Advertisement

ಸಮ್ಮೇಳನ ಸಿದ್ಧತೆ: ಸಚಿವರ ಪರಿಶೀಲನೆ 

12:15 PM Nov 19, 2017 | Team Udayavani |

ಮೈಸೂರು: ನ.24ರಿಂದ 3 ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ಲೋಪದೋಷಗಳಿಲ್ಲದೆ ಅಚ್ಚುಕಟ್ಟಾಗಿ ಸಮ್ಮೇಳನ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸಲಹೆ ನೀಡಿದರು.

Advertisement

ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸಮ್ಮೇಳನದ ಹಿನ್ನೆಲೆಯಲ್ಲಿ ರಚಿಸಲಾಗಿರುವ 14 ಉಪ ಸಮಿತಿಗಳ ಕಾರ್ಯದರ್ಶಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರತಿಯೊಂದು ಉಪ ಸಮಿತಿಗಳಲ್ಲಿ ಈವರೆಗೆ ಆಗಿರುವ ಸಿದ್ಧತೆಗಳ ಮಾಹಿತಿ ಪಡೆದುಕೊಂಡರು.

ವಸತಿ ಸಮಿತಿಯಿಂದ 2000 ಗಣ್ಯರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕಿದ್ದು, ಇನ್ಪೋಸಿಸ್‌ನಲ್ಲಿ 500 ಕೊಠಡಿ, ನಗರದ ವಿವಿಧ ಸರ್ಕಾರಿ ಅತಿಥಿ ಗೃಹದಲ್ಲಿ 800 ಜನರಿಗೆ ಕೊಠಡಿಗಳನ್ನು ಕಾದಿರಿಸಿಕೊಳ್ಳಲಾಗಿದೆ. ಇನ್ನೂ 500 ಕೊಠಡಿಗಳ ಅವಶ್ಯಕತೆಯಿದೆ.

ಹೀಗಾಗಿ ವಸತಿ ಗೃಹಗಳಲ್ಲೇ ಕಾದಿರಿಸಬೇಕಿರುವುದರಿಂದ 80 ಹೋಟೆಲ್‌ಗ‌ಳ ಪಟ್ಟಿ ಮಾಡಿಕೊಳ್ಳಲಾಗಿದೆ. ಪ್ರತಿನಿಧಿಗಳ ಓಡಾಟಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ 117 ಬಸ್‌, ಕೆಎಸ್ಸಾರ್ಟಿಸಿ 8 ಬಸ್‌, ಸರ್ಕಾರಿ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌ ಸಭೆಗೆ ಮಾಹಿತಿ ನೀಡಿದರು.

ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ 20 ಕೊಠಡಿ, ಜೆಎಸ್‌ಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 10 ಕೊಠಡಿ ನೀಡುವಂತೆ ಸಭೆಯ ನಡುವೆಯೇ ಸಚಿವ ಮಹದೇವಪ್ಪ, ಜೆಎಸ್‌ಎಸ್‌ ಆಡಳಿತ ಮಂಡಳಿ ಜತೆ ಮಾತನಾಡಿ ಒಪ್ಪಿಸಿದರು. 

Advertisement

ಜತೆಗೆ ಇನ್ನೂ ಉದ್ಘಾಟನೆಗೊಳ್ಳದ ಮಹಾರಾಣಿ ಕಾಲೇಜು ಹೊಸ ಕಟ್ಟಡದಲ್ಲಿ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಕೂಡಲೇ ಹೋಟೆಲ್‌ ಮಾಲಿಕರ ಸಭೆ ಕರೆದು ಕಡಿಮೆ ದರದಲ್ಲಿ ಕೊಠಡಿ ನೀಡುವಂತೆ ಕೇಳಿ ಎಂದು ಸಚಿವ ಮಹದೇವಪ್ಪ ಸಲಹೆ ನೀಡಿದರು. 

ಅರಮನೆ ಝಗಮಗ: ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನ.22ರಿಂದ 26ರವರೆಗೆ 5 ದಿನಗಳ ಕಾಲ ಅರಮನೆ ವಿದ್ಯುತ್‌ ದೀಪಾಲಂಕಾರ ಇರಲಿದೆ ಎಂದು ಜಿಲ್ಲಾಧಿಕಾರಿ ರಂದೀಪ್‌ ತಿಳಿಸಿದರು. ಈವರೆಗೆ 9471 ಮಂದಿ ಸಮ್ಮೇಳನದ ಪ್ರತಿನಿಧಿಗಳಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಾಹಿತ್ಯ ಸಾಂಗತ್ಯ, ವಿಕಾಸ ಕರ್ನಾಟಕ ಹಾಗೂ ಮೈಸೂರು ಐಸಿರಿ ಎಂಬ 3 ಸ್ಮರಣ ಸಂಚಿಕೆ ಹೊರತರಲಾಗುತ್ತಿದೆ ಎಂದು ಸ್ಮರಣ ಸಂಚಿಕೆ ಉಪ ಸಮಿತಿಯವರು ಮಾಹಿತಿ ನೀಡಿದರು.

ಪ್ರಚಾರ ಸಮಿತಿಯಿಂದ 87 ಹೆದ್ದಾರಿ ಫ‌ಲಕ ಹಾಕಲಾಗಿದ್ದು, ಮೈಸೂರಿನ ಟ್ರಿಣ್‌ ಟ್ರಿಣ್‌ ಸೈಕಲ್‌ ಸ್ಟ್ಯಾಂಡ್‌ಗಳಲ್ಲೂ ಪ್ರಚಾರ ಫ‌ಲಕ ಹಾಕಲಾಗಿದೆ. ಇದಲ್ಲದೆ 600 ಕೆಸ್ಸಾರ್ಟಿಸಿ ಬಸ್‌ ಹಾಗೂ 1500 ಆಟೋಗಳಿಗೆ ಸ್ಟಿಕ್ಕರ್‌ ಹಾಕಲಾಗುತ್ತಿದೆ ಎಂದು ಪ್ರಚಾರ ಸಮಿತಿ ಕಾರ್ಯದರ್ಶಿ ಆರ್‌.ರಾಜು ಮಾಹಿತಿ ನೀಡಿದರು.

ಎಲ್ಲಾ ತಾಲೂಕುಗಳಲ್ಲಿ ನ.22, 23ರಂದು ಮೈಕ್‌ ಮೂಲಕ ಪ್ರಚಾರ ಮಾಡಿ, ಕರಪತ್ರ ವಿತರಿಸುವ ಮೂಲಕ ವ್ಯವಸ್ಥಿತವಾಗಿ ಪ್ರಚಾರ ಮಾಡಿ, ಸಾಹಿತ್ಯ ಸಮ್ಮೇಳನಕ್ಕೆ ಜನರನ್ನು ಆಹ್ವಾನಿಸಿ ಎಂದು ಸಚಿವರು ಸಲಹೆ ನೀಡಿದರು.

ಆಹಾರ ಸಮಿತಿ: ಸಾಹಿತಿಗಳು, ಅತಿಥಿಗಳು ಹಾಗೂ ಕಲಾವಿದರಿಗೆ ಮುಖ್ಯವೇದಿಕೆ ಪಕ್ಕದಲ್ಲಿ, ಪ್ರತಿನಿಧಿಗಳಿಗೆ ಮೈಸೂರು ವಿವಿಯ ಹಾಕಿ ಮೈದಾನದಲ್ಲಿ, ಸಾರ್ವಜನಿಕರಿಗೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಸೇರಿದಂತೆ ಪ್ರತಿ ನಿತ್ಯ 1 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಆಹಾರ ಸಮಿತಿ ಕಾರ್ಯದರ್ಶಿ ಡಾ.ಕಾ.ರಾಮೇಶ್ವರಪ್ಪ ತಿಳಿಸಿದರು.

ಶಾಸಕ ಎಂ.ಕೆ.ಸೋಮಶೇಖರ್‌, ಕಾಡಾ ಅಧ್ಯಕ್ಷ ಎಸ್‌.ನಂಜಪ್ಪ, ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಬಿ.ಸಿದ್ದರಾಜು, ಜಿಲ್ಲಾಧಿಕಾರಿ ಡಿ.ರಂದೀಪ್‌ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next