Advertisement

ವಿದ್ಯುತ್‌ ಮಿತ ಬಳಕೆಗೆ ಆದ್ಯತೆ ನೀಡಿ

08:12 AM Jul 27, 2019 | Team Udayavani |

ಹುಬ್ಬಳ್ಳಿ: ಪರಸ್ಪರ ಸಹಕಾರದಿಂದಲೇ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯ ಎಂದು ಹೆಸ್ಕಾಂ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಿರಣಕುಮಾರ ಬಿ. ಹೇಳಿದರು.

Advertisement

ಅಂಚಟಗೇರಿಯಲ್ಲಿ ಹೆಸ್ಕಾಂ ಗ್ರಾಹಕರ ಜಾಗೃತಿ ಸಭೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ವಿದ್ಯುತ್‌ ಎಲ್ಲರಿಗೂ ಬೇಕು. ವಿದ್ಯುತ್‌ ಇಲ್ಲದೆ ಯಾವ ಕೆಲಸವೂ ಇಲ್ಲ ಎನ್ನುವ ಹಂತದಲ್ಲಿ ಇದ್ದೇವೆ. ವಿದ್ಯುತ್‌ ಮಿತಬಳಕೆ ಎಲ್ಲರ ಮೂಲ ಉದ್ದೇಶವಾಗಬೇಕು. ಮಳೆಗಾಲದಲ್ಲಿ ವಿದ್ಯುತ್‌ ಸಮಸ್ಯೆ ಆಗಬಾರದು, ವಿದ್ಯುತ್‌ ಅವಘಡಗಳು ಸಂಭವಿಸಬಾರದು ಎಂದು ಹೆಸ್ಕಾಂ ಸಿಬ್ಬಂದಿ ಹಗಲಿರುಳು ಸೇವೆಯಲ್ಲಿರುತ್ತಾರೆ. ಗ್ರಾಮದಲ್ಲಿ ಅಪಾಯಕಾರಿ ಸ್ಥಳಗಳಿದ್ದರೆ ಇಲಾಖೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತದೆ. ಇಲಾಖೆ ಕಣ್‌ತಪ್ಪಿನಿಂದ ಯಾವುದಾದರು ಸ್ಥಳ ಬಿಟ್ಟು ಹೋಗಿದ್ದರೆ ತಿಳಿಸಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಹೆಸ್ಕಾಂ ಗ್ರಾಹಕರು ತಮ್ಮ ಯಾವುದೇ ಸಮಸ್ಯೆಗಳಿದ್ದರೂ 1912ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಅಲ್ಲಿ 24/7 ಕಾರ್ಯನಿರ್ವಹಣೆ ತಂಡ ಸದಾ ಸಿದ್ಧವಿರುತ್ತದೆ. ಮಳೆಗಾಲದಲ್ಲಿ ಲೈನ್‌ ಫಾಲ್rಗಳು ಕಂಡುಬಂದ ಸ್ಥಳಗಳನ್ನು ಗುರುತಿಸಿ ನಂತರ ಕೆಲಸ ಮಾಡಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳುವ ಗ್ರಾಹಕರು ಸಹಾಯವಾಣಿಗಳಿಗೆ ಸತತ ಕರೆ ಮಾಡಲು ಆರಂಭಿಸುತ್ತಾರೆ. ಇದರಿಂದ ಫಾಲ್r ಇರುವ ಲೈನ್‌ ಪರಿಶೀಲನೆ ನಡೆಸಲು ಸಿಬ್ಬಂದಿಗೆ ಸೂಚನೆ ನೀಡಲು ಅವಕಾಶ ನೀಡದಂತಹ ಸ್ಥಿತಿ ಅನುಭವಿಸುತ್ತೇವೆ. ಆದ್ದರಿಂದ ಗ್ರಾಹಕರು ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದರು.

ವಾಸುದೇವ ಮಾತನಾಡಿ, ಗ್ರಾಮದಲ್ಲಿ ಬರುವ ಕಾರವಾರ ಮುಖ್ಯ ರಸ್ತೆಯಲ್ಲಿ ರಸ್ತೆಗೆ ಅಡ್ಡವಾಗಿ ವಿದ್ಯುತ್‌ ತಂತಿಗಳು ಇವೆ. ರಸ್ತೆಯ ಪಕ್ಕದಲ್ಲಿಯೇ ವಿದ್ಯುತ್‌ ಪರಿವರ್ತಕ(ಟಿಸಿ) ಇದ್ದು, ಅದನ್ನು ಸರಿಪಡಿಸಿ ಎಂದು ಮನವಿ ಮಾಡಿದರು.

ಅಂಚಟಗೇರಿ ಗ್ರಾಪಂ ಅಧ್ಯಕ್ಷ ಬಸವರಾಜ ಬಿಡ್ನಾಳ ಮಾತನಾಡಿದರು. ಗ್ರಾಮದ ಸರಕಾರಿ ಶಾಲೆ ವಿದ್ಯಾರ್ಥಿಗಳಾದ ಉಮಾ ಬಣಕಾರ, ಚೈತ್ರಾ ಕುದರಿ ವಿದ್ಯುತ್‌ ಬಳಕೆ ಕುರಿತು ಭಾಷಣ ಮಾಡಿದರು. ಗ್ರಾಪಂ ಉಪಾಧ್ಯಕ್ಷೆ ನೀಲಮ್ಮ ಗಾಣಿಗೇರ, ಭೀಮಣ್ಣ ವಾಲಿಕಾರ, ತಾಜುದ್ದೀನ್‌ ಬರದೂರ, ಅಮೀರಖಾನ್‌ ಚಂದನಮಟ್ಟಿ, ನೀಲಮ್ಮ ಮತ್ತಿಹಳ್ಳಿ, ಮಲ್ಲಪ್ಪ ಮೊರಬದ, ಬಸಮ್ಮ, ಮಂಜುಳಾ ಮೊದಲಾದವರಿದ್ದರು. ಸರಕಾರಿ ಶಾಲೆ ವಿದ್ಯಾರ್ಥಿಗಳಾದ ಯಶೋಧಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಹೆಸ್ಕಾಂ ಗ್ರಾಮೀಣ ವಿಭಾಗದ ಡಿ.ಜಿ. ಪಾಟೀಲ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next