Advertisement

POP ವಿಗ್ರಹ ನಿಷೇಧ: ಬಿಗಿ ನಿಲುವು ಅಗತ್ಯ

01:58 AM Aug 24, 2024 | Team Udayavani |

ಗೌರಿ-ಗಣೇಶ ಹಬ್ಬಕ್ಕೆ ಇನ್ನು ಎರಡು ವಾರಗಳಷ್ಟೇ ಬಾಕಿ ಉಳಿದಿದೆ. ಈಗಾಗಲೇ ರಾಜ್ಯದೆಲ್ಲೆಡೆ ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ, ಪೂಜಿಸಲು ಗಣೇಶ ವಿಗ್ರಹಗಳ ಖರೀದಿ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಗ್ರಹ ತಯಾರಕರು ಕೂಡ ಗಣೇಶನ ವಿಗ್ರಹಗಳ ತಯಾರಿ ಕಾರ್ಯದಲ್ಲಿ ಭರದಿಂದ ತೊಡಗಿಕೊಂಡಿದ್ದಾರೆ. ಏತನ್ಮಧ್ಯೆ ರಾಜ್ಯದ ಹಲವೆಡೆ ನಿಷೇಧಿತ ಪ್ಲಾಸ್ಟರ್‌ ಆಫ್ ಪ್ಯಾರಿಸ್‌(POP) ವಿಗ್ರಹಗಳ ತಯಾರಿ, ದಾಸ್ತಾನು, ಸಾಗಾಟ, ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಒಂದಿಷ್ಟು ಆತಂಕ ಮೂಡಿಸಿದೆ.

Advertisement

ಈ ಹಿನ್ನೆಲೆಯಲ್ಲಿ ಈ ಬಾರಿ ಒಂದಿಷ್ಟು ಮುಂಚಿತವಾಗಿಯೇ ಎಚ್ಚೆತ್ತುಕೊಂಡಿರುವ ರಾಜ್ಯದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದಲ್ಲಿ ಪಿಒಪಿ ವಿಗ್ರಹಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಸಂಬಂಧ ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆ ಸಚಿವರು ಇಲಾಖಾಧಿಕಾರಿಗಳ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಪಿಒಪಿ ವಿಗ್ರಹ ನಿಷೇಧ ಕಾನೂನಿನ ಜಾರಿಯಲ್ಲಿ ಲೋಪವಾಗದಂತೆ ನೋಡಿಕೊಳ್ಳುವಂತೆ ಆಯಾಯ ಜಿಲ್ಲಾ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ವಿವಿಧ ನ್ಯಾಯಾಲಯಗಳ ನಿರ್ದೇಶನಾನುಸಾರ ರಾಷ್ಟ್ರೀಯ ಹಸುರು ನ್ಯಾಯಮಂಡಳಿ ಪಿಒಪಿ ವಿಗ್ರಹಗಳ ಬಳಕೆಯನ್ನು ನಿಷೇಧಿಸಿದೆ. ಪಿಒಪಿ ವಿಗ್ರಹಗಳು ಮತ್ತು ಈ ವಿಗ್ರಹಗಳಿಗೆ ರಾಸಾಯನಿಕ ಬಣ್ಣಗಳನ್ನು ಬಳಿಯುವುದರಿಂದ ಇವು ನೀರನ್ನು ಕಲುಷಿತಗೊಳಿಸುತ್ತವೆ. ಇಂತಹ ವಿಗ್ರಹಗಳನ್ನು ವಿಸರ್ಜಿಸಲಾಗುವ ಜಲಮೂಲಗಳಲ್ಲಿನ ಜಲಚರಗಳ ಪ್ರಾಣಕ್ಕೂ ಕುತ್ತು ತರುವ ಜತೆಯಲ್ಲಿ ಜಲಮೂಲಗಳೂ ನಿಷ್ಪ್ರಯೋಜಕವಾಗುತ್ತವೆ. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪರಿಸರ ಸಚಿವರು, ಈ ಬಾರಿ ಪಿಒಪಿ ವಿಗ್ರಹ ತಯಾರಿಕರಿಗೆ ಎಚ್ಚರಿಕೆ, ದಂಡ, ವಿಗ್ರಹಗಳ ಮುಟ್ಟುಗೋಲಿನ ಜತೆಯಲ್ಲಿ ಕಾನೂನನ್ನು ಉಲ್ಲಂ ಸುವ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸುವವರ ವಿರುದ್ಧ ವಾಯು ಮತ್ತು ಜಲ ಕಾಯ್ದೆಯಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಎಲ್ಲ ಕ್ರಮಗಳು ಪರಿಸರ ಸಂರಕ್ಷಣೆಯಲ್ಲಿ ಸ್ವಾಗತಾರ್ಹ. ಇದೇ ವೇಳೆ ವಿಗ್ರಹ ತಯಾರಕರ ಕೆಲವು ಸಮಸ್ಯೆಗಳು ಮತ್ತವರ ಬೇಡಿಕೆಗಳಿಗೂ ಸರಕಾರ ಒಂದಿಷ್ಟು ಗಮನಹರಿಸುವ ಅಗತ್ಯವಿದೆ. ವರ್ಷಗಳುರುಳಿದಂತೆಯೇ ವಿಗ್ರಹ ತಯಾರಿಗೆ ಅಗತ್ಯವಾಗಿರುವ ಮಣ್ಣಿನ ಕೊರತೆ ವಿಗ್ರಹ ತಯಾರಕರನ್ನು ಬಾಧಿಸುತ್ತಿದ್ದು ಬೇಡಿಕೆಗೆ ತಕ್ಕಷ್ಟು ವಿಗ್ರಹಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವ್ಯಾಪಾರಿಗಳು ಹೊರ ರಾಜ್ಯಗಳಿಂದ ವಿಗ್ರಹಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಇದು ರಾಜ್ಯದ ವಿಗ್ರಹ ತಯಾರಕರ ಮೇಲೆ ಭಾರೀ ಹೊಡೆತ ನೀಡುತ್ತಿದೆ. ಹೀಗಾಗಿ ಪ್ರತೀ ವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಪೂಜಿಸಲ್ಪಟ್ಟ ಗಣೇಶನ ವಿಗ್ರಹಗಳನ್ನು ಆಯಾಯ ಹೋಬಳಿ, ತಾಲೂಕು ಮತ್ತು ನಗರ ಪ್ರದೇಶದ ನಿರ್ದಿಷ್ಟ ಕೆರೆಯೊಂದರಲ್ಲಿ ನಿಗದಿತ ದಿನದಂದು ವಿಸರ್ಜನೆಗೆ ವ್ಯವಸ್ಥೆ ಮಾಡಬೇಕು ಎಂಬುದು ವಿಗ್ರಹ ತಯಾರಕರ ಬೇಡಿಕೆ. ಇದರಿಂದ ಮುಂದಿನ ವರ್ಷ ಇದೇ ಕೆರೆಗಳಿಂದ ಮಣ್ಣನ್ನು ಮೇಲೆತ್ತಿ ವಿಗ್ರಹಗಳನ್ನು ತಯಾರಿಸಲು ಅನುಕೂಲವಾಗಲಿದೆ. ಇಂತಹ ವ್ಯವಸ್ಥೆ ನಮ್ಮ ನೆರೆಯ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿದ್ದು, ಇದನ್ನು ರಾಜ್ಯದಲ್ಲಿಯೂ ಜಾರಿಗೆ ತರಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ವಿಗ್ರಹ ತಯಾರಕರ ಈ ಬೇಡಿಕೆ ನ್ಯಾಯಸಮ್ಮತವಾಗಿದ್ದು ಕನಿಷ್ಠ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಾದರೂ ಇಂತಹ ಒಂದು ವ್ಯವಸ್ಥೆಯನ್ನು ಜಾರಿಗೆ ತರಲು ಸರಕಾರ ಮುಂದಾಗಬೇಕು. ಇದರಿಂದ ವಿಗ್ರಹ ತಯಾರಕರಿಗೆ ಸಾಕಷ್ಟು ಪ್ರಮಾಣದಲ್ಲಿ ಮಣ್ಣಿನ ವಿಗ್ರಹಗಳನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಕೆ ಮಾಡಲು ಸಾಧ್ಯವಾಗಲಿದೆ. ಇದರಿಂದ ತನ್ನಿಂತಾನೆ ಪಿಒಪಿ ವಿಗ್ರಹಗಳ ಬಳಕೆಗೆ ಕಡಿವಾಣ ಬೀಳಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next