Advertisement

ರಾಜಕೀಯ ಗೊಂದಲಗಳಿಗೆ ಕಡಿವಾಣ ಹಾಕಲೇಬೇಕು

11:51 PM Aug 11, 2021 | Team Udayavani |

ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ, ಹೊಸ ಸಂಪುಟ, ಖಾತೆ ಹಂಚಿಕೆ ಎಲ್ಲವೂ ಮುಗಿದ ಅನಂತರ ಇನ್ನೇನು ಸರಕಾರ ಅಭಿವೃದ್ಧಿಯತ್ತ ಗಮನಹರಿಸಲಿದೆ ಎಂದುಕೊಳ್ಳುತ್ತಿರುವಂತೆ ಖಾತೆ ಹಂಚಿಕೆಯ ಅಸಮಾಧಾನ ಆಡಳಿತಾರೂಢ ಬಿಜೆಪಿಯಲ್ಲಿ ಸ್ಫೋಟಗೊಂಡು ಸಂಧಾನ, ಮಾತುಕತೆ, ರಾಜೀನಾಮೆಯ ಬೆದರಿಕೆ ಹಂತಕ್ಕೆ ಹೋಗಿರುವುದು ಒಳ್ಳೆಯ ಬೆಳವಣಿಗೆಯಲ್ಲ.

Advertisement

ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ ಎಂಬ ಮಾತು ಕೇವಲ ಮಾತಿಗೆ ಸೀಮಿತವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಲ್ಲವೂ ಹೈಕಮಾಂಡ್‌ ಅಥವಾ ವರಿಷ್ಠರದೇ ತೀರ್ಮಾನ ಇದರಲ್ಲಿ ಯಾವ ಪಕ್ಷವೂ ಹೊರತಲ್ಲ.

ಬಿಜೆಪಿಯಲ್ಲಿ ಈಗ ಉಂಟಾಗಿರುವ ಖಾತೆ ಹಂಚಿಕೆ ಅಸಮಾಧಾನವನ್ನು ಈಗಲೇ ಶಮನ ಮಾಡದಿದ್ದರೆ ಮುಂದೆ ಬೇರೆ ರೀತಿಯ ಸ್ವರೂಪ ಪಡೆಯುವ ಸಾಧ್ಯತೆಗಳೂ ಇಲ್ಲದಿಲ್ಲ. ಹೀಗಾಗಿ, ಪಕ್ಷದ ವರಿಷ್ಠರು ಈ ಕುರಿತು ಗಂಭೀರವಾಗಿ ಯೋಚಿಸಿ ಕ್ರಮ ಕೈಗೊಳ್ಳಬೇಕು.

ಖಾತೆ ಹಂಚಿಕೆ ಕುರಿತು ಅಸಮಾಧಾನ ಮುಂದೆ ಇಲಾಖೆಗೆ ಇಂಥದ್ದೇ ಅಧಿಕಾರಿ ಬೇಕು. ಇಷ್ಟು ಅನುದಾನ ಬೇಕು, ಇಂಥದ್ದೇ ಯೋಜನೆ ಅನುಷ್ಠಾನವಾಗಬೇಕು ಎಂಬ ಷರತ್ತುಗಳಿಗೆ ವಿಸ್ತರಿಸಿದರೆ ಖಂಡಿತವಾಗಿಯೂ ಉತ್ತಮ ಸರಕಾರ ಕೊಡಲು ಸಾಧ್ಯವಿಲ್ಲ.

ಕಾಂಗ್ರೆಸ್‌-ಜೆಡಿಎಸ್‌ ಸರಕಾರ ಪತನಕ್ಕೆ ಕಾರಣವಾಗಿದ್ದು ಇಂಥದ್ದೇ ಅಂಶಗಳು. ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ, ಸಚಿವಗಿರಿಯ ಬೇಡಿಕೆ, ಪ್ರಿಯವಾದ ಖಾತೆಗೆ ಪಟ್ಟು, ಶಾಸಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ವಿಚಾರಗಳಿಂದ ಸರಕಾರವೇ ಪತನವಾಗುವ ಹಂತಕ್ಕೆ ತಲುಪಿತು.

Advertisement

ಹರಸಾಹಸದ ನಡುವೆ ರಚನೆಯಾದ ಬಿಜೆಪಿ ಸರಕಾರಕ್ಕೆ ಎರಡು ವರ್ಷ ಪ್ರವಾಹ, ಕೊರೊನಾ ಸವಾಲಾಗಿ ಪರಿಣಮಿಸಿತು. ಜತೆಗೆ ಆಂತರಿಕ ಸಂಘರ್ಷದಿಂದ ಮುಖ್ಯಮಂತ್ರಿ ಬದಲಾವಣೆಯೂ ಆಯಿತು. ಇದೀಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು ಮತ್ತೆ ಅದೇ ವರ್ತನೆಗಳು ಪುನರಾವರ್ತನೆಯಾಗುತ್ತಿವೆ.ಅತೃಪ್ತ ಶಾಸಕರ ಬಹಿರಂಗ ಹೇಳಿಕೆ, ರಹಸ್ಯ ಮಾತುಕತೆ, ಖಾತೆ ಹಂಚಿಕೆ ಬಗ್ಗೆ ಆಕ್ರೋಶ, ರಾಜೀನಾಮೆ ನೀಡಲು ಮುಂದಾಗುವುದು ಇವೆಲ್ಲವೂ ಯಾವುದೇ ಸರಕಾರಕ್ಕೆ ಶೋಭೆ ತರುವ ವಿಷಯವಲ್ಲ. ಪಕ್ಷದ ಹಿರಿಯರು ಸಮಸ್ಯೆ ಬಗೆಹರಿಸಿ ಸುಸೂತ್ರವಾಗಿ ಆಡಳಿತ ಯಂತ್ರ ನಡೆಯುವಂತೆ ನೋಡಿಕೊಳ್ಳಬೇಕು.

ವಿಧಾನಸಭೆ ಚುನಾವಣೆಗೆ 21 ತಿಂಗಳು ಬಾಕಿ ಇದ್ದು ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದ ಉಂಟಾಗಿರುವ  ಆರ್ಥಿಕ ಸಂಕಷ್ಟ ನಿವಾರಣೆ ಮಾಡಿ ಬಜೆಟ್‌ ಯೋಜನೆಗಳ ಅನುಷ್ಠಾನಕ್ಕೆ ಗಮನಹರಿಸಬೇಕು.  ಇಲ್ಲವಾದರೆ  ಈ ಸರಕಾರವು ಎಷ್ಟು ದಿನವೋ ಎಂಬ ತೂಗುಗತ್ತಿ ನೇತಾಡುವಂತಾದರೆ ಅಭಿವೃದ್ಧಿ ಮರೀಚಿಕೆಯಾಗುತ್ತದೆ.

ಇದಷ್ಟೇ ಅಲ್ಲ, ಸದ್ಯ ರಾಜ್ಯ ಕೊರೊನಾ ಮೂರನೇ ಅಲೆಯ ಅಪಾಯ ಎದುರಿಸುತ್ತಿದೆ. ಇದಕ್ಕೆ ಈಗಿನಿಂದಲೇ ಸಜ್ಜಾಗಬೇಕಿದೆ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಎರಡನೇ ಅಲೆಯಲ್ಲಿ ಆದ ಆಪಾಯವೇ ಮರುಕಳಿಸುವ ಸಾಧ್ಯತೆಯೂ ಇದೆ. ಹಾಗೆಯೇ ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ತಲೆದೋರಿತ್ತು. ಈಗಷ್ಟೇ ಅಲ್ಲಿನ ಜನ ಚೇತರಿಸಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರಾಜಕೀಯ ಮೇಲಾಟಗಳು ನಡೆದು, ಸರಕಾರವೇ ಅಪಾಯದಲ್ಲಿದೆ ಎಂಬ ಭಾವನೆ ಬರಬಾರದು. ಇದಕ್ಕೆ ಸರಕಾರವೂ ಆಸ್ಪದ ಕೊಡಬಾರದು.

Advertisement

Udayavani is now on Telegram. Click here to join our channel and stay updated with the latest news.

Next