Advertisement

ರಾಜೀನಾಮೆ ಅಂಗೀಕಾರವಾದರೆ ರಾಜಕೀಯ ನಿವೃತ್ತಿ

09:05 PM Jul 12, 2019 | Team Udayavani |

ಹೊಸಕೋಟೆ: ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಅಂಗೀಕಾರವಾದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸಚಿವ ಎನ್‌.ನಾಗರಾಜ್‌ ಸವಾಲೆಸೆದರು.

Advertisement

ಸಚಿವ ನಾಗರಾಜ್‌, ರಾಜೀನಾಮೆ ಸಲ್ಲಿಸಿದ ಬಳಿಕ ನಗರಕ್ಕೆ ಆಗಮಿಸಿ, ಕುವೆಂಪು ನಗರದ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ನಂತರ ಪ್ರವಾಸಿ ಮಂದಿರದ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿದರು.

ಅಭಿವೃದ್ಧಿ ಮಾಡಲು ಸಾಧ್ಯವಾಗದಂತಹ ಅಧಿಕಾರ ಏಕೆ ಬೇಕು? 70 ಶಾಸಕರಿರುವ ಕಾಂಗ್ರೆಸ್‌ನವರೇ ಮುಖ್ಯಮಂತ್ರಿಯಾಗಬೇಕಿತ್ತು ಎಂಬುದಾಗಿ ಹಿಂದೆಯೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ತಿಳಿಸಲಾಗಿತ್ತು.

ಜೆಡಿಎಸ್‌ ಈಗಾಗಲೇ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವ ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ಮುಂದುವರಿಯುವುದು ಸೂಕ್ತವಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ತಾರತಮ್ಯ ಮಾಡಿರುವ ಕಾರಣದಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಕಡಿಮೆ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗದೆ ಜನರಿಗೆ ಉತ್ತರಿಸಲು ಆಗುತ್ತಿಲ್ಲ. ವಸತಿ ಇಲಾಖೆಗೆ 2019ರ ಬಜೆಟ್‌ನಲ್ಲಿ 400 ಕೋಟಿ ರೂ.ಗಳ ಅನುದಾನಕ್ಕೆ ಮನವಿ ಸಲ್ಲಿಸಲಾಗಿತ್ತು.

Advertisement

ರಾಜ್ಯದಲ್ಲಿ ಲಕ್ಷಾಂತರ ಮಂದಿ ವಸತಿ ಹೀನರಿದ್ದು 15 ಲಕ್ಷ ಮನೆ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿಗಳೇ ಬಜೆಟ್‌ನಲ್ಲಿ ತಿಳಿಸಿದ್ದರು. ಆದರೆ ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಹಲವಾರು ಬಾರಿ ಚರ್ಚಿಸಿದರೂ ಸಹ ಸಕಾರಾತ್ಮಕವಾದ ಸ್ಪಂದನೆ ದೊರಕಿಲ್ಲ.

ನಿಗಮ, ಮಂಡಳಿ, ಸಮಿತಿಗಳ ನೇಮಕಾತಿಯಲ್ಲೂ ಸಹ ಸಮತೋಲನಕ್ಕೆ ತೀರ್ಮಾನಿಸಲಾಗಿತ್ತು. ಅಧಿಕಾರಿಗಳ ನೇಮಕ, ವರ್ಗಾವಣೆ ಬಗ್ಗೆ ಸ್ಥಳೀಯ ಶಾಸಕರ ಅಭಿಪ್ರಾಯಗಳಿಗೆ ಕಿಮ್ಮತ್ತಿಲ್ಲದಂತಾಗಿದೆ ಎಂದು ದೂರಿದರು.

ಕಲಾಪದಲ್ಲಿ ಪ್ರಶ್ನೆ: ಬಜೆಟ್‌ನಲ್ಲಿ ನಿಗದಿಪಡಿಸಿರುವ ಹಣ ಬಿಡುಗಡೆಯಾಗದ ಬಗ್ಗೆ ಶುಕ್ರವಾರ ಆರಂಭವಾದ ಕಲಾಪದಲ್ಲಿ ಪ್ರಶ್ನಿಸಲು ಯೋಜಿಸಿದ್ದೆ. ರಾಜೀನಾಮೆ ಸಂಬಂಧವಾಗಿ ಸ್ಪೀಕರ್‌ ಜು.17ರಂದು ತಿಳಿಸಿರುವಂತೆ ವಿಚಾರಣೆಗೆ ಹಾಜರಾಗಲಾಗುವುದು.

ನಂತರ ತಾಲೂಕಿನ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಗೊಳ್ಳಲಾಗುವುದು ಎಂದು ತಿಳಿಸಿದರು. ಮುಖಂಡರಾದ ನಾರಾಯಣಗೌಡ, ಶಶಿಧರ್‌, ರಾಮಾಂಜಿನಿ, ಅರುಣ್‌ಕುಮಾರ್‌, ಎಚ್‌.ಜೆ. ಮೋಹನ್‌ ಮುಂತಾದವರು ಭಾಗವಹಿಸಿದ್ದರು. ಪ್ರವಾಸಿ ಮಂದಿರದಲ್ಲಿ ಸುಮಾರು 3 ಗಂಟೆಗಳ ಕಾಲ ಚರ್ಚಿಸಿ ನಂತರ ಹಿಂದಿರುಗುವ ಸಂದರ್ಭದಲ್ಲಿ ಕೆಲವು ಕಾರ್ಯಕರ್ತರು ರಾಜೀನಾಮೆ ನೀಡಬಾರದು.

ಇದರಿಂದ ಕಾರ್ಯಕರ್ತರು ತೊಂದರೆ ಅನುಭವಿಸಬೇಕಾಗುತ್ತಿದೆ ಎಂದು ಮನವಿ ಮಾಡಿಕೊಂಡರು. ಸರ್ಕಾರಿ ನಾಮಫಲಕ ಹೊಂದಿದ್ದ ಕಾರನ್ನು ಬಳಸದೆ ಸ್ವಂತ ಕಾರಿನಲ್ಲಿ ಆಗಮಿಸಿದ್ದ ಕಾರಿಗೆ ಪೊಲೀಸ್‌ ಬೆಂಗಾವಲು ಇರಲಿಲ್ಲ. ಸ್ಥಳದಲ್ಲಿ ಹಿಂದಿನಂತೆ ಹಾಜರಿರುತ್ತಿದ್ದ ಪೊಲೀಸ್‌ ಸಿಬ್ಬಂದಿ ಕಂಡುಬರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next