Advertisement

ಜಿಲ್ಲಾದ್ಯಂತ 180 ಮತದಾನ ಜಾಗೃತಿ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ

04:19 PM Mar 30, 2019 | Team Udayavani |

ಯಾದಗಿರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾದ್ಯಂತ ಎರಡನೇ ಹಂತದಲ್ಲಿ ಏಪ್ರಿಲ್‌ 7ರಿಂದ 16ರ ವರೆಗೆ 180 ಸ್ವೀಪ್‌ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ವಸಂತ ವಿ.ಕುಲಕರ್ಣಿ ಹೇಳಿದರು.

Advertisement

ನಗರದ ಜಿಪಂ ಉಪಕಾರ್ಯದರ್ಶಿ ಕಚೇರಿಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಸ್ವೀಪ್‌ ಸಮಿತಿ ಕಾರ್ಯಚಟುವಟಿಕೆಗಳ ಕುರಿತು ಶುಕ್ರವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಮೊದಲು ನಡೆದ ಸಭೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 40 ಸೇರಿದಂತೆ ಒಟ್ಟು 160 ಸ್ವೀಪ್‌ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿತ್ತು. ಭಾರತ ಚುನಾವಣಾ ಆಯೋಗ ಯಾವುದೇ ಸಮುದಾಯ ಅಥವಾ ಅರ್ಹ ಮತದಾರ ಮತದಾನದಿಂದ ವಂಚಿತ ಆಗಬಾರದು ಎಂಬ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ಅಲೆಮಾರಿ ಜನವಸತಿಗಳಲ್ಲಿಯೂ 20 ಕಾರ್ಯಕ್ರಮ ಆಯೋಜಿಸಲು ಕ್ರಮ ವಹಿಸಬೇಕು. ಪ್ರತಿ ಕಲಾ ತಂಡಕ್ಕೆ 30 ಕಾರ್ಯಕ್ರಮ ಹಂಚಿಕೆ ಮಾಡಬೇಕು ಎಂದು ನಿರ್ದೇಶಿಸಿದರು.

ಪ್ರಾರಂಭದಿಂದ ಇಲ್ಲಿಯವರೆಗೆ ನಡೆದ ವಿವಿಧ ಸ್ವೀಪ್‌ ಚಟುವಟಿಕೆಗಳ ಕುರಿತು ಡಿಡಿಪಿಐ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಿಂದ ಮಾಹಿತಿ ಪಡೆದ ಉಪ ಕಾರ್ಯದರ್ಶಿಗಳು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ, ಮುಖ್ಯರಸ್ತೆಯಿಂದ ಒಳಗಿರುವ ಹಾಗೂ ಅಲೆಮಾರಿ ಜನಾಂಗದ ಪ್ರದೇಶಗಳಲ್ಲಿ ಸ್ವೀಪ್‌ ಚಟುವಟಿಕೆಗಳ
ಮೂಲಕ ಜಾಗೃತಿ ಮೂಡಿಸುವ ಪಟ್ಟಿಗೆ ಅನುಮೋದನೆ ನೀಡಿದರು. ಹಿಂದಿನ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರತಿಯೊಬ್ಬ ಮತದಾರರಿಗೆ ವೋಟರ್‌ ಸ್ಲಿಪ್‌ ಜತೆಗೆ ಮತದಾನ ಮಾಡುವಂತೆ 10 ಲಕ್ಷ ಮನವಿ ಪತ್ರ ಮತ್ತು ಸಿ-ವಿಜಿಲ್‌ ಆ್ಯಪ್‌ ಕುರಿತ 10 ಸಾವಿರ ಭಿತ್ತಿಪತ್ರ ಮುದ್ರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಪ್ಯಾರಾ ಗ್ಲೆ„ಡರ್‌ ಮೂಲಕ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಮಾರ್ಚ್‌ 30ರಂದು ಬೆಳಗ್ಗೆ 8:00ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ವಿಧ್ಯುಕ್ತ ಚಾಲನೆ ದೊರೆಯಲಿದೆ ಎಂದು ಹೇಳಿದರು.

ಬಸವರಾಜ ಮಹಾಮನಿ ಅವರಿಂದ 16 ಕಾರ್ಯಕ್ರಮ: ಜಿಲ್ಲೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಚಟುವಟಿಕೆಗಳಿಗಾಗಿ ಜಿಲ್ಲಾ ಚುನಾವಣಾ ರಾಯಭಾರಿ ನೇಮಕವಾದ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಜಿಲ್ಲೆಯಾದ್ಯಂತ ಹೋಬಳಿಗೊಂದರಂತೆ ಒಟ್ಟು 16 ಕಾರ್ಯಕ್ರಮ ನೀಡುವರು. ಉಳಿದ ಮತದಾನದ ಜಾಗೃತಿ ಕಾರ್ಯಕ್ರಮಗಳು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು.

Advertisement

ಇದೇ ಕಾರ್ಯಕ್ರಮದ 2ನೇ ಸುತ್ತಿನಲ್ಲಿ ಏಪ್ರಿಲ್‌ 15ರಿಂದ 20ರವರೆಗೆ ನೂತನ ತಾಲೂಕುಗಳು ಸೇರಿದಂತೆ 6 ತಾಲೂಕುಗಳ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಅವರಿಗೆ ಸೂಚಿಸಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗುರುತಿಸಿದ ವಸತಿಗಳಲ್ಲಿ ಪ್ರತ್ಯೇಕ ಕಾರ್ಯಕ್ರಮ
(ಬೀದಿನಾಟಕ-ಜಾನಪದ- ಗೀಗೀಪದ) ಹಮ್ಮಿಕೊಂಡು ಮತದಾನದ ಮಹತ್ವ ಕುರಿತು ವಿಶೇಷ ವರ್ಗದ ಮತದಾರರಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಆವರಿಗೆ ನಿರ್ದೇಶಿಸಿದರು.

ಜಿಲ್ಲೆಯಲ್ಲಿ 8 ಸಖೀ ಮತಗಟ್ಟೆಗಳ ಸ್ಥಾಪನೆಗೆ ಆದೇಶ ಇದೆ. ಇವೆಲ್ಲವೂ ಜಿಲ್ಲೆಯ ನಗರ-ಪಟ್ಟಣ ಪ್ರದೇಶಗಳಲ್ಲಿ ಇರುವುದರಿಂದ ಇವುಗಳನ್ನು ಸಿದ್ಧಪಡಿಸುವ ಕಾರ್ಯವನ್ನು ಆಯಾ ಪುರಸಭೆ ಮತ್ತು ನಗರಸಭೆ ಇಂಜಿನಿಯರರು ಮಾಡಬೇಕು.

ಅಗತ್ಯವಿರುವ ಪರಿಕರಗಳನ್ನು ತಮ್ಮ ಸ್ವಂತ ಸಂಪನ್ಮೂಲಗಳಿಂದ ಭರಿಸಬೇಕು. ಈ ಕುರಿತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪತ್ರ ಬರೆಯಬೇಕು. ಅಂಗವಿಕಲರಿಗಾಗಿ ಅವರಿಂದಲೇ ಚುನಾವಣೆ ನಡೆಸಲು 1 ಮತಗಟ್ಟೆ ಗುರುತಿಸಬೇಕಿದೆ. ಅದರಂತೆ ಯಾದಗಿರಿಯ ಚಿರಂಜೀವಿ ಪ್ರೌಢಶಾಲೆ ಬಲಭಾಗದ ಮತಗಟ್ಟೆ ಗುರುತಿಸಲಾಗಿದೆ. ಮತಗಟ್ಟೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಈ ಬಗ್ಗೆ ಡಿಡಿಪಿಐ ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದರು.

ಗುಡ್ಡಗಾಡಿನಲ್ಲಿ ಜನವಸತಿಗಳಿರುವ 1 ಮತಗಟ್ಟೆ ಗುರುತಿಸಿ ಅದಕ್ಕೆ ಅಗತ್ಯ ಸೌಲಭ್ಯ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಇದೇ ಸಂದರ್ಭದಲ್ಲಿ ಮತದಾನ ಜಾಗೃತಿಗಾಗಿ ಬೈಕ್‌ ರ್ಯಾಲಿ, ಮ್ಯಾರಾಥಾನ್‌ ಆಯೋಜಿಸುವ ಕುರಿತು ಚರ್ಚೆ ನಡೆಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ, ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ಕೇಂದ್ರದ ಅಧಿಕಾರಿ ಸಿದ್ಧಾರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ. ಮಣ್ಣೂರ, ವನಜಾಕ್ಷಿ ಬೆಂಡಿಗೇರಿ, ಟಿ.ಪಿ. ದೊಡ್ಡಮನಿ, ಲಾಲ್‌ಸಾಬ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಿ.ಕೆ. ರಾಜರತ್ನ, ವಿಷಯ ನಿರ್ವಾಹಕ ಶಿವಾನಂದ ಸ್ವಾಮಿ ಇದ್ದರು.

ಗುಳೆ ಹೋಗುವವರಿಗೆ ಜಾಗೃತಿ ಜಿಲ್ಲೆಯಲ್ಲಿ ಬರಗಾಲ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ದೂರದ ನಗರ ಪ್ರದೇಶಗಳಿಗೆ ಕೆಲಸ ಅರಸಿ ವಲಸೆ ಹೋಗುತ್ತಾರೆ. ಹಾಗಾಗಿ, ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿ ಕೌಂಟರ್‌ ತೆರೆದು ಜನರು ವಲಸೆ ಹೋಗುವುದನ್ನು ತಡೆಯಲು ಪ್ರಯತ್ನಿಸಬೇಕು. ಈ ಪ್ರಯುಕ್ತ ಏಪ್ರಿಲ್‌ 7ರಿಂದ 21ರ ವರೆಗೆ ಮತದಾನದ ಮಹತ್ವ ಕುರಿತ ಮುದ್ರಿತ ಕರಪತ್ರ ನೀಡಿ ಏಪ್ರಿಲ್‌ 23ರಂದು ನಡೆಯುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವೊಲಿಸಿ.
ವಸಂತ ವಿ. ಕುಲಕರ್ಣಿ, ಜಿಪಂ ಉಪಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next