Advertisement

ಬಜೆಟ್‌ನಲ್ಲಿ ಸುರತ್ಕಲ್‌ ವಲಯಕ್ಕೂ ಸಿಗಲಿ ಆದ್ಯತೆ

11:16 PM Jan 25, 2021 | Team Udayavani |

ಸುರತ್ಕಲ್‌: ಮಂಗಳೂರು ಮಹಾನಗರ ಪಾಲಿಕೆಗೆ ಸುರತ್ಕಲ್‌ ಭಾಗ ಸೇರ್ಪಡೆಯಾಗಿ 25 ವರ್ಷಗಳೇ ಸಂದಿವೆ. ಆದರೆ ಸುರತ್ಕಲ್‌ ಭಾಗಕ್ಕೆ ಪಾಲಿಕೆಯ ಮಲತಾಯಿ ಧೋರಣೆ ಕಂಡು ಬಂದಿದೆ. ಈ ಭಾಗಕ್ಕೆ ಕೇವಲ 22 ವಾರ್ಡ್‌ಗಳು ಬರುತ್ತವೆ. ಉಳಿದ ವಾರ್ಡ್‌ಗಳು ಮಂಗ ಳೂರು ದಕ್ಷಿಣಕ್ಕೆ ಬರುತ್ತಿವೆ ಎನ್ನುವ ನಿಟ್ಟಿನಲ್ಲಿ ಅದೇ ಓಬಿರಾಯನ ಕಾಲದ 60-40ರ ಪ್ರಮಾಣ ದಲ್ಲಿ ಬಜೆಟ್‌ ಹಂಚಿಕೆ ಮಾಡಲಾಗುತ್ತಿದೆ.

Advertisement

ಸುರತ್ಕಲ್‌ ಇದೀಗ ಬೆಳೆಯುತ್ತಿರುವ ನಗರವಾಗಿದ್ದು, ಮಿನಿ ರತ್ನ ಕಂಪೆನಿಗಳಾದ ಎಂಆರ್‌ಪಿಎಲ್‌, ಎಚ್‌ಪಿಸಿಎಲ್‌, ಬೃಹತ್‌ ಕೈಗಾರಿಕೆಗಳು, ಎನ್‌ಐಟಿಕೆ, ಶ್ರೀನಿವಾಸ್‌ ಎಂಜಿನಿಯರಿಂಗ್‌ ಕಾಲೇಜು, ಮೆಡಿಕಲ್‌ ಕಾಲೇಜುಗಳು ಇಲ್ಲಿವೆ. ಇನ್ನು ಕೈಗಾರಿಕ ಪ್ರದೇಶವೂ ಈ ಭಾಗದಲ್ಲಿದೆ. ಜವಾಬ್ದಾರಿಯ ದೃಷ್ಟಿಯಿಂದ 22 ವಾರ್ಡ್‌ಗಳಿಗೆ ಅತೀ ಹೆಚ್ಚು ಮೂಲಸೌಕರ್ಯ ಒದಗಿಸಬೇಕಾದ ಅಗತ್ಯವೂ ಇದೆ. ಸರಕಾರದ ಎಸ್‌ಎಫ್‌ಸಿ, ಕಾರ್ಪೋರೆಟರ್‌ ನಿ ಧಿ, ಶಾಸಕರ ನಿಧಿ  ಸಾಮಾನ್ಯವಾಗಿ ಬರುತ್ತವೆ. ಆದರೆ ಇದೀಗ ಅಪೂರ್ಣವಾಗಿ ಉಳಿದಿರುವ ಕಾಮಗಾರಿ ಗಳಿಗೆ ಬಜೆಟ್‌ ಇಟ್ಟು ಪೂರ್ಣಗೊಳಿಸುವ ಜವಾಬ್ದಾರಿ ಪಾಲಿಕೆ ಮೇಲಿದೆ.

ಒಳಚರಂಡಿ :

ಸುರತ್ಕಲ್‌ ಭಾಗದಲ್ಲಿ ಈ ಹಿಂದಿನ ಒಳಚರಂಡಿ ವ್ಯವಸ್ಥೆ ವೈಫಲ್ಯವನ್ನು ಕಂಡಿದೆ. ಸಾವಿರಾರು ಕುಟುಂಬಗಳು ಸಂಪರ್ಕ ಕಲ್ಪಿಸಿ ಬಳಿಕ ಕಿತ್ತುಹಾಕಲಾಯಿತು. ಇದೀಗ ಅಮೃತ ಯೋಜನೆಯಡಿ ಅಲ್ಪ ಹಣ ಬಿಡುಗಡೆಯಾಗಿದ್ದರೂ ಉಳಿದೆಡೆ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಾಗಬೇಕಿದೆ.

ಅರೆಬರೆ ಮಾರುಕಟ್ಟೆ :

Advertisement

ಕೃಷ್ಣಾಪುರದಲ್ಲಿ 3 ಕೋ. ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿ ಸಿದ್ದು, ಅರೆಬರೆ ಕಾಮಗಾರಿ ಮುಗಿಸಲಾಗಿದೆ. ಇದೀಗ ಕೃಷ್ಣಾಪುರ ಮಾರುಕಟ್ಟೆಯನ್ನು ಪೂರ್ಣಗೊಳಿಸಲು ಮತ್ತೆ 1.5 ಕೋಟಿ ರೂ. ಅಗತ್ಯವಿದೆ. ಬೈಕಂಪಾಡಿಯಲ್ಲಿ ಇಂದಿಗೂ ರಸ್ತೆ ಬದಿ ಹಾಗೂ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಮೀನು, ತರಕಾರಿ ಮಾರಲಾಗುತ್ತಿದೆ. ಇಲ್ಲಿನ ಕೈಗಾರಿಕ  ಪ್ರದೇಶದ ಸಾವಿರಾರು ಕಾರ್ಮಿಕರು  ಕೆಲಸ ಮಾಡುತ್ತಿದ್ದು

ಬೈಕಂಪಾಡಿ ಅತೀ ಹತ್ತಿರದ ಪ್ರದೇಶವಾಗಿದೆ. ಬೈಕಂಪಾಡಿಯಲ್ಲಿ ಮಾರುಕಟ್ಟೆಯಿಲ್ಲ. ಕೂಳೂರು ಬಳಿ ಮಾರುಕಟ್ಟೆ ನಿರ್ಮಾಣಕ್ಕೆ ಜಾಗ ಮೀಸಲಿರಿಸಿದ್ದರೂ ಅನುದಾನ ನೀಡಲಾಗಿಲ್ಲ.

ಬಂದ ಯೋಜನೆ ವಾಪಾಸ್‌? :

ಪಾಲಿಕೆ ಹಾಗೂ ಮುಡಾ ವತಿಯಿಂದ ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ಕೃಷ್ಣಾಪುರ ಅಥವಾ ಹೊಸಬೆಟ್ಟುವಿನಲ್ಲಿ ಈಜುಕೊಳವನ್ನು ನಿರ್ಮಿಸಲು ಉದ್ದೇಶಿ ಸಲಾಗಿತ್ತು. ಜಾಗದ ಕೊರತೆಯ ನೆಪ ವೊಡ್ಡಿ ಮಂಗಳೂರು ಎಮ್ಮೆಕೆರೆಗೆ ಸ್ಥಳಾಂತರಿ ಸಲಾಯಿತು. ಸುಸಜ್ಜಿತ ಪಾರ್ಕ್‌ ನಿರ್ಮಾಣಕ್ಕೆ ಹೊಸಬೆಟ್ಟುವಿನ ರೀಜೆಂಟ್‌ ಬಳಿ ಜಾಗ ಗುರುತಿಸಲಾಗಿದೆ. ಆದರೆ ಇದುವರೆಗೂ ಯೋಜನೆ ಕಾರ್ಯಗತವಾಗಿಲ್ಲ.

ಪಾರ್ಕಿಂಗ್‌ ಅವ್ಯವಸ್ಥೆ :

ಸುರತ್ಕಲ್‌ ಬೆಳೆಯುತ್ತಿರುವ ನಗರ ವಾಗಿದ್ದು, ದಿನಕ್ಕೆ  ನೂರಾರು ದ್ವಿಚಕ್ರ, ಚತುಶ್ಚಕ್ರ ವಾಹನಗಳು ನೋಂದಣಿ ಹೊಂದಿಬರುತ್ತಿವೆ. ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲದೆ ವಾಹನ ಮಾಲಕರು ವಾಹನ ನಿಲ್ಲಿಸಲು ಪರದಾಟ ನಡೆಸುತ್ತಿದ್ದಾರೆ. ಪಾಲಿಕೆ ವ್ಯವಸ್ಥಿತವಾಗಿ ಪಾರ್ಕಿಂಗ್‌ ನಿರ್ಮಾಣಕ್ಕೆ ಇಂಟರ್‌ಲಾಕ್‌ ಅಳವಡಿಕೆ, ಜಾಗ ಸಮತಟ್ಟುಗೊಳಿಸಲು ಅನುದಾನ ಮೀಸಲಿಡುವ ಅಗತ್ಯವಿದೆ.

ಸಮಗ್ರ ಅಭಿವೃದ್ಧಿ ಆದ್ಯತೆಯಾಗಲಿ  :

ಪಾಲಿಕೆಯ ಬಜೆಟ್‌ನಲ್ಲಿ ಮಂಗಳೂರು ಉತ್ತರ ಭಾಗವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯವಸ್ಥಿತವಾದ ಮಾರುಕಟ್ಟೆ ನಿರ್ಮಾಣವಾಗಿಲ್ಲ. ಬೀಚ್‌ ಅಭಿವೃದ್ಧಿಯಾಗಲಿ, ವ್ಯವಸ್ಥಿತ ರೀತಿಯ ಪಾರ್ಕ್‌, ಒಳಾಂಗಣ ಕ್ರೀಡಾಂಗಣ ವಾಗಲಿ, ರಂಗಮಂದಿರವಾಗಲಿ ನಿರ್ಮಾಣ ವಾಗಿಲ್ಲ. ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ, ಒಳಚರಂಡಿ ವ್ಯವಸ್ಥೆ ಮರೀಚಿಕೆಯಾಗಿದೆ ಎಂಬುದು ಸಾರ್ವಜನಿಕರ ಅಳಲು.

ಯಾವುದಕ್ಕೆ ಪ್ರಮುಖ ಆದ್ಯತೆ?:

  • ಜ ಬೈಲಾರೆ ರಾಜಕಾಲುವೆ ಸಂಪೂರ್ಣಕ್ಕೆ ಅಂದಾಜು 26 ಕೋಟಿ ರೂ. ಬೇಕಿದೆ. ಇದರಿಂದ ಹಲವಾರು ಬಡಾವಣೆಗಳು ಮಳೆಗಾಲದಲ್ಲಿ ಮುಳುಗುವುದು ತಪ್ಪುತ್ತದೆ.
  • ಕೃಷ್ಣಾಪುರ ಮಾರುಕಟ್ಟೆಗೆ 1.50 ಕೋಟಿ ರೂ.ಗಳ ಅಗತ್ಯವಿದೆ.
  • ಪಾಲಿಕೆ ವಲಯ ಕಚೇರಿ ಪೂರ್ಣ ಗೊಳ್ಳಲು 3 ಕೋಟಿ ರೂ.ಗಳ ಅನುದಾನ ಬೇಕಿದೆ. ಕೆರೆಗಳ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ.
  • ಸುರತ್ಕಲ್‌ ಜಂಕ್ಷನ್‌ ಅಪಘಾತ ವಲಯವಾಗಿದ್ದು, ಸುಸಜ್ಜಿತ ಸರ್ಕಲ್‌, ಡಿವೈಡರ್‌ ಅಗತ್ಯವಿದೆ.
  • ಸುರತ್ಕಲ್‌ ರೈಲ್ವೇ ಬ್ರಿಡ್ಜ್ ಬಳಿ ಪಾದ ಚಾರಿ ಸೇತುವೆ ನಿರ್ಮಾಣವಾಗಬೇಕಿದೆ.

ಜನರ ಬೇಡಿಕೆಗಳು :

ಸುರತ್ಕಲ್‌ ವಲಯದಲ್ಲಿ ಕೈಗಾರಿಕೆಗಳಿವೆ. ಜನಸಾಂಧ್ರತೆ ಹೆಚ್ಚಿದೆ. ಇಲ್ಲಿಯೂ ಕದ್ರಿ ಮಾದರಿ ಉದ್ಯಾನವನ, ಮೈದಾನ, ಈಜುಕೊಳ, ಟೌನ್‌ಹಾಲ್‌ನಂತಹ ಸಭಾಂಗಣ ನಿರ್ಮಿಸಲು ಪಾಲಿಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟರೆ ಉತ್ತಮ. ಇದರಿಂದ ಮಂಗಳೂರು ನಗರದ  ಮೇಲಿನ ಒತ್ತಡ ಭಾಗಶಃ ಕಡಿಮೆಯಾಗುತ್ತದೆ, ಮಾತ್ರವಲ್ಲ ಮಂಗಳೂರಿನ ಹೊರವಲಯಕ್ಕೆ ಉದ್ಯಮಗಳನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಸ್ಮಾರ್ಟ್‌ ಸಿಟಿ ಅನುದಾನ ಈ ಭಾಗಕ್ಕೂ ನೀಡಿದರೆ ಸುರತ್ಕಲ್‌ ಜಂಕ್ಷನ್‌, ಕೂಳೂರು ಜಂಕ್ಷನ್‌ ಅಪಘಾತವಲಯದಿಂದ ಮುಕ್ತಿ ಮಾಡಲು ಸಾಧ್ಯವಿದೆ. ಹೀಗಾಗಿ ಹೆಚ್ಚುವರಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿ. -ಇಸ್ಮಾಯಿಲ್‌,  ಕೃಷ್ಣಾಪುರ

 

ಸ್ಮಾರ್ಟ್‌ಸಿಟಿ ಯೋಜನೆಯ ಅಡಿಯಲ್ಲಿ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಮಂಗಳೂರು ನಗರವನ್ನೇ ಅಭಿವೃದ್ಧಿ ಪಡಿಸುವ ಜತೆಗೆ ಸುರತ್ಕಲ್‌ ನಗರಕ್ಕೂ ಪ್ರತ್ಯೇಕ ಅನುದಾನ ಒದಗಿಸಿ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ , ಪಾಲಿಕೆಯ ಅವಿಭಾಜ್ಯ ಭಾಗವಾದ ಸುರತ್ಕಲ್‌ ನಗರವನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳು, ಮಂಗಳೂರು ಉತ್ತರ ವಿಧಾನಸಭೆ ಶಾಸಕರು, ಸ್ಥಳೀಯ ಎಲ್ಲ ಕಾರ್ಪೋರೆಟರ್‌ಗಳು ಗಮನ ಹರಿಸಬೇಕು.  -ಗಂಗಾಧರ ಬಂಜನ್‌,   ಕುಳಾಯಿ

ಪಾದಚಾರಿ ಸೇತುವೆ ಅಗತ್ಯ  :

ಸುರತ್ಕಲ್‌ನಲ್ಲಿ ವಾಹನದ ಒತ್ತಡ ದಿನೇ ದಿನೇ ಹೆಚ್ಚುತ್ತಿದೆ. ಹೆದ್ದಾರಿಯಲ್ಲಿ ನಡೆದಾಡುವುದು ಅಪಾಯಕಾರಿಯಾಗಿದ್ದು, ಫುಟ್‌ಪಾತ್‌ ವ್ಯವಸ್ಥೆ ಅತೀ ಅಗತ್ಯವಾಗಿದೆ. ಸುರತ್ಕಲ್‌ ರೈಲ್ವೇ ಬ್ರಿಡ್ಜ್ ಬಳಿ ಪಾದಚಾರಿ ಸೇತುವೆ ಅನಿವಾರ್ಯವಾಗಿದೆ. ಈ ಬಾರಿಯಾದರೂ ಪಾಲಿಕೆ ಬಜೆಟ್‌ನಲ್ಲಿ ಸರತ್ಕಲ್‌ಗೆ ಹೆಚ್ಚು ಅನುದಾನ ಕೊಡಿ. -ಉಮೇಶ್‌ ದೇವಾಡಿಗ,  ಸುರತ್ಕಲ್‌

ಮೂಲ ಸೌಲಭ್ಯಗಳನ್ನು ಕೇವಲ 6-7 ವಾರ್ಡ್‌ಗಳಿಗೆ ಸೀಮಿತಗೊಳಿಸದೆ 60 ವಾರ್ಡ್‌ಗಳನ್ನೂ ಸಮಾನವಾಗಿ ಪರಿಗಣಿಸಬೇಕು. ಸ್ಮಾರ್ಟ್‌ ಸಿಟಿಯ ಫಂಡ್‌ನ‌ಲ್ಲಿ ಪಚ್ಚನಾಡಿಯಲ್ಲಿನ ತ್ಯಾಜ್ಯಕ್ಕೆ ಮುಕ್ತಿ ನೀಡಲು ತ್ಯಾಜ್ಯ ಘಟಕ ಸ್ಥಾಪನೆಗೆ ಒತ್ತು ನೀಡಬೇಕಿತ್ತು. ಈ ಬಾರಿಯ ಬಜೆಟ್‌ನಲ್ಲಿ ಮಂಗಳೂರು ಉತ್ತರ ಭಾಗಕ್ಕೆ ಕನಿಷ್ಠ 25 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಬೇಕು.  -ನವೀನ್‌ ಬೈಕಂಪಾಡಿ

 

ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next