Advertisement

ಸಭಾಪತಿಯಾಗಿ ಪ್ರತಾಪ್‌ಚಂದ್ರ ಶೆಟ್ಟಿ ಆಯ್ಕೆ

06:00 AM Dec 12, 2018 | Team Udayavani |

ವಿಧಾನ ಪರಿಷತ್‌: ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ವಿಧಾನ ಪರಿಷತ್‌ನ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಜೆಡಿಎಸ್‌ನಿಂದ ಸಭಾಪತಿ ಸ್ಥಾನವನ್ನು ವಶಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಪ್ರತಾಪ್‌ಚಂದ್ರ ಶೆಟ್ಟಿ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
4 ಬಾರಿ ಕುಂದಾಪುರ ಕ್ಷೇತ್ರದ ಶಾಸಕರಾಗಿ, 3 ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಪ್ರತಾಪ್‌ಚಂದ್ರ ಶೆಟ್ಟಿ, ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಹಿರಿಯ ಸದಸ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಹಿರಿತನಕ್ಕೆ ಅವಕಾಶ ದೊರಕಿಸಿಕೊಡಲು ಅಚ್ಚರಿ ಎನ್ನುವಂತೆ ಅವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್‌
ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಮಿತ್ರ ಪಕ್ಷಗಳಲ್ಲಿ ಮೇಲ್ಮನೆ ಸಭಾಪತಿ ಸ್ಥಾನ ತನಗೇ ಬೇಕೆಂದು ಹಠ ಹಿಡಿದಿದ್ದ ಜೆಡಿಎಸ್‌, ಒಂದು ಹಂತದಲ್ಲಿ ಮೃದು ಧೋರಣೆ ತಾಳಿದೆ.

Advertisement

ಸಿದ್ದು ವಿರುದ್ಧದ ಪರಮೇಶ್ವರ್‌ ತಂತ್ರ: ಎಸ್‌.ಆರ್‌.ಪಾಟೀಲ್‌ ಬದಲು ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದ್ದು, ಇದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್‌ ಬಳಸಿದ ತಂತ್ರ
ಎಂದು ವಿಶ್ಲೇಷಿಸಲಾಗುತ್ತಿದೆ. ಎಚ್‌.ಡಿ. ದೇವೇಗೌಡ ಅವರು ತಮ್ಮನ್ನು ಸಭಾಪತಿಯಾಗಿ ಮುಂದುವರಿಯಲು ನಾಮ ಪತ್ರ ಸಲ್ಲಿಸುವಂತೆ ಸೂಚಿಸುತ್ತಾರೆಂಬ ಭರವಸೆಯಲ್ಲಿ ಅವರ ದೂರವಾಣಿ ಕರೆಗೆ ಬಸವರಾಜ ಹೊರಟ್ಟಿ ಕಾದು ಕುಳಿತಿದ್ದರು. ಆದರೆ, ದೇವೇಗೌಡರಿಂದ ಯಾವುದೇ ಕರೆ ಬಾರದ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನದ ಅವಕಾಶ ವಂಚಿತರಾಗುವಂತಾಗಿದೆ. ಜೆಡಿಎಸ್‌ಗೆ ಅವಕಾಶ ನೀಡಬಾರದೆಂದು ಕಾಂಗ್ರೆಸ್‌ನ ಕೆಲ ಸದಸ್ಯರು ಪಕ್ಷದ ನಾಯಕರ ಮೇಲೆ ಒತ್ತಡ
ಹೇರುತ್ತಿದ್ದರು. 39 ಸದಸ್ಯರ ಸಂಖ್ಯೆ ಹೊಂದಿರುವ ಕಾಂಗ್ರೆಸ್‌, 14 ಸದಸ್ಯರನ್ನು ಹೊಂದಿರುವ ಜೆಡಿಎಸ್‌ಗೆ ಅವಕಾಶ ಕಲ್ಪಿಸಿಕೊಡುವುದರಿಂದ ಪಕ್ಷ ಎಲ್ಲ ವಿಷಯದಲ್ಲಿಯೂ ಜೆಡಿಎಸ್‌ ಮುಂ ದೆ ಶರಣಾದಂತೆ ಆಗುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೂ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದು ಎಂದು ಕಾಂಗ್ರೆಸ್‌ ಪಕ್ಷದ ನಾಯಕರ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ಹೊರಟ್ಟಿಗೆ ಮಂತ್ರಿ ಸ್ಥಾನವೂ ಅನುಮಾನ?
ಸಭಾಪತಿ ಸ್ಥಾನದಿಂದ ವಂಚಿತರಾಗಿರುವ ಬಸವರಾಜ ಹೊರಟ್ಟಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುತ್ತಾರೆಂಬ ಭರವಸೆಯೂ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್‌ ಕೋಟಾದಲ್ಲಿ ಖಾಲಿ ಇರುವ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಅಲ್ಪಸಂಖ್ಯಾತರು ಹಾಗೂ ಮತ್ತೂಂದು ಸ್ಥಾನವನ್ನು ದಲಿತ ಕೋಟಾದಡಿ ನೀಡಲು ಜೆಡಿಎಸ್‌ ನಾಯಕರು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹಾಲಿ ಇರುವ ಕೆಲವು ಸಚಿವರನ್ನು ಕೈ ಬಿಟ್ಟರೆ ಮಾತ್ರ ಬಸವರಾಜ ಹೊರಟ್ಟಿಗೆ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಲಿಂಗಾಯತರಿಗೆ ನಿರಾಸೆ
ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಹಾಗೂ ಕಾಂಗ್ರೆಸ್‌ನ ಎಸ್‌.ಆರ್‌.ಪಾಟೀಲ್‌ ಅವರ
ನಡುವೆಯೇ ಪೈಪೋಟಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿ ದ್ದವು. ಸಮ್ಮಿಶ್ರ ಸರ್ಕಾರದಲ್ಲಿ ಇಬ್ಬರಲ್ಲಿ ಯಾರಿಗೆ
ಕೊಟ್ಟರೂ ಸಭಾಪತಿ ಸ್ಥಾನ ಲಿಂಗಾಯತರಿಗೆ ನೀಡಿದಂತಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ,
ಕೊನೇ ಕ್ಷಣದಲ್ಲಿ ಪಕ್ಷದ ನಾಯಕರು ತಮ್ಮ ಪ್ರತಿಷ್ಠೆಗೆ ಮಾಡಿಕೊಂಡಿರುವ ತೀರ್ಮಾನದಿಂದ ಎರಡೂ ಪಕ್ಷಗಳಲ್ಲಿನ ಲಿಂಗಾಯತ ಆಕಾಂಕ್ಷಿಗಳಿಗೆ ನಿರಾಸೆಯಾಗುವಂತಾಗಿದೆ. ಅಲ್ಲದೆ, ಉತ್ತರ ಕರ್ನಾಟಕ ಭಾಗದವರಿಗೆ ಸಭಾಪತಿ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯೂ ಹುಸಿಯಾದಂತಾಗಿದೆ. 

ಡಿಸಿಎಂ ಪರಮೇಶ್ವರ್‌ ತಂತ್ರ ಯಶಸ್ವಿ
ಪಕ್ಷದ ನಾಯಕರ ಒತ್ತಡದಿಂದಾಗಿ, ಹಿರಿಯ ಸದಸ್ಯ ಕೆ.ಸಿ.ಕೊಂಡಯ್ಯ ಅವರಿಂದ ನಾಮಪತ್ರ ಸಲ್ಲಿಸಲು ಎಚ್‌.ಎಂ.ರೇವಣ್ಣ ನೇತೃತ್ವದಲ್ಲಿ ಕೆಲವು ಶಾಸಕರು ಪ್ರಯತ್ನ ನಡೆಸಿದ್ದರೆಂದು ತಿಳಿದು ಬಂದಿದೆ. ಆದರೆ, ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಎಸ್‌.ಆರ್‌.ಪಾಟೀಲ್‌ ಅವರನ್ನು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ನೋಡಿಕೊಳ್ಳಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಸೂಚಿಸಿದ್ದರು. ಅದೇ ರೀತಿ, ದಿನೇಶ್‌ ಗುಂಡೂರಾವ್‌ ಕೂಡ ಎಸ್‌.ಆರ್‌. ಪಾಟೀಲ್‌ ಅವರಿಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದರು ಎಂದು ಹೇಳಲಾಗಿದೆ.
ಈ ಬೆಳವಣಿಗೆಗಳ ನಡುವೆಯೇ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು, ಆಸ್ಕರ್‌ ಫ‌ರ್ನಾಂಡಿಸ್‌ ಹಾಗೂ ಬಿ.ಕೆ.ಹರಿಪ್ರಸಾದ್‌ ಮೂಲಕ ಪ್ರತಾಪ್‌ಚಂದ್ರ ಶೆಟ್ಟಿ ಅವರ ಹೆಸರನ್ನು ಪ್ರಸ್ತಾಪಿಸಿ, ಅವರನ್ನೇ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ನೋಡಿಕೊಳ್ಳುವಲ್ಲಿ
ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಎಸ್‌.ಆರ್‌. ಪಾಟೀಲ್‌ ಅವರನ್ನು ಸಭಾಪತಿಯನ್ನಾಗಿ ಮಾಡಬೇಕೆಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಯಾವುದೇ ರೀತಿಯ ಅಚ್ಚರಿ ಆಯ್ಕೆ ಇಲ್ಲ. ಪ್ರತಾಪ್‌ ಚಂದ್ರ ಶೆಟ್ಟಿ ಅವರು ಹಿರಿಯ ಸದಸ್ಯರಿದ್ದಾರೆ. ಅವರ ಹಿರಿತನವನ್ನು ಗಮನಿಸಿ, ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. 
● ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next