ಪ್ರಜ್ವಲ್ ದೇವರಾಜ್ ಈಗ ಫುಲ್ ಬಿಜಿ. ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಜ್ವಲ್ ಒಂದರ ಮೇಲೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ರಾಮ್ನಾರಾಯಣ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ನಾಯಕರಾಗಿದ್ದಾರೆ. ಆ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಚಿತ್ರೀಕರಣವೂ ನಡೆಯುತ್ತಿದೆ.
ಅದರ ಬೆನ್ನಲ್ಲೆ ಪ್ರಜ್ವಲ್ ಮತ್ತೂಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ ಎನ್ನುವುದೇ ಈ ಹೊತ್ತಿನ ವಿಶೇಷ. ಹೌದು, ಪ್ರಜ್ವಲ್ ಹೊಸ ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶಕರು. ಈ ಹಿಂದೆ “ಅರ್ಜುನ’ ಚಿತ್ರದಲ್ಲಿ ಒಂದಾಗಿದ್ದ ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಪಿ.ಸಿ ಶೇಖರ್ ಜೋಡಿ ಈಗ ಮತ್ತೂಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದೆ.
ಹೌದು, ಪ್ರಜ್ವಲ್ ದೇವರಾಜ್ ಮತ್ತು ಪಿ.ಸಿ ಶೇಖರ್ ಕಾಂಬಿನೇಷನ್ನ ಎರಡನೇ ಚಿತ್ರಕ್ಕೆ ತೆರೆಮರೆಯಲ್ಲಿ ಕೆಲಸಗಳು ಶುರುವಾಗಿದ್ದು, ಸದ್ಯ ಈ ಚಿತ್ರದ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ಮುಂಬರುವ ಜುಲೈ 4ರಂದು ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಬರ್ತ್ಡೇ. ಅಂದು ಹೊಸ ಚಿತ್ರದ ಮುಹೂರ್ತ ನೆರವೇರಲಿದೆ.
ಜುಲೈ 6ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಒಂದೇ ಹಂತದಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಯೋಚನೆ ನಿರ್ದೇಶಕರದ್ದು. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಿಸುವ ನಿರ್ಧಾರ ಮಾಡಿದ್ದಾರೆ. ತಮ್ಮ ಹೊಸ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪಿ.ಸಿ ಶೇಖರ್, “ಪ್ರಜ್ವಲ್ ದೇವರಾಜ್ ಅವರೊಂದಿಗೆ ಮತ್ತೂಂದು ಸಿನಿಮಾ ಮಾಡಬೇಕು ಎಂಬ ಆಸೆಯಿತ್ತು.
ಆ ಆಸೆ ಈಗ ಈಡೇರುತ್ತಿದೆ. ಪ್ರಜ್ವಲ್ ಅವರನ್ನು ಇಲ್ಲಿಯವರೆಗೆ ಯಾವ ಚಿತ್ರಗಳಲ್ಲೂ ನೋಡಿರದ ಗೆಟಪ್ ಅನ್ನು ಈ ಚಿತ್ರದಲ್ಲಿ ನೋಡಬಹುದು. ಇದೊಂದು ಮಾಫಿಯಾ, ಅಂಡರ್ವರ್ಲ್ಡ್ ಕಥಾಹಂದರ ಹೊಂದಿರುವ ಗ್ಯಾಂಗ್ಸ್ಟರ್ ಒಬ್ಬನ ಕಥೆ. ಮೊದಲ ಬಾರಿಗೆ ಪ್ರಜ್ವಲ್ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ, ಇಲ್ಲಿ ವೈಲೆನ್ಸ್ ಇಲ್ಲ. ಇಡೀ ಸಿನಿಮಾ ಸೈಲೆನ್ಸ್ ಆಗಿ ಥ್ರಿಲ್ಲಿಂಗ್ ಅನುಭವ ಕೊಡುತ್ತ ಹೋಗುತ್ತದೆ.
ಚಿತ್ರಕ್ಕೆ ಇನ್ನೂ ಟೈಟಲ್ ಅಂತಿಮವಾಗಿಲ್ಲ. ಸದ್ಯಕ್ಕೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಕೆಲ ದಿನಗಳಲ್ಲಿ ಎಲ್ಲವೂ ಫೈನಲ್ ಆಗಲಿದೆ’ ಎನ್ನುತ್ತಾರೆ ಪಿ.ಸಿ.ಶೇಖರ್. ಅಂದಹಾಗೆ, ಚಂದನ ಸಿನಿ ಕ್ರಿಯೇಷನ್ಸ್ (3ಸಿ) ಬ್ಯಾನರ್ ಅಡಿಯಲ್ಲಿ ಚಂದನ ಗೌಡ ಚೊಚ್ಚಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.