Advertisement

ವೈಯಕ್ತಿಕ ತೇಜೋವಧೆ ಮಾಡಿದವರ ವಿರುದ್ಧ ಪ್ರೇಮ್‌ ಗರಂ

11:48 AM Oct 23, 2018 | Team Udayavani |

ನಿರ್ದೇಶಕ “ಜೋಗಿ’ ಪ್ರೇಮ್‌ ತಮ್ಮನ್ನು ವೈಯಕ್ತಿಕವಾಗಿ ನಿಂದನೆ ಮಾಡಿರುವ ಕುರಿತು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಪ್ರೇಮ್‌ ಹಾಗೆ ಕೋಪಗೊಳ್ಳಲು ಕಾರಣ, “ದಿ ವಿಲನ್‌’ ಚಿತ್ರದ ಬಗ್ಗೆ ಬಂದ ಪ್ರತಿಕ್ರಿಯೆಗಳಿಗಲ್ಲ. ಬದಲಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ತೇಜೋವಧೆ ಮಾಡುವಂತಹ ವಿಡೀಯೋ ಮತ್ತು ಹೇಳಿಕೆಗಳನ್ನು ಹಾಕಿರುವ ವ್ಯಕ್ತಿಗಳ ವಿರುದ್ಧ. ಹೌದು, ಪ್ರೇಮ್‌ ಯಾಕೋ, ಎಂದಿಗಿಂತ ಬೇಸರದಲ್ಲಿ ಅದರಲ್ಲೂ ಸ್ವಲ್ಪ ಕೋಪದಲ್ಲೇ ಮಾತನಾಡಿದ್ದಾರೆ.

Advertisement

ಸೋಮವಾರ ನಡೆದ “ದಿ ವಿಲನ್‌’ ಸಕ್ಸಸ್‌ ಪತ್ರಿಕಾಗೋಷ್ಠಿಯಲ್ಲಿ ಪ್ರೇಮ್‌ ಹೇಳಿದ್ದಿಷ್ಟು. ನನ್ನ ನಿರ್ದೇಶನದ “ದಿ ವಿಲನ್‌’ ಚಿತ್ರದಲ್ಲಿ ಅದು ಸರಿಯಿಲ್ಲ, ಇದು ಸರಿಯಿಲ್ಲ. ಎಂಬ ಬಗ್ಗೆ ನಾನು ಯಾವತ್ತೂ ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲರಿಗೂ ಸಿನಿಮಾ ಬಗ್ಗೆ ಮಾತಾಡುವ ಹಕ್ಕು ಇದೆ. ಆದರೆ, ನನ್ನ ವೈಯಕ್ತಿಕ ಬಗ್ಗೆ ಮಾತಾಡಿದವರ ಮತ್ತು ನನ್ನನ್ನು ತೇಜೋವಧೆ ಮಾಡುವಂತಹ ಹೇಳಿಕೆ, ವಿಡೀಯೋಗಳನ್ನು ಫೇಸ್‌ಬುಕ್‌ನಲ್ಲಿ ಹಾಕಲಾಗಿದೆ.

ಆ ಮೂಲಕ ಟೀಕೆ ಮಾಡಲಾಗಿದೆ. ಅಂತಹ ಒಂಭತ್ತು ವಿಡೀಯೋಗಳನ್ನು ನಾನು ಗುರುತಿಸಿದ್ದು, ಅದರೊಂದಿಗೆ ಮಂಗಳವಾರ (ಇಂದು) ಪೊಲೀಸ್‌ ಅಧಿಕಾರಿ ರವಿಚೆನ್ನಣ್ಣನವರ್‌ ಅವರಿಗೆ ದೂರು ನೀಡುತ್ತಿದ್ದೇನೆ. ನಾನು ಸುಪ್ರೀಂಕೋರ್ಟ್‌ಗೆ ಹೋದರೂ ಬಿಡುವುದಿಲ್ಲ. ನನ್ನ ವೈಯಕ್ತಿಕವಾಗಿ ಮಾತನಾಡಿದ್ದಲ್ಲದೆ, ಬೇರೆಯವರ ಹೆಸರನ್ನೇಕೆ ಸೇರಿಸಿ ತೇಜೋವಧೆ ಮಾಡಬೇಕು?

ಅಂತಹವರನ್ನು ಈಗಾಗಲೇ ಗುರುತಿಸಿದ್ದೇನೆ. ಯಾವ ಕಾರಣಕ್ಕೂ ನಾನು ಬಿಡುವುದಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ವಿಕೃತ ಮನಸ್ಸಿನವರಿದ್ದಾರೆ. ನಿರ್ದೇಶಕರ ಕಷ್ಟ ಗೊತ್ತಿಲ್ಲರುವುದಿಲ್ಲ. ವಿನಾಕಾರಣ, ಬಾಯಿಗೆ ಬಂದಂತೆ, ಮನಸಿಗೆ ಬಂದಂತೆ ಪೋಸ್ಟ್‌ ಮಾಡುವ ಮೂಲಕ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಅಂತಹವರ ವಿರುದ್ಧ ದೂರು ನೀಡಿ, ಕಾನೂನು ಕ್ರಮಕ್ಕೆ ಹೋರಾಡುತ್ತೇನೆ’ ಎಂದಿದ್ದಾರೆ ಪ್ರೇಮ್‌.

Advertisement

Udayavani is now on Telegram. Click here to join our channel and stay updated with the latest news.

Next