Advertisement

ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ತಯಾರಿ ಜೋರು

05:08 PM Aug 07, 2022 | Team Udayavani |

ಸುರಪುರ: ಆ. 13ರಿಂದ 15ರವರೆಗೆ ಸಾರ್ವಜನಿಕರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಗಲು-ರಾತ್ರಿ ಹಾರಿಸಬೇಕು. ಹಬ್ಬದ ವಾತಾವರಣ ನಿರ್ಮಾಣ ಮಾಡುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ರಾಜುಗೌಡ ಹೇಳಿದರು.

Advertisement

ಇಲ್ಲಿಯ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಶನಿವಾರ ಹರ್‌ ಘರ್‌ ತಿರಂಗಾ ಅಭಿಯಾನದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಆ. 13ರಂದು ಬೆಳಗ್ಗೆ 10ಕ್ಕೆ ಶ್ರೀಮಹರ್ಷಿ ವಾಲ್ಮೀಕಿ ವೃತ್ತದಿಂದ ಅರಮನೆ ಮಾರ್ಗವಾಗಿ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದವರೆಗೆ, 14ರಂದು ಹುಣಸಗಿಯಲ್ಲಿ ಬೆಳಗ್ಗೆ 10ಕ್ಕೆ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಭಾರತ ಮಾತೆ ಸ್ತಬ್ಧ ಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಸುರಪುರದಲ್ಲಿ ಭಾರತ ಮಾತೆ ಜೊತೆಗೆ ವೀರ ಸೇನಾನಿ ರಾಜಾ ನಾಲ್ವಡಿ ವೆಂಕಟಪ್ಪನಾಯಕರ ಸ್ತಬ್ಧಚಿತ್ರದ ಮೆರವಣಿಗೆ ಆಯೋಜಿಸಲಾಗಿದೆ. ತಿರಂಗಾ ಧ್ವಜಯೊಂದಿಗೆ ಅದ್ಧೂರಿ ಮೆರವಣಿಗೆ ಜರುಗಲಿದೆ ಎಂದರು.

ನಗರದ ಎಲ್ಲ ರಸ್ತೆಗಳ ಸ್ವತ್ಛತೆಗೆ ಆದ್ಯತೆ ನೀಡಬೇಕು. ಮಾಜಿ ಸೈನಿಕರನ್ನು ಆಹ್ವಾನಿಸಿ ಗೌರವಿಸಬೇಕು. ಸರಕಾರಿ ನೌಕರರು, ಆಶಾ, ಅಂಗನವಾಡಿ ಕಾರ್ಯಕರ್ತರು, ವಿವಿಧ ಸಂಘಟನೆಯವರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಆ. 13ರಂದು ಬೆಳಗ್ಗೆ 11ಕ್ಕೆ ಸುರಪುರದ ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧೀಜಿಯವರ ಕಂಚಿನ ಪುತ್ಥಳಿ ಉದ್ಘಾಟನೆ ನಡೆಯಲಿದೆ ಎಂದರು. ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಮಾತನಾಡಿ, ತಾಲೂಕಿನಲ್ಲಿ 30 ಸಾವಿರ ಧ್ವಜಾರೋಹಣ ಗುರಿ ಹೊಂದಲಾಗಿದ್ದು, ಐದು ಸಾವಿರ ಧ್ವಜಗಳು ಕಚೇರಿಗೆ ಬಂದಿವೆ. ಅಭಿಯಾನವನ್ನು ಅರ್ಥ ಪೂರ್ಣವಾಗಿ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

Advertisement

ತಾಪಂ ಇಒ ಚಂದ್ರಶೇಖರ ಪವ್ಹಾರ್‌ ವೇದಿಕೆಯಲ್ಲಿದ್ದರು. ಬಿಇಒ ಸೀಬಾ ಜಲಿಯನ್‌ ಸೈಲಸ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಆರ್‌.ವಿ. ನಾಯಕ ಸಲಹೆ ನೀಡಿದರು. ಬಳಿಕ ಶಾಸಕರು ಸಾರ್ವಜನಿಕರಿಗೆ ಧ್ವಜಗಳನ್ನು ವಿತರಿಸಿದರು. ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.

ಮೂರ್ತಿ ಪ್ರತಿಷ್ಠಾಪನೆ: 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ರಾಜಾ ನಾಲ್ವಡಿ ವೆಂಕಟಪ್ಪನಾಯಕರ ಪಂಚ ಲೋಹದ ಪುತ್ಥಳಿಯನ್ನು ನಾರಾಯಣಪುರ ಬಸವಸಾಗರ ಜಲಾಶಯದ ಮುಂದೆ ಸ್ಥಾಪಿಸಲು ನಿರ್ಧರಿಸಿದ್ದು, ಇದಕ್ಕೆ ಸರಕಾರ ಅನುಮೋದನೆ ನೀಡಿದೆ. ಶೀಘ್ರ ಪುತ್ಥಳಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜೂಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next