Advertisement

ಅಳಿವಿನ ಅಂಚಿನಲ್ಲಿ ಪಳ್ಳಗಳು

09:22 AM Apr 10, 2019 | keerthan |

ಬದಿಯಡ್ಕ: ನೀರಿನ ಆಗರ ಪ್ರಕೃತಿಯ ಆಕರ್ಷಕ ಬಿಂದುವಾದ ಪಳ್ಳಗಳು ನಮ್ಮ ಬದುಕಿನ ಭಾಗವಾಗಿತ್ತು. ಮಳೆಗಾಲದಲ್ಲಿ ಮಕ್ಕಳಿಗೆ ನೀರಾಟವಾಡಲು, ಮಹಿಳೆಯರಿಗೆ ಬಟ್ಟೆ ಸ್ವಚ್ಛಗೊಳಿಸಲು ಈ ಪಳ್ಳಗಳೇ ಬೇಕಿತ್ತು. ತುಂಬಿ ಹರಿಯುವ ಪಳ್ಳಗಳು ಮಕ್ಕಳನ್ನು ಕೈಬೀಸಿ ಕರೆಯುವಂತೆ ಭಾಸವಾಗುತ್ತಿದ್ದ ಕಾಲ ಕಳೆದುಹೋಗಿದೆ. ಮನುಷ್ಯನ ಸ್ವಾರ್ಥ ಬದುಕಿಗೆ ಬಲಿಯಾದ ಪ್ರಕೃತಿ ಸಹಜ ಸ್ವತ್ತುಗಳಲ್ಲಿ ಜನರ ಜೀವನಾಡಿಯಾಗಿದ್ದ ಪಳ್ಳಗಳೂ ಸೇರಿವೆ.

Advertisement

ನೀರಿನ ಸ್ವಾಭಾವಿಕ ಆಗರ, ನೀರಿನ ಕೊಡಗಳೆಂದೇ ಖ್ಯಾತಿ ಪಡೆದಿರುವ ಜಿಲ್ಲೆಯ ಹಲವು ಪಳ್ಳಗಳು ಅಳಿವಿನ ಅಂಚಿನಲ್ಲಿದ್ದು, ಸೂಕ್ತ ರೀತಿಯಲ್ಲಿ ರಕ್ಷಣೆಯಾಗಬೇಕಿದೆ. ಬಿರು ಬೇಸಿಗೆಯಲ್ಲೂ ನೀರನ್ನು ತನ್ನೊಡಲಲ್ಲಿ ತುಂಬಿಸಿಕೊಂಡು, ಮನುಷ್ಯನ ಅತ್ಯವಶ್ಯಕತೆ ಸಹಿತ ಪ್ರಾಣಿ ಪಕ್ಷಿಗಳಿಗೆ ನೀರು ಮತ್ತು ಆಹಾರಕ್ಕೆ ಆಸರೆಯಾಗುವ ಪಳ್ಳಗಳು ನಗರೀಕರಣದ ಮೂಲಕ ನಿಧಾನವಾಗಿ ಇಲ್ಲದಾಗುತ್ತಿವೆ. ಬೇಸಿಗೆ ಕಾಲದಲ್ಲಿ ಎದುರಾಗುವ ನೀರಿನ ತತ್ವಾರಕ್ಕೆ ಹಲವು ಕಾರಣಗಳಿದ್ದರೂ, ಪ್ರಕೃತಿ ಸಹಜವಾಗಿ ರೂಪುಗೊಂಡಿರುವ ಪಳ್ಳಗಳು ಆಧುನೀಕರಣದ ನೆಪದಲ್ಲಿ ಇಲ್ಲವಾಗುತ್ತಿರುವುದು ನೀರಿನ ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡುತ್ತಿದೆ.

ಭೌಗೋಳಿಕ ವಿಶೇಷತೆಯ ಕೆಂಪು ಕಲ್ಲು ಮೇಲ್ಪದರದ ಸ್ವಾಭಾವಿಕ ತಗ್ಗುಗಳಲ್ಲಿ ಮಳೆಗಾಲದ ನೀರು ಶೇಖರಗೊಂಡು, ನಂತರದ ಎಂಟರಿಂದ ಹತ್ತು ತಿಂಗಳ ತನಕ ಪಳ್ಳದ ನೀರು ಪ್ರಾಣಿ ಪಕ್ಷಿಗಳು ಸಹಿತ ಮನುಷ್ಯನ ಉಪಯೋಗಕ್ಕೂ ವಿನಿಯೋಗವಾಗುತ್ತದೆ. ಕಳೆದ ಹಲವು ವರ್ಷಗಳಿಂದ ಇಂತಹ ಸ್ವಾಭಾವಿಕ ಪಳ್ಳಗಳು ಅಭಿವೃದ್ಧಿಯ ನೆಪದಲ್ಲಿ ಇಲ್ಲದಾಗುತ್ತಿರುವುದು ನೀರಿನ ಸಮಸ್ಯೆ ಹೆಚ್ಚುವಂತೆ ಮಾಡಿದೆ. ನೀರು ಶೇಖರಾಗಾರಗಳ ಮಹತ್ವ ಎಷ್ಟೆಂಬುದು ಕೆಲ ನಿರ್ದಿಷ್ಟ ಗ್ರಾಮ ಮತ್ತು ಪ್ರದೇಶಗಳ ಹೆಸರಿನಿಂದ ತಿಳಿಯುತ್ತದೆ. ಕೆಲ ಗ್ರಾಮಗಳನ್ನು ಪಳ್ಳ ಎಂಬ ಉಪನಾಮದೊಂದಿಗೆ ಕರೆಯುತ್ತಿರುವುದು ನೈಸರ್ಗಿಕ ಜಲ ಶೇಖರಗಳ ಪ್ರಾಮುಖ್ಯತೆ ಮತ್ತು ವಿಶೇಷತೆಯನ್ನು ಸ್ಪಷ್ಟಪಡಿಸುತ್ತದೆ.


ನೈಸರ್ಗಿಕ ಸೃಷ್ಟಿ
ಕಾಸರಗೋಡು ಜಿಲ್ಲೆ ಸಹಿತ ಆಸುಪಾಸಿನ ಜಿಲ್ಲೆಗಳಲ್ಲಿ ಕಾಣಬಹುದಾದ ಪಳ್ಳಗಳು ನೈಸರ್ಗಿಕ ಸೃಷ್ಟಿಯ ತಗ್ಗು ಪ್ರದೇಶ ಮತ್ತು ಮಳೆ ನೀರಿನ ಸ್ವಾಭಾವಿಕ ಶೇಖರಾಗಾರ. ಸಾಮಾನ್ಯವಾಗಿ ಜಿಲ್ಲೆಯ ಬಯಲು ಪ್ರದೇಶಗಳ ಬಳಿ ಇಂತಹ ಪಳ್ಳಗಳನ್ನು ಕಾಣಬಹುದು. ಜಿಲ್ಲೆಯ ಉತ್ತರದ ಮಂಜೇಶ್ವರದಿಂದ ದಕ್ಷಿಣದ ನಿಲೇಶ್ವರದ ತನಕ ಇಂತಹ ಹಲವು ಪಳ್ಳಗಳನ್ನು ಗುರುತಿಸಬಹುದು. ಪಳ್ಳಗಳಲ್ಲಿನ ಕೆಂಪು ಕಲ್ಲಿನ ಮೇಲ್ಪದರ ಗಟ್ಟಿಯಾಗಿರುತ್ತದೆ, ಬಾಕ್ಸೈಟ್ ಧಾತು ನೀರಿನ ಇಂಗುವಿಕೆಗೆ ಸಹಕರಿಸುತ್ತದೆ, ನಿಧಾನಗತಿಯಲ್ಲಿ ನಡೆಯುವ ಪ್ರಕ್ರಿಯೆ ಇದಾಗಿದ್ದು, ನೀರಿನ ಶೇಖರಣೆಗೆ ಸಹಕಾರಿ ಎನ್ನುತ್ತಾರೆ ಪರಿಸರ ತಜ್ಞ ಪದ್ಮನಾಭನ್‌ ಅವರು. ಇಂತಹ ಶೇಖರಾಗಾರಗಳು ಜಲಾಶಯಗಳಂತೆ ಕಾರ್ಯ ನಿರ್ವಹಿಸುತ್ತವೆ ಮಾತ್ರವಲ್ಲದೆ ಎಂಟು ತಿಂಗಳು ಅಥವಾ ಕೆಲವೊಮ್ಮೆ ನಂತರದ ಮಳೆಗಾಲದ ತನಕ ನೀರು ಶೇಖರಗೊಂಡಿರುತ್ತದೆ.

ಜಿಲ್ಲೆಯಲ್ಲಿತ್ತು ಅತಿ ಹೆಚ್ಚಿನ ಪಳ್ಳಗಳು
ಮಂಜೇಶ್ವರ ತಾಲೂಕಿನ ದುರ್ಗಿಪಳ್ಳ, ಕುರ್ಚಿಪಳ್ಳ, ಮಜೀರ್ಪಳ್ಳ, ಶಾಂತಿಪಳ್ಳ, ಬೆದ್ರಂಪಳ್ಳ ಪ್ರದೇಶಗಳು ನೀರಿನ ಆಗರಗಳಿದ್ದ ಸ್ಥಳಗಳಾಗಿವೆ. ನೀಲೇಶ್ವರದ ಪಳ್ಳ ಎಂಬ ಪ್ರದೇಶ ಬಹುದೊಡ್ಡ ನೀರಿನ ಸ್ವಾಭಾವಿಕ ಜಲಾಶಯವೇ ಇತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ಆಧುನೀಕರಣ ಮತ್ತು ನಗರೀಕರಣದ ನೆಪದಲ್ಲಿ ಪಳ್ಳವಿದ್ದ ಸ್ಥಳಗಳು ಖಾಸಗಿ ಸ್ವತ್ತಾಗಿ ಮಾರ್ಪಾಡು ಹೊಂದುತ್ತಿವೆ. ಪಳ್ಳಗಳ ಸುತ್ತಮುತ್ತ ಮನೆಗಳು ಹಾಗೂ ಕಟ್ಟಡಗಳು ನಿರ್ಮಾಣವಾಗಿವೆ. ಆವರಣ ಗೋಡೆಯು ನಿರ್ಮಿಸಲ್ಪಟ್ಟು ಪಳ್ಳ ಪ್ರದೇಶವು ಕಿರಿದಾಗುತ್ತಲಿದೆ. ವಸತಿ ನಿರ್ಮಿಸುವ ಉದ್ದೇಶದಿಂದ ಪಳ್ಳವಿದ್ದ ಜಾಗದಲ್ಲಿ ಮಣ್ಣು ತುಂಬಿಸಿ ಸಮತಟ್ಟುಗೊಳಿಸುವ ಕಾರ್ಯ ಮುನ್ನಡೆಯುತ್ತಿದೆ. ಮಡಿಕೈ ಗ್ರಾ.ಪಂನಲ್ಲಿ ಇಂತಹ ಐದು ದೊಡ್ಡ ಪಳ್ಳಗಳನ್ನು ಅಭಿವೃದ್ಧಿಯ ನೆಪವೊಡ್ಡಿ ರಾಸಾಯನಿಕ ನ್ಪೋಟಕ ಬಳಸಿದ ಪರಿಣಾಮ ಪಳ್ಳಗಳಲ್ಲಿ ಕಂದಕ ಸೃಷ್ಠಿಯಾಗಿ ನೀರು ಶೇಖರಗೊಳ್ಳುತ್ತಿಲ್ಲ ಎನ್ನಲಾಗಿದೆ.

Advertisement

ಪಶ್ಚಿಮ ಘಟ್ಟ ಶ್ರೇಣಿ ಸಹಿತ ಹೆಚ್ಚಿನ ಗುಡ್ಡಗಾಡು ಪ್ರದೇಶ ಹೊಂದಿರುವ ಕಾಸರಗೋಡು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ನೀರು ತಗ್ಗು ಪ್ರದೇಶಗಳತ್ತ ಹರಿದು ಕಲ್ಲಿನ ಪಳ್ಳಗಳಲ್ಲಿ ಶೇಖರಗೊಳ್ಳುತ್ತದೆ. ನೀಲೇಶ್ವರದ ಪಳ್ಳ ಪ್ರದೇಶವನ್ನು ಸ್ಥಳೀಯರು ಕೊಡ ಎಂದು ಕರೆಯುತ್ತಿರುವುದು ಇದರ ಇಮ್ಮಡಿ ಮಹತ್ವವನ್ನು ಸಾರುತ್ತದೆ. ಕಾಸರಗೋಡು ಜಿಲ್ಲೆಯ ಸಂಸದ ಆದರ್ಶ ಗ್ರಾಮ ಕಿನಾರೂರು-ಕರಿಂದಳದಲ್ಲಿ ಸರಕಾರಿ ಭೂಮಿಯನ್ನು ಫಲಾನುಭವಿಗಳಿಗೆ ಹಂಚಿದ ಪರಿಣಾಮ ಬಹಳ ಹಿಂದೆಯೇ ಪಳ್ಳವಿದ್ದ ಇಲ್ಲಿನ ಪ್ರದೇಶವು ಜನವಾಸ ಕೇಂದ್ರವಾಗಿದೆ. ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ನೈಸರ್ಗಿಕ ಪಳ್ಳಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಪಳ್ಳಗಳು ಇಲ್ಲದಾಗುವುದರಿಂದ ಪ್ರಾಣಿ ಪಕ್ಷಿಗಳ ನೀರಿನ ಆಶ್ರಯ ತಾಣಗಳು ಕಡಿಮೆಯಾಗಿ ಭೂ ಪ್ರಕೃತಿಯ ಸಮೋತನದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಭೂಮಿಯಲ್ಲಿನ ಅಂತರ್ಜಲ ಮಟ್ಟವು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವ ಸಂದರ್ಭ ಅಳಿದುಳಿದ ಪಳ್ಳಗಳ ಸಂರಕ್ಷಣೆಗೆ ಜನಸಾಮಾನ್ಯರು ಸಹಿತ ಸ್ಥಳೀಯಾಡಳಿತಗಳು ಕಟಿಬದ್ಧರಾಗಬೇಕಿದೆ.

ಬೇಕಿದೆ ರಕ್ಷಣೆ
ಪೈವಳಿಕೆ ಗ್ರಾ.ಪಂ ವ್ಯಾಪ್ತಿಯ ಬಾಯಿಕಟ್ಟೆ ಸಮೀಪವಿರುವ ಪಳ್ಳದಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಧರ್ಮತ್ತಡ್ಕ ಬಳಿಯಿರುವ ಕಕ್ವೆ ಪಳ್ಳ ಸಹಿತ ಕುಂಬಳೆ ಸಮೀಪದ ಕಿದೂರು ಪಳ್ಳ, ಮಣಿಯಂಪಾರೆ ಸಮೀಪದ ಬೆದ್ರಂಪಳ್ಳಗಳು ನಾಗರಿಕರ ಮತ್ತು ಸ್ಥಳೀಯಾಡಳಿತದ ಪ್ರಯತ್ನದಿಂದ ಉತ್ತಮ ಸ್ಥಿತಿಯಲ್ಲಿವೆ. ಉಳಿದಂತೆ ಹತ್ತು ಹಲವು ಗ್ರಾಮಗಳ ಪಳ್ಳ ಸ್ಥಳಗಳು ಜನವಾಸ ಕೇಂದ್ರಗಳಾಗಿ ಕಾಲಗರ್ಭ ಸೇರಿವೆ.  ಜಿಲ್ಲೆಯ ಕುಂಬಳೆ ಅನಂತಪುರ ದೇವಸ್ಥಾನ ಸಹಿತ ಕಣ್ಣೂರಿನ ಮೀನಕುಳಂ ದೇವಸ್ಥಾನಗಳು ನೀರಿನ ಆಗರಗಳ ಮೇಲೆ ನಿರ್ಮಿತವಾಗಿದೆ, ಬಹಳ ಹಿಂದೆ ಜನರು ನೀರಿನ ಸಂಗ್ರಹಾಗಾರಗಳ ಮಹತ್ವವನ್ನು ಅರಿತಿದ್ದರು ಮತ್ತು ಪೂಜನೀಯವಾಗಿ ಕಂಡಿದ್ದರು ಎನ್ನುವ ಅಂಶ ಇದರಿಂದ ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಕಾಞಂಗಾಡಿನ ಜಲತಜ್ಞ ಪದ್ಮನಾಭನ್‌ ಅವರು.

ಜಿಲ್ಲೆಯ ಸುಪ್ರಧಾನ ಪಳ್ಳಗಳ ರಕ್ಷಣೆ ಕಾರ್ಯವಾಗಬೇಕು. ಪಳ್ಳಗಳು ನೀರಿನ ಮಹತ್ವವನ್ನು ತಿಳಿಸುತ್ತವೆ. ಕಳೆದ ಬಾರಿ ಬತ್ತಿರುವ ನೀಲೇಶ್ವರದ ಬೆಂಗಲಂ ಬಳಿಯ ಪಳ್ಳವನ್ನು ರಕ್ಷಿಸಲು ಕಕ್ಕಾಟ್‌ ಹಯರ್‌ ಸೆಕೆಂಡರಿ ಶಾಲೆ ಪ್ರಯತ್ನಿಸಿದೆ. ಸೂಕ್ತ ಆವರಣ ಗೋಡೆಯನ್ನು ನಿರ್ಮಿಸಲಾಗಿದೆ, ಮಳೆಗಾಲದ ಸಮಯ ನೀರು ಸಂಗ್ರಹವಾಗಿ ಉಪಯೋಗಪ್ರದವಾಗುತ್ತಿದೆ.
ಸಿ.ಪಿ ರಾಜೀವನ್‌, ಇತಿಹಾಸ ಪ್ರಾಧ್ಯಾಪಕರು, ನೆಹರು ಕಾಲೇಜು ಕಾಞಂಗಾಡು

ಪಳ್ಳಗಳನ್ನು ನೀರಿನ ಟ್ಯಾಂಕುಗಳೆನ್ನಬಹುದು. ಇವುಗಳಲ್ಲಿ ಸಂಗ್ರಹಗೊಂಡ ನೀರು ನಿಧಾನವಾಹಿ ಅಂತರ್ಜಲಕ್ಕಿಳಿಯುವುದರಿಂದ ಸುತ್ತುಮುತ್ತಲಿನ ಬಾವಿಗಳಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಬಹುದು. ಮನುಷ್ಯರಿಗೆ ಮಾತ್ರವಲ್ಲ ಪಕ್ಷಿ ಮೃಗಾದಿಗಳಿಗೂ ಪಳ್ಳಗಳು ಜೀವ ಸೆಲೆಯಾಗಿದೆ.
ರಾಜು ಕಿದೂರು, ಪಕ್ಷಿ ನಿರೀಕ್ಷಕ

ಹಿಂದಿನ ಕಾಲದಲ್ಲಿ ಪ್ರಾಣಿಗಳು ನೀರು ಕುಡಿಯಲು ಪಳ್ಳಗಳು ಸಹಾಯಕ ವಾಗುತ್ತಿತ್ತು. ಪಳ್ಳಗಳಲ್ಲದೇ ಮನಷ್ಯ ನಿರ್ಮಿತ ಮದಕಗಳು ಇಂದು ಮಾಯವಾಗುತ್ತಿವೆ. ಹಿಂದೆ ಕೃಷಿಗೆ ಇಲ್ಲಿನ ನೀರನ್ನು ಬಳಸಲಾಗುತ್ತಿತ್ತು. ಇದೀಗ ಜನರು ಎಚ್ಚೆತ್ತುಗೊಂಡು ಪಳ್ಳ, ಮದಕಗಳನ್ನು ಸಂರಕ್ಷಿಸಬೇಕಾಗಿದೆ. ಜಾಗೃತರಾಗಬೇಕಿದೆ.
ಹರೀಶ್‌ ಹಳೆಮನೆ, ಹವ್ಯಾಸಿ ಪ್ರಕೃತಿ ಛಾಯಾಗ್ರಾಹಕ

ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next