Advertisement

ವಿದ್ಯುತ್‌ ಉಪಕೇಂದ್ರ ಕಾಮಗಾರಿ ಶೀಘ್ರ ಪ್ರಾರಂಭ: ಶಾಸಕ ರಾಜೇಗೌಡ

03:02 PM Nov 15, 2021 | Team Udayavani |

ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಜೇನುಗದ್ದೆಯಲ್ಲಿ 66/11 ಕೆ.ವಿ ವಿದ್ಯುತ್‌ ಉಪಕೇಂದ್ರ ನಿರ್ಮಾಣಕ್ಕೆ ಡಿ. 4, 2018ರಲ್ಲಿ ಅನುಮೋದನೆಗೊಂಡಿದ್ದು, ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದು ಇದೀಗ ಪುನರ್‌ ಅನುಮೋದನೆಗೊಂಡಿದ್ದು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಅವರು ಶ್ರೀ ರಂಭಾಪುರಿ ಮಠಕ್ಕೆ ಬಂದಾಗ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದ್ದು ಅನುಮತಿ ನೀಡಿದ ತಕ್ಷಣವೇ ಕಾಮಗಾರಿ ಪ್ರಾರಂಭವಾಗುವುದು. ಈ ಉಪಕೇಂದ್ರ ಸ್ಥಾಪನೆಯಿಂದ ಬಸರವಳ್ಳಿ, ಅರೆನೂರು, ಕಣತಿ, ಐದಳ್ಳಿ, ಮಾಗೋಡು, ಹ್ಯಾರಂಬಿ, ಜೇನುಗದ್ದೆ, ಕಡಬಗೆರೆ, ಬೆಳಸೆ, ಕಡವಂತಿ, ಬಾಸಾಪುರ, ಬೆಳಗೊಳ, ಬೊಗಸೆ, ಗುಡ್ಡೆಕೊಪ್ಪ, ಮಸಿಗದ್ದೆ, ಸಾರಗೋಡು, ಹುಯಿಗೆರೆ, ಉಜ್ಜಯಿನಿ, ಬಿದರೆ ಸೇರಿದಂತೆ 19ಕ್ಕೂ ಹೆಚ್ಚು ಗ್ರಾಮದವರಿಗೆ ಹಾಗೂ ಕಾಫಿ, ಅಡಕೆ ಬೆಳೆಗಾರರ ವಿದ್ಯುತ್‌ ಸಮಸ್ಯೆ ಬಗೆಹರಿಯುತ್ತದೆ. ಜೇನುಗದ್ದೆಯಲ್ಲಿ 2ಎಕರೆ ಪ್ರದೇಶದಲ್ಲಿ ಉಪಕೇಂದ್ರವು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು.

ಮಕ್ಕಿಕೊಪ್ಪ, ಬಸ್ರಿಕಟ್ಟೆ ಹಾಗೂ ಮೇಗೂರು ಸೇರಿದಂತೆ ಹಲವು ಗ್ರಾಮಗಳ ರಸ್ತೆ ಅಭಿವೃದ್ಧಿಗೆ 28 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಪೆಬ್ರವರಿಯಿಂದ ಕಾಮಗಾರಿ ಪ್ರಾರಂಭಿಸಲಾಗಿದೆ. ಮಳೆಯ ಕಾರಣದಿಂದ ಕಾಮಗಾರಿಗೆ ಅಡಚಣೆಯುಂಟಾಗಿದೆ. ಮಾಜಿ ಶಾಸಕರಿಗೆ ಸಮಸ್ಯೆಯ ಅರಿವಿದ್ದರೂ ಸಹ ಕಳಪೆ ಕಾಮಗಾರಿ ಎಂದು ಪ್ರತಿಭಟನೆ ಮಾಡಿರುವುದು ಸರಿಯಲ್ಲ. ಮಾಜಿ ಶಾಸಕರ ಅವ ಧಿಯಲ್ಲಿ ನಡೆದ ವಿರಾಜಪೇಟೆ- ಬೈಂದೂರು ರಾಜ್ಯ ಹೆದ್ದಾರಿಯ ಬಾಳೆಹೊನ್ನೂರು ಹಾಗೂ ಜಯಪುರದಲ್ಲಿ ಕಾಂಕ್ರೀಟ್‌ ಕಾಮಗಾರಿ ಕಳಪೆಯಾಗಿದ್ದನ್ನು ಅವಲೋಕನ ಮಾಡಿಕೊಳ್ಳಲಿ ಎಂದರು.

ಬಾಳೆಹೊನ್ನೂರು ಭದಾನದಿ ಸೇತುವೆ ಕಾಮಗಾರಿ ಅನುದಾನವಿಲ್ಲದೆ ಸ್ಥಗಿತಗೊಂಡಿದೆ. ಜಿಲ್ಲಾದ್ಯಂತ ಕಾಮಗಾರಿ ನಡೆಯುತ್ತಿಲ್ಲ. ಗ್ರಾಪಂ ಕ್ರೋಢೀಕರಿಸಿದ ಆದಾಯದ ಮೇಲೆ ಸರಕಾರದ ಕಣ್ಣು ಬಿದ್ದಿದ್ದು, ಪಂಚಾಯ್ತಿ ಆದಾಯವನ್ನು ಕಸಿದುಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಜಿ.ಎಂ. ನಟರಾಜ್‌, ಬಾಳೆಹೊನ್ನೂರು ಹೋಬಳಿ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಹನೀಫ್‌, ವಕ್ತಾರ ಹಿರಿಯಣ್ಣ, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್‌. ಜಯಪ್ರಕಾಶ್‌, ಬಿ. ಕಣಬೂರು ಗ್ರಾಪಂ ಉಪಾಧ್ಯಕ್ಷ ಎಂ.ಜೆ. ಮಹೇಶ್‌ ಆಚಾರ್ಯ, ಬಿ.ಕೆ. ಮಧುಸೂಧನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next