Advertisement

Supreme Court ತೀರ್ಪಿನಿಂದ ರಾಜಕಾರಣ ಸ್ವಚ್ಛ : ಪ್ರಧಾನಿ ಮೋದಿ

12:20 AM Mar 05, 2024 | Team Udayavani |

ಹೊಸದಿಲ್ಲಿ: ಶಾಸನಸಭೆಗಳ ಸದಸ್ಯರ ಭ್ರಷ್ಟಾಚಾರ ಮತ್ತು ಲಂಚಗುಳಿತನವು ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯವನ್ನು ಬುಡಮೇಲು ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಮತ ಚಲಾಯಿಸಲು ಮತ್ತು ಮಾತನಾಡಲು ಲಂಚ ಪಡೆಯುವ ಸಂಸದರು ಹಾಗೂ ಶಾಸಕರಿಗೆ ವಿಚಾರಣೆ ಯಿಂದ ವಿನಾಯಿತಿ ಒದಗಿಸಿದ್ದ 1998ರ ತೀರ್ಪು ರದ್ದುಪಡಿಸಿದ ಸುಪ್ರೀಂ ಕೋರ್ಟ್‌, ಶಾಸನ ಸಭೆಗಳ ಸಮಿತಿಗಳಲ್ಲಿ ಕೆಲಸ ಮಾಡುವ ಸದಸ್ಯರು ಸ್ವ ಪ್ರೇರಣೆಯಿಂದ ಮತ್ತು ಸದನದ ಕಾರ್ಯ ಕಲಾಪದ ಅಂತಃಸತ್ವವನ್ನು ಹೆಚ್ಚಿಸುವಂತಿರಬೇಕು ಎಂದು ಹೇಳಿದೆ.

Advertisement

ಶಾಸನಸಭೆಗಳ ಸದಸ್ಯರ ಭ್ರಷ್ಟಾಚಾರವು ಸಂವಿಧಾನದ ಆಕಾಂಕ್ಷೆಗಳು ಮತ್ತು ಪರ್ಯಾ ಲೋಚನೆಯ ತತ್ತÌಗಳನ್ನು ಹಾಳು ಮಾಡುತ್ತದೆ. ಇದು ಜವಾಬ್ದಾರಿಯುತ, ಸ್ಪಂದಿಸುವ ಮತ್ತು ಪ್ರಾತಿನಿಧಿಕ ಪ್ರಜಾಪ್ರಭುತ್ವ ದಿಂದ ನಾಗರಿಕರನ್ನು ವಂಚಿತಗೊಳಿಸುವ ರಾಜಕೀಯ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

1993ರಲ್ಲಿ ಪಿ.ವಿ. ನರಸಿಂಹ ರಾವ್‌ ಸರಕಾರವು ಅಲ್ಪ ಮತಕ್ಕೆ ಕುಸಿದಿತ್ತು. ಆಗ ಮಂಡಿಸಲಾದ ಅವಿಶ್ವಾಸ ನಿರ್ಣಯವನ್ನು, ಜೆಎಂಎಂನ ಐದು ಸಂಸದರ ನೆರವಿನಿಂದ ನರಸಿಂಹ ರಾವ್‌ ಸರಕಾರವು ಸೋಲಿಸಿತ್ತು. ಮರು ವರ್ಷವೇ ವಿಶ್ವಾಸ ಗೆಲ್ಲಲು ಸಂಸದರ ಲಂಚ ಪಡೆದಿದ್ದಾರೆಂಬ ಮಾಹಿತಿ ಹೊರ ಬಿತ್ತು. ಇದು, “ಮತಕ್ಕಾಗಿ ಲಂಚ’ ಪ್ರಕರಣ ಎಂದು ಕುಖ್ಯಾತಿ ಪಡೆಯಿತು.

ಈ ಪ್ರಕರಣದ ಕುರಿತು 1998ರಲ್ಲಿ ಸುಪ್ರೀಂ ಕೋರ್ಟ್‌ ಐವರು ನ್ಯಾಯಮೂರ್ತಿಗಳ ಸಂವಿಧಾನವು ಪೀಠವು ನೀಡಿ, ಸಂವಿಧಾನ ಒದಗಿ ಸುವ ವಿಶೇಷ ರಕ್ಷಣೆ ಯಡಿ ಆರೋಪಿತ ಸಂಸದರ ವಿಚಾರಣೆಯಿಂದ ವಿನಾಯಿತಿ ನೀಡಿತ್ತು.

ಆರ್ಟಿಕಲ್‌ 105, 194 ಏನು ಹೇಳುತ್ತವೆ?: ತಮ್ಮ ವಿರುದ್ಧ ಯಾವುದೇ ಕಾನೂನಿನ ಕ್ರಮದ ಭಯ ಇಲ್ಲದೇ ಕಾರ್ಯ ನಿರ್ವಹಿಸಲು ಸಂಸದರು ಮತ್ತು ಶಾಸಕರಿಗೆ ಸಂವಿಧಾನದ ಆರ್ಟಿಕಲ್‌ 105 ಮತ್ತು 194 ರಕ್ಷಣೆಯನ್ನು ಒದಗಿಸುತ್ತದೆ.

Advertisement

ಸದನದೊಳಗೆ ಸದಸ್ಯರಿಗೆ ವಾಕ್‌ ಸ್ವಾತಂತ್ರ್ಯ ಮತ್ತು ಅವರು ಮಾಡುವ ಟೀಕೆ, ಟಿಪ್ಪಣೆಗಳಿಗೆ ಅಥವಾ ಸಂಸತ್‌ ಅಥವಾ ಸದನ ಸಮಿತಿಯಲ್ಲಿ ಮತ ಚಲಾವಣೆ ಸಂಬಂಧ ಶಕ್ತಿಯನ್ನು ನೀಡು ತ್ತದೆ. ಉದಾಹರಣೆಗೆ, ಸಂಸದ ಅಥವಾ ಶಾಸಕರು, ಸದನದಲ್ಲಿ ಮಾಡಿದ ಟೀಕೆಗಳಿಗೆ ಮಾನನಷ್ಟ ಮೊಕದ್ದಮೆಯನ್ನು ಎದುರಿಸಲು ಸಾಧ್ಯವಿಲ್ಲ. ಒಂದು ವೇಳೆ, ಜನಪ್ರತಿನಿಧಿಗಳು ಆಕ್ಷೇಪಾರ್ಹ ಟೀಕೆಯನ್ನು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಪೀಕರ್‌ಗೆ ಅಧಿಕಾರ ವಿರುತ್ತದೆಯೇ ಹೊರತು ಕೋರ್ಟ್‌ಗಲ್ಲ.

ಲಂಚ ಪ್ರಕರಣಗಳು
2005ರ ಪ್ರಶ್ನೆಗಾಗಿ ಲಂಚ
ಸಂಸತ್‌ ಸದಸ್ಯರು ಪ್ರಶ್ನೆ ಕೇಳಲು ಲಂಚ ಪಡೆಯುತ್ತಿ ದ್ದಾರೆಂಬ ಮಾಹಿತಿಯು 2005ರಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಆನ್‌ಲೈನ್‌ ಸುದ್ದಿ ತಾಣ ಕೋಬ್ರಾಪೋಸ್ಟ್‌ ನಡೆಸಿದ ಸ್ಟಿಂಗ್‌ ಆಪರೇಶನ್‌ನಲ್ಲಿ ಈ ಲಂಚ ಪ್ರಕರಣ ಬಯಲಾಗಿತ್ತು. ಲೋಕಸಭೆಯ 10 ಮತ್ತು ರಾಜ್ಯಸಭೆ ಒಬ್ಬ ಸಂಸದರ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಪೈಕಿ ಬಿಜೆಪಿಯ 6 ಸಂಸದರಿದ್ದರೆ, ಬಿಎಸ್ಪಿಯಿಂದ ಮೂವರು ಮತ್ತು ಆರ್‌ಜೆಡಿ, ಕಾಂಗ್ರೆಸ್‌ನಿಂದ ತಲಾ ಒಬ್ಬ ಸದಸ್ಯರಿದ್ದರು. 2005 ಡಿಸೆಂಬರ್‌ 24ರಂದು ಸಂಸತ್ತಿನಿಂದ ಈ 11 ಸಂಸದರನ್ನು ಉಚ್ಚಾಟಿಸಲಾಗಿತ್ತು.

2008ರ ಮತಕ್ಕಾಗಿ ಲಂಚ
ಅಮೆರಿಕ-ಭಾರತ ಅಣು ಒಪ್ಪಂದ ಸಂಬಂಧ ಯುಪಿಎ-1 ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡ ಪಕ್ಷಗಳು ವಾಪಸ್‌ ಪಡೆದುಕೊಂಡಿದ್ದವು. ಸರಕಾರ ಅಲ್ಪಮತಕ್ಕೆ ಕುಸಿದಿದ್ದರಿಂದ, ಅಂದಿನ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರು, 2008 ಜುಲೈ 22ರಂದು ವಿಶ್ವಾಸಮತ ಗೆದ್ದಿದ್ದರು. ಆದರೆ “ಮತಕ್ಕಾಗಿ ಲಂಚ’ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಎಸ್‌ಪಿ ನಾಯಕ ದಿ| ಅಮರ್‌ ಸಿಂಗ್‌, ಬಿಜೆಪಿಯ ಸುಧೀಂದ್ರ ಕುಲಕರ್ಣಿ ಸಹಿತ 7 ಸದಸ್ಯರು ಹಣದ ಕಂತೆಗಳನ್ನು ಸದನದಲ್ಲಿ ಪ್ರದರ್ಶಿಸಿದ್ದರು.

2023ರ ಮಹುವಾ ಕೇಸ್‌
ಟಿಎಂಸಿ ಸಂಸದೆಯಾಗಿದ್ದ ಮಹುವಾ ಮೊಯಿತ್ರಾ ಅವರು ಪ್ರಧಾನಿ ಮೋದಿ ಮತ್ತು ಅದಾನಿ ಗ್ರೂಪ್‌ ವಿರುದ್ಧ ಸದನದಲ್ಲಿ ಪ್ರಶ್ನೆಗಳನ್ನು ಕೇಳಲು, ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು ಸ್ಪೀಕರ್‌ಗೆ ದೂರು ನೀಡಿದ ಬಳಿಕ, ಇಡೀ ಪ್ರಕರಣ ಬಯಲಾಗಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಸಂಸತ್ತಿನ ನೈತಿಕ ಸಮಿತಿಯ, ಮಹುವಾ ಮೋಯಿತ್ರಾ ದೋಷಿ ಎಂದು ಹೇಳಿತ್ತು. ಬಳಿಕ, ಲೋಕಸಭೆಯಿಂದ ಅವರನ್ನು ಉಚ್ಚಾಟಿಸಲಾಯಿತು.

ಸುಪ್ರೀಂ ತೀರ್ಪಿನಿಂದ ರಾಜಕಾರಣ ಸ್ವಚ್ಛ: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ಪ್ರಧಾನಿ ನರೇಂದ್ರ ಮೋದಿ “ಸ್ವಾಗತಂ’ ಎಂದು ಟ್ವೀಟ್‌ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು, ಇದು ಸ್ವಚ್ಛ ರಾಜಕಾರಣವನ್ನು ಖಚಿಪಡಿಸುತ್ತದೆ ಮತ್ತು ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next