Advertisement

ಏಳನೇ ಚುನಾವಣೆಗೆ ಸಿದ್ಧವಾಗುತ್ತಿದೆ ಮಹಾನಗರ ಪಾಲಿಕೆ ಅಖಾಡ

09:32 PM Sep 28, 2019 | Team Udayavani |

ಮಂಗಳೂರು ಮಹಾನಗರಪಾಲಿಕೆಯ 60 ವಾರ್ಡ್‌ಗಳಿಗೆ ಮತ್ತೆ ಚುನಾವಣೆ ಸಮೀಪಿಸುತ್ತಿದೆ. ಶೀಘ್ರವೇ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ನಗರ ಪಾಲಿಕೆ ಆಡಳಿತವೇ ಸ್ಥಳೀಯ ಸರಕಾರ. ನಗರ ಅಭಿವೃದ್ಧಿಯನ್ನು ನಿರ್ಧರಿಸುವುದು ಈ ವಾರ್ಡ್‌ನ ಜನಪ್ರತಿನಿಧಿಗಳು. ಈ ಸಂದರ್ಭದಲ್ಲಿ ವಾರ್ಡ್‌ನ ನಾಗರಿಕರೇ ನಿರ್ಣಾಯಕರು. ಚುನಾವಣೆಗೆ ಕಣ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಉದಯವಾಣಿ ಸುದಿನ ತಂಡ ಇದುವರೆಗೆ ವಾರ್ಡ್‌ಗಳಲ್ಲಿ ಆದ ಅಭಿವೃದ್ಧಿ ಕಾರ್ಯ, ಸಮಸ್ಯೆ-ಸವಾಲು, ಜನರ ಅಭಿಪ್ರಾಯ-ಬೇಡಿಕೆಗಳನ್ನೆಲ್ಲಾ ಅರಿತು ವರದಿ ಮಾಡುವುದೇ ಈ ಸರಣಿಯ ಉದ್ದೇಶ. ಪ್ರತಿ ವಾರ್ಡ್‌ಗಳಲ್ಲಿ ಸುದಿನ ತಂಡವು ಓಡಾಡಿ ಸಿದ್ಧಪಡಿಸಿರುವ ವರದಿಯು ಇಂದಿನಿಂದ ಆರಂಭ.

Advertisement

ಮಹಾನಗರ: ರಾಜ್ಯದ ಏಳು ಮಹಾನಗರ ಪಾಲಿಕೆಗಳಲ್ಲಿ ಬೆಂಗಳೂರು ಹೊರತುಪಡಿಸಿದರೆ ಪ್ರಮುಖ ಪಾಲಿಕೆ ಯಾಗಿ ಗುರುತಿಸಿಕೊಂಡಿದ್ದು ಮಂಗಳೂರು ಮಹಾನಗರ ಪಾಲಿಕೆ. ಇದರ 60 ವಾರ್ಡ್‌ಗಳಿಗೆ ಅ. 31ರೊಳಗೆ ಚುನಾವಣೆ ನಡೆಸಿ ನ. 15ರೊಳಗೆ ಪರಿಷತ್‌ ಅಸ್ತಿತ್ವಕ್ಕೆ ತರಬೇಕೆಂದು ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ಹಾಗಾಗಿ ಚುನಾವಣೆಗೆ ಸಿದ್ಧತೆ ಸದ್ದಿಲ್ಲದೇ ಆರಂಭ ವಾಗಿದೆ. ರಾಜಕೀಯ ಚಟುವಟಿಕೆಗಳೂ ಗರಿ ಗೆದರುತ್ತಿವೆ.

ರಾಜ್ಯದಲ್ಲಿ ಬೆಂಗ ಳೂರು ಬಿಟ್ಟರೆ ವೇಗವಾಗಿ ಅಭಿವೃದ್ಧಿ ಹೊಂದು ತ್ತಿರುವ 2ನೇ ನಗರ ಎಂಬ ಹೆಗ್ಗಳಿಕೆ ಮಂಗಳೂರಿನದ್ದು. ಈಗ ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿದೆ. ಜಿಲ್ಲಾ ಕೇಂದ್ರ ಹಾಗೂ ಬಂದರು ನಗರಿ ಮಂಗಳೂರು ಕರ್ನಾಟಕದ ಹೆಬ್ಟಾಗಿಲು ಎಂದೂ ಗುರುತಿಸಿಕೊಂಡಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯು ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ. ನಗರ ಬೆಳೆಯುತ್ತಿದ್ದಂತೆ ಸುಗಮ ಸಂಚಾರ, ಪಾರ್ಕಿಂಗ್‌ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ಒಳಚರಂಡಿ ವ್ಯವಸ್ಥೆ ಹೀಗೆ ಹಲವು ವಿಷಯಗಳು ಸವಾಲಾಗಿ ಪರಿಣಮಿಸಿವೆ. ಮುಂದಿನ ಚುನಾವಣೆಯಲ್ಲಿ ಈ ಎಲ್ಲ ಸಮಸ್ಯೆ- ಸವಾಲುಗಳು ಮುನ್ನೆಲೆಗೆ ಬರಲಿವೆ.

31 ಮೇಯರ್‌ ಕಂಡ ಪಾಲಿಕೆ
ಪಾಲಿಕೆಗೆ ಇದು ಏಳನೇ ಚುನಾವಣೆ. ಇಲ್ಲಿವರೆಗೆ 31ಮೇಯರ್‌ ಹಾಗೂ ಉಪಮೇಯರ್‌ಗಳು ಆಡಳಿತ ನಡೆಸಿದ್ದಾರೆ. ಪುರುಷರು 23 ಬಾರಿ ಹಾಗೂ ಮಹಿಳೆಯರು 8 ಬಾರಿ ಮೇಯರ್‌ ಆಗಿದ್ದಾರೆ. ಇದರಲ್ಲಿ ರಜನಿ ದುಗ್ಗಣ ( ಬಿಜೆಪಿ) ಅವರನ್ನು ಹೊರತುಪಡಿಸಿ ಇತರ ಎಲ್ಲರೂ ಕಾಂಗ್ರೆಸ್‌ ಪಕ್ಷದವರು. 8 ಬಾರಿ ಅಲ್ಪಸಂಖ್ಯಾಕರು ( 4 ಬಾರಿ ಮುಸ್ಲಿಂ ಸಮುದಾಯ ಹಾಗೂ 4 ಬಾರಿ ಕ್ರಿಶ್ಚಿಯನ್‌ ಸಮುದಾಯ ) ಮೇಯರ್‌ ಆಗಿ ಅಧಿಕಾರ ನಡೆಸಿದ್ದಾರೆ.

Advertisement

ಒಂದು ವರ್ಷ ಗ್ರೇಸ್‌ ಅವಧಿ
2013ರ ಮಾ. 7 ರಂದು ನಡೆದ ಪಾಲಿಕೆ ಚುನಾವಣೆಯಲ್ಲಿ 60 ಸ್ಥಾನಗಳಲ್ಲಿ ಕಾಂಗ್ರೆಸ್‌ 35 ಸ್ಥಾನಗಳನ್ನು ಪಡೆದು ಸ್ವಷ್ಟ ಬಹುಮತವನ್ನು ಗಳಿಸಿ ಐದು ವರ್ಷಗಳ ಅವಧಿಗೆ ಆಡಳಿತಕ್ಕೆ ಬಂದಿತು. ಬಿಜೆಪಿ 20, ಜೆಡಿಎಸ್‌ 2, ಸಿಪಿಎಂ 1, ಪಕ್ಷೇತರ1, ಎಸ್‌ಡಿಪಿಐ 1 ಸದಸ್ಯರನ್ನು ಹೊಂದಿತ್ತು, ಪರಿಷತ್‌ನ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ 2019ರ ಮಾರ್ಚ್‌ 7 ಕ್ಕೆ ಕೊನೆಗೊಂಡಿತು. ಆದರೆ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ಅರ್ಜಿ ಸಲ್ಲಿಸಲಾಯಿತು. ಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಚುನಾವಣೆ ನಡೆದಿರಲಿಲ್ಲ. ಹಾಗಾಗಿ ಎಲ್ಲ ಸದಸ್ಯರಿಗೆ 5 ವರ್ಷದ ಬದಲು ಒಂದು ವರ್ಷ ಹೆಚ್ಚುವರಿ ಸಿಕ್ಕಂತಾಯಿತು.

ಪಾಲಿಕೆಗೆ 39 ವರ್ಷ ಇತಿಹಾಸ
ಬ್ರಿಟಿಷ್‌ ಆಳ್ವಿಕೆಯಲ್ಲಿ 1866ರಲ್ಲಿ ಪುರಸಭೆಯಾಗಿ, 7 ಸದಸ್ಯರನ್ನು ಹೊಂದಿದ್ದ (ಬ್ರಿಟಿಷ್‌ ಅಧಿಕಾರಿಗಳು) ಮಂಗಳೂರು ಬಳಿಕ 1965ರಲ್ಲಿ ನಗರ ಪುರಸಭೆಯಾಯಿತು. ಆಗಿನ ಸದಸ್ಯ ಬಲ 32. ಅದರಲ್ಲಿ 6 ಮೀಸಲು ಸ್ಥಾನಗಳಾಗಿದ್ದವು. 1980ರ ಜು.3ರಿಂದ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಿತು. 1983 ಡಿ. 4 ರಂದು ಮೊದಲ ಚುನಾವಣೆ ನಡೆದು 1984ರ ಜ.6 ರಂದು ಸದಾಶಿವ ಭಂಡಾರಿ ಅವರು ಮೊದಲ ಮೇಯರ್‌ ಆಗಿ ಆಯ್ಕೆಗೊಂಡರು.

ಪಾಲಿಕೆಯಾದಾಗ ಇಲ್ಲಿನ ಜನಸಂಖ್ಯೆ 2,13,999. 14 ಗ್ರಾಮಗಳನ್ನು ಒಳಗೊಂಡ ಪಾಲಿಕೆ ವ್ಯಾಪ್ತಿ 65.17 ಚದರ ಕಿ.ಮಿ.1983 ರಲ್ಲಿ ಪಕ್ಕದ 8.46 ಕಿ.ಮಿ. ಪದವು ಪುರಸಭೆ ಪಾಲಿಕೆಯೊಂದಿಗೆ ವಿಲೀನಗೊಂಡಿತು. 1997ರಲ್ಲಿ ಸುರತ್ಕಲ್‌ ವ್ಯಾಪ್ತಿಯ 7 ಗ್ರಾಮಗಳು ಹಾಗೂ 2002 ರಲ್ಲಿ ಬಜಾಲ್‌, ಕಣ್ಣೂರು, ಕುಡುಪು ಹಾಗೂ ತಿರುವೈಲು ಗ್ರಾಮಗಳು ಸೇರಿದವು. ಅರವತ್ತು ವಾರ್ಡ್‌ಗಳು. ಪ್ರಸ್ತುತ ಪಾಲಿಕೆಯ ಒಟ್ಟು ವಿಸ್ತೀರ್ಣ 132.45 ಚದರ ಕಿ.ಮೀ. 2,11,578 ಆಸ್ತಿಗಳನ್ನು ಹೊಂದಿದೆ. ರಸ್ತೆಗಳ ಉದ್ದ 1170 ಕಿ.ಮಿ.

2011ರ ಜನಗಣತಿ ಪ್ರಕಾರ ಜನಸಂಖ್ಯೆ 4,99,487. ಇದೀಗ ಸುಮಾರು 5.5 ಲಕ್ಷ ತಲುಪಿರಬಹುದು ಎಂಬುದು ಅಂದಾಜು. ಆಡಳಿತ ವಿಕೇಂದ್ರೀಕರಣ ದೃಷ್ಟಿಯಿಂದ ಪಾಲಿಕೆಯನ್ನು ಕಳೆದ ವರ್ಷ ಮೂರು ವಲಯಗಳನ್ನಾಗಿ ವಿಂಗಡಿಸಲಾಯಿತು.

2013
ಒಟ್ಟು ಸ್ಥಾನಗಳು 60
ಕಾಂಗ್ರೆಸ್‌ 35
ಬಿಜೆಪಿ 20
ಎಸ್‌ಡಿಪಿಐ 01
ಜೆಡಿಎಸ್‌ 02
ಸಿಪಿಎಂ 01
ಪಕ್ಷೇತರ 01

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next