Advertisement

ಎರಡು ತಿಂಗಳಲ್ಲೇ ಗುಂಡಿ ಬಿದ್ದ ನೂರಡಿ ರಸ್ತೆ!

04:14 PM Aug 21, 2019 | Suhan S |

ಮಂಡ್ಯ: ನಿರ್ಮಾಣವಾಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ. ಆಗಲೇ ನಗರದ ನೂರಡಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ರಸ್ತೆ ಮಧ್ಯ ಭಾಗದಲ್ಲಿ ಸೃಷ್ಟಿಯಾಗಿರುವ ಗುಂಡಿ ಮೃತ್ಯುಕೂಪದಂತೆ ಬಾಯ್ತೆರೆದುಕೊಂಡು ಅಪಾಯಕ್ಕೆ ಮುಕ್ತ ಆಹ್ವಾನ ನೀಡಿದೆ.

Advertisement

ನಗರದ ಬೆಸಗರಹಳ್ಳಿ ರಾಮಣ್ಣ ವೃತ್ತದ ತಿರುವಿನ ಮಧ್ಯಭಾಗದಲ್ಲೇ ಹಳ್ಳ ಬಿದ್ದಿರುವುದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ರಸ್ತೆ ಮಧ್ಯಭಾಗದಲ್ಲಿ ಹಾದುಹೋಗಿರುವ ಮಳೆ ನೀರಿನ ಡಕ್ಟ್ ಶಿಥಿಲಗೊಂಡಿದ್ದು, ಭಾರೀ ವಾಹನ ಸಂಚರಿಸುವ ವೇಳೆ ಕುಸಿದು ಗುಂಡಿ ನಿರ್ಮಾಣವಾಗಿದೆ.

ಡಕ್ಟ್ ಕುಸಿದು ಆತಂಕ: ದಶಕಗಳಿಂದ ಅದ್ವಾನಗೊಂಡಿದ್ದ ನೂರಡಿ ರಸ್ತೆ ಎರಡು ತಿಂಗಳ ಹಿಂದಷ್ಟೇ ಡಾಂಬರೀಕರಣಗೊಂಡು ಸುಸ್ಥಿತಿಗೆ ಮರಳಿತ್ತು. ವಾಹನ ಸವಾರರು ನೆಮ್ಮದಿಯ ನಿಟ್ಟುಸಿರುವ ಬಿಡುವ ಹಂತದಲ್ಲೇ ಡಕ್‌ ಕುಸಿದು ಮತ್ತೆ ಜನರ ಆತಂಕವನ್ನು ಹೆಚ್ಚಿಸಿದೆ. ರಸ್ತೆ ದುರಸ್ತಿ ಮಾಡುವ ಸಮಯದಲ್ಲೇ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಾಂದ್ರತೆಯನ್ನು ನಗರಸಭೆ ಅಧಿಕಾರಿಗಳು ಗಮನಿಸಬೇಕಿತ್ತು. ಅದಕ್ಕೆ ಅನುಗುಣವಾಗಿ ಮಳೆ ನೀರು ಹಾದುಹೋಗುವ ಡಕ್‌ನ್ನು ಸುಭದ್ರಗೊಳಿಸಿ ರಸ್ತೆ ನಿರ್ಮಿಸಿದ್ದರೆ ಗುಂಡಿ ಬೀಳುವ ಪ್ರಮಾದವನ್ನು ತಪ್ಪಿಸುವ ಸಾಧ್ಯತೆ ಇತ್ತು. ನಗರಸಭೆಯಲ್ಲಿ ಪರಿಣಿತ ಎಂಜಿನಿಯರ್‌ಗಳಿದ್ದರೂ ಲೋಪಗಳು ಪದೇಪದೆ ಮರುಕಳಿಸುತ್ತಲೇ ಇರುವುದು ಮಾತ್ರ ದುರಂತ.

ಅಧಿಕಾರಿಗಳ ನಿರ್ಲಕ್ಷ್ಯ: ನಮ್ಮಲ್ಲಿ ತಾಂತ್ರಿಕತೆ ಎಷ್ಟೇ ಪ್ರಗತಿ ಸಾಧಿಸಿದರೂ, ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದ್ದರೂ ಅಭಿವೃದ್ಧಿ ಕಾರ್ಯಗಳಲ್ಲಿ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಆಡಳಿತ ನಡೆಸುವವರ ಲೋಪವೂ ಇದಕ್ಕೆ ಮತ್ತೂಂದು ಕಾರಣ. ಶಿಥಿಲಗೊಂಡ ಡಕ್ಟ್ ಮೇಲೆ ರಸ್ತೆ ನಿರ್ಮಾಣ ಮಾಡಿದವರ ಎಂಜಿನಿಯರ್‌ಗಳು ಹಾಗೂ ಗುತ್ತಿಗೆ ದಾರರ ಸಾಮಾನ್ಯ ಜ್ಞಾನ ಎಷ್ಟರಮಟ್ಟಿಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಸಂಪರ್ಕ ರಸ್ತೆಗಳ ಅದ್ವಾನ: ವಿವೇಕಾನಂದ ಜೋಡಿ ರಸ್ತೆಯಿಂದ ನೂರಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಎಡಬಿಡದೆ ಸಂಚರಿಸುತ್ತಿರುತ್ತವೆ. ಮಳವಳ್ಳಿ, ಕಿರುಗಾವಲು, ಬನ್ನೂರು, ತಿ.ನರಸೀಪುರ, ಚಾಮರಾಜನಗರ, ಮೈಸೂರು, ನಂಜನಗೂಡು ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಯ ಆಧುನೀಕರಣ ಹೇಗಿರಬೇಕೆಂಬ ಪರಿಕಲ್ಪನೆ ಬಹುಶಃ ನಗರಸಭೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಇದ್ದಂತೆ ಕಾಣುತ್ತಿಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

Advertisement

ಅಧಿಕಾರಿಗಳೇ ನೇರ ಹೊಣೆ: ರಸ್ತೆಯನ್ನು ಅಭಿವೃದ್ಧಿಪಡಿಸುವ ಸಮಯದಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಭಾರೀ ವಾಹನಗಳ ತೂಕದ ಅಂದಾಜನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಬೇಕಿದ್ದರೂ, ಅದನ್ನು ಪರಿಗಣಿಸದೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿ ಅವ್ಯವಸ್ಥೆ ಸೃಷ್ಟಿಯಾಗುವಂತೆ ಮಾಡಿರುವುದಕ್ಕೆ ಟೆಂಡರ್‌ ಪಡೆದ ಗುತ್ತಿಗೆದಾರರು ಹಾಗೂ ನಗರಸಭೆ ಅಧಿಕಾರಿಗಳೇ ನೇರ ಹೊಣೆಗಾರರಾಗಿದ್ದಾರೆ.

ನೂರಡಿ ರಸ್ತೆ ನಿರ್ಮಾಣದ ಸಮಯದಲ್ಲಿ ಡಕ್ಟ್ ದುರಸ್ತಿಯನ್ನು ಅಂದಾಜುಪಟ್ಟಿಗೆ ಸೇರಿಸಿಕೊಂಡಿರಲಿಲ್ಲ. ನಿಗದಿಗಿಂತ ಭಾರೀ ತೂಕದ ವಾಹನ ಸಂಚರಿಸಿರುವುದರಿಂದ ಡಕ್ಟ್ ಕುಸಿದಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಅಪಾಯವನ್ನು ಮೊದಲೆಧೀ ಗುರುತಿಸಿದ್ದರೆ ರಸ್ತೆ ಸುಸ್ಥಿತಿಯಲ್ಲಿರುವಂತೆ ಕಾಪಾಡಬಹುದಾಗಿತ್ತು. ಈಗ ಒಂದು ಕಡೆ ಗುಂಡಿ ನಿರ್ಮಾಣವಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನಗರಸಭೆ ಅಧಿಕಾರಿಗಳು ಗುಂಡಿ ಮಧ್ಯಭಾಗಕ್ಕೆ ಬ್ಯಾರಿಕೇಡ್‌ ಇಟ್ಟು ಕೈತೊಳೆದುಕೊಂಡಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಡಕ್‌ನ್ನು ದುರಸ್ತಿಪಡಿಸಿ ಯಾವಾಗ ಸುಸ್ಥಿತಿಗೆ ತರುತ್ತಾರೆ ಎನ್ನುವುದು ಗೊತ್ತಿಲ್ಲ. ಒಟ್ಟಿನಲ್ಲಿ ಅದ್ವಾನ ರಸ್ತೆಗಳಿಂದ ಮಂಡ್ಯಕ್ಕಂತೂ ಮುಕ್ತಿ ದೊರಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next