Advertisement

ಪಾಸಿಟಿವ್‌ನಿಂದ ನೆಗೆಟಿವ್‌ನತ್ತ …

03:23 PM Mar 09, 2018 | |

“ಇದೊಂದು ಮಾತು ಕೇಳ್ಳೋಕೆ 10 ವರ್ಷ ಕಾದುಬಿಟ್ಟೆ …’ ಅಷ್ಟರಲ್ಲಿ ತುಂಬಾ ಎಕ್ಸೈಟ್‌ ಆಗಿ ಮಾತನಾಡಿದ್ದ ಧನಂಜಯ್‌ ಕಂಠ ಸ್ವಲ್ಪ ಗದ್ಗದಿತವಾಗಿತ್ತು. ಕೆಲವು ಕ್ಷಣಗಳ ಮೌನದ ನಂತರ, “ನಟ ಆಗಬೇಕು ಅಂತ ಬೆಂಗಳೂರಿಗೆ ಬಂದೆ. ಒಂದು ದಶಕದ ಜರ್ನಿ ಇದು. ಹಲವು ಚಿತ್ರಗಳಲ್ಲಿ ನಟಿಸಿದೆ. ಯಾವೊಂದು ಚಿತ್ರದಲ್ಲೂ ಇಂಥದ್ದೊಂದು ಫೀಡ್‌ಬ್ಯಾಕ್‌ ಬಂದಿರಲಿಲ್ಲ. ಸಿಕ್ಕವರೆಲ್ಲಾ ಸೂಪರ್‌ ಆ್ಯಕ್ಟಿಂಗ ಗುರು ಅಂತಿದ್ದಾರೆ. ಒಬ್ಬ ನಟನಿಗೆ ತೃಪ್ತಿ ಕೊಡುವುದೇ ಇಂತಹ ಮಾತುಗಳು. ಇದಕ್ಕಿಂತ ಇನ್ನೇನು ಕೇಳಲಿ’ ಎಂದು ಪ್ರಶ್ನಿಸುತ್ತಾರೆ ಧನಂಜಯ್‌.

Advertisement

ಒಬ್ಬ ನಟ ನೆಗೆಟಿವ್‌ ಪಾತ್ರಗಳನ್ನು ಮಾಡಿಕೊಂಡು ಬಂದು, ಹೀರೋ ಆದ ಸಾಕಷ್ಟು ಉದಾಹರಣೆಗಳಿವೆ. ಆದರೆ, ಒಬ್ಬ ಹೀರೋ, ನೆಗೆಟಿವ್‌ ಪಾತ್ರಗಳನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಧನಂಜಯ್‌ ಈಗಾಗಲೇ ಏಳೆಂಟು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದವವರು. ಅಂಥವರು ಒಂದು ದಿನ ಡಾಲಿಯಂತಹ ನೆಗೆಟಿವ್‌ ಪಾತ್ರವನ್ನು ಒಪ್ಪಿಕೊಳ್ಳುವುದಕ್ಕೆ ನಿಒಕ್ಕೂ ಧೈರ್ಯ ಬೇಕು. ಈ ಧೈರ್ಯ ಹೇಗೆ ಬಂತು ಮತ್ತು ಯಾಕೆ ಆ ಪಾತ್ರ ಮಾಡಬೇಕೆಂದೆನಿಸಿತು ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ಅವರ ಉತ್ತರ ಹೀಗಿದೆ.

“ಅಷ್ಟರಲ್ಲಾಗಲೇ ನನ್ನ ಕಾಲ್ಗುಣ ಸರಿ ಇಲ್ಲ, ನನ್ನ ಹಾಕ್ಕೊಂಡು ಸಿನಿಮಾ ಮಾಡಿದರೆ ಓಡಲ್ಲ ಅಂತ ಸುದ್ದಿ ಹಬ್ಬಿಸಿಬಿಟ್ಟಿದ್ದರು. ಬಹಳ ಬೇಸರವಾಗಿಬಿಟ್ಟಿತ್ತು. ಕೆಲವರು ಕಥೆಗಳನ್ನು ಹೇಳ್ಳೋಕೆ ಬಂದರೂ, ನಾನು ಕಥೆ ಕೇಳುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಓದು, ಜಿಮ್ಮು ಅಂತ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳೋಕೆ ಪ್ರಯತ್ನಿಸುತ್ತಿದ್ದೆ. ಆಗ ಒಮ್ಮೆ ಸೂರಿ ಜಿಮ್‌ನಲ್ಲಿ ಸಿಕ್ಕರು. ಅದಕ್ಕಿಂತ ಮುಂಚೆಯೂ ಅವರೊಮ್ಮೆ ಸಿಕ್ಕಿ, “ನಿನ್ನ ನೋಡ್ತಿದ್ರೆ ಪಾತ್ರ ಬರೀಬೇಕು ಅನಿಸುತ್ತೆ’ ಅಂತ ಹೇಳಿದ್ದರು. ಅವತ್ತು ನನ್ನ ನೋಡಿ ಏನನ್ನಿಸಿತೋ ಗೊತ್ತಿಲ್ಲ. “ಒಂದು ನೆಗೆಟಿವ್‌ ರೋಲ್‌ ಇದೆ ಮಾಡ್ತೀಯ’ ಎಂದರು.

ಶಿವರಾಜಕುಮಾರ್‌ ಎದರು ಪಾತ್ರ ಎನ್ನುತ್ತಿದ್ದಂತೆ, ತಕ್ಷಣ ಎಸ್‌ ಅಂದೆ. ನನಗೂ ಬೇರೆ ಏನಾದರೂ ಮಾಡಬೇಕು ಅನಿಸುತಿತ್ತು. ಹಾಗಾಗಿ ಒಪ್ಪಿಕೊಂಡೆ. ಅವರೇ ಶಿವಣ್ಣನ್ನ ಕೇಳಿ ಹೇಳ್ತೀನಿ ಎಂದರು. ಕೆಲವು ದಿನದ ನಂತರ ಎಲ್ಲವೂ ಓಕೆ ಆಯ್ತು. ಓಕೆ ಆಗುತ್ತಿದ್ದಂತೆಯೇ, ಮೊದಲು ಗಡ್ಡ-ಮೀಸೆ ತೆಗೆಯುವುದಕ್ಕೆ ಹೇಳಿದರು. “ಅದೇ ನಿನ್ನ ಫೀಚರ್ಗೆ ಅಡ್ಡ ಬರುತ್ತಿದೆ’ ಅಂತಲೂ ಸೂರಿ ಹೇಳಿದರು. ಲುಕ್‌ ಬದಲಾಯಿಸಿದೆ. ದೇಹವನ್ನು ಇನ್ನಷ್ಟು ಫಿಟ್‌ ಮಾಡಿಕೊಂಡೆ. ಇದೇ ನನ್ನ ಕೊನೆಯ ಚಿತ್ರ ಅನ್ನೋ ಲೆವೆಲ್‌ಗೆ ಕೆಲಸ ಮಾಡಿದೆ …’ ಬಹಳ ಎಕ್ಸೈಟ್‌ ಆಗಿ ಹೇಳುತ್ತಾ ಹೋದರು ಧನಂಜಯ್‌.

“ಅಷ್ಟು ದಿನಗಳ ಟೀಕೆಗಳಿಗೆ ಉತ್ತರ ಕೊಡಬೇಕಿತ್ತು. ಭವಿಷ್ಯ ಇಲ್ಲ ಅನ್ನೋ ಮಾತಿಗೆ ಕೆಲಸದಿಂದಲೇ ಪ್ರೂವ್‌ ಮಾಡಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಚಿತ್ರ ಗೆಲ್ಲೋದಕ್ಕೆ ಹೀರೋನ ಕಾಲ್ಗುಣಕ್ಕಿಂತ ಪಾತ್ರ, ಕಥೆ ಮತ್ತು ತಂಡ ಎಂಬುದನ್ನು ತೋರಿಸಬೇಕಿತ್ತು. ಒಬ್ಬರಿಂದ ಚಿತ್ರ ಗೆಲ್ಲುವುದಿಲ್ಲ ಅಥವಾ ಸೋಲುವುದಿಲ್ಲ. ಒಂದು ಚಿತ್ರ ಗೆಲ್ಲಲು ಅಥವಾ ಸೋಲಲು ಸಾವಿರ ಕಾರಣಗಳಿರುತ್ತವೆ. ಬರೀ ಒಬ್ಬ ನಟ ಅಷ್ಟೇ ಕಾರಣಾಗಿರುವುದಿಲ್ಲ. ಇಡೀ ತಂಡದವರು ಒಬ್ಬ ನಟನನ್ನ ಮೇಲೆತ್ತುತ್ತಾರೆ. ಅವರೆಲ್ಲರೂ ಮೇಲೆತ್ತಿರುವುದರಿಂದ ಡಾಲಿ ಪಾತ್ರದ ಬಗ್ಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಅದು ಒಂದು ತಂಡದ ತಾಖತ್ತು. ಇವತ್ತು ಇಡೀ ತಂಡದ ಕೆಲಸದಿಂದ “ಟಗರು’ ಗೆದ್ದಿದೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಧನಂಜಯ್‌. ಸರಿ, ಮುಂದೇನು? ಇನ್ನು ಅವರು ಹೀರೋ ಪಾತ್ರಗಳಲ್ಲಿ ಮುಂದುವರೆಯುತ್ತಾರಾ ಅಥವಾ ನೆಗೆಟಿವ್‌ ಪಾತ್ರಗಳಿಗೆ ಸೀಮಿತವಾಗುತ್ತಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, “ನನಗೂ ಗೊತ್ತಿಲ್ಲ’ ಎಂದು ನಗುತ್ತಾರೆ ಧನಂಜಯ್‌. “ನಿಜ ಹೇಳಬೇಕೆಂದರೆ, ವಾಟ್‌ ನೆಕ್ಸ್ಟ್ ಅಂತ ನನಗೂ ಗೊತ್ತಿಲ್ಲ. “ಟಗರು’ ಚಿತ್ರ ಒಂದು ಜಾಗದಲ್ಲಿ ತಂದು ಬಿಟ್ಟಿದೆ. ಮುಂದೆ ಹೀರೋ ಪಾತ್ರಗಳನ್ನ ಮಾಡಬೇಕಾ ಅಥವಾ ನೆಗೆಟಿವ್‌ ಪಾತ್ರಗಳನ್ನು ಮಾಡಬೇಕಾ ಅಂತ ಗೊತ್ತಾಗುತ್ತಿಲ್ಲ.

ಆ ಬಗ್ಗೆ ಯೋಚಿಸಿಯೂ ಇಲ್ಲ. ಒಂದಂತು ಅಂದುಕೊಂಡಿದ್ದೇನೆ. ಪಾಸಿಟಿವೊ ಅಥವಾ ನೆಗೆಟಿವೊ ಅಂತ ಯೋಚಿಸಲ್ಲ. ಒಳ್ಳೆಯ ಪಾತ್ರ ಮತ್ತು ತಂಡ ಬಂದರೆ ಯಾವುದಾದರೂ ಖಂಡಿತಾ ಒಪ್ಪಿಕೊಳ್ಳುತ್ತೇನೆ. “ಯಜಮಾನ’ ಸಹ ನಾನು ಹಾಗೆಯೇ ಒಪ್ಪಿಕೊಂಡ ಚಿತ್ರ’ ಎನ್ನುವ ಧನಂಜಯ್‌, “ಯಜಮಾನ’ ಚಿತ್ರದಲ್ಲಿ ದರ್ಶನ್‌ ಅವರ ವಿರೋಧಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.”ಇದುವರೆಗೂ ಡಾಲಿ ಪಾತ್ರ ಒಂದು ಸವಾಲಾಗಿತ್ತು. ಅದನ್ನು ಬ್ರೇಕ್‌ ಮಾಡಿ ಇನ್ನೇನೋ ಮಾಡಬೇಕು. ಹಾಗೆ ಮಾಡಬೇಕೆಂದರೆ, ಇನ್ನೊಂದು ಪಾತ್ರ ಹುಚ್ಚು ಹತ್ತಿಸಬೇಕು. ಆ ಪಾತ್ರ ಯಾರ ಕಡೆಯಿಂದ ಬರುತ್ತದೆ ಎಂಬ ಕುತೂಹಲ ನನಗೂ ಇದೆ. ಆ ಕುತೂಹಲದಿಂದಲೇ ಕಾಯುತ್ತಿದ್ದೇನೆ’ ಎನ್ನುತ್ತಾರೆ ಧನಂಜಯ್‌.

ಅವರ ಲೆವೆಲ್‌ಗೆ ಹೋಗೋದು ಬಹಳ ಕಷ್ಟ: ಸೂರಿ ಬಾಯಿಯಿಂದ ಸೂಪರ್‌ ಅನ್ನೋ ಪದ ಕೇಳದಿದ್ದರೆ ಸಮಾಧಾನವೇ ಆಗುತ್ತಿರಲಿಲ್ಲ ಎನ್ನುವ ಧನಂಜಯ್‌. “ಸೂರಿ ಬಾಯಲ್ಲಿ ಸೂಪರ್‌ ಎನ್ನುವ ಮಾತು ಕೇಳ್ಳೋದಕ್ಕೇ ಏನೋ ಸಂತೋಷ. ಅವರು ಒಂದೊಂದು ಬಾರಿ ಸೂಪರ್‌ ಅನ್ನುವಾಗಲೂ, ಇನ್ನೂ ಏನನ್ನೋ ಮಾಡಬೇಕು ಅಂತ ಅನಿಸುತಿತ್ತು. ಕೊನೆಕೊನೆಗೆ ಸೂರಿ ಬಾಯಿಂದ “ಸೂಪರ್‌’ ಅಂತ ಕೇಳದಿದ್ದರೆ ಸಮಾಧಾನ ಆಗುತ್ತಿರಲಿಲ್ಲ. ಹಾಗಾಗಿ ಇನ್ನಷ್ಟು ಎಫ‌ರ್ಟ್‌ ಹಾಕಿದೆ. ಇನ್ನು ಶಿವರಾಜಕುಮಾರ್‌ ಅಂತೂ ದೇವರು ಅನಿಸಿಬಿಟ್ಟರು. ಅವರೆದುರು ಎಲ್ಲದರಲ್ಲೂ ನಾವು ಚಿಕ್ಕವರು.

ವಯಸ್ಸು, ಅನುಭವ, ಯಶಸ್ಸು, ಮೆಚ್ಯುರಿಟಿ … ಯಾವುದರಲ್ಲೂ ಅವರ ಲೆವೆಲ್‌ಗೆ ಹೋಗೋದು ಬಹಳ ಕಷ್ಟ. ಅಂಥವರು ನಮ್ಮನ್ನ ಬಹಳ ಫ್ರೆಂಡ್ಲಿಯಾಗಿ ನೋಡಿದರು. ಚಿತ್ರದಲ್ಲಿ ಅವರ ಪಾತ್ರಕ್ಕೆ ಬಯ್ಯುವ ದೃಶ್ಯಗಳಿವೆ. ಅದರಿಂದ ಅವರ ಅಭಿಮಾನಿಗಳಿಗೆ ಬೇಸರವಾಯ್ತು ಅಂತ ಕೇಳಿದೆ. ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಒಬ್ಬ ರೌಡಿ ಪಾತ್ರವಾಗಿ ಹಾಗೆ ಮಾತಾಡಬೇಕಾಯಿತು. ಇದಕ್ಕೆ ಶಿವರಾಜಕುಮಾರ್‌ ಏನನ್ನುತ್ತಾರೋ ಎಂಬ ಭಯವಿತ್ತು.  ಪಾತ್ರದ ಬಾಯಲ್ಲಿ ಅಂತಹ ಮಾತುಗಳು ಸಹಜ, ಅದರಿಂದ ಏನೂ ಬೇಸರವಿಲ್ಲ ಎಂದು ಅವರೇ ಹೇಳಿದರು. ಅವರ ಮೆಚ್ಯುರಿಟಿ ಲೆವೆಲ್‌ ನಿಜಕ್ಕೂ ದೊಡ್ಡದು’ ಎನ್ನುತ್ತಾರೆ ಧನಂಜಯ್‌.

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next