Advertisement

ರಾಜಕೀಯ ತಲ್ಲಣ: ಸಿದ್ದು ಪ್ರವಾಸ ಮೊಟಕು

06:00 AM Dec 13, 2018 | |

ಬೆಳಗಾವಿ: ಮಲೇಶಿಯಾ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ದಿನ ಮುಂಚಿತವಾಗಿ ಗುರುವಾರ ಮುಂಜಾನೆ ವಾಪಸ್ಸಾಗಲಿದ್ದು, ರಾಜ್ಯ ರಾಜಕೀಯ ಚಟುವಟಿಕೆ ಗರಿಗೆದರುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಪೂರ್ವನಿಗದಿಯಂತೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯ ಅವರು ಗುರುವಾರ ರಾತ್ರಿ ವಾಪಸ್‌ ಬರಬೇಕಿತ್ತಾದರೂ ಒಂದು ದಿನ ಮುಂಚಿತವಾಗಿ ವಾಪಸ್‌ ಬರಲಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ, ಶಾಸಕಾಂಗ ಪಕ್ಷದ ಸಭೆ, ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮತ್ತಿತರ ಬೆಳವಣಿಗೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪ್ರವಾಸದಿಂದ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗಿದೆ. ಸಂಪುಟ ವಿಸ್ತರಣೆ ವೇಳೆ ರಮೇಶ್‌ ಜಾರಕಿಹೊಳಿ ಅವರನ್ನು ಕೈ ಬಿಡಲು ಚಿಂತನೆ ನಡೆದಿದೆ. ಅವರ ಬದಲಿಗೆ ಸತೀಶ್‌ ಜಾರಕಿಹೊಳಿಗೆ ಸಂಪುಟಕ್ಕೆ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಈ ದಿಢೀರ್‌ ಬೆಳವಣಿಗೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಹೈಕಮಾಂಡ್‌ ಜತೆ ಚರ್ಚಿಸಲು ಪ್ರವಾಸ ಮೊಟಕುಗೊಳಿಸಿ ಬುಧವಾರ ಮಧ್ಯರಾತ್ರಿಯೇ ಮಲೇಶಿಯಾದಿಂದ ನಿರ್ಗಮಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಂಪುಟ ವಿಸ್ತರಣೆ ಅನುಮಾನ? ಆದರೆ, ಇನ್ನೊಂದು ಮೂಲ ಗಳ ಪ್ರಕಾ ರ ಧನುರ್ಮಾಸ ಕಳೆದು ಸಂಕ್ರಾಂತಿ ವೇಳೆಗೆ ಸಂಪುಟ
ವಿಸ್ತರಣೆಯಾಗಬಹುದು ಎನ್ನಲಾಗಿದೆ. ಐದು ರಾಜ್ಯಗಳ ಫಲಿತಾಂಶದ ನಂತರ ತಕ್ಷಣಕ್ಕೆ ಸಂಪುಟ ವಿಸ್ತರಣೆ ಮಾಡಲೇಬೇಕಾದ ಅನಿವಾರ್ಯತೆ ಇಲ್ಲ. ಸಂಕ್ರಾಂತಿ ನಂತರ ಅಥವಾ ಲೋಕಸಭೆ ಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡಬಹುದಾ ಎಂಬ ಚಿಂತನೆ ನಡೆಯುತ್ತಿದೆ. ಲೋಕಸಭೆ ಚುನಾವಣೆ ನಂತರ ನಿಷ್ಕ್ರಿಯ ಸಚಿವರನ್ನು ಕೈ ಬಿಟ್ಟು ಮತ್ತಷ್ಟು ಹೊಸಬರಿಗೆ ಅವಕಾಶ ನೀಡುವ ಭರವಸೆ ನೀಡಿ ಸಂಪುಟ ವಿಸ್ತರಣೆ ಮುಂದೂಡಬಹುದು ಎಂದು ಹೇಳಲಾಗುತ್ತಿದೆ. ಮತ್ತೂಂದು ಮೂಲಗಳ ಪ್ರಕಾರ, ಡಿ.22ರಂದು ಸಂಪುಟ ವಿಸ್ತರಣೆಯಾಗದಿದ್ದರೂ ಅವಕಾಶ ಸಿಗದವರು ಬಂಡಾಯ ಏಳುವ ಪರಿಸ್ಥಿತಿಯೂ ಈಗಿಲ್ಲ. ಹೀಗಾಗಿ, ಸಂಪುಟ ವಿಸ್ತರಣೆ ಜತೆಗೆ, ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಮಾಡಿದರೆ ಲೋಕಸಭೆ ಚುನಾವಣೆಗೆ ಸಜ್ಜಾಗಲು ಅನುಕೂಲ ವಾಗುತ್ತದೆ. ಸಚಿವ ಸ್ಥಾನ ಸಿಗದ ಅಸಮಾಧಾನಿತರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿ ಸಮಾಧಾನ ಪಡಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ.

ಮೆತ್ತಗಾದ ಸಚಿವ ಜಾರಕಿಹೊಳಿ ಬಂಡಾಯ ಏನಿಲ್ಲ ಎನ್ನುತ್ತಲೇ ಸಮಯ ಸಿಕ್ಕಾಗಲೆಲ್ಲಾ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ಸಚಿವ ರಮೇಶ್‌ ಜಾರಕಿಹೊಳಿ, ಪಂಚರಾಜ್ಯಗಳ ಫಲಿತಾಂಶದ ನಂತರ ಮೆತ್ತಗಾಗಿದ್ದಾರೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಗರಾಭಿವೃದ್ಧಿ ಖಾತೆಯ ಭರವಸೆಯೂ ಅವರಿಗೆ ಸಿಕ್ಕಿದೆ ಎನ್ನಲಾಗಿದೆ. ಆದರೆ, ರಮೇಶ್‌ ಜಾರಕಿಹೊಳಿ ಅವರನ್ನು ಕೈ ಬಿಟ್ಟು ಸತೀಶ್‌ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧರಿಸಿದೆ ಎಂದೂ ಹೇಳಲಾಗಿದೆ. ಇದರ ಸುಳಿವು ಅರಿತಿರುವ ರಮೇಶ್‌ ಜಾರಕಿಹೊಳಿ ಮೆತ್ತಗಾಗಿದ್ದಾರೆ ಎನ್ನಲಾಗಿದೆ.

ಡಿ.21ರಂದು ದೆಹಲಿಗೆ ತೆರಳುತ್ತಿದ್ದು, ಸಂಪುಟ ವಿಸ್ತರಣೆ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜತೆ ಚರ್ಚಿಸಿ ಡಿ.22 ರಂದು ಸಂಪುಟ ವಿಸ್ತರಣೆ ಮಾಡಲು ಪ್ರಯತ್ನಿಸಲಾಗುವುದು.
– ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next