Advertisement

ಪೊಲೀಸರಿಂದ ಏಕಕಾಲಕ್ಕೆ 2144 ರೌಡಿಗಳ ಮನೆ ಮೇಲೆ ದಾಳಿ : ಬೆಂಗಳೂರಿನ ಇತಿಹಾಸದಲ್ಲಿ ಇದೇ ಮೊದಲು

09:36 PM Jul 10, 2021 | Team Udayavani |

ಬೆಂಗಳೂರು: ಬೆಂಗಳೂರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಗರದ ಎಂಟು ಕಾನೂನು ಸುವ್ಯವಸ್ಥೆ ವಿಭಾಗದ ಎಲ್ಲ ಪೊಲೀಸ್‌ ಠಾಣಾ ವ್ಯಾಪ್ತಿಗಳ ಸಾವಿರಾರು ರೌಡಿ ಶೀಟರ್‌ ಗಳ, ಕಚೇರಿಗಳ ಮೇಲೆ ಶನಿವಾರ ದಾಳಿ ನಡೆಸಲಾಗಿದೆ.

Advertisement

ಮುಂಜಾನೆ ಐದು ಗಂಟೆಯಿಂದ ಅಪರಾಹ್ನ 12.30ರವರೆಗೆ ನಗರದ ಸುಮಾರು 2144 ರೌಡಿ ಶೀಟರ್‌ ಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ ಮಾರಕಾಸ್ತ್ರಗಳು, 91 ಶಸ್ತ್ರಾಸ್ತ್ರಗಳು, 12 ಕೆ,ಜಿ. ಗಾಂಜಾ ಸೇರಿ ಇತರೆ ಮಾದಕ ವಸ್ತುಗಳು, ಮೊಬೈಲ್‌ ಗಳು, ಅಕ್ರಮಕ್ಕೆ ಬಳಸುತ್ತಿದ್ದ ದ್ವಿಚಕ್ರ, ತ್ರಿಚಕ್ರ, ಕಾರುಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಒಂದು ವರ್ಷದಿಂದ ನಗರದಲ್ಲಿ ರೌಡಿ ಚುಟುವಟಿಕೆಗಳು ಹೆಚ್ಚಾಗುತ್ತಿತ್ತು. ಇತ್ತೀಚೆಗೆ ನಗರದಲ್ಲಿ ನಡೆದ ಮಾಜಿ ಕಾರ್ಪೋರೇಟರ್‌ ರೇಖಾ ಕದಿರೇಶ್‌ ಕೊಲೆ, ಫೈನಾನ್ಸಿಯರ್‌ ಮದನ್‌ ಹಾಗೂ ಇತರೆ ಕೊಲೆ ಪ್ರಕರಣದ ತನಿಖೆಯಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿಯೇ ಕೊಲೆಯಾಗಿದೆ ಎಂಬುದು ಪತ್ತೆಯಾಗಿದೆ. ಇದರೊಂದಿಗೆ ನಗರದಲ್ಲಿ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಡ್ರಗ್ಸ್‌ ಮಾಫಿಯಾ, ಹಫ್ತಾ ವಸೂಲಿ ಹಾಗೂ ಇತರೆ ಅಪರಾಧ ಚಟುವಟಿಕೆಗಳು ಅಧಿಕವಾಗಿದ್ದವು. ಈ ಹಿನ್ನೆಲೆಯಲ್ಲಿ ರೌಡಿಶೀಟರ್‌ ಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ವೇಳೆ ಪ್ರಸ್ತುತ ರೌಡಿಗಳು ಯಾವ ಕೆಲಸ ಮಾಡುತ್ತಿದ್ದಾರೆ? ಬೇರೆ ಯಾರನ್ನಾದರೂ ಬೆಳೆಸುತ್ತಿದ್ದಾರಾ? ಅವರ ಅಕ್ರಮ ದಂಧೆ  ಏನು? ಅವರ ವಿಳಾಸ, ಪೂರ್ವಪರದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ಕೋವಿಡ್ ಕಾಟ ಕ್ರಮೇಣ ಇಳಿಕೆ : ಹೊಸ ರೂಪಾಂತರಿಗಳು ಹೆಚ್ಚು ಬಾಧಿಸವು ಎಂದ ತಜ್ಞರು

Advertisement

ರೌಡಿಗಳ ಪರೇಡ್‌
2144 ರೌಡಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು, 1548 ಮಂದಿ ರೌಡಿಗಳನ್ನು ಆಯಾ ವಿಭಾಗದ ಮೈದಾನ ಹಾಗೂ ಠಾಣೆಗಳಿಗೆ ಕರೆಸಿಕೊಂಡು ರೌಡಿ ಪರೇಡ್‌ ನಡೆಸಲಾಗಿದೆ. ಈ ವೇಳೆ ಕೆಲ ರೌಡಿಗಳು ಈಗಲೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ಪತ್ತೆಯಾಗಿದೆ. ಈ ವೇಳೆ 409 ಮಂದಿ ವಿರುದ್ಧ ಮುಂಜಾಗ್ರತ ಕ್ರಮ ಪ್ರಕರಣಗಳು, 48 ಎನ್‌ಡಿಪಿಎಸ್‌ ಪ್ರಕರಣಗಳು, 2 ದರೋಡೆಗೆ ಯತ್ನಿಸಿದ ಪ್ರಕರಣ ಸೇರಿ 561 ಮಂದಿ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.

ಕುಖ್ಯಾತ ರೌಡಿಗಳು
ದಾಳಿಯಲ್ಲಿ ಕುಖ್ಯಾತ ರೌಡಿಗಳಾದ ಜೆಸಿಬಿ ನಾರಾಯಣ, ಸೈಕಲ್‌ ರವಿ, ಪಾಯ್ಸನ್‌ ರಾಮ, ಅಶೋಕಿ, ಯುವರಾಜ್‌, ಈಶ್ವರ್‌, ಕಿರಣ್‌ ಪಾವ್‌, ಮಹಾದೇವಸ್ವಾಮಿ, ಪ್ರವೀಣ್‌, ತೇಜಸ್‌, ಟ್ಯಾಟು ಜಗ್ಗ, ವೆಂಕಟೇಶ್‌, ಮರ್ದಾನ್‌ ಖಾನ್‌, ರಿಯಾಜ್‌, ಯಶವಂತ್‌, ಕೋತ ಅಲಿಯಾಸ್‌ ರಘು, ಆಸೀಫ್, ವಿಷ್ಣು ಅಲಿಯಾಸ್‌ ಬೋಜ, ಬುಲೆಟ್‌ ರಾಜ ಹಾಗೂ ಆತನ 5 ಸಹಚರರು, ಬಿಟಿಎಸ್‌ ಮಂಜ, ಭೈರೇಶ್‌, ಬಳ್ಳಭಿ, ಅಯ್ಯ, ಹರೀಶ್‌ ಅಲಿಯಾಸ್‌ ಕೋಳಿ ಫ‌ಯಾಜ್, ಗಜ್ಜೀ ವೆಂಕಟೇಶ, ಅಂಬರೀಶ, ಆನಂದ ಅಲಿಯಾಸ್‌ ಕೆಂಬಾರ, ಅಕ್ಷಯ ಕುಮಾರ್‌, ರಾಜು ಅಲಿಯಾಸ್‌ ಡಗಾರ್‌ ರಾಜು, ವಸೀಂ, ಅಪೋ›ಜ್‌, ಕುಪ್ಪಸ್ವಾಮಿ ಅಲಿಯಾಸ್‌ ಕುಪ್ಪ,, ಕನುಕುಮಾರ್‌ ಹಾಗೂ ಇತರೆ ರೌಡಿಗಳ ಮನೆಗಳು ಮತ್ತು ಕಚೇರಿಗಳನ್ನು ಶೋಧಿಸಲಾಯಿತು.

2020ರಿಂದ 2021ರ ಜೂನ್‌ವರೆಗೆ 31 ಮಂದಿ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಿಐಟಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಒಬ್ಬ ವಿದೇಶಿ ಪ್ರಜೆ ಸೇರಿ ಮೂವರು, ಭಧ್ರತಾ ಕಾಯ್ದೆ ಅಡಿಯಲ್ಲಿ 18.8 ಪ್ರಕರಣ ದಾಖಲಿಸಿ 1571 ಮಂದಿ ರೌಡಿಗಳಿಂದ ಮುಚ್ಚಳಿಕೆ ಪಡೆಯಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಮುಚ್ಚಳಿಕೆ ಉಲ್ಲಂಘನೆ ಮಾಡಿದ 28 ರೌಡಿಗಳಿಂದ 1,50 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ : ಮೇಯರ್‌ ಸ್ಥಾನದಲ್ಲಿದ್ದ ಎರಿಕ್‌ ಗಾರ್ಸೆಟ್ಟಿ ಇನ್ನು ಭಾರತದಲ್ಲಿನ ಅಮೆರಿಕದ ರಾಯಭಾರಿ

ಕೊಲೆ, ಕೊಲೆ ಯತ್ನ, ದರೋಡೆ ಸಂಚು
ದಾಳಿ ಸಂದರ್ಭದಲ್ಲಿ ಕೆಲ ರೌಡಿಗಳು ಮುಂದಿನ ದಿನಗಳಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೆಲವರ ಕೊಲೆ, ಕೊಲೆ ಯತ್ನ, ದರೋಡೆ, ಡಕಾಯಿತಿಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ. ಅದಕ್ಕಾಗಿಯೇ ಕೆಲವರು ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು, ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದರು. ಜತೆಗೆ ವಿಲಾಸಿ ಜೀವನಕ್ಕಾಗಿ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದಾರೆ ಎಂಬುದು ಪತ್ತೆಯಾಗಿದೆ. ಅಲ್ಲದೆ, ಕೆಲವರು ಪುಡಿ ರೌಡಿಗಳ ಮೂಲಕ ಹಫ್ತಾ ವಸೂಲಿ ಹಾಗೂ ಇತರೆ ಅಕ್ರಮ ಚಟುವಟಿಕೆಗಳು ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿಗೆ ಕಪಾಳ ಮೋಕ್ಷ
ಶನಿವಾರ ಬೆಳಗ್ಗೆ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು ಎಲ್ಲರನ್ನು ತಮ್ಮ ವ್ಯಾಪ್ತಿಯ ಮೈದಾನ, ಠಾಣೆ ಆವರಣಕ್ಕೆ ಕರೆಸಿಕೊಂಡು ಎಚ್ಚರಿಕೆ ನೀಡಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದರು. ಪೂರ್ವ ವಿಭಾಗ ಪೊಲೀಸರು ನಡೆಸಿದ ಪರೇಡ್‌ ನಲ್ಲಿ ರೌಡಿಯೊಬ್ಬ ಗಾಂಜಾ ಸೇವಿಸಿ ಪರೇ ಡ್‌ಗೆ ಹಾಜರಾಗಿದ್ದ. ಈ ವೇಳೆ ಡಿಸಿಪಿ ಶರಣಪ್ಪ ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಆತನ ಬಾಯಿಯಿಂದ ಕೆಟ್ಟ ವಾಸನೆ ಬಂದಿದೆ. ಅದನ್ನು ಪ್ರಶ್ನಿಸಿದಾಗ ಆರೋಪಿ ಗಾಂಜಾ ಸೇವಿಸಿರುವುದಾಗಿ ಹೇಳಿದ್ದಾನೆ. ಆಗ ಅಲ್ಲೇ ಇದ್ದ ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರು ಆತನಿಗೆ ಕಪಾಳಮೋಕ್ಷ ಮಾಡಿ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next