Advertisement

ಸಿಎಂ ವಿರುದ್ಧ ದೂರು ನೀಡಲು ಸಿದ್ಧತೆ

10:22 AM Mar 17, 2020 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಾರ್ಯ ನಿರ್ವಹಣೆ ಹಾಗೂ ಪುತ್ರ ಬಿ.ವೈ.ವಿಜಯೇಂದ್ರ ಅವರಿಂದ ಆಡಳಿತದಲ್ಲಿ ಹಸ್ತಕ್ಷೇಪ ಕುರಿತ ಆಕ್ಷೇಪಣೆಗಳು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವರಿಷ್ಠರಿಗೆ ದೂರು ಸಲ್ಲಿಸುವ ಮಟ್ಟಿಗೆ ಗಂಭೀರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ. ಜತೆಗೆ, ಸಚಿವಾಕಾಂಕ್ಷಿಗಳು, ಪ್ರಮುಖ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವವರು ಲಾಬಿ ತೀವ್ರಗೊಳಿಸಲು ಸಜ್ಜಾದಂತಿದೆ.

Advertisement

ಯಡಿಯೂರಪ್ಪ ಅವರ ಕಾರ್ಯ ನಿರ್ವಹಣೆ ಹಾಗೂ ಬಿ.ವೈ. ವಿಜಯೇಂದ್ರ ಅವರ ನಡೆ ಆಕ್ಷೇಪಾರ್ಹ ಆರೋಪ ಗಳಿದ್ದ ಅನಾಮಧೇಯ ಪತ್ರಗಳು ಪಕ್ಷದಲ್ಲಿ ಸಂಚಲನ ಮೂಡಿಸಿವೆ. ಹಿರಿಯ ಶಾಸಕರು, ಮಾಜಿ ಸಚಿವರೂ ಈ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದು, ವರಿಷ್ಠರಿಗೂ ದೂರು ನೀಡಲು ಸಿದ್ಧತೆ ನಡೆಸಿದಂತಿದೆ.

ನಡ್ಡಾ ಭೇಟಿಗೆ ಯತ್ನ: ಶನಿವಾರ ಬೆಂಗಳೂರಿನಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಕೆಲ ಶಾಸಕರು ಭೇಟಿಯಾಗಿ ಮಾಹಿತಿ ನೀಡಲು ಯತ್ನಿಸಿದರು. ಆದರೆ, ಭೇಟಿ ಸಾಧ್ಯವಾಗಿಲ್ಲ. ದೆಹಲಿಗೇ ಬಂದು ಭೇಟಿಯಾಗುವಂತೆ ಜೆ.ಪಿ.ನಡ್ಡಾ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದ್ದು, ಕುತೂಹಲ ಮೂಡಿಸಿದೆ. ಕೆಲ ಪ್ರಮುಖರು ಮಂಗಳವಾರದ ನಂತರ ದೆಹಲಿಗೆ ತೆರಳಿಗೆ ವರಿಷ್ಠರನ್ನು ಭೇಟಿಯಾಗುವ ಪ್ರಯತ್ನ ನಡೆಸಲಿದ್ದಾರೆ ಎನ್ನಲಾಗಿದೆ.

ಒಂದೆಡೆ ಮುಖ್ಯಮಂತ್ರಿ, ಸಚಿವರ ಕಾರ್ಯ ನಿರ್ವಹಣೆ ಬಗ್ಗೆ ಬಿಜೆಪಿ ಶಾಸಕರು ಅದರಲ್ಲೂ ಪ್ರಮುಖವಾಗಿ ಲಿಂಗಾ ಯಿತ ಸಮುದಾಯದ ಶಾಸಕರೇ ಅಪಸ್ವರ ತೆಗೆದಿರುವುದು ಬಿಎಸ್‌ವೈಗೆ ತಲೆನೋವಾಗಿ ಪರಿಣಮಿಸಿದಂತಿದೆ. ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವುದು, ಕ್ಷೇತ್ರದ ಕೆಲಸ ಕಾರ್ಯಗಳಿಗೆ ತ್ವರಿತವಾಗಿ ಸ್ಪಂದಿಸಬೇಕೆಂಬ ಆಗ್ರಹದ ಮಾತು ಶಾಸಕರ ವಲಯದಿಂದ ಕೇಳಿ ಬಂದಿದೆ. ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಮುಖ್ಯಮಂತ್ರಿ ಸಮ್ಮುಖದಲ್ಲೇ ಇಂತಹ ಹಲವು ವಿಚಾರ ಪ್ರಸ್ತಾಪಿಸಿದ್ದಾರೆ.

ಹಿಂದೆಯೂ ಸಚಿವ ಜಗದೀಶ ಶೆಟ್ಟರ್‌ ಅವರ ಸರ್ಕಾರಿ ನಿವಾಸದಲ್ಲಿ ಆಯ್ದ ಶಾಸಕರು ಸಭೆ ನಡೆಸಿದ್ದರು. ಬಳಿಕ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಬಿಜೆಪಿ ಕಾರ್ಯಾಲಯದಲ್ಲಿ ಹಲವು ಶಾಸಕರು ಭೇಟಿಯಾಗಿ ಚರ್ಚೆ ನಡೆಸಿದ್ದರು. ಆ ಮೂಲಕ ರಾಜ್ಯ ಬಿಜೆಪಿ ಹಾಗೂ ಸರ್ಕಾರದ ಆಡಳಿತದ ಬಗ್ಗೆ ಹಿರಿಯ ನಾಯಕರಿಗೆ ಮಾಹಿತಿ ನೀಡುವ ಪ್ರಯತ್ನವನ್ನೂ ನಡೆಸಿದ್ದರು ಎನ್ನಲಾಗಿದೆ.

Advertisement

ಇದೀಗ ಅನಾಮಧೇಯ ಪತ್ರಗಳ ಹೆಸರಿನಲ್ಲೇ ಆಡಳಿ ತದಲ್ಲಿನ ಅವ್ಯವಸ್ಥೆಗಳ ಬಗ್ಗೆ ಆರೋಪ ಕೇಳಿ ಬರುತ್ತಿರುವುದು ಅತೃಪ್ತ ಶಾಸಕರಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಇದೇ ವಿಚಾರ ವನ್ನು ವರಿಷ್ಠರ ಅಂಗಳಕ್ಕೆ ತಲುಪಿಸಿ, ಅವ್ಯವಸ್ಥೆ ಸರಿಪಡಿಸುವ ಕಾರ್ಯಕ್ಕೆ ನಾಂದಿ ಹಾಡುವ ಚಿಂತನೆಯಲ್ಲಿದ್ದಂತಿದೆ.

ಖಾತೆಗೆ ಲಾಬಿ ಜೋರು: ಇನ್ನೊಂದೆಡೆ, ಬಜೆಟ್‌ ಅಧಿವೇಶ ನದ ಬಳಿಕ ಸಂಪುಟ ವಿಸ್ತರಣೆಯಾಗಲಿದ್ದು, ಖಾಲಿಯಿರುವ ಖಾತೆ ಭರ್ತಿ ಮಾಡಲು ಈಗಾಗಲೇ ಸರ್ಕಾರ ಹಾಗೂ ಪಕ್ಷ ನಿರ್ಧರಿಸಿದೆ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಸ್ಥಾನಮಾನಕ್ಕಾಗಿ ಪ್ರಭಾವ ಬೀರಲಾರಂಭಿಸಿದ್ದಾರೆ. ಜತೆಗೆ, ಪ್ರಭಾವಿ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಈಗಿನಿಂದಲೇ ಲಾಬಿ ತೀವ್ರಗೊಳಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಕುರಿತಾದ ಆರೋಪ ಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲು ಶಾಸಕರ ನಿಯೋಗ ವೊಂದು ಮಂಗಳವಾರದ ಬಳಿಕ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂಬ ಮಾತುಗಳಿವೆ. ಆದರೆ, ಸಂಸತ್‌ ಅಧಿವೇಶನ ನಡೆಯುತ್ತಿದ್ದು, ರಾಜ್ಯದಲ್ಲೂ ಬಜೆಟ್‌ ಅಧಿವೇಶನ ಮುಂದುವರಿದಿದೆ.

22ಕ್ಕೂ ಹೆಚ್ಚು ಶಾಸಕರ ಸಭೆ?: ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ.ವಿಜಯೇಂದ್ರ ಅವರ ಕಾರ್ಯ ವೈಖರಿಯಿಂದ ಅಸಮಾಧಾನಗೊಂಡಿ ರುವ 22ಕ್ಕೂ ಹೆಚ್ಚು ಶಾಸಕರು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಶನಿವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ. ಇದರಲ್ಲಿ ಬಹಳಷ್ಟು ಶಾಸಕರು ಉತ್ತರ ಕರ್ನಾಟಕ ಭಾಗದವರಾಗಿದ್ದರು. ಸಭೆ ಬಳಿಕ ಪ್ರಹ್ಲಾದ್‌ ಜೋಶಿ ಹಾಗೂ ಸಚಿವ ಸಿ.ಟಿ.ರವಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ, ಶಾಸಕರು ಪ್ರಸ್ತಾಪಿಸಿದ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಗೊಂದಲ ನಿವಾರಿಸಲು ಸೂಚನೆ: ರಾಜ್ಯ ಬಿಜೆಪಿ ಹಾಗೂ ಸರ್ಕಾರದ ಆಡಳಿತದಲ್ಲಿನ ಗೊಂದಲ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಅರುಣ್‌ ಕುಮಾರ್‌ರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪತ್ರಕ್ಕೂ, ನನಗೂ ಸಂಬಂಧವಿಲ್ಲ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಾರ್ಯ ವೈಖರಿ ಹಾಗೂ ಪುತ್ರ ಬಿ.ವೈ.ವಿಜಯೇಂದ್ರ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪವುಳ್ಳ ಅನಾಮಧೇಯ ಪತ್ರಕ್ಕೂ, ನನಗೂ ಸಂಬಂಧವಿಲ್ಲ. ನನ್ನ ಗುರುಗಳಾದ ಯಡಿಯೂರಪ್ಪ ಅವರಿಂದ ದೂರ ಉಳಿದಿದ್ದೇನೆಯೇ ಹೊರತು ಯಾವುದೇ ಪತ್ರ ಬರೆಯುವುದಾಗಲಿ, ವರಿಷ್ಠರಿಗೆ ದೂರು ನೀಡುವುದಾಗಿ ಮಾಡಿಲ್ಲ ಎಂದು ಯಡಿಯೂರಪ್ಪನವರ ಆಪ್ತ ಸಹಾಯಕರಾಗಿದ್ದ ಎನ್‌.ಆರ್‌.ಸಂತೋಷ್‌ ತಿಳಿಸಿದ್ದಾರೆ. ನನ್ನ ಪಾಡಿಗೆ ನಾನಿದ್ದರೂ ಸುಳ್ಳು ಆರೋಪ, ಅಪಪ್ರಚಾರಗಳು ನಡೆಯುತ್ತಿರುವುದು ಅರ್ಥಹೀನ ಎಂದು ಬೇಸರ ವ್ಯಕ್ತಪಡಿಸಿರುವ ಸಂತೋಷ್‌, ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪತ್ರದ ಸಾರಾಂಶವಿದು!
ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲಾಣೆ; ಯಾವುದೇ ಪತ್ರ ಬರೆದಿಲ್ಲ. “ಕಳೆದ ಕೆಲ ದಿನಗಳಿಂದ ನಾನು ಹೊರಗೆ ಕಾಣಿಸಿಕೊಳ್ಳದೆ ಅಂತರ್ಮುಖೀಯಾಗಿದ್ದೇನೆ. ಕಳೆದ 8-9 ವರ್ಷಗಳಿಂದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಕಲಿಸದ ಪಾಠವನ್ನು ನನ್ನ ಗುರು ಯಡಿಯೂರಪ್ಪ ಅವರು ಕಲಿಸಿದ್ದು, ನಾನು ಕಲಿತಿದ್ದೇನೆ. ರಾಜ್ಯವನ್ನು ಅವರ ಜೊತೆ ನೆರಳಿನಂತೆ ಸಾಕಷ್ಟು ಬಾರಿ ಸುತ್ತಿದ್ದೇನೆ. ನನ್ನದು “ಗುರು ಲಿಂಗ ಜಂಗಮ’ದ ಪದ್ಧತಿ.

ಅಣ್ಣ ಬಸವಣ್ಣನವರ ಆಶೀರ್ವಚನದಂತೆ “ಕಾಯಕ ಮಾಡುವುದು ನಮಗೆ ಕೈಲಾಸದ ಸಮಾನ’. ನಾಡಿನ ಕೋಟ್ಯಂತರ ಜನರಂತೆ ನಾನೂ ಸಹ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಿರಾತಂಕವಾಗಿ ಅವಧಿ ಪೂರೈಸಬೇಕು ಎಂದು ಆಶಿಸುತ್ತಿರುವವನು.ನನ್ನ ವಿರುದ್ಧ ಯಾರದೋ ಪ್ರಲೋಭನೆಯಿಂದ, ಚಿತಾವಣೆಯಿಂದ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಅದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದ್ದು, ನಾನು ಯಾರಿಗೂ ಬಹಿರಂಗವಾಗಿ ಯಾವುದೇ ಅನಾಮಧೇಯ ಪತ್ರವನ್ನೂ ಬರೆದಿಲ್ಲ.

ದೂರು ಹೇಳಲು ದೆಹಲಿಗೂ ಹೋಗಿಲ್ಲ. ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ನಾನು ಯಾವುದೇ ಪತ್ರ ಬರೆದಿಲ್ಲ. ಈ ವಿಚಾರವಾಗಿ ಸುಳ್ಳು ಆಪಾದನೆಗಳು, ಅಪಪ್ರಚಾರಗಳು ನಡೆಯುತ್ತಿರುವುದು ಅರ್ಥಹೀನ. ಇದರಿಂದಾಗಿ ನನಗೆ ವೈಯಕ್ತಿಕವಾಗಿ ನೋವಾಗಿದೆ. ಆಘಾತವಾಗಿದೆ. ಇದನ್ನು ನಮ್ಮ ಹಿರಿಯರ ಗಮನಕ್ಕೆ ತಂದಿದ್ದೇನೆ. ಅವರ ಮಾರ್ಗದರ್ಶನದಂತೆ ನಡೆದುಕೊ ಳ್ಳುತ್ತೇನೆ.

ನನಗೆ ತಿಳಿದಂತೆ ಗುರು ದೂಷಣೆ ಮಾಡಬಾ ರದು. ಗುರುವಿನಿಂದ ದೂರ ಉಳಿದಿದ್ದೇನೆ ಅಷ್ಟೇ. ನಾನು ಗುರುಗಳಾದ ಮುಖ್ಯಮಂತ್ರಿಗಳಿಂದ ದೂರ ಉಳಿದಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅನಾಮಧೇಯ ಪತ್ರ, ಸಚಿವ ಜಗದೀಶ ಶೆಟ್ಟರ್‌ ಅವರು ತಮ್ಮ ನಿವಾಸದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಪಟ್ಟಂತೆ ಶಾಸಕರೊಂದಿಗೆ ನಡೆದ ಸಭೆ ಸೇರಿದಂತೆ ಹಲವು ವಿಚಾರಗಳಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗುತ್ತಿದೆ.

ನನ್ನ ಬಂಧನವಾಗಿದೆ ಎಂಬ ಮಾತು ಹರಿಬಿಡಲಾಗಿದೆ. ಇದರಿಂದ ನಾನು ನೊಂದಿದ್ದು, ಕುಟುಂಬದವರ ನೆಮ್ಮದಿಯೂ ಹಾಳಾಗಿದೆ. ನಾನು ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿದ್ದೇನೆ. ಈ ವಿದ್ಯಮಾನಗಳನ್ನೆಲ್ಲಾ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇನೆ. ನಾನು ಸಂಘಟನೆಯಿಂದ ಬಂದವನಾಗಿದ್ದು, ಹಿರಿಯರು ಸೂಚಿಸಿದಂತೆ ಮುಂದುವರಿಯುತ್ತೇನೆ’.

Advertisement

Udayavani is now on Telegram. Click here to join our channel and stay updated with the latest news.

Next