Advertisement

ಪ್ರಸಾದ ಸೇವನೆ ದುರಂತ: ಇಬ್ಬರು ಮಹಿಳೆಯರ ಸಾವು

09:06 AM Jan 27, 2019 | Team Udayavani |

ಚಿಂತಾಮಣಿ: ಭಕ್ತರು ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ಸ್ವೀಕರಿಸಬೇಕಾದರೆ ನೂರು ಬಾರಿ ಯೋಚನೆ ಮಾಡಬೇಕಾದಂತಹ ಸನ್ನಿವೇಶ ಪ್ರಸ್ತುತ ಸಮಾಜದಲ್ಲಿ ಸೃಷ್ಟಿಯಾಗಿರುವುದು ದುರಂತ. ಇತ್ತೀಚಿಗೆ ಗಡಿ ಜಿಲ್ಲೆ ಚಾಮರಾಜ ನಗರದ ಸುಲ್ವಾಡಿ ಗ್ರಾಮದ ದೇವಾಲಯದಲ್ಲಿ ನಡೆದ ಪ್ರಸಾದದಲ್ಲಿ ವಿಷಪ್ರಾಶನ ದುರಂತ ಮರೆಯಾಗುವ ಮುನ್ನವೇ ಚಿಂತಾಮಣಿಯ ಚಿಂತಾಮಣಿ ನಗರದ ನಾರಸಿಂಹಪೇಟೆಯ ಗಂಗಮ್ಮ ದೇವಾಲಯದಲ್ಲಿ ಶನಿವಾರ ಪ್ರಸಾದ ಸೇವಿಸಿ 13 ಮಂದಿ ಅಸ್ವಸ್ಥರಾಗಿ, ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಜರುಗಿದೆ. ಕವಿತಾ, ಸರಸ್ವತಮ್ಮ (56) ಮೃತಪಟ್ಟಿದ್ದಾರೆ.

Advertisement

ತಾಲೂಕಿನಲ್ಲಿ ಪ್ರಸಾದ ಸೇವನೆ ಬಳಿಕ ಮಹಿಳೆ ಮೃತಪಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದರೊಂದಿಗೆ ದೇವಾಲಯಗಳಲ್ಲಿ ನೀಡುವ ಪ್ರಸಾದ ಸೇರಿದಂತೆ ಅಲ್ಲಿನ ಆಹಾರವನ್ನು ತಿನ್ನಲು ಹಿಂದೇಟು ಹಾಕುವಂತೆ ಮಾಡಿದೆ.

ಆಗಿದ್ದೇನು?: ನಗರದ ನಾರಸಿಂಹಪೇಟೆಯ ಗಂಗಭವಾನಿ ದೇವಾಲಯದಲ್ಲಿ ಪ್ರತಿ ಶುಕ್ರವಾರ ದೇವಿಗೆ ವಿಶೇಷ ಪೂಜಾ ಕೈಂಕಾರ್ಯ ನಡೆಯುವ ಹಿನ್ನೆಲೆಯಲ್ಲಿ ನೂರಾರು ಮಂದಿ ಭಕ್ತರು ಆಗಮಿಸುತ್ತಾರೆ. ಕೆಲ ಭಕ್ತರು ಪ್ರಸಾದ ವಿತರಣೆ ಮಾಡುವುದು ವಾಡಿಕೆ.

ಶುಕ್ರವಾರ ರಾತ್ರಿ 8 ಗಂಟೆ ಸಮಯದಲ್ಲಿ ಭಕ್ತರೊಬ್ಬರು ದೇವಾಲಯದ ಆವರಣದಲ್ಲಿ ಪಕ್ಕದ ಮನೆಯ ಲಕ್ಷ್ಮೀ ಎಂಬುವರ ಮನೆ ಕೆಲಸದಾಕೆ ಅಮರಾವತಿ ವಿತರಿಸಿದ ಕೇಸರಿಬಾತ್‌ ಪ್ರಸಾದ ಭಕ್ತರ ಪಾಲಿಗೆ ಮಾತ್ರ ಕಹಿಯಾಗಿದೆ.

ಶ್ರೀರಾಮ ನಗರದ ಒಂದೇ ಕುಟುಂಬದ 7 ಮಂದಿ ಮತ್ತು ಅದೇ ಬಡಾವಣೆಯ ಮತ್ತಿಬ್ಬರು ಅಸ್ವಸ್ಥರಾಗಿ ಕವಿತಾ ಎಂಬ ಮಹಿಳೆ ಮೃತಪಟ್ಟಿದ್ದು ಉಳಿದ 13 ಮಂದಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಾದವನ್ನು ತಾವೇ ಮಾಡಿದ್ದಾಗಿ ಲಕ್ಷ್ಮೀ ಒಪ್ಪಿಕೊಂಡಿದ್ದು, ಆದರೆ ದುರ್ಘ‌ಟನೆ ಹೇಗೆ ಸಂಭವಿಸಿತು ಎಂಬುದು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Advertisement

ಪರಿಹಾರ: ಪ್ರಸಾದ ಸೇವಿಸಿ ಆಸ್ಪತ್ರೆ ಸೇರಿದ್ದ ನಗರದ ನಿವಾಸಿಗಳಿಗೆ ಚಿಕಿತ್ಸೆಗಾಗಿ ತಲಾ 5 ಸಾವಿರ ಹಾಗೂ ಮೃñ‌ಪಟ್ಟ ಕವಿತಾರವರ ಕುಟುಂಬಕ್ಕೆ 25 ಸಾವಿರ ರೂ. ನೀಡಿದ ವಿಧಾನಸಭೆ ಉಪಸಭಾದ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಮುಖ್ಯ ಮಂತ್ರಿಗಳ ಜೊತೆ ಮಾತನಾಡಿ, ಸರ್ಕಾರದಿಂದ ಮೃತರ ಕುಟುಂಬಕ್ಕೆ 5 ಲಕ್ಷ ನೆರವು ಕೊಡಿಸುವ ಭರವಸೆ ನೀಡಿದರು.

ಅಲರ್ಟ್‌ ಆದ ಪೊಲೀಸರು: ಮಹಿಳೆ ಮೃತಪಟ್ಟ ಮತ್ತು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಕಾರ್ಯಪ್ರವೃತ್ತರಾದ ನಗರ ಠಾಣೆ ಪೊಲೀಸರು, ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರನ್ನು ಮತ್ತು ಪ್ರಸಾದ ವಿತರಣೆ ಮಾಡುತ್ತಿದ್ದ ಮಹಿಳೆ ಸೇರಿದಂತೆ ದೇವಾಲಯದ ಆವರಣದಲ್ಲೇ ಹೂವು ಮಾರುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಜಿಲ್ಲಾಧಿಕಾರಿ, ಎಸ್‌ಪಿ ಪರಿಶೀಲನೆ: ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಮತ್ತು ಎಸ್‌ಪಿ ಕಾರ್ತೀಕ್‌ ರೆಡ್ಡಿ ದೇವಾಲಯದ ಬಳಿ ಪರಿಶೀಲನೆ ನಡೆಸಿ ನಂತರ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವವರ ಬಳಿ ಮಾಹಿತಿ ಪಡೆದಿದ್ದಾರೆ.

ಶಾಸಕರಿಂದ ಪರಿಶೀಲನೆ: ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ದುರಂತ ನಡೆದ ದೇವಾಲಯದ ಬಳಿ ತೆರಳಿ ಸ್ಥಳೀಯರಿಂದ ಮಾಹಿತಿ ಪಡೆದು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಘಟನೆಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಿ, ಪ್ರಸಾದಕ್ಕೆ ವಿಷ ಬೆರೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಬ್ಬರು ಮಕ್ಕಳ ಸ್ಥಿತಿ ಗಂಭೀರ
ಕೋಲಾರ:
ಚಿಂತಾಮಣಿ ನಗರದ ಶ್ರೀರಾಮ ನಗರದಲ್ಲಿನ ಗಂಗಮ್ಮ ದೇವಸ್ಥಾನದಲ್ಲಿ ನೀಡಿದ ಪ್ರಸಾದ ಸೇವಿಸಿ ಅಸ್ವಸ್ಥರಾದವರನ್ನು ನಗರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕವಿತಾ (28) ಮೃತ ಪಟ್ಟಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರ ಆರೋಗ್ಯವಿಚಾರಿಸಿದ ಸಂಸದ ಕೆ.ಎಚ್.ಮುನಿಯಪ್ಪ, ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಪ್ರಸಾದ ಸೇವಿಸಿ ಮಹಿಳೆ ಸಾವನ್ನಪ್ಪಿ 13 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆಗೆ ಕಾರಣಕರ್ತ ತಪ್ಪಿತಸ್ಥರನ್ನು ಸೂಕ್ತ ತನಿಖೆ ನಡೆಸಿ ಪತ್ತೆ ಹಚ್ಚುವುದರ ಜೊತೆಗೆ, ಅಸ್ವಸ್ಥರಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಪೊಲೀಸ್‌ ಅಧಿಕಾರಿಗಳು ಹಾಗೂ ವೈದ್ಯರಿಗೆ ಸೂಚಿಸಿದರು. ಕವಿತಾ ಸಾವು: ಕೇಸರಿ ಬಾತ್‌ ಪ್ರಸಾದ ಸೇವಿಸಿ, ಅಸ್ವಸ್ಥಗೊಂಡು ನಗರ ಹೊರವಲಯದ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಕವಿತಾ ಮೃತಪಟ್ಟಿದ್ದು, ಇಬ್ಬರು ಮಕ್ಕಳಾದ ಗಾನವಿ, ಶರಣಿ ಹಾಗೂ ಗಂಗಾಧರ, ರಾಜ, ಸರಸ್ವತಮ್ಮರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಘಟನೆಯ ವಿವರ ನೀಡಿದ ಡಾ.ರಾಜೇಶ್‌: ಜಾಲಪ್ಪ ಆಸ್ಪತ್ರೆಯ ಡಾ.ರಾಜೇಶ್‌ ಮಾತನಾಡಿ, ಮೃತ ಮಹಿಳೆ ಕವಿತಾರನ್ನು ಮೊದಲು ಚಿಂತಾ ಮಣಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಫಲಕಾರಿ ಯಾಗದ ಕಾರಣ ಶನಿವಾರ ಮುಂಜಾನೆ ಇಲ್ಲಿಗೆ ಕರೆತಂದಿದ್ದು, ನಾವು ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ ಎಂದು ಹೇಳಿದರು. ಮಕ್ಕಳಿಗೆ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದು, ಮುಂದಿನ 24 ಗಂಟೆಗಳವರೆಗೂ ಏನೂ ಹೇಳಲು ಸಾಧ್ಯವಿಲ್ಲ. ಈ ನಡುಗೆ ಶನಿವಾರ ಬೆಳಗ್ಗೆ 10.30ಕ್ಕೆ ಮತ್ತೆ ಮೂವರು ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೂ ಚಿಕಿತ್ಸೆ ಮುಂದುವರಿಸಲಾಗಿದೆ ಎಂದರು. ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್‌ರೆಡ್ಡಿ ಮಾತನಾಡಿ, ಪ್ರಸಾದದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅನುಮಾನಾಸ್ಪದವಾಗಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಏಳು ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪ್ರಸಾದ ನೀಡುತ್ತಿದ್ದ ಮಹಿಳೆ, ಪಕ್ಕದಲ್ಲಿ ಹೂ ಮಾರುತ್ತಿದ್ದ ಮಹಿಳೆ, ದೇವಾಲಯದ ಅರ್ಚಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next