Advertisement

ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ 

04:27 PM Aug 29, 2018 | Team Udayavani |

ಹುಬ್ಬಳ್ಳಿ: ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮತೃಪಟ್ಟಿದ್ದಾಳೆಂದು ಆರೋಪಿಸಿ ಕುಟುಂಬಸ್ಥರು ಮಂಗಳವಾರ ಬೆಳಿಗ್ಗೆ ಇಲ್ಲಿನ ಮಾಧವಪುರದ ಸಿಟಿ ಕ್ಲಿನಿಕ್‌ ಎದುರು ಪ್ರತಿಭಟನೆ ನಡೆಸಿದರು. ಇಲ್ಲಿನ ಬಮ್ಮಾಪುರ ಓಣಿ ನಿವಾಸಿ ಬಾಣಂತಿ ನಿಖಿತಾ ಭರತ ಗೋಟೆಕರ (23) ಎಂಬುವರೆ ಮೃತಪಟ್ಟವರು. ನಿಖಿತಾ ಅವರು ಸೋಮವಾರ ಹೆರಿಗೆಗೆಂದು ಸಿಟಿ ಕ್ಲಿನಿಕ್‌ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ನಂತರ ವಿಪರೀತ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತರ ಸಂಬಂಧಿಕರು ಆರೋಪಿಸಿದರು.

Advertisement

ನಿಖಿತಾಳ ಹೆರಿಗೆ ನಂತರ ತೀವ್ರ ರಕ್ತಸ್ರಾವವಾಗಿತ್ತು. ವೈದ್ಯರ ಸಲಹೆಯಂತೆ ಸುಮಾರು 16 ಬಾಟಲಿ ರಕ್ತ ತಂದು ಕೊಟ್ಟಿದ್ದೆವು. ಆದರೆ, ತಡರಾತ್ರಿ 3:00 ಗಂಟೆ ಸುಮಾರಿಗೆ ಬಾಣಂತಿ ನಿಖೀತಾ ಮೃತಪಟ್ಟಿದ್ದಾಳೆಂದು ಹೇಳಿದರು. ನಮ್ಮ ತೀವ್ರ ಆಕ್ಷೇಪದ ನಂತರ ಇನ್ನು ಜೀವಂತವಾಗಿದ್ದಾಳೆ. ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುವುದಾಗಿ ಹೇಳಿದರಾದರೂ, ಬೆಳಗಿನ ಜಾವ 4:00ಗಂಟೆಗೆ ಮೃತಪಟ್ಟಿದ್ದಾಗಿ ಹೇಳಿದರು. ವೈದ್ಯರ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ ಎಂಬುದು ನಿಖಿತಾ ಕುಟುಂಬಸ್ಥರ ಆರೋಪ. ಮೃತಳ ಪತಿ ಭರತ ಹಾಗೂ ತಂದೆ-ತಾಯಿ, ಸಹೋದರಿ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮನ ಕಲಕುವಂತ್ತಿತ್ತು. ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

ನಿಖಿತಾ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ: ಡಾ|ವಿದ್ಯಾ 
ಬಾಣಂತಿ ಸಾವಿಗೆ ನಾವು ಕಾರಣವಲ್ಲ. ಅವರನ್ನು ಉಳಿಸಿಕೊಳ್ಳಲು ಬಹಳ ಶ್ರಮಿಸಿದೆವು. ಆದರೆ ಫಲಕಾರಿಯಾಗಲಿಲ್ಲ. ನಿಖೀತಾ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲವೆಂದು ಸಿಟಿ ಕ್ಲಿನಿಕ್‌ ಆಸ್ಪತ್ರೆ ವೈದ್ಯೆ ಡಾ| ವಿದ್ಯಾ ಜೋಶಿ ಸ್ಪಷ್ಟಪಡಿಸಿದರು. ಅತಿಯಾದ ರಕ್ತಸ್ರಾವ ಉಂಟಾಗಿ ರಕ್ತದೊತ್ತಡ ಕುಸಿತವಾಯಿತು. ಸುಮಾರು 14 ಬಾಟಲ… ರಕ್ತ ಪೂರೈಸಿದರೂ ಬಿಪಿ ಕ್ಷೀಣಿಸುವುದು ನಿಲ್ಲಲಿಲ್ಲ. ಕೊನೆಗೆ ಗರ್ಭಕೋಶ ತೆಗೆದ ಮೇಲೂ ರಕ್ತಸ್ರಾವ ನಿಲ್ಲುತ್ತದೆ ಎಂದು ಭಾವಿಸಿದೆವು. ಆದರೂ ರಕ್ತಸ್ರಾವ ನಿಲ್ಲಲಿಲ್ಲ. ಬೆಳಿಗ್ಗೆ 9:10 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ನಿಖಿತಾಳಿಗೆ ಹೃದಯ ಸಂಬಂಧಿ ಸೇರಿದಂತೆ ದೈಹಿಕ ಸಮಸ್ಯೆ ಇರಲಿಲ್ಲ. ಸಂಪೂರ್ಣ ಆರೋಗ್ಯವಾಗಿದ್ದರು. ಹೆರಿಗೆಯಾದ ನಂತರ ಬಿಪಿ ಇಳಿತದಿಂದ ಸಮಸ್ಯೆಯಾಗಿದೆ. ಈ ಕುರಿತು ಪ್ರತಿ ಹಂತದಲ್ಲೂ ಚಿಕಿತ್ಸೆಗಳ ಬಗ್ಗೆ ಸಂಬಂಧಿಗಳನ್ನು ಐಸಿಯುಗೆ ಕರೆಯಿಸಿ ಸಂಪೂರ್ಣ ವಿವರ ನೀಡಲಾಗಿತ್ತು. ಪ್ರತಿ ಹಂತದ ಚಿಕಿತ್ಸೆ ವಿಧಾನಗಳ ವಿಡಿಯೋ ರಿಕಾರ್ಡಿಂಗ್‌ ದಾಖಲೆ ನಮ್ಮ ಬಳಿಯಿದೆ. ಅವರ ಒಪ್ಪಿಗೆ ಮೇರೆಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ಇಂಥ ಪ್ರಕರಣಗಳು ಲಕ್ಷಕ್ಕೆ 200 ಜನರಲ್ಲಿ ಕಂಡು ಬರುತ್ತದೆ. ಇವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ನೋವು ನಮಗಿದೆ. ಶವಪರೀಕ್ಷೆಯ ವರದಿ ನಂತರವೇ ಇದೆಲ್ಲ ಸ್ಪಷ್ಟವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next