Advertisement

ಎಸ್‌ಎಂಕೆ ಭೇಟಿ ಮಾಡಿದ ರಾಜಕೀಯ ನಾಯಕರು

03:45 AM Feb 01, 2017 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಕೃಷ್ಣ ರಾಜಿನಾಮೆ ನೀಡಿದ ಬೆನ್ನಲ್ಲೇ ರಾಜಕೀಯ ನಾಯಕರು
ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸುತ್ತಿರುವುದು ಮುಂದುವರಿದಿದೆ. ಈ ಮಧ್ಯೆ, ಕೃಷ್ಣ ಅವರ ನಿವಾಸಕ್ಕೆ ಜೆಡಿಎಸ್‌ನಿಂದ ಅಮಾನತುಗೊಂಡ ಶಾಸಕರು ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

Advertisement

ಮಾಜಿ ಸಚಿವ ಚಲುವರಾಯಸ್ವಾಮಿ, ಜಮೀರ್‌ ಅಹಮದ್‌, ಶಾಸಕ ಮಾಗಡಿ ಬಾಲಕೃಷ್ಣ, ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಅವರು ಮಂಗಳವಾರ ಸದಾಶಿವನಗರದ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಕೆಲಹೊತ್ತು ಚರ್ಚಿಸಿದರು.

ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಚೆಲುವರಾಯಸ್ವಾಮಿ, ಇದೊಂದು ಸೌಜನ್ಯ ಭೇಟಿ. ಎಸ್‌. ಎಂ.ಕೃಷ್ಣ, ಎಚ್‌.ಡಿ. ದೇವೇಗೌಡರು ರಾಷ್ಟ್ರಮಟ್ಟದ ಮುತ್ಸದ್ಧಿ ರಾಜಕಾರಣಿಗಳು. ಅವರು ನಮಗೆಲ್ಲಾ ಮಾದರಿ. ಜತೆಗೆ ಕೃಷ್ಣ
ಅವರು ನಮ್ಮ ಮಂಡ್ಯ ಜಿಲ್ಲೆಯವರು. ನಾನು ಅದೇ ಜಿಲ್ಲೆಯವನಾಗಿ ಅವರನ್ನು ಭೇಟಿ ಮಾಡಿದ್ದೆ ಎಂದು ಹೇಳಿದರು.
ಜಮೀರ್‌ ಅಹಮದ್‌, ಹಿರಿಯ ನಾಯಕರಾದ ಎಸ್‌.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತನಾಡಿದೆವು. ಇದು
ರಾಜಕೀಯ ಭೇಟಿಯಾಗಿರಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದು ತಿಳಿಸಿದರು.

ನಾಯಕರ ದಂಡು:
ಎಸ್‌.ಎಂ.ಕೃಷ್ಣ ನಿವಾಸ ಮಂಗಳವಾರ ವಿವಿಧ ಪಕ್ಷಗಳ ನಾಯಕರಿಂದ ತುಂಬಿತ್ತು. ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ವಿ.ಶ್ರೀನಿವಾಸಪ್ರಸಾದ್‌, ಈ ಹಿಂದೆ ಕಾಂಗ್ರೆಸ್‌ನಲ್ಲೇ ಇದ್ದು ಇದೀಗ ಬಿಜೆಪಿಯಲ್ಲಿರುವ ಮಾಜಿ ಸಂಸದ
ಜಿ.ಎಸ್‌.ಬಸವರಾಜು ಹಾಗೂ ಬಿಜೆಪಿ ನಾಯಕ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಸೇರಿ ಹಲವು ನಾಯಕರು ಭೇಟಿ ಮಾಡಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀನಿವಾಸ್‌ ಪ್ರಸಾದ್‌, ನಾನು ಕಾಂಗ್ರೆಸ್‌ಗೆ ರಾಜಿನಾಮೆ ಕೊಡುವಾಗ
ಅವರ ಜತೆ ಮಾತನಾಡಿದ್ದೆ. ಈಗ ಅವರೂ ಕಾಂಗ್ರೆಸ್‌ ತ್ಯಜಿಸಿದ್ದಾರೆ. ಬಿಜೆಪಿಗೆ ಬರುವಂತೆ ಕೇಳಿಕೊಂಡಿಲ್ಲ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next