ಧಾರವಾಡ: ಸಾಮಾಜಿಕವಾಗಿ ಎಲ್ಲರಿಗೂ ಕಾನೂನಿನ ಭದ್ರತೆ ಒದಗಿಸುವ ಜವಾಬ್ದಾರಿ ಪೊಲೀಸರ ಮೇಲಿದೆ. ಹೀಗಾಗಿ ಆರಕ್ಷಕರು ಮತ, ಧರ್ಮ, ಪಂಥ ಮರೆತು ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ತರಬೇತಿ ಪೊಲೀಸ್ ಮಹಾ ನಿರ್ದೇಶಕ ಪಿ.ಕೆ. ಗರ್ಗ ಹೇಳಿದರು.
ಇಲ್ಲಿನ ಧಾರವಾಡ ಪೊಲೀಸ್ ತರಬೇತಿ ಶಾಲೆಯ 3ನೇ ತಂಡದ ನಾಗರಿಕ ಪೊಲೀಸ್ (ಸಿವಿಲ್) ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಧಾರವಾಡ ಪೊಲೀಸ್ ತರಬೇತಿ ಶಾಲೆಯಲ್ಲಿ ಕಳೆದ 8 ತಿಂಗಳಿಂದ ವೃತ್ತಿಪರ ಬುನಾದಿ ತರಬೇತಿ ಪಡೆದ ಪೊಲೀಸ್ ಕಾನ್ಸ್ಟೇಬಲ್ಗಳು ಶಿಸ್ತು, ಸಹನೆ, ಸನ್ನಡತೆ ಕಾಪಾಡಿಕೊಳ್ಳಬೇಕು. ಸದೃಢ ಆರೋಗ್ಯದೊಂದಿಗೆ ವೃತ್ತಿಪರ ಜೀವನ ನಡೆಸಬೇಕು ಎಂದರು.
ಅಧಿಕಾರಿಗಳು ಮತ್ತು ಪೊಲೀಸ್ ಕಾನ್ಸ್ಟೇಬಲರ ಸಮವಸ್ತ್ರ ಒಂದೇಯಾಗಿದ್ದು, ಸಮಾಜ ನಮ್ಮನ್ನು ಒಂದೇ ತರಹ ನೋಡುತ್ತದೆ. ಸಮಾಜದಲ್ಲಿ ಎಲ್ಲರಿಗೂ ಕಾನೂನುಬದ್ಧವಾಗಿ ರಕ್ಷಣೆ ಕೊಡುವ ಹೊಣೆ ಪೊಲೀಸರದ್ದಾಗಿರುತ್ತದೆ. ಪೊಲೀಸರು ಸಂತೋಷದಿಂದ, ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಇಲಾಖೆಗೆ ಒಳ್ಳೆಯ ಹೆಸರು ತರಬೇಕು. ವೃತ್ತಿಯ ಘನತೆ ಹೆಚ್ಚಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿಬೋಧಿ ಸಿದರು. ಸ್ಮರಣೆ ಸಂಚಿಕೆ ಬಿಡುಗಡೆ ಮಾಡಿದರು. ತರಬೇತಿ ಶಾಲೆಯ ಪ್ರಾಂಶುಪಾಲರಾದ ಪೊಲೀಸ್ ಅ ಧೀಕ್ಷಕ ಆರ್.ಎ. ಪಾರಶೆಟ್ಟಿ ಸ್ವಾಗತಿಸಿ, ವರದಿ ವಾಚಿಸಿದರು. ಒಳಾಂಗಣ, ಹೊರಾಂಗಣ ವಿಭಾಗ ಫೈರಿಂಗ್ ಮತ್ತು ಸರ್ವೋತ್ತಮ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಾಜ್ಯದಲ್ಲಿಯೇ ಸುಂದರವಾಗಿ ಕ್ರೀಡಾಂಗಣ ನಿರ್ಮಿಸಿದ್ದಕ್ಕಾಗಿ ಮಹಾನಿರ್ದೇಶಕರು 5 ಸಾವಿರ ರೂ. ಬಹುಮಾನ ಘೋಷಿಸಿದರು. ಎಸ್ಪಿ ಸಂಗೀತಾ ಜಿ., ಡಿಸಿಪಿ ಬಿ.ಎಸ್. ನ್ಯಾಮಗೌಡ ಉಪಸ್ಥಿತರಿದ್ದರು.