Advertisement

ಪ್ರೇಮರಾಜ್‌ ಕೊನೆಗೂ ಫೋಟೋ ಕೊಡಲೇ ಇಲ್ಲ: ಡಿಪಿಯಲ್ಲಿ ಇತ್ತು ಮಹಾಶಿವ ಆದಿಯೋಗಿ ಚಿತ್ರ

08:31 AM Nov 23, 2022 | Team Udayavani |

ಮೈಸೂರು: ಆತ ಕೊನೆಯವರೆಗೂ ತನ್ನ ಫೋಟೋವನ್ನು ಕೊಡಲೇ ಇಲ್ಲ. ಎಷ್ಟು ಸಲ ಕೇಳಿದರೂ ಇವತ್ತು ಕೊಡ್ತೀನಿ, ನಾಳೆ ಕೊಡ್ತೀನಿ ಅಂತಾನೇ ಹೇಳುತ್ತಿದ್ದ. ಕೊನೆಗೆ ನಾನೇ ನನ್ನ ಮೊಬೈಲ್‌ನಲ್ಲಿ ಆತನ ಫೋಟೋ ಕ್ಲಿಕ್ಕಿಸಿಕೊಂಡೆ. ಪೊಲೀಸರಿಗೆ ಈಗ ಆ ಫೋಟೋವನ್ನೇ ಕೊಟ್ಟಿದ್ದೇನೆ.

Advertisement

ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಶಾರೀಕ್‌ ಕುರಿತು ಮೈಸೂರಿನ ದಳವಾಯಿ ಪ್ರೌಢಶಾಲೆಯ ಸಮೀಪವಿರುವ ಮೊಬೈಲ್‌ ರಿಪೇರಿ ಸಂಸ್ಥೆ ಎಸ್‌ಎಂಎಂ ಇನ್‌ಸ್ಟಿಟ್ಯೂಟ್‌ ಆಫ್ ಸರ್ವಿಸಿಂಗ್‌ ಮಾಲೀಕ ಎ.ಜಿ. ಪ್ರಸಾದ್‌ ಹೇಳಿದ್ದಾರೆ.

ಶಾರೀಕ್‌ನನ್ನು ಮೊಬೈಲ್‌ ರಿಪೇರಿ ಕ್ಲಾಸ್‌ಗೆ ಅಡ್ಮಿಶನ್‌ ಮಾಡಿಕೊಂಡಾಗ ತನ್ನ ಹೆಸರು ಪ್ರೇಮರಾಜ್‌ ಎಂದು ಪರಿಚಯಿಸಿಕೊಂಡ. ಪ್ರೇಮರಾಜ್‌ ಹೆಸರಿನ ಆಧಾರ್‌ ಕಾರ್ಡ್‌ ಕೊಟ್ಟ. ನಾವು ನಂಬಿದೆವು. ಆತನ ಫೋಟೋ ಕೇಳಿದಾಗ ಕೊಡಲಿಲ್ಲ. ಫೋಟೋ ನಾಳೆ ಕೊಡ್ತೀನಿ ಅಂದ. ಆಯಿತು ಅಂದೆ. ಮರುದಿನವೂ ಹಾಗೇ ಹೇಳಿದ. ಹೀಗೆ ಆತ ತನ್ನ ಫೋಟೋ ಕೊಡಲು ಸತಾಯಿಸಿದ. ಕೊನೆಗೂ ಫೋಟೋ ಕೊಡಲೇ ಇಲ್ಲ. ಒಂದು ದಿನ ನಾನೇ ಮೊಬೈಲ್‌ನಲ್ಲಿ ಆತನ ಫೋಟೋ ಸೆರೆ ಹಿಡಿದು ಇಟ್ಟುಕೊಂಡೆ ಎಂದರು ಪ್ರಸಾದ್‌.

ಆತಂಕ, ಭಯ ಆತನಲ್ಲಿತ್ತು
ಶಾರೀಕ್‌ ಕ್ಲಾಸ್‌ನಲ್ಲಿ ಆತಂಕ, ಭಯದಿಂದ ಆಗಾಗ್ಗೆ ಬಾಗಿಲು ಕಡೆ ನೋಡುತ್ತಿದ್ದ. ಆತ ಬಹಳ ಸ್ಪಷ್ಟವಾಗಿ ಕನ್ನಡ ಮಾತಾಡುತ್ತಿದ್ದ. ಉರ್ದು, ಇಂಗ್ಲಿಷ್‌ನಲ್ಲಿ ಆತ ಮಾತಾಡಿದ್ದೇ ಇಲ್ಲ. ಆತನ ಮೊಬೈಲ್‌ ಡಿಪಿಯಲ್ಲಿ ಈಶಾ ಫೌಂಡೇಶನ್‌ನ ಮಹಾಶಿವ ಆದಿಯೋಗಿ ಭಾವಚಿತ್ರವಿತ್ತು. ಕ್ಲಾಸ್‌ ಮಧ್ಯೆ ಹೊರಗೆ ಹೋಗುತ್ತಿರಲಿಲ್ಲ. ಆತ ಬೇರೆ ಧರ್ಮದವನು ಅಂತ ಸಣ್ಣ ಅನುಮಾನವೂ ನನಗೆ ಬರ್ಲಿಲ್ಲ. ಪ್ರೇಮರಾಜ್‌ ಅಂತ ಕರೆದರೆ ತತ್‌ಕ್ಷಣ ಸ್ಪಂದಿಸುತ್ತಿದ್ದ. ಉಳಿದ ವಿದ್ಯಾರ್ಥಿಗಳ ಜೊತೆ ಹೆಚ್ಚು ಮಾತಾಡುತ್ತಿರಲಿಲ್ಲ. ಎನ್ನುತ್ತಾರೆ ಪ್ರಸಾದ್‌.

ಕೇರಳ ನೋಂದಣಿಯ ಬೈಕ್‌
ಮೊಬೈಲ್‌ ಸ್ಕ್ರೀನ್‌ ಸೇವರ್‌ನಲ್ಲಿ ಬೈಕ್‌ ಮೇಲೆ ಕುಳಿರುವ ಫೋಟೋ ಹಾಕಿ ಕೊಂಡಿದ್ದು, ಆ ಬೈಕ್‌ ಕೇರಳ ರಾಜ್ಯದ ನೋಂದಣಿ ಹೊಂದಿತ್ತು. ಇದನ್ನು ಗಮನಿಸಿದ್ದ ಮೊಬೈಲ್‌ ರಿಪೇರಿ ತರಬೇತುದಾರ ಪ್ರಸಾದ್‌, ನೀನು ಧಾರವಾಡ ಎನ್ನುತ್ತೀಯ ಆದರೆ, ಕೇರಳ ರಾಜ್ಯದ ನೋಂದಣಿ ಇರುವ ಬೈಕ್‌ ಯಾಕೆ ಇಟ್ಟಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಶಾರಿಕ್‌ ತನ್ನ ಸ್ನೇಹಿತನ ಬೈಕ್‌ ಎಂದು ಜಾರಿಕೊಂಡಿದ್ದ. ಮೊಬೈಲ್‌ಗೆ ಕರೆ ಮಾಡಿದಾಗ ಕೇರಳ ಮತ್ತು ತಮಿಳುನಾಡಿನ ಕಾಲರ್‌ ಟ್ಯೂನ್‌ ಕೇಳಿಬರುತ್ತಿತ್ತು.

Advertisement

ಮೊಬೈಲ್‌ ತರಬೇತಿಯ 45 ದಿನಗಳಲ್ಲಿ 22 ದಿನ ಮಾತ್ರ ಕ್ಲಾಸ್‌ಗೆ ಬಂದಿದ್ದಾನೆ. ಕೇಳಿದರೆ ಹುಷಾರಿಲ್ಲ ಅಂತಿದ್ದ. ಮೊಬೈಲ್‌ ರಿಪೇರಿಯನ್ನು ಪರಿಪೂರ್ಣವಾಗಿ ಕಲಿಯಲಿಲ್ಲ. ಪರೀಕ್ಷೆಗೂ ಕೂರಲಿಲ್ಲ ಎಂದು ವಿವರಿಸಿದರು ಪ್ರಸಾದ್‌.

ರೂರುಲ್ಲಾನ ಕುಟುಂಬಸ್ಥರು ನಾಪತ್ತೆ
ಮಂಗಳೂರಿನಲ್ಲಿ ಬಾಂಬ್‌ ಬ್ಲಾಸ್ಟ್ ಮಾಡಿದ ಶಾರೀಕ್‌ ಸ್ನೇಹಿತ ಮೊಹಮ್ಮದ್‌ ರೂರುಲ್ಲಾನ ಕುಟುಂಬಸ್ಥರು ಮೈಸೂರಿನ ರಾಜೀವ್‌ ನಗರದ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಈಗಾಗಲೇ ರೂರುಲ್ಲಾನನ್ನು ವಶಕ್ಕೆ ಪಡೆದಿರುವ ಪೊಲೀಸರು ಮಂಗಳೂರಿಗೆ ಕರೆದೊಯ್ದಿದ್ದಾರೆ.

ಮಂಗಳೂರಿಗೆ ಸ್ಫೋಟಕ ವಸ್ತುಗಳ ರವಾನೆ
ರವಿವಾರ ನಸುಕಿನ ಜಾವ ಪೊಲೀಸರು ಶಾರೀಕ್‌ ವಾಸ್ತವ್ಯ ಹೂಡಿದ್ದ ಮನೆ ಮೇಲೆ ದಾಳಿ ನಡೆಸಿ ಸಂಗ್ರಹಿಸಿದ್ದ ಸ್ಫೋಟಕಕ್ಕೆ ಬಳಸಲು ಇರಿಸಿದ್ದ ವಸ್ತುಗಳನ್ನು ನಗರ ಪೊಲೀಸ್‌ ಆಯುಕ್ತರು ಸೋಮವಾರ ರಾತ್ರಿಯೇ ಮಂಗಳೂರಿಗೆ ಕೊಂಡೊಯ್ದಿದ್ದಾರೆ. ಶಂಕಿತ ಉಗ್ರ ಶಾರೀಕ್‌ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದ ವೇಳೆ ಸೆಲ್ಫೆಟ್‌, ಪ್ಯಾನಲ್‌, ಬ್ಯಾಟರಿ, ಸರ್ಕಿಟ್‌ ಬೋರ್ಡ್‌, ಸ್ಮಾಲ್‌ ಬೋಲ್ಟ್ , ಮೊಬೈಲ್ , ವುಡೆನ್‌ ಪೌಡರ್‌, ಅಲ್ಯೂಮಿನಿಯಂ, ಮಲ್ಟಿ ಮೀಟರ್‌, ವೈರ್‌, 3 ಪ್ರಶರ್‌ ಕುಕ್ಕರ್‌ ಸೇರಿದಂತೆ ಹಲವು ಸ್ಫೋಟಕ ವಸ್ತುಗಳು ಪತ್ತೆಯಾಗಿತ್ತು. ಈ ಎಲ್ಲ ಸಾಕ್ಷ್ಯಗಳನ್ನು ನಗರ ಪೊಲೀಸ್‌ ಆಯುಕ್ತ ಬಿ. ರಮೇಶ್‌ ಅವರು ಸೋಮವಾರ ರಾತ್ರಿ ಮಂಗಳೂರಿಗೆ ಕೊಂಡೊಯ್ದು ಎಸಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಒಪ್ಪಿಸಿ, ವಿವರಣೆ ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಮಿಳುನಾಡು ಪೊಲೀಸರ ಭೇಟಿ
ಶಾರೀಕ್‌ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮಂಗಳವಾರ ಬೆಳಗ್ಗೆ ತಮಿಳುನಾಡು ಪೊಲೀಸರು ಮೈಸೂರಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ತಮಿಳುನಾಡಿನ ಕೊಯಮುತ್ತೂರಿನ ಕೊಟ್ಟೈಮೇಡು ಎನ್ನುವಲ್ಲಿ ಕಾರ್‌ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇದೀಗ ಮಂಗಳೂರಿನಲ್ಲೂ ಅದೇ ಮಾದರಿಯ ಸ್ಫೋಟವಾಗಿದ್ದು, ಈ ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಇರುವ ಹಿನ್ನೆಲೆ ತಮಿಳುನಾಡಿನಿಂದ ಡಿಐಜಿ ರ್‍ಯಾಂಕ್‌ನ ಅಧಿಕಾರಿಗಳು ಮೈಸೂರಿಗೆ ಆಗಮಿಸಿ, ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಂದ ಕೆಲವೊಂದು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಸಂಬಂಧಿಕನಿಂದಲೇ ಲೈಂಗಿಕ ದೌರ್ಜನ್ಯ: ಆರೋಪಿ ಪೊಲೀಸರ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next