Advertisement

ಸೊಗಸಾದ ಯಕ್ಷಗಾನ ಬ್ಯಾಲೆ ಕನಕಾಂಗಿ 

06:00 AM Nov 30, 2018 | Team Udayavani |

ಮಾತೇ ಪ್ರಧಾನವಾಗಿ ಬೆಳೆದು ಬಂದಿದ್ದ ಯಕ್ಷಗಾನದ ಮಾತಿನ ಭಾಗವನ್ನು ದೂರವಿರಿಸಿದ ಕಾರಂತರು ಗೀತ, ನೃತ್ಯ ಮತ್ತು ವೇಷಭೂಷಣಗಳಲ್ಲಿ ಸೂಕ್ತವೆನ್ನಿಸಿದ ಮಾರ್ಪಾಡುಗಳನ್ನು ಮಾಡಿ ಯಕ್ಷಗಾನ ಬ್ಯಾಲೆಯನ್ನು ಐವತ್ತಾರು ವರ್ಷಗಳ ಹಿಂದೆ ರೂಪಿಸಿದರು. ಈ ಪ್ರಯೋಗ ನಾಡಿನಾದ್ಯಂತ ಹಾಗೂ ವಿಶ್ವ ರಂಗಭೂಮಿಯಲ್ಲೇ ಇಂದು ಮನ್ನಣೆ ಗಳಿಸಿದೆ.

Advertisement

ನಾಡಿನ ಕಲೆಯಾದ ಯಕ್ಷಗಾನವನ್ನು ಕನ್ನಡ ಭಾಷೆಯ ಪರಿಚಯ ಇಲ್ಲದವರಿಗೂ ಆಕರ್ಷಕವಾಗಿ ಮಾಡಿ ತೋರಿಸಬೇಕೆಂಬ ಹಂಬಲ ಕಾರಂತರದ್ದಾಗಿತ್ತು. ಮಾತೇ ಪ್ರಧಾನವಾಗಿ ಬೆಳೆದು ಬಂದಿದ್ದ ಈ ಕಲೆಯ ಮಾತಿನ ಭಾಗವನ್ನು ದೂರವಿರಿಸಿದ ಕಾರಂತರು ಗೀತ, ನೃತ್ಯ ಮತ್ತು ವೇಷಭೂಷಣಗಳಲ್ಲಿ ಸೂಕ್ತವೆನ್ನಿಸಿದ ಮಾರ್ಪಾಡುಗಳನ್ನು ಮಾಡಿ ಯಕ್ಷಗಾನ ಬ್ಯಾಲೆಯನ್ನು ಐವತ್ತಾರು ವರ್ಷಗಳ ಹಿಂದೆ ರೂಪಿಸಿದರು. ಈ ಪ್ರಯೋಗ ನಾಡಿನಾದ್ಯಂತ ಹಾಗೂ ವಿಶ್ವ ರಂಗಭೂಮಿಯಲ್ಲೇ ಇಂದು ಮನ್ನಣೆ ಗಳಿಸಿದೆ. ಡಾ. ಕೋಟ ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆ(ರಿ.), ಸಾಲಿಗ್ರಾಮ, ಉಡುಪಿ ಇವರು ಕಾರಂತರ ಜನ್ಮ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ(ರಿ.) ಇವರು ಕಾರಂತರ ನಿರ್ದೇಶನದ ಯಕ್ಷಗಾನ ಬ್ಯಾಲೆ ಕನಕಾಂಗಿಯನ್ನು ಪ್ರದರ್ಶಿಸಿದರು.

ಬಲರಾಮನು ತನ್ನ ಪುತ್ರಿ ಕನಕಾಂಗಿಯನ್ನು ದುರ್ಯೋಧ‌ನನ ಪುತ್ರ ಲಕ್ಷಣ ಕುಮಾರನಿಗೆ ಮದುವೆ ಮಾಡಿಕೊಡುವ ಮೊಂಡುತನದ ನಿರ್ಧಾರವನ್ನು ಮಾಡುತ್ತಾನೆ. ಆದರೆ ಪದ್ಧತಿಯಂತೆ ಸೋದರಿ ಸುಭದ್ರೆಯ ಪುತ್ರ ಅಭಿಮನ್ಯುವಿನೊಡನೆ ಆಗಬೇಕು. ಇದರಿಂದ ಚಿಂತಿತಳಾದ ಸುಭದ್ರೆ ಇನ್ನೋರ್ವ ಅಣ್ಣ ಕೃಷ್ಣನಲ್ಲಿ ತಿಳಿಸಲು ಬರುವಾಗ ದಾರಿ ಮಧ್ಯೆ ಘಟೋತ್ಕಚ ತಡೆಯುತ್ತಾನೆ. ನಡೆದ ಯುದ್ಧದಲ್ಲಿ ಅಭಿಮನ್ಯು ಹತನಾಗುತ್ತಾನೆ. ಆ ವೇಳೆೆಗೆ ಆಗಮಿಸಿದ ಘಟೋತ್ಕಚನ ತಾಯಿ ಹಿಡಿಂಬೆ ಮಗನಿಗೆ ಅವರೆಲ್ಲರನ್ನು ಪರಿಚಯಿಸುತ್ತಾಳೆ. ಅಭಿಮನ್ಯುವಿಗೆ ಮರು ಜೀವ ನೀಡಿದ ಘಟೋತ್ಕಚ ಅವರನ್ನು ದ್ವಾರಕೆಗೆ ಕರೆತರುತ್ತಾನೆ. ಮುಂದೆ ಕೃಷ್ಣನ ಸೂಚನೆಯಂತೆ ಘಟೋತ್ಕಚನು ಕೃತಕ ಕನಕಾಂಗಿ, ಲಕ್ಷಣ ಮತ್ತು ಮದುವೆ ದಿಬ್ಬಣವನ್ನು ಸೃಷ್ಟಿಸುತ್ತಾನೆ. ಇದನ್ನರಿಯದ ಬಲರಾಮನು ಕೃತಕ ಕನಕಾಂಗಿಯನ್ನೇ ಕೃತಕ ಲಕ್ಷಣನೊಂದಿಗೆ ಮದುವೆ ಮಾಡಿಸುತ್ತಾನೆ. ದುರ್ಯೋಧ‌ನನು ನಿಜವಾದ ಮದುಮಗನೊಂದಿಗೆ ಬಂದಾಗ ಬಲರಾಮ ಗದರಿಸಿ ಕಳಿಸುತ್ತಾನೆ.

ಇತ್ತ ನಿಜವಾದ ಕನಕಾಂಗಿ ಪಾಂಡವರಲ್ಲಿ ಬಂದು ಸೇರುತ್ತಾಳೆ. ಅರ್ಜುನನು ಕೃಷ್ಣನೊಡಗೂಡಿ ಬಲರಾಮನಲ್ಲಿ ಕನಕಾಂಗಿಯನ್ನು ಅಭಿಮನ್ಯುವಿನೊಡನೆ ವಿವಾಹ ಮಾಡಿಸುವಂತೆ ವಿನಂತಿಸಿದಾಗ ಇದರಲ್ಲಿ ಕೃಷ್ಣನ ಕೈವಾಡವಿರುವುದು ಗೊತ್ತಾಗಿ ಸಿಟ್ಟಿಗೆದ್ದ ಬಲರಾಮನನ್ನು ನಾರದರು ಸಕಾಲದಲ್ಲಿ ಬಂದು ಸಮಾಧಾನಿಸುತ್ತಾರೆ. ಮುಂದೆ ಈರ್ವರ ವಿವಾಹವಾಗುವಲ್ಲಿಗೆ ಕಥಾನಕ ಅಂತ್ಯಗೊಳ್ಳುತ್ತದೆ. ಬಲರಾಮನಾಗಿ ಕೃಷ್ಣಮೂರ್ತಿ ಉರಾಳ ಕೃಷ್ಣನಾಗಿ ಪ್ರತೀಶ್‌ ಕುಮಾರ್‌ ಬ್ರಹ್ಮಾವರ, ಬಾಲಗೋಪಾಲ ಮತ್ತು ಅಭಿಮನ್ಯುವಾಗಿ ಕಾರ್ತಿಕ್‌ ಕರ್ಗಲ್ಲು, ಸುಭದ್ರೆಯಾಗಿ ಗಣೇಶ್‌ ನಾಯಕ್‌ ಮುಗ, ಹಿಡಿಂಬೆಯಾಗಿ ಶ್ರೀಧರ ಕಾಂಚನ್‌, ಘಟೋತ್ಕಚನಾಗಿ ಉಮೇಶ ಪೂಜಾರಿ, ಕೌರವನಾಗಿ ಶ್ರೀನಾಥ್‌ ಉರಾಳ, ಕರ್ಣನಾಗಿ ಅಜಿತ್‌ ಕುಮಾರ್‌ ಅಂಬಲ್ಪಾಡಿ, ಭಾನುಮತಿ ಮತ್ತು ನಾರದನಾಗಿ ಮನೋಜ್‌ ಭಟ್‌, ಲಕ್ಷಣನಾಗಿ ರಮೇಶ್‌ ಆಡುಕಟ್ಟೆ ಇವರುಗಳು ತಮ್ಮ ಪಾತ್ರಗಳನ್ನು ಸೊಗಸಾದ ಭಾವಭಿನಯದೊಂದಿಗೆ ಕಾರಂತರ ಮೂಲ ಆಶಯ ಮತ್ತು ವಿನ್ಯಾಸಕ್ಕೆ ಕುಂದು ಬಾರದಂತೆ ನಿರ್ವಹಿಸುವಲ್ಲಿ ಯಶಸ್ವಿಯಾದರು. ಇದನ್ನು ಮರು ನಿರ್ದೇಶಿಸಿದವರು ವಿ| ಸುಧೀರ್‌ ಕೊಡವೂರು. ಹಿಮ್ಮೇಳದಲ್ಲಿ ಹಾಡುಗಾರಿಕೆ ವಿ. ಸುಧೀರ್‌ ಕೊಡವೂರು, ಮದ್ದಲೆಯಲ್ಲಿ ದೇವದಾಸ್‌ ರಾವ್‌ ಕೂಡ್ಲಿ, ವಯಲಿನ್‌ನಲ್ಲಿ ರವಿಕುಮಾರ್‌ ಮೈಸೂರು, ಸ್ಯಾಕ್ಸೂಫೋನ್‌ನಲ್ಲಿ ಕೃಷ್ಣರಾಜ್‌ ಉಳಿಯಾರು, ಚಂಡೆಯಲ್ಲಿ ಬಸವ ಮರಕಾಲ ಸಹಕರಿಸಿದರು. ವೇಷಭೂಷಣದಲ್ಲಿ ಸತೀಶ್‌ ಉಪಾಧ್ಯಾಯ, ನಾರಾಯಣ ದೇವಾಡಿಗ, ವಜ್ರಕುಮಾರ್‌, ಶ್ರೀರಾಮ ಬಾಯರಿಯವರ ಸಹಕಾರವಿತ್ತು. 

ಕೆ. ದಿನಮಣಿ ಶಾಸ್ತ್ರಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next