Advertisement

ಮುರಿದ ಮನೆಯಲ್ಲಿ ಹರಿದ ಬದುಕು!

06:32 PM Sep 20, 2020 | Suhan S |

ಮರಿಯಮ್ಮನಹಳ್ಳಿ: ಹೊಸಪೇಟೆ ತಾಲೂಕಿನ ಕಟ್ಟಕಡೆಯ ಗ್ರಾಮವಾದ ಪೋತಕಟ್ಟೆ ಗ್ರಾಮದಲ್ಲಿ ಅರ್ಧ ಗೋಡೆ ಬಿದ್ದಿರುವ ತುಂಬಾ ಶಿಥಿಲಾವಸ್ಥೆಯಲ್ಲಿರುವ ಮನೆಯೊಂದರಲ್ಲಿ ಇಬ್ಬರು ಅಂಗವಿಕಲರನ್ನು ಒಳಗೊಂಡ ಕುಟುಂಬವೊಂದು ತೀವ್ರ ಆತಂಕದಲ್ಲಿ ಜೀವನ ದೂಡುತ್ತಿದೆ.

Advertisement

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪೋತಲಕಟ್ಟೆ ಗ್ರಾಮದಲ್ಲಿ 55 ವರ್ಷದ ಸೋಮಪ್ಪ ಅಂಗವಿಕಲ (ಕಿವುಡುತನ) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳು ಒಬ್ಬ ಮಗಳಿಗೆ ಬುದ್ಧಿಮಾಂದ್ಯತೆ ಹಾಗೂ ಪೂರ್ಣ ಅಂಗವಿಕಲತೆ ಇದೆ. ಇವರ ಹದಿನೇಳು ವರ್ಷದ ಮಗ ಕೊಟ್ರೇಶ ದೈಹಿಕವಾಗಿ ಬೌದ್ಧಿಕವಾಗಿ ಚೆನ್ನಾಗಿದ್ದರೂ ಕುಟುಂಬ ನಿರ್ವಹಣೆಗಾಗಿ ನಾಲ್ಕನೇ ತರಗತಿ ಓದುವಾಗಲೇ ಶಾಲೆಬಿಟ್ಟು ತನ್ನ ಭವಿಷ್ಯದ ಬದುಕನ್ನೇ ಕತ್ತಲೆಗೆ ದೂಡಿ ತಾನೂ ಕೂಲಿ ಕೆಲಸಕ್ಕೆ ಹೋಗುತ್ತಾ ಕುಟುಂಬಕ್ಕೆ ಆಸರೆಯಾಗಿರುವ ಕತೆ ಕೇಳಿದರೆ ಎಂಥವರಿಗೂ ಕಣ್ಣೀರು ಬರುತ್ತದೆ.

ಸೋಮಪ್ಪನ ಹೆಂಡತಿ ನಾಗರತ್ನಮ್ಮ ಹುಟ್ಟಿನಿಂದಲೇ ಬುದ್ಧಿಮಾಂದ್ಯತೆ ಹಾಗೂ ಪೂರ್ಣ ಅಂಗವಿಕಲತೆಯಿಂದ ಬಳಲುತ್ತಿರುವ ಸುಮಾರು ಹದಿನಾರು ವರ್ಷದ ಮಗಳು ರೇಖಾಳ ಆರೈಕೆಯಲ್ಲಿಯೇ ಕಾಲದೂಡುವಂತಾಗಿದೆ. ನಮ್ಮಪ್ಪನಿಗೆ ವಯಸ್ಸಾಯಿತು ಸರ್‌ ಅವರಿಗೆ ಕಿವಿನೂ ಸರಿಯಾಗಿ ಕೇಳಸಲ್ಲ. ಅವರು ಕೆಲಸಮಾಡೋಕೆ ಆಗಲ್ಲ ಅಂತ ಮಗ ಕೊಟ್ರೇಶ ಶಾಲೆ ಓದೋದು ಬಿಟ್ಟು ಕೂಲಿ ಹೋಗುತ್ತಿದ್ದಾನೆ ಎಂಬ ಸಂಗತಿ ನಿಜಕ್ಕೂ ಎಂಥವರಿಗೂ ಮರುಕವುಂಟಾಗುತ್ತದೆ. ಕೆಲಸಮಾಡುವ ಕಡೆ ಹಣ ಪಡೆಯದೇ ಕಾಳು ಕಡಿ ಪಡೆಯುತ್ತಾನೆ ಕೆಲವೊಮ್ಮೆಬರುವ ಅಲ್ಪಾದಾಯದಲ್ಲೇ ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಮಗಳ ಅಂಗವಿಕಲರ ಮಾಸಾಶನ 600 ರೂಪಾಯಿ ಬರುತ್ತಿದೆ ಆದರೂ ಜೀವನ ಸುಧಾರಣೆ ಆಗುತ್ತಿಲ್ಲ. ಕೊಟ್ರೇಶ್‌ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನಂತೆ ಅಂತಹ ಹುಡುಗ ಶಾಲೆಬಿಟ್ಟಿರುವುದು ಆತನ ಭವಿಷ್ಯವೇ ಹಾಳಾಗಿದೆ ಎನ್ನುತ್ತಾರೆ ಗ್ರಾಮದ ಸಮೂಹ ಶಕ್ತಿ ಸಂಘಟನೆ ದೇವರಾಜ್‌ ಅವರು.

ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ಜೀವ ಭಯದಿಂದಲೇ ದಿನಗಳನ್ನು ದೂಡುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಮನೆಯ ಅರ್ಧ ಗೋಡೆ ಕುಸಿದಿದೆ. ಇಂತಹ ಕಡುಬಡವರು ಹಾಗೂ ಅಂಗವಿಕಲರ ಕುಟುಂಬಗಳಿಗೆ ಆಶ್ರಯ ಮನೆಗಳನ್ನು ಒದಗಿಸಲು ಸರ್ಕಾರ ವಿಶೇಷ ಕೋಟಾಗಳಲ್ಲಿ ಅವಕಾಶ ಕಲ್ಪಿಸಿದ್ದರೂ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇವರೆಲ್ಲಾ ಆತಂಕದಲ್ಲಿ ಬದುಕುವಂತಾಗಿದೆ. ಐದಾರು ವರ್ಷಗಳಿಂದ ಊರಾಗ ಗ್ರಾಮಸಭೆಗಳು ನಡೆದಾಗೆಲ್ಲಾ ಆಶ್ರಯ ಮನೆಕೊಡಿಸಿ ಅಂತಬೇಡಿಕೊಂಡ್ರೂ ಯಾರೂ ನಮ್ಮ ಮಾತಿಗೆ ಬೆಲೆಕೊಡ್ತಿಲ್ಲ ಅಂತ ಸೋಮಪ್ಪ ಅಳಲು ತೋಡಿಕೊಳ್ಳುತ್ತಾರೆ.

ನಾನು ಬುದ್ಧಿಮಾಂದ್ಯ ಮಗಳ ಚಾಕರಿ ಮಾಡಿಕೋತ ಮನ್ಯಾಗಾ ಇರ್ತಿನಿ ಸರಾ. ನಮ್ಮ ಮಗ ಸಾಲಿಬಿಟ್ಟು ದುಡಿಯಾಕ ಹೋಗಾದು ತಾಯಿಯಾದ ನನಗೆ ಹೊಟ್ಯಾಗ ಸಂಕಟಾಕೈತಿ. ಬಡತನ ಇದ್ರೂ ಪರವಾಗಿಲ್ಲ ನನ್ನ ಮಗಳಿಗೆ ಇಂಥ ಸ್ಥಿತಿ ಬರಬಾರದಿತ್ತು. ನಾನೂ ದುಡಿದು ನಮ್ಮ ಮಕ್ಕಳನ್ನ ಓದಿಸ್ತಿದ್ವಿ.ದೇವರಿಗೆ ನಮ್ಮ ಮ್ಯಾಗ ಕರುಣೀನಾ ಇಲ್ಲದಂಗಾಗೈತಿ ನನ್ನ ಮಗ ಬಾಳ ಜಾಣ ಅದಾನಂತ ಮೆಷ್ಟರು ಹೇಳ್ತಾ ಇದ್ರು ಆದರ ನಮ್‌ ಕಷ್ಟಕ್ಕ ಅವನೂ ಓದಾದು ಬಿಟ್ಟು ಕೂಲಿ ಹೋಗಾಕತ್ಯಾನ.-ನಾಗರತ್ನಮ್ಮ, ಸೋಮಪ್ಪನ ಹೆಂಡತಿ

Advertisement

ಇವರ ಮನೆ ಹಿಂಭಾಗದ ಗೋಡೆ ಅರ್ಧ ಕುಸಿದು ಬಿದ್ದಿದೆ. ಈ ಕುಟುಂಬಕ್ಕೆ ಆಶ್ರಯ ಮನಿ ಕೊಡುವಲ್ಲಿ ಗ್ರಾಮ ಪಂಚಾಯಿತಿಯವರು ನಿರ್ಲಕ್ಷ್ಯ ಮಾಡಿದ್ದಾರೆ. ಅದಕ್ಕೆ ಈಗ ನಮ್ಮ ಸಮೂಹ ಶಕ್ತಿ ಸಂಘಟನೆಯಿಂದ ವಸತಿ ಸಚಿವರಿಗೆ ಅರ್ಜಿ ಬರೆದು ಕಳಿಸಿದ್ದೇವೆ. ಈ ಕುಟುಂಬಕ್ಕೆ ನ್ಯಾಯ ಒದಗಿಸುವವರೆಗೆ ಸಂಘಟನೆ ಜೊತೆಗಿರುತ್ತದೆ. – ದೇವರಾಜ್‌, ಸಮೂಹ ಶಕ್ತಿ ಸಂಘಟನೆ ಪ್ರತಿನಿಧಿ

 

-ಎಂ. ಸೋಮೇಶ್‌ ಉಪ್ಪಾರ

Advertisement

Udayavani is now on Telegram. Click here to join our channel and stay updated with the latest news.

Next