Advertisement

ಅಂಬೇಡ್ಕರ್‌-ಬಾಬೂಜಿ ಜಯಂತಿಗೆ ಸಿದ್ಧತೆ

04:00 PM Mar 31, 2022 | Team Udayavani |

ಗಜೇಂದ್ರಗಡ: ಡಾ|ಬಿ.ಆರ್‌. ಅಂಬೇಡ್ಕರ್‌ ಹಾಗೂ ಡಾ|ಬಾಬು ಜಗಜೀವನರಾಂ ಅವರು ದೇಶಕ್ಕೆ ನೀಡಿದ ಕೊಡುಗೆ  ಅನರ್ಘ್ಯವಾಗಿದೆ. ಈ ನಿಟ್ಟಿನಲ್ಲಿ ಮಹಾನ್‌ ನಾಯಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್‌ ರಜನಿಕಾಂತ್‌ ಕೆಂಗೇರಿ ಹೇಳಿದರು.

Advertisement

ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ಡಾ|ಬಾಬು ಜಗಜೀವನರಾಂ ಮತ್ತು ಡಾ|ಬಿ.ಆರ್‌. ಅಂಬೇಡ್ಕರ್‌ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಜನತೆ ಸುಭದ್ರವಾಗಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡಿದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಧಾರೆಗಳು ಒಂದೆಡೆಯಾದರೆ, ಸಮಾಜದಲ್ಲಿ ತುಳಿತಕ್ಕೊಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಜಗಜೀವನರಾಂ ಅವರು ದೇಶದ ಉಪ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಪರವಾಗಿವೆ. ಇಂತಹ ಮಹಾನ್‌ ನಾಯಕರ ಜಯಂತಿಗಳನ್ನು ಪ್ರತ್ಯೇಕವಾಗಿ ಮಾಡುವ ಬದಲು ಒಂದೇ ದಿನ ನಿಗದಿಗೊಳಿಸಿ, ಗಜೇಂದ್ರಗಡ ತಾಲೂಕಿನಲ್ಲಿ ಆಚರಿಸಲು ಎಲ್ಲರ ಸಲಹೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಮಿಕ ಮುಖಂಡ ಪೀರು ರಾಠೊಡ ಮಾತನಾಡಿ, ಇನ್ನೂ ಸಹ ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಇದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ತಾಲೂಕಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡು ಜಾಗೃತಿ ಜಾಥಾ ನಡೆಸಲು ಮುಂದಾಗಬೇಕು. ಹಳ್ಳಿಗಳಲ್ಲಿ ಹಿಂದುಳಿದ ಸಮುದಾಯಕ್ಕೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಅಂದಾಗ ಮಾತ್ರ ಇಂತಹ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದರು.

ದಲಿತ ಸಂಘಟನೆ ಮುಖಂಡ ಶರಣಪ್ಪ ಪೂಜಾರ ಮಾತನಾಡಿ, ಅಂಬೇಡ್ಕರ್‌ ಜಯಂತಿ ಕೇವಲ ಭಾವಚಿತ್ರ ಪೂಜೆಗೆ ಮಾತ್ರ ಸೀಮಿತಗೊಳಿಸುವ ಬದಲು, ಅಂಬೇಡ್ಕರ್‌ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಅನೈರ್ಮಲ್ಯತೆ ತೊಡೆಯಲು ಅರಿವು ಮೂಡಿಸಬೇಕು. ಜೊತೆಗೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಜಯಂತಿ ಸಮಾರಂಭ ಆಚರಣೆಗೆ ಮುಂದಾಗಬೇಕು. ಕಾಟಾಚಾರದ ಕಾರ್ಯಕ್ರಮಕ್ಕೆ ಮುಂದಾದರೆ ಸಮಂಜಸವಲ್ಲ ಎಂದರು.

ಭೋವಿ ಸಮಾಜದ ಮುಖಂಡ ಬಸವರಾಜ ಬಂಕದ ಮಾತನಾಡಿ, ಏ.5 ರಂದು ಕಚೇರಿಗಳಲ್ಲಿ ಸರಳವಾಗಿ ಬಾಬು ಜಗಜೀವನರಾಂ ಅವರ ಜಯಂತಿ ಆಚರಿಸಿ, ಏ. 14 ರಂದು ಡಾ|ಬಿ. ಆರ್‌. ಅಂಬೇಡ್ಕರ್‌ ಜಯಂತಿ ದಿನವೇ ಉಭಯ ನಾಯಕರ ಭಾವಚಿತ್ರಗಳ ಭವ್ಯ ಮೆರವಣಿಗೆ ನಡೆಸಬೇಕು. ಚಿಂತಕರಿಂದ ಮಹಾನ್‌ ನಾಯಕರ ಆದರ್ಶಗಳ ಬಗ್ಗೆ ಸಮಾರಂಭ ಆಯೋಜನೆಗೆ ತಾಲೂಕು ಆಡಳಿತ ಮುಂದಾಗಬೇಕೆಂದರು.

Advertisement

ತಾಪಂ ಇಒ ಸಂತೋಷ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಅಧಿ ಕಾರಿ ಭೀಮಾಶಂಕರ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ಸಜ್ಜನರ, ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್‌ ಯು.ಆರ್‌. ಚನ್ನಮ್ಮನವರ, ವೀರಣ್ಣ ಅಡಗತ್ತಿ, ಇಮಾಮ ಕಾಲಾನಾಯಕ್‌, ಶಿವಕುಮಾರ ಇಲ್ಲಾಳ, ಉಪನೋಂದಣಾಧಿ ಕಾರಿ ವಿರುಪಾಕ್ಷ ಚೌಕಿಮಠ, ಮೂಕಪ್ಪ ಗುಡೂರ, ಕನಕಪ್ಪ ಅರಳಿಗಿಡದ, ಉಮೇಶ ರಾಠೊಡ, ಮೂಕಪ್ಪ ನಿಡಗುಂದಿ, ಮುದಿಯಪ್ಪ ಮುಧೋಳ, ರುಪ್ಲೇಶ ರಾಠೊಡ, ಈರಪ್ಪ ರಾಠೊಡ, ಯಲ್ಲಪ್ಪ ಬಂಕದ, ದುರುಗಪ್ಪ ಮುಧೋಳ, ಶರಣಪ್ಪ ಚಳಗೇರಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next