ಅಜ್ಜಂಪುರ: ತಾಪಂಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪ್ರೇಮ ಮಂಜುನಾಥ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಕೆ.ಪಿ. ಸುರೇಶ್ ಕುಮಾರ್ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರೇಮ ಮಂಜುನಾಥ್, ಪ್ರೇಮ ಕೃಷ್ಣಮೂರ್ತಿ ವಿರುದ್ಧ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಪಿ. ಸುರೇಶ್ ಕುಮಾರ್ ನಂಜುಂಡಪ್ಪ ಎದುರು ಗೆಲುವು ಸಾಧಿಸಿದರು. ನೂತನ ಅಧ್ಯಕ್ಷೆ ಪ್ರೇಮ ಮಂಜುನಾಥ್, ಅಧ್ಯಕ್ಷೆಯಾಗಿ ಆಯ್ಕೆಯಾಗಲು ಕಾರಣರಾದ ಪಕ್ಷದ ತಾಪಂ ಸದಸ್ಯರು ಹಾಗೂ ಶಾಸಕ ಡಿ.ಎಸ್. ಸುರೇಶ್ ಅವರಿಗೆ ಅಭಾರಿಯಾಗಿರುವುದಾಗಿ ತಿಳಿಸಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಉಪಾಧ್ಯಕ್ಷ ಕೆ.ಪಿ. ಸುರೇಶ್ ಕುಮಾರ್ ಮಾತನಾಡಿ, ನೂತನ ತಾಲೂಕನ್ನು ಮಾದರಿಯಾಗಿ ನಿರ್ಮಿಸಬೇಕಿದೆ. ಇದಕ್ಕೆ ಸರ್ವ ಸದಸ್ಯರೂ ಪಕ್ಷ ಬೇದ ಮರೆತು ಸಹಕಾರ ನೀಡಬೇಕು ಎಂದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದ ಶಾಸಕ ಡಿ.ಎಸ್. ಸುರೇಶ್, ನೂತನ ತಾಲೂಕು ಕೇಂದ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚುರುಕು ನೀಡಬೇಕಿದೆ. ಬಾಕಿಯಿರುವ ಆಡಳಿತಾತ್ಮ ಕಾರ್ಯಗಳನ್ನು ನಡೆಸಬೇಕಿದೆ. ಕೋವಿಡ್-19, ನಡುವೆಯೂ ಕ್ಷೇತ್ರದ ಅಭಿವೃದ್ಧಿ ಮಾಡಬೇಕಿದೆ. ಜನಪರ ಆಡಳಿತ ನೀಡಬೇಕಿದೆ ಎಂದು ಸಲಹೆ ನೀಡಿದರು.
ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಕಾರ್ಯ ನಿರ್ವಹಿಸಿದರು. ತಾಪಂ ಇಒ ರಾಮ್ ಕುಮಾರ್, ಸದಸ್ಯರು ಇದ್ದರು. ತರೀಕೆರೆ ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್, ಉಪಾಧ್ಯಕ್ಷೆ ಶಿವಮ್ಮ, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್, ಬಿಜೆಪಿ ಮುಖಂಡ ಜಯಪ್ರಕಾಶ್, ಶಿವರಾಜ್, ಅನಿಲ್, ಮಂಜುನಾಥ್, ಬೀರೂರು ಪುರಸಭಾ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಮತ್ತಿತರರಿದ್ದರು.