 15ನೇ ರಾಷ್ಟ್ರಪತಿ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಹೀಗಾಗಿ ದೇಶದ ರಾಜಕೀಯ ಪಕ್ಷಗಳಲ್ಲಿ ಮುಂದಿನ ರಾಷ್ಟ್ರಪತಿ ಆಯ್ಕೆಯ ಬಗ್ಗೆ ಕಸರತ್ತು ಶುರುವಾಗಲಿದೆ. ಮುಂದಿನ ರಾಷ್ಟ್ರಪತಿ ಯಾರಾಗಬಹುದು ಎಂಬ ಕುತೂಹಲ ಶುರುವಾಗಿದೆ. ಸದ್ಯ ನಾವೀಗ ದೇಶದಲ್ಲಿ ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯಲಿದೆ ಎಂಬುದನ್ನು ಗಮನಿಸೋಣ.

Advertisement

ರಾಷ್ಟ್ರಪತಿ ಚುನಾವಣೆ ಹೇಗೆ? : 

  • ಭಾರತದ ಚುನಾವಣ ಆಯೋಗ (ಇಸಿಐ) ದೇಶದ ಸಂವಿಧಾನದ 54ನೇ ವಿಧಿಯ ಅನ್ವಯ ಚುನಾವಣೆಗೆ ಅಧಿಸೂಚನೆ ಹೊರಡಿಸುತ್ತದೆ.
  • ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವವರು 35 ವರ್ಷ ಮೇಲ್ಪಟ್ಟವರಾಗಿರಬೇಕು. 50 ಮಂದಿ ಅವರ ಹೆಸ ರನ್ನು ಸೂಚಿಸಬೇಕು ಮತ್ತು 50 ಮಂದಿ ಅವರ ಹೆಸರನ್ನು ಅನುಮೋದಿಸಬೇಕು. ಸಂಸದರು ಮತ್ತು ಶಾಸಕರ ಪೈಕಿ ಯಾರನ್ನು ಬೇಕಾದರೂ ಸೂಚಕರು ಮತ್ತು ಅನುಮೋದಕರನ್ನಾಗಿಸಬಹುದು.
  • 1974ರಲ್ಲಿ ಭಾರತದ ಚುನಾವಣ ಆಯೋಗ ಸೂಚಕರು ಮತ್ತು ಅನುಮೋದಕರು ತಲಾ 50 ಮಂದಿ ಇರಬೇಕು ಎಂಬ ನಿಯಮ ಜಾರಿಗೆ ತಂದಿತ್ತು. ಒಬ್ಬ ಸೂಚಕ ಮತ್ತು ಅನುಮೋದಕ ಒಬ್ಬ ಅಭ್ಯರ್ಥಿಯನ್ನು ಮಾತ್ರ ಸೂಚಿಸಬಹುದು.
  • ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು, ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯ ಶಾಸಕರು ಮತದಾನ ಮಾಡಲು ಅರ್ಹರಿರುತ್ತಾರೆ. ನಾಮಕರಣ ಸದಸ್ಯರಿಗೆ ಅರ್ಹತೆ ಇಲ್ಲ.

ಮತದಾರರು ಯಾರು? :

ಲೋಕಸಭೆಯ 543 ಮಂದಿ ಸದಸ್ಯರು, ರಾಜ್ಯಸಭೆಯ 233 ಮಂದಿ ಸದಸ್ಯರು, ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ 4,033 ಚುನಾಯಿತ ಶಾಸಕರು.

ಮತಗಳ ಮೌಲ್ಯದ ಲೆಕ್ಕಾಚಾರ ಹೇಗೆ? :

Advertisement

ಲೋಕಸಭೆ ಮತ್ತು ರಾಜ್ಯಸಭೆಯ ಪ್ರತೀ ಸಂಸದರ ಮತ ಮೌಲ್ಯ 700. ಆದರೆ ಶಾಸಕರ ಮತ ಪ್ರಮಾಣ ರಾಜ್ಯವಾರು ವ್ಯತ್ಯಾಸವಾಗುತ್ತದೆ. ಆಯಾ ರಾಜ್ಯದ ಜನಸಂಖ್ಯೆಯನ್ನಾಧರಿಸಿ ಹಾಗೂ ಒಟ್ಟು ಶಾಸಕರನ್ನು ಅವಲಂಬಿಸಿ ನಿರ್ಧರಿಸಲಾಗುತ್ತದೆ.

ಉತ್ತರ ಪ್ರದೇಶದಲ್ಲಿ ಪ್ರತೀ ಶಾಸಕನ ಮತ ಮೌಲ್ಯ 208. ಇದು ದೇಶದಲ್ಲಿ ಅತೀ ಹೆಚ್ಚು. ಮಹಾರಾಷ್ಟ್ರದಲ್ಲಿ 175. ಅರುಣಾಚಲ ಪ್ರದೇಶದಲ್ಲಿ ಕನಿಷ್ಠ 8.  1971ರ ಜನಸಂಖ್ಯೆಯನ್ನು ಆಧಾರವಾಗಿ ಇರಿಸಿಕೊಂಡು ಮತ ಮೌಲ್ಯ ನಿರ್ಣಯಿಸಲಾಗುತ್ತದೆ. ಮುಂದಿನ ಜನಗಣತಿಯ ಹೊಸ ಅಂಕಿಅಂಶ ಪ್ರಕಟಗೊಂಡಾಗ ಈ ಸಾಂಖ್ಯೀಕ ಅಂಶಗಳು ಬದಲಾಗುವ ಸಾಧ್ಯತೆಗಳಿವೆ.

ಒಂದು ರಾಜ್ಯದ ಜನಸಂಖ್ಯೆಯನ್ನು ಅಲ್ಲಿನ ಒಟ್ಟು ಶಾಸಕರ ಸಂಖ್ಯೆಯಿಂದ ವಿಭಜನೆ ಮಾಡಲಾಗುತ್ತದೆ. ಬಂದ ಉತ್ತರ ವನ್ನು 1,000ದಿಂದ ಭಾಗಿಸಬೇಕು. ಅನಂತರ ಬರುವ ಉತ್ತರವೇ ಆ ರಾಜ್ಯದ ಒಬ್ಬ ಶಾಸಕನ ಮತ ಮೌಲ್ಯ.

ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರ ಮತ ಮೌಲ್ಯ 776×700= 5,43,200 ಆಗುತ್ತದೆ. ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರ ಮತ ಮೌಲ್ಯ 5,49, 495. ಹೀಗೆ ಒಟ್ಟು ಮತಗಳ ಸಂಖ್ಯೆ  10,92,695 ಆಗುತ್ತದೆ.

776 : ಒಟ್ಟು ಸಂಸದರು

4,033 : ಶಾಸಕರು

4,809 : ಒಟ್ಟು ಮತದಾರರು

ಹಾಲಿ ಚುನಾವಣೆಯಲ್ಲಿ ಮತ ಪ್ರಮಾಣ ಹೇಗೆ? :

ವಿಪಕ್ಷಗಳು ಒಟ್ಟಾಗಿ ಎನ್‌ಡಿಎ ವಿರುದ್ಧ ಅಭ್ಯರ್ಥಿ ಕಣಕ್ಕೆ ಇಳಿಸಲು ಯೋಚಿಸುತ್ತಿವೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಮಣಿಪುರ ಮತ್ತು ಗೋವಾದಲ್ಲಿ ಇತ್ತೀಚಿನ ವಿಧಾನಸಭೆ ಚುನಾವಣೆ ಮುಕ್ತಾಯದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎಗೆ ಒಟ್ಟು 5,39, 827 ಮತಗಳು ಲಭ್ಯವಾಗಲಿವೆ. ಇಷ್ಟಾದರೂ ಕೂಡ ಬಹುಮತಕ್ಕೆ 9,625 ಮತಗಳ ಕೊರತೆ ಬೀಳಲಿವೆ.

ಮಹಾರಾಷ್ಟ್ರದಲ್ಲಿ 50,400 ಮತ ಮೌಲ್ಯ ಇದೆ. ಬಿಜೆಪಿಯ ಜತೆಗೆ ಶಿವಸೇನೆ ಇಲ್ಲ. ಹೀಗಾಗಿ, ಆ ರಾಜ್ಯದಲ್ಲಿ ಎನ್‌ಡಿಎ ಮತ ಮೌಲ್ಯ 19,775.  ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳದ ಜತೆಗೆ ಬಿಜೆಪಿ ಇಲ್ಲ. ಪಂಜಾಬ್‌ನ ಒಟ್ಟು ಮತ ಮೌಲ್ಯ 13,572. ಅಲ್ಲಿ ಎನ್‌ಡಿಎ ಮತಮೌಲ್ಯ ಕೇವಲ 464. ಉತ್ತರ ಪ್ರದೇಶದಲ್ಲಿ ಬಿಜೆಪಿ 273 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಆ ರಾಜ್ಯದ ಒಬ್ಬ ಶಾಸಕನ ಮತ ಮೌಲ್ಯ 208 ಆಗಿದೆ. ಹೀಗಾಗಿ ಅಲ್ಲಿನ ಒಟ್ಟು ಮತ ಮೌಲ್ಯ 56,684. ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕೆಲವು ಕ್ಷೇತ್ರಗಳು ತೆರವಾಗಿವೆ. ಅದು ಮತ ಮೌಲ್ಯದ ಮೇಲೆ ಪರಿಣಾಮ ಬೀರಲಿದೆ.

ಜಯಗಳಿಸಲು ಎಷ್ಟು ಮತ ಬೇಕು? :

ಈ ಚುನಾವಣೆಯಲ್ಲಿ ಬಹುಮತ ಎನ್ನುವುದಕ್ಕಿಂತ ಅತ್ಯಧಿಕ ಮತಗಳನ್ನುಗಳಿಸಿದವರೇ ವಿಜಯಿ. ಅಭ್ಯರ್ಥಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ.50ರಷ್ಟು ಮತಗಳನ್ನು ಪಡೆಯಲೇಬೇಕು. ಈ ಚುನಾವಣೆಯಲ್ಲಿ ಮತದಾರರಾಗಿರುವ ಶಾಸಕರು ಮತ್ತು ಸಂಸದರು ನಿಗದಿತ ನಮೂನೆಯ ಮತಪತ್ರದಲ್ಲಿ ಅಭ್ಯರ್ಥಿಯ ಹೆಸರು ಬರೆಯುತ್ತಾರೆ. ಅದಕ್ಕಾಗಿ ನಿಗದಿ ಮಾಡಿದ ಪೆನ್‌ ಕೂಡ ಇದೆ.

ನೀಲಂ ಸಂಜೀವ ರೆಡ್ಡಿ ಮಾತ್ರ ಅವಿರೋಧ ಆಯ್ಕೆ :

ದೇಶದಲ್ಲಿ ಇದುವರೆಗೆ 15 ಬಾರಿ ರಾಷ್ಟ್ರಪತಿ ಆಯ್ಕೆಯ ಸಂಬಂಧ ಚುನಾವಣೆ ನಡೆದಿದೆ. ಈ ಪೈಕಿ 1977 ಮಾತ್ರ ಅವಿರೋಧವಾಗಿ ಆಯ್ಕೆ ನಡೆದಿತ್ತು. ಜನತಾ ಪಾರ್ಟಿಯ ಅಭ್ಯರ್ಥಿಯಾಗಿದ್ದ  ನೀಲಂ ಸಂಜೀವ ರೆಡ್ಡಿ ಅವರು ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿದ್ದರು. 64ನೇ ವಯಸ್ಸಿನಲ್ಲಿ ಅವರು ದೇಶದ ಅತ್ಯುನ್ನತ ಹುದ್ದೆಗೆ ಆಯ್ಕೆಯಾದ ಕಾರಣ “ದೇಶದ ಅತ್ಯಂತ ಯುವ ರಾಷ್ಟ್ರಪತಿ’ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಅವಿರೋಧವಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸೇರಿದಂತೆ ಆಗಿನ ಎಲ್ಲ ಪಕ್ಷಗಳೂ ಬೆಂಬಲ ನೀಡಿದ್ದವು.

ಒಬ್ಬರೇ ಒಬ್ಬರು :

ದೇಶದ ಮೊದಲ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್‌ ಮಾತ್ರ ಸತತ ಎರಡು ಬಾರಿ ಆಯ್ಕೆಯಾಗಿದ್ದರು. ಅನಂತರ ಈ ವರೆಗೆ ಸತತ ಎರಡನೇ ಬಾರಿಗೆ ಆಯ್ಕೆಯಾಗಲು ಯಾರಿಗೂ ಅವಕಾಶ ಲಭಿಸಿಲ್ಲ.

ದೇಶದ ಮಾಜಿ ರಾಷ್ಟ್ರಪತಿಗಳ ವಿವರ :

ಹೆಸರು / ಅವಧಿ

ಬಾಬು ರಾಜೇಂದ್ರ ಪ್ರಸಾದ್‌      / 26-01-1950ರಿಂದ 13-05-1962

ಸರ್ವಪಲ್ಲಿ ರಾಧಾಕೃಷ್ಣನ್‌/      13-05-1962 ರಿಂದ 13-05-1967

ಜಾಕಿರ್‌ ಹುಸೇನ್‌          / 13-05-1967 ರಿಂದ 03-05-1969

ವಿ.ವಿ.ಗಿರಿ/        24-08-1969ರಿಂದ 24-08-1974

ಫ‌ಕ್ರುದ್ದೀನ್‌ ಅಲಿ ಅಹ್ಮದ್‌/       24-08-1974 ರಿಂದ 11-02-1977

ನೀಲಂ ಸಂಜೀವ ರೆಡ್ಡಿ  / 25-07-1977 ರಿಂದ 25-07-1982

ಗ್ಯಾನಿ ಜೈಲ್‌ ಸಿಂಗ್‌/      25-07-1982 ರಿಂದ 25-07-1987

ರಾಮಸ್ವಾಮಿ ವೆಂಕಟರಾಮನ್‌/           25-07-1987 ರಿಂದ 25-07-1992

ಶಂಕರ್‌ ದಯಾಳ್‌ ಶರ್ಮಾ/     25-07-1992 ರಿಂದ 25-07-1997

ಕೆ.ಆರ್‌. ನಾರಾಯಣನ್‌ /25-07-1997 ರಿಂದ 25-07-2002

ಎ.ಪಿ.ಜೆ. ಅಬ್ದುಲ್‌ ಕಲಾಂ/        25-07-2002 ರಿಂದ 25-07-2007

ಪ್ರತಿಭಾ ಪಾಟೀಲ್‌/      25-07-2007 ರಿಂದ 25-07-2012

ಪ್ರಣವ್‌ ಮುಖರ್ಜಿ/      25-07-2012 ರಿಂದ 25-07-2017

ರಾಮನಾಥ ಕೋವಿಂದ್‌ /         25-07-2017ರಿಂದ 2022 ಜು. 24ಕ್ಕೆ ಅಧಿಕಾರ ಮುಕ್ತಾಯ

(ಜಾಕಿರ್‌ ಹುಸೇನ್‌ ನಿಧನ ಹೊಂದಿದ್ದರು. ಹೀಗಾಗಿ ಆಗಸ್ಟ್‌ 1969ರ ವರೆಗೆ ಹಂಗಾಮಿ ರಾಷ್ಟ್ರಪತಿಗಳಾಗಿ ವಿ.ವಿ.ಗಿರಿ (03-05-1969 ರಿಂದ 20-05-1969ರ ವರೆಗೆ) ಮತ್ತು ಮೊಹಮ್ಮದ್‌ ಹಿದಾಯತ್ತುಲ್ಲಾ (20-06-1969ರಿಂದ 24-08-1969) ಅಧಿಕಾರದಲ್ಲಿದ್ದರು. ಫ‌ಕ್ರುದ್ದೀನ್‌ ಅಲಿ ಅಹ್ಮದ್‌ ಅವರು ಅಧಿಕಾರದಲ್ಲಿ ಇರುವಾಗ‌ಲೇ ನಿಧನ ಹೊಂದಿದ್ದರು. ಹೀಗಾಗಿ ಬಿ.ಡಿ.ಜತ್ತಿ ಅವರು 11-02-1977 ರಿಂದ 25-07-1977ರ ವರೆಗೆ ಹಂಗಾಮಿ ರಾಷ್ಟ್ರಪತಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next