Advertisement

ವಿದ್ಯುತ್‌ ಸಮಸ್ಯೆಗಳಿಂದ ಬಸವಳಿದಿದೆ ಸುಳ್ಯ ತಾಲೂಕು

10:23 PM Feb 12, 2021 | Team Udayavani |

ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಜನರಿಗೆ ವಿದ್ಯುತ್‌ ಒಂದಿಲ್ಲೊಂದು ರೀತಿಯಲ್ಲಿ ಕೈಕೊಟ್ಟು ಸಮಸ್ಯೆ ಉಂಟು ಮಾಡುತ್ತಿದೆ. ಬಹುಪಾಲು ಕೃಷಿಯನ್ನೇ ನೆಚ್ಚಿಕೊಂಡ ಜನರಿಗೆ ಆಗಾಗ ಕೈ ಕೊಡುತ್ತಿರುವ ವಿದ್ಯುತ್‌ ತಲೆನೋವಾಗಿ ಪರಿಣಮಿಸಿದೆ. ಲೋ ವೋಲ್ಟೇಜ್‌, ಅಸಮರ್ಪಕ ನಿರ್ವಹಣೆ ಹೀಗೆ ನಾನಾ ಸಮಸ್ಯೆಗಳಿಗಾಗಿ ಮೆಸ್ಕಾಂಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.

Advertisement

ತಾಲೂಕಿನಾದ್ಯಂತ ಅರಣ್ಯ ಹಾಗೂ ವಾಣಿಜ್ಯ ಕೃಷಿ ಪರಿಸರವೇ ಹೆಚ್ಚಾಗಿ ರುವುದರಿಂದ ವಿದ್ಯುತ್‌ ತಂತಿಗಳು ಆಕಸ್ಮಿಕವಾಗಿ ಮರಗಿಡಗಳಿಗೆ ತಾಗಿ ಶಾರ್ಟ್‌ ಆಗಿ ಅಪಾಯ ಸಂಭವಿಸುತ್ತಿರುವುದರಿಂದ ಇದರ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ. ಪ್ರತೀ ವರ್ಷ ಸ್ಥಳಿಯರೇ ಶ್ರಮದಾನದ ಮೂಲಕ ತಂತಿಗೆ ತಾಗುವವ ಗೆಲ್ಲುಗಳನ್ನು ಕಡಿದು ಸಂಭವನೀಯ ಅಪಾಯವನ್ನು ತಡೆಯುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ದೀರ್ಘ‌ಕಾಲದ ಪರಿಹಾರ ಲಭಿಸದೆ ವಿದ್ಯುತ್‌ ಪದೇ ಪದೇ ಕೈಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿತರಣೆಯಲ್ಲಿ ಲೋಪ :

ಮಳೆಗಾಲದಲ್ಲಿ ಮಳೆಯ ಜತೆಗೆ ವಿದ್ಯುತ್‌ ವ್ಯತ್ಯಯವೂ ನಿವಾಸಿಗಳನ್ನು ಕತ್ತಲೆಯಲ್ಲೇ ದಿನ ಕಳೆಯುವಂತೆ ಮಾಡುತ್ತದೆ. ಬೇಸಗೆ ಕಾಲದಲ್ಲಿ ವಿದ್ಯುತ್‌ ತಂತಿಗಳು ಜೋತು ಬೀಳುತ್ತಿರುವುದರಿಂದ ಅವು ಒಂದಕ್ಕೊಂದು ತಾಗಿ ವಿದ್ಯುತ್‌ ಅಸಮರ್ಪಕ ವಿತರಣೆಗೆ ಕಾರಣವಾಗಿದೆ. ಉಬರಡ್ಕ ಮಿತ್ತೂರು, ದುಗಲಡ್ಕ, ನೆಲ್ಲೂರು ಕೆಮ್ರಾಜೆ, ಗುತ್ತಿಗಾರು, ಕಲ್ಮಡ್ಕ, ಪಂಜ, ಅರಂತೋಡು, ಕೊಲ್ಲಮೊಗ್ರ, ಹರಿಹರ ಪಲ್ಲತ್ತಡ್ಕ ಹಾಗೂ ಇತರ ಒಳ ಗ್ರಾಮಗಳಲ್ಲಿ ಇಂಥ ಅಪಾಯಕಾರಿ ಸನ್ನಿವೇಶಗಳು ಹೆಚ್ಚಾಗಿ ಕಾಣಿಸುತ್ತಿರುವುದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಇದರ ಕುರಿತು ಕ್ರಮ ಕೈಗೊಳ್ಳಬೇಕಿದೆ.

ಸುರಕ್ಷಿತ ಪೈಪ್‌ ಅಳವಡಿಸಿ :

Advertisement

ಇತ್ತೀಚೆಗೆ ವಿದ್ಯುತ್‌ ತಂತಿ ಹಾದು ಹೋಗುವ ಪ್ರದೇಶಗಳಲ್ಲಿ ಅಡಿಕೆ, ಕಾಳುಮೆಣಸು ತೆಗೆಯುವ ಸಂದರ್ಭ ಅಲ್ಯುಮೀನಿಯಂ ಏಣಿಗಳು ತಂತಿಗೆ ಸಿಲುಕಿ ಸಾವನ್ನಪ್ಪಿದ ಹಲವು ಪ್ರಕರಣಗಳು ನಮ್ಮ ಕಣ್ಣ ಮುಂದೆ ಜೀವಂತವಾಗಿರುವುದರಿಂದ ವಾಣಿಜ್ಯ ಕೃಷಿ ಜಾಗದಲ್ಲಿ ಹಾದು ಹೋಗುವ ವಿದ್ಯುತ್‌ ತಂತಿಗಳಿಗೆ ಕಡ್ಡಾಯವಾಗಿ ಸುರಕ್ಷಿತ ಪೈಪ್‌ಗ್ಳನ್ನು ಅಳವಡಿಸಬೇಕು ಎಂಬ ನಿಯಮ ಜಾರಿಗೊಳಿಸಬೇಕಾಗಿದೆ.ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುವ ತಂತಿಗಳನ್ನು ಆಯಾ ಮೆಸ್ಕಾಂ ಸಿಬಂದಿ ಪರಿಶೀಲಿಸಿ ಅದನ್ನು ಸರಿಪಡಿಸುವ ಕಾರ್ಯ ಸಮರ್ಪಕವಾಗಿ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿದ್ಯುತ್‌ ಜತೆ ಕಾಡು ಪ್ರಾಣಿಗಳ ಕಾಟ :

ಏಕ ಕಾಲದಲ್ಲಿ ಎಲ್ಲರೂ ಪಂಪ್‌ ಆನ್‌ ಮಾಡುತ್ತಿರುವುದರಿಂದ ಲೋ ವೋಲ್ಟೆàಜ್‌ ಸಮಸ್ಯೆ ಕಾಡುತ್ತಿದೆ. ಪದೇ ಪದೇ ಪಂಪ್‌ ನಿಲ್ಲುವುದರಿಂದ ರೈತರು ಇತರ ಕೆಲಸಗಳನ್ನು ಬದಿಗಿಟ್ಟು ಪಂಪ್‌ ಸ್ಟಾರ್ಟ್‌ ಮಾಡುವತ್ತಲೇ ಗಮನಹರಿಸಬೇಕಾಗಿದೆ. ರಾತ್ರಿಹೊತ್ತು ವಿದ್ಯುತ್‌ ವ್ಯತ್ಯಯವಾಗುತ್ತಿರುವುದು ರೈತರ ನಿದ್ದೆ ಕೆಡಿಸಿದೆ. ಹಲವು ಕಡೆಗಳಲ್ಲಿ ಕೃಷಿಕರ ಪಂಪ್‌ಸೆಟ್‌ಗಳು ತೋಟದ ಒಳಗಿರುವುದರಿಂದ ಆನೆ, ಚಿರತೆ, ಕಾಡುಕೋಣ, ಹಂದಿಗಳ ಭಯವೂ ರೈತರನ್ನು ಕಾಡುತ್ತಿದೆ. ಹಾಗಾಗಿ ಮೆಸ್ಕಾಂ ಇಲಾಖೆ ಲೋ-ವೋಲ್ಟೇಜ್ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ನೀರು ಹಾಯಿಸಲು ಸರಿಯಾದ ವೇಳಾಪಟ್ಟಿಯನ್ನು ನಿಗದಿಪಡಿಸಬೇಕು ಎಂಬುದು ತಾಲೂಕಿನ ಪ್ರತಿಯೊಬ್ಬ ರೈತನ ಒಕ್ಕೊರಲ ಆಗ್ರಹವಾಗಿದೆ.

ಕಡಿಮೆ ಗುಣಮಟ್ಟದ 2 ಸ್ಟಾರ್‌ ಪಂಪ್‌ಗಳನ್ನು ರೈತರು ಉಪಯೋಗಿಸುತ್ತಿರುವುದು ವಿದ್ಯುತ್‌ ಹೆಚ್ಚು ಪೋಲಾಗುತ್ತಿರಲು ಕಾರಣ. ಪ್ರತೀ ಪಂಪ್‌ಸೆಟ್‌ ಗಳಗೂ ಕೆಪಾಸಿಟರ್‌ ಅಳವಡಿಸಿದರೆ ಈ ರೀತಿಯ ಸಮಸ್ಯೆಗಳು ಬರುವುದಿಲ್ಲ. ಕೆಪಾಸಿಟರ್‌ ಅಳವಡಿಸದೇ ಇರುವುದರಿಂದ ಹತ್ತಿರದ ಟ್ರಾನ್ಸ್‌ಫಾರ್ಮರ್‌ ಗಳು ಹಾಳಾಗುತ್ತಿವೆ. ಈ ಬಗ್ಗೆ ರೈತರು ಮುಂಜಾಗ್ರತೆ ವಹಿಸಬೇಕು. ಈಗ ಮಾಡಾವಿಲ್ಲಿ ಉಪ ಕೇಂದ್ರವಾಗಿರುವುದರಿಂದ 33 ಕೆ.ವಿ ಹೆಚ್ಚುವರಿ ವಿದ್ಯುತ್‌ ಸರಬರಾಜು ಆಗುತ್ತಿದೆ. ಸದ್ಯ 110 ಕೆ.ವಿ ಘಟಕದ ಯೋಜನೆಯಿದ್ದರೂ ಜಾರಿಯಾಗುವವರೆಗೆ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿದ್ದೇವೆ. ಹರೀಶ್‌ ನಾಯ್ಕ, ಮೆಸ್ಕಾಂ ಸುಳ್ಯ ಘಟಕದ ಅಧಿಕಾರಿ

ಲೋ-ವೋಲ್ಟೇಜ್‌ ನಿಂದಾಗಿ ಕೃಷಿಗೆ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಹಲವು ಬಾರಿ ಪಂಪ್‌ ಆನ್‌-ಆಫ್‌ ಮಾಡಿದರೆ ಪಂಪ್‌ ಹಾಳಾಗುತ್ತದೆ. ಈ ಬಗ್ಗೆ ಮೆಸ್ಕಾಂನವರು ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ಗೋಪಾಲಕೃಷ್ಣ ಭಟ್‌, ಕೃಷಿಕರು, ಉಬರಡ್ಕ

 

 -ಸುದೀಪ್‌ ರಾಜ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next