Advertisement

ಕರಾಯ ಎರಡು ಮನೆ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

02:03 PM May 29, 2021 | Team Udayavani |

ಉಪ್ಪಿನಂಗಡಿ: ಇಲ್ಲಿನ ಕರಾಯ ಪರಿಸರದಲ್ಲಿ ನಡೆದ ಎರಡು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಬೆಳ್ತಂಗಡಿ ಉರುವಾಲು ಗ್ರಾಮದ ಸಂಶುದ್ದೀನ್ ಯಾನೆ ಸಂಶು, ಕರಾಯದಲ್ಲಿ ನೆಲೆಸಿರುವ ನವಾಜ್ ಮಹಮ್ಮದ್, ಯು.ನಿಜಾಮ್ ಮತ್ತು ಸರ್ಫರಾಜ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜನವರಿ 14ರಂದು ಕರಾಯ ಗ್ರಾಮದ ಶರತ್ ಎಂಬವರ ಮನೆಗೆ ಯಾರೂ ಇಲ್ಲದ ಸಮಯದಲ್ಲಿ ನುಗ್ಗಿ 3,81,000 ರೂ ಮೌಲ್ಯದ ಚಿನ್ನಾಭರಣ ಮತ್ತು 14 ಸಾವಿರ ರೂ ನಗದು ದೋಚಿದ್ದರು. ಮೇ 14ರಂದು ಉರುವಾಲು ಗ್ರಾಮದ ಮುರಿಯಾಳದ ಶಾಹೀದಾ ಎಂಬವರ ಮನೆಗೆ ನುಗ್ಗಿ 1,70,000 ರೂ ಮೌಲ್ಯದ ಚಿನ್ನಾಭರಣ ಮತ್ತು ನಾಲ್ಕು ಸಾವಿರ ರೂ. ನಗದು ದೋಚಿದ್ದರು. ಎರಡೂ ಘಟನೆಗಳ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಲು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಮೇ.28ರಂದು ನೆಕ್ಕಿಲಾಡಿ ಚೆಕ್ ಪೋಸ್ಟ್ ಬಳಿ ಆರೋಪಿಗಳನ್ನು ಸೆರೆ ಹಿಡಿದಿದ್ದು, ಅವರಿಂದ 5,50,000 ರೂ ಮೌಲ್ಯದ ಚಿನ್ನಾಭರಣ ಮತ್ತು ಮೂರು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳಲ್ಲಿ ಸಂಶುದ್ದೀನ್ ಎಂಬಾತ ಬೆಂಗಳೂರು ಉಪ್ಪಾರ ಪೇಟೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next