Advertisement

ಆಧ್ಯಾತ್ಮಿಕದಿಂದ ಧನಾತ್ಮಕ ಮನೋಬಲ ವೃದ್ಧಿ: ಪ್ರದೀಪ್‌ ಸಿ. ಶೆಟ್ಟಿ

05:53 PM Oct 09, 2019 | Suhan S |

ಮುಂಬಯಿ, ಅ. 8: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಬೊರಿವಲಿ ಪಶ್ಚಿಮದ ವಜೀರ್‌ ನಾಕಾ, ಜೈರಾಜ್‌ ನಗರದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್‌ ಇದರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ 30ನೇ ವಾರ್ಷಿಕ ಶರನ್ನವರಾತ್ರಿ ಮಹೋತ್ಸವವು ಸೆ. 29ರಂದು ಮೊದಲ್ಗೊಂಡು ಅ. 8ರವರೆಗೆ ವಿವಿಧ ಧಾರ್ಮಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಂದ ಸಂಪನ್ನಗೊಂಡಿತು.

Advertisement

ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸ್ಥಾಪಕ ಮೊಕ್ತೇಸರ ಜಯರಾಜ ಶ್ರೀಧರ ಶೆಟ್ಟಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ, ಶಾಲಿನಿ ಪ್ರದೀಪ್‌ ಶೆಟ್ಟಿ, ಮೊಕ್ತೇಸರಾದ ಜಯಪಾಲಿ ಅಶೋಕ ಶೆಟ್ಟಿ, ಡಾ| ಸಪ್ನಾ ಶೆಟ್ಟಿ ಇವರ ಮುಂದಾಳತ್ವದಲ್ಲಿ ಹತ್ತು ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ನವದುರ್ಗೆಯರ ಆರಾಧನೆ, ನಾಗದೇವರಿಗೆ ಪಂಚಮೃತ ಅಭಿಷೇಕ, ತನು ತಂಬಿಲ, ದೇವತಾ ಪ್ರಾರ್ಥನೆ, ಗಣಹೋಮ, ನವಕ ಕಲಶಾಭಿಷೇಕ, ಪ್ರಧಾನ ಹೋಮ, ರಂಗ ಪೂಜೆ ಭಜನೆ, ದುರ್ಗಾ ನಮಸ್ಕಾರ ಪೂಜೆ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಮುಂತಾದವುಗಳು ವೈದಿಕ ತತ್ವದಡಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಅ.6 ರಂದು ನಡೆದ ಸಾರ್ವಜನಿಕ ಚಂಡಿಕಾ ಹೋಮದಲ್ಲಿ ಪ್ರಾರ್ಥನೆ, ಪುಣ್ಯಾಹ ವಾಚನ, ಸಂಕಲ್ಪ, ಕಲ್ಪೋಕ್ತ ಪೂಜೆ ಪೂರ್ಣಾಹುತಿ, ಸುವಾಸಿನಿ ಪೂಜೆಯೊಂದಿಗೆ ನಡೆಯಿತು. ಭಕ್ತಾಧಿಗಳು ಮಂಗಲ ದ್ರವ್ಯ, ಮಂಗಲ ವಸ್ತ್ರ, ಫಲಪುಷ್ಪ ಸುವಸ್ತುಗಳನ್ನು ಹೋಮ ಯಜ್ಞಕುಂಡಕ್ಕೆ ಸಮರ್ಪಿಸಿ ಸನ್ನಿಧಿಯ ಪ್ರಸಾದ ಸ್ವೀಕರಿಸಿದರು.

ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ ಅವರು ಭಕ್ತಾಧಿಗಳನ್ನು ಸ್ವಾಗತಿಸಿ ಮಾತನಾಡಿ, ಸನಾತನ ಧರ್ಮಗಳ ಸಂಸ್ಕಾರ, ಸಂಪ್ರದಾಯಗಳ ಆಚರಣೆಯಿಂದ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ. ದೇಶದೆಲ್ಲದೆ ಆಚರಿಸುವ ಶಕ್ತಿಯ ಆರಾಧನೆಯು ನವರಾತ್ರಿಯ ವೈಶಿಷ್ಟವಾಗಿದ್ದು, ಈ ಸಂದರ್ಭದಲ್ಲಿ ಉಪಾಸನೆಯನ್ನು ಭಕ್ತಿ ಯಿಟ್ಟು ಮಾಡುವುದರಿಂದ ದೇವಿತತ್ವದ ಜ್ಞಾನೋದಯವಾಗುತ್ತದೆ. ಇದರಿಂದ ಋಣಾತ್ಮಕ ಚಿಂತನೆಗಳು ಮರೆಯಾಗಿ ಬದುಕಿನಲ್ಲಿ ಧನಾತ್ಮಕ ಚಿಂತನೆಯ ಮನೋಬಲ ವೃದ್ಧಿಸುತ್ತದೆ ಎಂದು ಹೇಳಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿ, ವಿಜಯ ದಶಮಿಯ ಶುಭಾಶಯ ಸಲ್ಲಿಸಿದರು.

ಆರ್ಚಕ ವೃಂದ, ಆಡಳಿತ ಮಂಡಳಿ, ಶ್ರೀ ಮಹಿಷಮರ್ದಿನಿ ಭಜನ ಮಂಡಳಿ ಸದಸ್ಯರು ಸಹಕರಿಸಿದರು. ಉದ್ಯಮಿಗಳು, ತುಳು ಕನ್ನಡಿಗರು, ಕನ್ನಡೇತರು, ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

 

-ಚಿತ್ರ-ವರದಿ: ರಮೇಶ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next