Advertisement

ಕೋವಿಡ್ ಸಂಕಷ್ಟದಲ್ಲಿ ರಾಜಕೀಯ ರಂಪಾಟ ನಾಚಿಕೆಗೇಡು: ಹೊರಟ್ಟಿ

12:18 PM May 31, 2020 | Suhan S |

ಹುಬ್ಬಳ್ಳಿ: ಕೋವಿಡ್ ಸೋಂಕಿನಿಂದ ಜನರು ತತ್ತರಿಸುತ್ತಿರುವ ಸಂದರ್ಭದಲ್ಲಿ ನಾಯಕತ್ವದ ಬದಲಾವಣೆ ಹೇಳಿಕೆ, ಶಾಸಕರ ರಾಜೀನಾಮೆ ವಿಚಾರಗಳು ರಾಜಕಾರಣಿಗಳ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದೆ. ಇದು ಜವಾಬ್ದಾರಿಯುತ ರಾಜಕಾರಣಿಗಳ ನಡೆಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅಧಿಕಾರಕ್ಕಾಗಿ ಕಚ್ಚಾಡುವ ಸಂದರ್ಭವಲ್ಲ. ಪಕ್ಷಭೇದ ಮರೆತು ಕೋವಿಡ್‌-19 ವಿರುದ್ಧ ಹೋರಾಡಬೇಕು. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ, ಶಾಸಕರ ರಾಜೀನಾಮೆ ನಾಚಿಕೆಗೇಡಿನ ವಿಚಾರ.ಸಂಕಷ್ಟದ ಸಂದರ್ಭದಲ್ಲಿ ರಾಜಕಾರಣಕ್ಕೆ ಒತ್ತು ನೀಡಿದರೆ ಜನರು ತಕ್ಕ ಶಾಸ್ತಿ ಮಾಡುವುದು ಖಚಿತ. ಪರಿಸ್ಥಿತಿ ಅರಿತು ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಜೂ. 4ರಂದು ಪಕ್ಷಾಂತರ ನಿಷೇಧ ವಿಚಾರವಾಗಿ ಸಭೆ ನಡೆಯಲಿದ್ದು, ಒಮ್ಮೆ ಚುನಾಯಿತನಾದ ವ್ಯಕ್ತಿ ರಾಜೀನಾಮೆ ನೀಡಿದರೆ ಅವಧಿ ಪೂರ್ಣಗೊಳ್ಳುವವರೆಗೂ ಯಾವುದೇ ಸ್ಥಾನಮಾನ ನೀಡುವಂತಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ಇತ್ತೀಚೆಗೆ ಬಿಜೆಪಿಗೆ ಹೋಗಿ ಸೋತಿರುವ ಶಾಸಕರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿದರೆ ಪಕ್ಷದಲ್ಲಿ ಇದುವರೆಗೆ ದುಡಿದುಕೊಂಡು ಬಂದಿರುವವರ ಪಾಡೇನು. ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದು, ರಾಜೀನಾಮೆ ಕೊಡಿಸಿ ಮಂತ್ರಿ ಸ್ಥಾನ ಕೊಡುವುದು ಪಕ್ಷಕ್ಕೆ ದೊಡ್ಡ ಗಂಡಾಂತರ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಸೂಕ್ತ ನಿರ್ಧಾರ ಕೈಗೊಳ್ಳುವುದು ಉತ್ತಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next